ಕೊರೊನಾ ಪಾಸಿಟೀವ್ ಕಾಣಿಸಿಕೊಂಡ ರಾಜ್ಯದ 8 ರಾಜಕಾರಣಿಗಳ ಪಟ್ಟಿ
ದಿನದಿಂದ ದಿನಕ್ಕೆ ಕೊರೊನಾ ಸೋಂಕಿತರ ಸಂಖ್ಯೆ ಜಾಸ್ತಿಯಾಗುತ್ತಲೇ ಇದೆ. ರಾಜ್ಯದ ವಿವಿಧ ಇಲಾಖೆಯ ಸರಕಾರೀ ನೌಕರರಲ್ಲೂ ಸೋಂಕು ಕಾಣಿಸಿಕೊಂಡಿರುವುದರಿಂದ, ಅಲ್ಲಲ್ಲಿ ಕಚೇರಿಗಳನ್ನು ಸೀಲ್ಡೌನ್ ಮಾಡಲಾಗಿದೆ.
Recommended Video
ರಾಜ್ಯದ ಹಲವೆಡೆ ವ್ಯಾಪಾರಸ್ಥರು ಸ್ವಯಂಪ್ರೇರಿತರಾಗಿ ಲಾಕ್ ಡೌನ್ ಮಾಡಿದ್ದಾರೆ. ಸತತವಾಗಿ ಹೊಸ ಕೊರೊನಾ ಸೋಂಕಿತರ ಸಂಖ್ಯೆ ಸಾವಿರದ ಗಡಿ ದಾಟುತ್ತಿದೆ. ಸೋಮವಾರ (ಜುಲೈ 6) ಒಂದೇ ದಿನ 1,843 ಕೇಸ್ ದಾಖಲಾಗಿದೆ.
ಬೆಂಗಳೂರು ನಗರದಲ್ಲಿ 155, ಒಟ್ಟು ರಾಜ್ಯದಲ್ಲಿ 401 ಜನ ಕೊರೊನಾಗೆ ಬಲಿಯಾಗಿದ್ದಾರೆ. ವೈದ್ಯಕೀಯ ಸಿಬ್ಬಂದಿಗಳಿಗೂ ಸೋಂಕು ತಗಲಿರುತ್ತಿರುವುದರಿಂದ, ರಾಜ್ಯದಲ್ಲಿ ವೈದ್ಯರ ಕೊರತೆ ತೀವ್ರವಾಗಿ ಕಾಡುತ್ತಿದೆ.
ಕೊರೊನಾ ಹಾವಳಿಯಿಂದ ರಾಜಕಾರಣಿಗಳೂ ಭಯಭೀತರಾಗಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಖುದ್ದು ತಪಾಸಣೆ ಮಾಡಿಸಿಕೊಂಡಿದ್ದು, ಕಚೇರಿಯ ಎಲ್ಲರಿಗೂ ಟೆಸ್ಟ್ ಮಾಡಿಸಿಕೊಳ್ಳುವಂತೆ ಸೂಚಿಸಿದ್ದಾರೆ. ಇದುವರೆಗೆ, ರಾಜ್ಯದ 8 ರಾಜಕಾರಣಿಗಳಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಅವರು ಯಾರ್ಯಾರು?

ದಕ್ಷಿಣ ಕನ್ನಡದ ಮಾಜಿ ಸಂಸದ, ಜನಾರ್ದನ ಪೂಜಾರಿ
ಮಾಜಿ ಕೇಂದ್ರ ಸಚಿವ, ದಕ್ಷಿಣ ಕನ್ನಡದ ಮಾಜಿ ಸಂಸದ, ಜನಾರ್ದನ ಪೂಜಾರಿ ಅವರಿಗೆ ಕೊರೋನಾ ಸೋಂಕು ತಗುಲಿದೆ. ಪೂಜಾರಿಯವರಿಗೆ ಶನಿವಾರ (ಜು 4) ತಪಾಸಣೆ ನಡೆಸಲಾಗಿದ್ದು, ವರದಿ ಪಾಸಿಟೀವ್ ಬಂದಿದ್ದು, ಅವರ ಪತ್ನಿಗೂ ಸೋಂಕು ತಗುಲಿದೆ. ಪೂಜಾರಿಯವರ ಪುತ್ರ ಸಂತೋಷ್ ಈ ಬಗ್ಗೆ ಮಾಹಿತಿ ನೀಡಿದ್ದಾರೆ.

ಮಾಜಿ ಉಪಸಭಾಪತಿ ಪುಟ್ಟಣ್ಣ
ಮಾಜಿ ಉಪಸಭಾಪತಿ ಪುಟ್ಟಣ್ಣ ಅವರಿಗೂ ಸೋಂಕು ತಗುಲಿದೆ. ಈ ಬಗ್ಗೆ ಅವರ್ರೇ ಫೇಸ್ ಬುಕ್ ನಲ್ಲಿ ಬರೆದುಕೊಂಡಿದ್ದಾರೆ. "ನಾಲ್ಕು ದಿನಗಳ ಹಿಂದೆ ಜ್ವರ ಕಾಣಿಸಿಕೊಂಡಿತ್ತು. ಹೀಗಾಗಿ ಕ್ವಾರೆಂಟೈನ್ನಲ್ಲಿದ್ದೇನೆ. ಗುರುವಾರ (ಜು 4) ಕೊರೊನಾ ತಪಾಸಣೆ ಮಾಡಿಸಿಕೊಂಡಿದ್ದು, ನನ್ನ ವರದಿ ಪಾಸಿಟಿವ್ ಬಂದಿದೆ' ಎಂದು ಪುಟ್ಟಣ್ಣ ಬರೆದಿದ್ದಾರೆ.

ಮಂಗಳೂರು ಶಾಸಕ ಭರತ್ ಶೆಟ್ಟಿ
"ಕೋವಿಡ್ ತಪಾಸಣೆ ನಡೆಸಿದ್ದು, ಫಲಿತಾಂಶ ಪಾಸಿಟೀವ್ ಬಂದಿದೆ. ನಿಮ್ಮೆಲ್ಲರ ಆಶೀರ್ವಾದದಿಂದ ಗುಣಮುಖನಾಗುತ್ತಿದ್ದೇನೆ. ಎಲ್ಲರೂ ಮಾಸ್ಕ್ ಹಾಕಿಕೊಂಡು, ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕೆಂದು" ಮಂಗಳೂರು ಉತ್ತರ ಶಾಸಕ ಭರತ್ ಶೆಟ್ಟಿ ಟ್ವೀಟ್ ಮಾಡಿದ್ದಾರೆ.

ಮಂಡ್ಯ ಸಂಸದೆ ಸುಮಲತಾ ಅಂಬರೀಶ್
"ನಿರಂತರವಾಗಿ ಕ್ಷೇತ್ರದ ಕಾರ್ಯಗಳಲ್ಲಿ ತೊಡಗಿದ್ದರಿಂದ, ಕೊರೊನಾ ಪೀಡಿತ ಪ್ರದೇಶಗಳಿಗೂ ಭೇಟಿ ನೀಡಿದ್ದರಿಂದ, ಕೋವಿಡ್ ಪರೀಕ್ಷೆಗೆ ಒಳಗಾಗಿದ್ದೆ. ವರದಿ ಪಾಸಿಟೀವ್ ಬಂದಿದೆ. ವೈದ್ಯರ ಸಲಹೆ ಪಡೆದು, ಹೋಂ ಕ್ವಾರಂಟೈನ್ ಗೆ ಒಳಪಟ್ಟಿದ್ದೇನೆ"ಎಂದು ಮಂಡ್ಯ ಸಂಸದೆ ಸುಮಲತಾ ಅಂಬರೀಶ್, ಸಾಮಾಜಿಕ ತಾಣದಲ್ಲಿ ಬರೆದುಕೊಂಡಿದ್ದಾರೆ.

ಕುಣಿಗಲ್ ಶಾಸಕ ರಂಗನಾಥ್
"ಸಾಕಷ್ಟು ಎಚ್ಚರಿಕೆ ವಹಿಸಿದ್ದರೂ ಸೋಂಕು ತಗುಲಿದೆ. ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದೇನೆ. ಕ್ಷೇತ್ರದಲ್ಲಿ ಯಾವುದೇ ಸಮಸ್ಯೆಯಿದ್ದರೂ ಅಧಿಕಾರಿಗಳ ಗಮನಕ್ಕೆ ತನ್ನಿ, ಮುಂದಿನ ಹದಿನೈದು ದಿನ ಯಾರನ್ನೂ ಭೇಟಿಯಾಗಲು ಸಾಧ್ಯವಾಗುವುದಿಲ್ಲ"ಎಂದು ಕುಣಿಗಲ್ ಶಾಸಕ, ಡಿಕೆಶಿ ಹತ್ತಿರದ ಸಂಬಂಧಿ ಡಾ.ರಂಗನಾಥ್ ಹೇಳಿದ್ದಾರೆ. ಇವರು, ಡಿಕೆಶಿ ಪದಗ್ರಹಣ ಸಮಾರಂಭದ ಉಸ್ತುವಾರಿಯೂ ಆಗಿದ್ದರು.

ಎಂಎಲ್ಸಿ ಪ್ರಾಣೇಶ್
"ನನಗೆ ಮತ್ತು ನನ್ನ ಪತ್ನಿಗೆ ಪಾಸಿಟೀವ್ ವರದಿ ಬಂದಿದೆ. ಯಾವುದೇ ಆತಂಕ ಪಡಬೇಕಾಗಿಲ್ಲ. ಆಸ್ಪತ್ರೆಗೆ ದಾಖಲಾಗಿದ್ದೇನೆ. ಗುಣಮುಖರಾಗಿ ಬರುತ್ತೇವೆ"ಎಂದು ವಿಧಾನ ಪರಿಷತ್ ಸದಸ್ಯ, ಚಿಕ್ಕಮಗಳೂರಿನ ಪ್ರಾಣೇಶ್ ಎಂ.ಕೆ ಹೇಳಿದ್ದಾರೆ.

ಶರತ್ ಬಚ್ಚೇಗೌಡ
ಬೆಂಗಳೂರು ಹೊರವಲಯದ ಹೊಸಕೋಟೆ ಕ್ಷೇತ್ರದ ಪಕ್ಷೇತರ ಶಾಸಕ ಶರತ್ ಬಚ್ಚೇಗೌಡ ಮತ್ತು ಅವರ ಪತ್ನಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಈ ಬಗ್ಗೆ ಅವರೇ ಫೇಸ್ ಬುಕ್ ನಲ್ಲಿ ಸ್ಪಷ್ಟನೆಯನ್ನು ನೀಡಿದ್ದಾರೆ.

ಟಿ.ಡಿ.ರಾಜೇಗೌಡ
ಚಿಕ್ಕಮಗಳೂರು ಜಿಲ್ಲೆ ಶೃಂಗೇರಿ ಕ್ಷೇತ್ರದ ಶಾಸಕ ಟಿ.ಡಿ.ರಾಜೇಗೌಡ ಅವರಿಗೆ ಕೋವಿಡ್ 19 ಸೋಂಕು ದೃಢಪಟ್ಟಿದೆ. ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗುತ್ತೇನೆ ಎಂದು ಶಾಸಕರು ಹೇಳಿದ್ದಾರೆ. ಡಿಕೆಶಿ ಪದಗ್ರಹಣ ಕಾರ್ಯಕ್ರಮದಲ್ಲಿ ರಾಜೇಗೌಡ ಭಾಗವಹಿಸಿದ್ದರು.












Click it and Unblock the Notifications