ಆಗಸ್ಟ್ 06: ಮಹಾ ನಾಯಕರನ್ನು ಭೇಟಿ ಮಾಡಿದ ಬೊಮ್ಮಾಯಿ; ರಾಜ್ಯ ರಾಜಕೀಯ ಬೆಳವಣಿಗೆಗಳ ಸಮಗ್ರ ವರದಿ!
ಬೆಂಗಳೂರು,
ಆ. 06: ಜನ್ಮದಿನದಂದೆ ಚುನಾವಣಾ ರಾಜಕೀಯಕ್ಕೆ ನಿವೃತ್ತಿ ಘೊಷಿಸಿದ ಹಿರಿಯ ರಾಜಕಾರಣಿ, ಚಾಮರಾಜನಗರ ಸಂಸದ ವಿ. ಶ್ರೀನಿವಾಸ ಪ್ರಸಾದ್, ಪ್ರೌಢಶಾಲೆ ಹಾಗೂ ಪಿಯುಸಿ ತರಗತಿಗಳನ್ನು ಆರಂಭಿಸಲು ನಿರ್ಧಾರ ತೆಗೆದುಕೊಂಡ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮೇಕೆದಾಟು ಯೋಜನೆಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದ ಧೋರಣೆಯನ್ನು ಖಂಡಿಸಿದ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿ ಮಾಡಿದ ಮಹಾರಾಷ್ಟ್ರದ ನಾಯಕರು, ಹೆಚ್ಚುತ್ತಿರುವ ಕೊರೊನಾ ವೈರಸ್ ಕಂಟ್ರೋಲ್ ಮಾಡಲು ಮತ್ತೆ ನೈಟ್ ಕರ್ಫ್ಯೂ ಜಾರಿಗೆ ತರಲು ಸಿಎಂ ಸೂಚನೆ, ದೆಹಲಿಯಲ್ಲಿ ಧರಣಿ ನಿರತ ರೈತರನ್ನು ಭೇಟಿ ಮಾಡಿ ಬೆಂಬಲ ಕೊಟ್ಟ ಸಂಸದ ಡಿ.ಕೆ. ಸುರೇಶ್ ಹಾಗೂ ಮಾಜಿ ಸಚಿವ, ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್ ಖಾನ್ ಮೇಲಿನ ಇಡಿ ದಾಳಿಯ ಕುರಿತು ಸಂಶಯ ವ್ಯಕ್ತಪಡಿಸಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್. id="toptextpromo"> id='are-slot-1' class='oiad oi-axt oiadv'>ಇವುಗಳೊಂದಿಗೆ
ಮತ್ತೆ ಸಕ್ರಿಯರಾದ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರು ತಮ್ಮ ಆಪ್ತರೊಂದಿಗೆ ರಹಸ್ಯ ಸಭೆ ನಡೆಸಿದ್ದು, ಇವು ಶುಕ್ರವಾರದಂದು ಕರ್ನಾಟಕದ ರಾಜಕೀಯಕ್ಕೆ ಸಂಬಂಧಿಸಿದಂತೆ ನಡೆದ ಮಹತ್ವದ ಬೆಳವಣಿಗೆಗಳಾಗಿವೆ. ಇವುಗಳೊಂದಿಗೆ ಇನ್ನೂ ಹಲವು ರಾಜಕೀಯ ಬೆಳವಣಿಗೆಗಳು ರಾಜ್ಯ ರಾಜಕೀಯಕ್ಕೆ ಸಂಬಂಧಿಸಿದಂತೆ ಆಗಿದ್ದು, ಮೊದಲಿಗೆ ಸಿಎಂ ಬಸವರಾಜ ಬೊಮ್ಮಾಯಿ ಅವರ ಸರ್ಕಾರದ ಕುರಿತು ಮಾಜಿ ಸಚಿವ ಎಚ್. ವಿಶ್ವನಾಥ್ ವ್ಯಕ್ತಪಡಿಸಿದ ಅಭಿಪ್ರಾಯದ ಸುದ್ದಿ ಓದೋಣ! id='are-slot-2' class='oiad oi-axt oiadv'>
ಬೊಮ್ಮಾಯಿ ಹೊಗಳಿ ಸಿಎಂ ಬದಲಾವಣೆ ಸಮರ್ಥಿಸಿದ ವಿಶ್ವನಾಥ್!
ಒಂದಿಲ್ಲೊಂದು ಕಾರಣಕ್ಕೆ ಯಡಿಯೂರಪ್ಪ ಅವರ ಸರ್ಕಾರವನ್ನು ಟೀಕಿಸುತ್ತಲೆ ಬಂದಿರುವ ಮಾಜಿ ಸಚಿವ, ವಿಧಾನ ಪರಿಷತ್ ಬಿಜೆಪಿ ಸದಸ್ಯ ಎಚ್. ವಿಶ್ವನಾಥ್, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಹೊಗಳಿದ್ದಾರೆ. ಸಿಎಂ ಬೊಮ್ಮಾಯಿ ಎಲ್ಲ ರೀತಿಯಲ್ಲಿಯೂ ಆರಂಭದಲ್ಲಿಯೇ ಒಳ್ಳೆಯತನ ತೋರಿಸುತ್ತಿದ್ದಾರೆ. ಮುಂದಿನ ದಿನಗಳಲ್ಲಿಯೂ ಭ್ರಷ್ಟಾಚಾರ ಮುಕ್ತ ಆಡಳಿತವನ್ನು ಕೊಡಲಿ ಎಂದು ಬಸವರಾಜ ಬೊಮ್ಮಾಯಿ ಕುರಿತು ಮೆಚ್ಚುಗೆಯ ಮಾತುಗಳನ್ನು ಆಡಿದ್ದಾರೆ. ಬೊಮ್ಮಾಯಿ ಸರ್ಕಾರ ಆರಂಭದಲ್ಲಿಯೇ ಒಳ್ಳೆಯ ರೀತಿಯಲ್ಲಿ ನಡೆಯುತ್ತಿದೆ. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಹೋಗುವ ಮೂಲಕ ಉತ್ತಮ ಆಡಳಿತ ನೀಡುವ ಪ್ರಯತ್ನವನ್ನು ಸಿಎಂ ಬೊಮ್ಮಾಯಿ ಮಾಡುತ್ತಿದ್ದಾರೆ ಎಂದು ರಾಜ್ಯ ಬಿಜೆಪಿ ನಾಯಕತ್ವ ಬದಲಾವಣೆಯನ್ನು ಸಮರ್ಥಿಸಿಕೊಂಡಿದ್ದಾರೆ.

ಮತ್ತೆ ಸಾಹುಕಾರ್ ಆ್ಯಕ್ಟಿವ್, ಬಿಜೆಪಿಯಲ್ಲಿ ಆತಂಕ!
ಜೊತೆಗೆ ಗುರುವಾರ ರಾತ್ರಿ ರಹಸ್ಯ ಸಭೆ ನಡೆಸುವ ಮೂಲಕ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರು ಮತ್ತೆ ಸಕ್ರಿಯರಾಗಿದ್ದಾರೆ. ಗುರುವಾರವಷ್ಟೇ ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಿದ್ದ ರಮೇಶ್ ಜಾರಕಿಹೊಳಿ, ರಾತ್ರಿ ತಮ್ಮ ಮುಂಬೈ ಸ್ನೇಹಿತರೊಂದಿಗೆ ದಿಢೀರ್ ಸಭೆ ಮಾಡಿದ್ದಾರೆ. ಇದೀಗ ರಮೇಶ್ ಜಾರಕಿಹೊಳಿ ಅವರ ತಂಡಕ್ಕೆ ಮಾಜಿ ಸಚಿವ ಸಿ.ಪಿ. ಯೀಗೇಶ್ವರ್ ಅವರೊಂದಿಗೆ ಸಿಎಂ ಹುದ್ದೆ ರೇಸ್ನಲ್ಲಿದ್ದ ಶಾಸಕ ಅರವಿಂದ ಬೆಲ್ಲದ್ ಅವರೂ ಸೇರಿಕೊಂಡಿರುವುದು ತೀವ್ರ ಕುತೂಹಲ ಮೂಡಿಸಿದೆ.
ಗುರುವಾರ ರಾತ್ರಿ ನಡೆದಿರುವ ಸಭೆಯಲ್ಲಿ ಹೊಸ ಸರ್ಕಾರ ಯಾವ ರೀತಿ ನಡೆಯುತ್ತಿದೆ, ಜೊತೆಗೆ ಈ ಸರ್ಕಾರ ಅಸ್ತಿತ್ವಕ್ಕೆ ಬರಲು ಕಾರಣರಾದವರಲ್ಲಿ ಕೆಲವರನ್ನು ಯಾಕೆ ನಿರ್ಲಕ್ಷ ಮಾಡಲಾಗುತ್ತಿದೆ ಎಂಬುದರ ಬಗ್ಗೆ ಚರ್ಚೆ ನಡೆದಿದೆ ಎಂಬ ಮಾಹಿತಿ ಬಂದಿದೆ. ತಮ್ಮ ಮೇಲೆ ಬಂದಿದ್ದ 'ಸಿಡಿ ಹಗರಣ'ದ ಆರೋಪದ ಬಳಿಕ ಮತ್ತೆ ರಮೇಶ್ ಜಾರಕಿಹೊಳಿ ಅವರು ಸಕ್ರಿಯರಾಗಿರುವುದು ರಾಜ್ಯ ಬಿಜೆಪಿ ಸರ್ಕಾರಕ್ಕೆ ಎಚ್ಚರಿಕೆ ಗಂಟೆಯಾಗಿದೆ.
ಮೈತ್ರಿ ಸರ್ಕಾರ ಪತನವಾಗುವಲ್ಲಿ ಹಾಗೂ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬರುವಲ್ಲಿ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರ ಪಾತ್ರಮಹತ್ವದ್ದಾಗಿತ್ತು. ಆದರೆ ಸಿಎಂ ಬಸವರಾಜ ಬೊಮ್ಮಾಯಿ ಅವರ ಸಂಪುಟದಲ್ಲಿ ಆಪ್ತರಾದ ಶ್ರೀಮಂತ ಪಾಟೀಲ್, ಮಹೇಶ್ ಕುಮಟಳ್ಳಿ ಹಾಗೂ ಸಹೋದರ ಬಾಲಚಂದ್ರ ಜಾರಕಿಹೊಳಿ ಅವರಿಗೆ ಮಂತ್ರಿ ಪದವಿ ನಿರಾಕರಿಸಲಾಗಿದೆ. ಈ ಕಾರಣದಿಂದ ರಮೇಶ್ ಜಾರಕಿಹೊಳಿ ಗರಂ ಆಗಿದ್ದಾರೆ ಎನ್ನಲಾಗಿದೆ. ಜೊತೆಗೆ ಗುರುವಾರ ರಾತ್ರಿ ಅವರು ನಡೆಸಿರುವ ಸಭೆಯಲ್ಲಿ ಶಾಸಕರಾದ ರಾಜುಗೌಡ, ಮಹೇಶ್ ಕುಮಟಳ್ಳಿ, ಶ್ರೀಮಂತ್ ಪಾಟೀಲ್, ಸಿ.ಪಿ. ಯೋಗೇಶ್ವರ್, ಬಾಲಚಂದ್ರ ಜಾರಕಿಹೊಳಿ ಹಾಗೂ ಅರವಿಂದ ಬೆಲ್ಲದ್ ಭಾಗವಹಿಸಿರುವುದು ಬಿಜೆಪಿ ನಾಯಕರು ಒಂದು ಬಾರಿ ಯೋಚಿಸುವಂತೆ ಮಾಡಿದೆ.

ಸಿಡಿದೆದ್ದ ಬಿಜೆಪಿ ಶಾಸಕ ಶ್ರೀಮಂತ ಪಾಟೀಲ್
ಗುರುವಾರದ ಸಭೆಯ ಬಳಿಕ ಶುಕ್ರವಾರ ಮುಂಜಾನೆಯೆ ಕಾಗವಾಡ ಬಿಜೆಪಿ ಶಾಸಕ ಶ್ರೀಮಂತ ಪಾಟೀಲ್ ತಮ್ಮ ಆಪ್ತರ ಮೂಲಕ ಪಕ್ಷ ತೊರೆಯುವ ಎಚ್ಚರಿಕೆ ಸಂದೇಶವನ್ನು ರವಾನಿಸಿದ್ದಾರೆ. ಬೆಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿರುವ ಮರಾಠ ಸಮುದಾಯದ ನಾಯಕರು ಬಿಜೆಪಿ ನಾಯಕರ ಮೇಲೆ ಹರಿಹಾಯ್ದಿದ್ದಾರೆ. ಹೀಗಾಗಿ ಇದೆಲ್ಲವೂ ಸಾಹುಕಾರ್ ಅಣತಿಯಂತೆ ನಡೆಯುತ್ತಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಇಲ್ಲದ ಆಮೀಷ ಒಡ್ಡಿ ಶ್ರೀಮಂತ ಪಾಟೀಲ್ರನ್ನು ಬಿಜೆಪಿಗೆ ಸೆಳೆಯಲಾಗಿದೆ. ಜೊತೆಗೆ ಅವರು ಬೇಡ ಎಂದಿದ್ದ ಖಾತೆಯನ್ನು ಯಡಿಯೂರಪ್ಪ ಸಂಪುಟದಲ್ಲಿ ಕೊಡಲಾಗಿತ್ತು. ಬಿಜೆಪಿ ಹೀಗೆ ಮರಾಠ ಸಮುದಾಯವನ್ನು ಅವಮಾನ ಮಾಡುವುದು ಮುಂದುವರೆದಲ್ಲಿ ಪರಿಸ್ಥಿತಿ ಸರಿಯಾಗಲ್ಲ ಎಂದು ಅಖಿಲ ಕರ್ನಾಟಕ ಕ್ಷತ್ರಿಯ ಮರಾಠಾ ಸಂಘಟನೆಗಳ ಒಕ್ಕೂಟ ಬಿಜೆಪಿಗೆ ಎಚ್ಚರಿಕೆ ನೀಡಿದೆ. ಇದು ಸಿಎಂ ಬೊಮ್ಮಾಯಿ ಸರ್ಕಾರಕ್ಕೆ ನೇರ ಎಚ್ಚರಿಕೆ ಎಂದೇ ಹೇಳಲಾಗುತ್ತಿದೆ.

ಮುಂದಿನ ವಾರ ಶಾಲೆ ಶುರುವೆಂದ ಸರ್ಕಾರ!
ಕೋವಿಡ್ ಮೂರನೆ ಅಲೆಯ ಆತಂಕದಲ್ಲಿಯೇ ಪ್ರೌಢ ಶಾಲೆ ಹಾಗೂ ಪಿಯುಸಿ ತರಗತಿಗಳನ್ನು ಆರಂಭಿಸುವ ಮಹತ್ವದ ತೀರ್ಮಾನವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಶುಕ್ರವಾರ ತೆಗೆದುಕೊಂಡಿದ್ದಾರೆ. ರಾಜ್ಯದಲ್ಲಿನ ಕೋವಿಡ್ ಸ್ಥಿತಿಗತಿ ಕುರಿತು ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ನಡೆದ ಸಚಿವರು, ಕೋವಿಡ್ ಟಾಸ್ಕ್ ಫೋರ್ಸ್ ಮತ್ತು ವಿವಿಧ ಇಲಾಖೆಗಳ ಹಿರಿಯ ಅಧಿಕಾರಿಗಳ ಜತೆ ಸಭೆಯಲ್ಲಿ ಈ ತೀರ್ಮಾನಕ್ಕೆ ಬರಲಾಗಿದೆ.
ರಾಜ್ಯದಲ್ಲಿ 9, 10 ಹಾಗೂ ಪಿಯುಸಿ ತರಗತಿಗಳನ್ನು ಆಗಸ್ಟ್ 23ರಿಂದ ಪ್ರಾರಂಭಿಸಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಧ್ಯಕ್ಷತೆಯಲ್ಲಿ ಇಂದು ನಡೆದ ಉನ್ನತ ಮಟ್ಟದ ಸಭೆಯಲ್ಲಿ ತೀರ್ಮಾನಿಸಲಾಗಿದೆ. ಪ್ರಾಥಮಿಕ ಮತ್ತು ಪ್ರೌಢಶಾಲೆಗಳನ್ನು ಪುನರಾರಂಭಿಸುವ ಕುರಿತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸರ್ಕಾರದ ಹಿರಿಯ ಅಧಿಕಾರಿಗಳು ಹಾಗೂ ತಜ್ಞರೊಂದಿಗೆ ಸಭೆ ನಡೆಸಿ ಸವಿಸ್ತಾರವಾಗಿ ಚರ್ಚಿಸಿ ಈ ನಿರ್ಧಾರ ತೆಗೆದುಕೊಂಡಿರುವುದಾಗಿ ಹೇಳಿದ್ದಾರೆ.
ಜೊತೆಗೆ ಪ್ರಾಥಮಿಕ ಶಾಲೆ ಮತ್ತು 8ನೇ ತರಗತಿ ಪ್ರಾರಂಭಿಸುವ ಬಗ್ಗೆ ಆಗಸ್ಟ್ ತಿಂಗಳ ಅಂತ್ಯದಲ್ಲಿ ಕ್ರಮ ಕೈಗೊಳ್ಳಲು ತೀರ್ಮಾನಿಸಲಾಗಿದೆ. ವಿದ್ಯಾರ್ಥಿಗಳಿಗೆ ದಿನ ಬಿಟ್ಟು ದಿನ ತರಗತಿ ನಡೆಸಲು ನಿರ್ಧರಿಸಿದ್ದು, ಶಾಲೆ ಕಾಲೇಜುಗಳನ್ನು ಪ್ರಾರಂಭಿಸುವ ಸಂದರ್ಭದಲ್ಲಿ ಅನುಸರಿಸಬೇಕಾದ ಮಾರ್ಗಸೂಚಿಗಳ ಕುರಿತು ಅಧಿಕೃತವಾಗಿ ಅಧಿಸೂಚನೆ ಹೊರಡಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಭೆಯ ನಂತರ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.

ಕೊರೊನಾಘಾತ ತಡೆಯಲು ನೈಟ್ ಕರ್ಫ್ಯೂ ಜಾರಿ ಮಾಡಿದ ಸರ್ಕಾರ!
ಒಂದೆಡೆ ತರಗತಿ ಆರಂಭಿಸಲು ಮಹತ್ವದ ನಿರ್ಧಾರ ತೆಗೆದುಕೊಂಡಿರುವ ಬೊಮ್ಮಾಯಿ ಸರ್ಕಾರ, ಮತ್ತೊಂದೆಡೆ ಕೇರಳ ಹಾಗೂ ಮಹಾರಾಷ್ಟ್ರ ಗಡಿ ಜಿಲ್ಲೆಗಳಲ್ಲಿ ವಾರಾಂತ್ಯದ ಕರ್ಫ್ಯೂ ಜಾರಿ ಮಾಡಲು ತೀರ್ಮಾನಿಸಿದೆ. ರಾತ್ರಿ ಕರ್ಫ್ಯೂವನ್ನು ರಾತ್ರಿ 10ರ ಬದಲು 9 ಗಂಟೆಯಿಂದ ಜಾರಿಗೆ ತರಲು ನಿರ್ಧರಿಸಿದ್ದು, ರಾತ್ರಿ ಕರ್ಫ್ಯೂ ಅನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವಂತೆ ಪೊಲೀಸ್ ಮಹಾನಿರ್ದೇಶಕರಿಗೆ ಸಿಎಂ ಬೊಮ್ಮಾಯಿ ಸೂಚಿಸಿದ್ದಾರೆ. ಇದು ಕೂಡ ರಾಜ್ಯದ ಮಟ್ಟಿಗೆ ಮತ್ತೊಂದು ಮಹತ್ವದ ಆರೋಗ್ಯಕ್ಕೆ ಸಂಬಂಧಿಸಿದ ರಾಜಕೀಯ ನಿರ್ಧಾರವಾಗಿದೆ.

'ಮಹಾ' ನಾಯಕರೊಂದಿಗೆ ಮಹತ್ವದ ಚರ್ಚೆ ಮಾಡಿದ ಸಿಎಂ ಬೊಮ್ಮಾಯಿ!
ಅದರೊಂದಿಗೆ ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಹಾಗೂ ಎನ್ಸಿಪಿ ವರಿಷ್ಠ ಶರದ್ ಪವಾರ್ ಹಾಗೂ ಮಹಾರಾಷ್ಟ್ರ ನೀರಾವರಿ ಸಚಿವ ಜಯಂತ್ ಪಾಟೀಲ್ರನ್ನು ಪ್ರತ್ಯೇಕವಾಗಿ ಭೇಟಿ ಮಾಡಿ ಚರ್ಚಿಸಿದ್ದಾರೆ. ನಂತರ ಈ ಬಗ್ಗೆ ತಿಳಿಸಿರುವ ಸಿಎಂ ಬೊಮ್ಮಾಯಿ, "ಎರಡೂ ರಾಜ್ಯಗಳಲ್ಲಿ ಪ್ರವಾಹ ಪರಿಸ್ಥಿತಿ ನಿಯಂತ್ರಣ, ನಿರ್ವಹಣೆ ಮತ್ತು ಮೇಲ್ವಿಚಾರಣೆ ಮಾಡುವ ಕುರಿತು ಚರ್ಚಿಸಲಾಯಿತು. ಉಭಯ ರಾಜ್ಯಗಳ ಜಂಟಿ ಯೋಜನೆಯಾದ ದೂದ್ ಗಂಗಾ ಯೋಜನೆ, ಕೃಷ್ಣಾ ಮೇಲ್ದಂಡೆ ಯೋಜನೆಯ 3ನೇ ಹಂತದ ಬಗ್ಗೆಯೂ ಚರ್ಚಿಸಲಾಗಿದೆ" ಎಂದು ಜಯಂತ್ ಪಾಟೀಲ್ ಭೇಟಿಯ ಬಗ್ಗೆ ವಿವರಿಸಿದ್ದಾರೆ.
ಇನ್ನು, ಮಹಾರಾಷ್ಟ್ರ ಮಾಜಿ ಮುಖ್ಯಮಂತ್ರಿ, ರಾಜ್ಯಸಭಾ ಸದಸ್ಯ ಹಾಗೂ ಎನ್ ಸಿ ಪಿ ಅಧ್ಯಕ್ಷ ಶರದ್ ಪವಾರ್ ಭೇಟಿ ಕುರಿತು ಮಾಹಿತಿ ಕೊಟ್ಟಿರುವ ಸಿಎಂ, "ಕರ್ನಾಟಕ-ಮಹಾರಾಷ್ಟ್ರ ರಾಜ್ಯಗಳ ನಡುವಿನ ನೀರು ಹಂಚಿಕೆ ಹಾಗೂ ಪ್ರವಾಹದ ಸಂದರ್ಭದಲ್ಲಿ ಪರಸ್ಪರ ಸಹಕಾರ ನೀಡುವ ಕುರಿತು ಸಮಾಲೋಚನೆ ನಡೆಸಿದ್ದೇವೆ" ಎಂದು ತಿಳಿಸಿದ್ದಾರೆ.

ಸಿದ್ಧಗಂಗಾ ಶ್ರೀಗಳ ಆಶೀರ್ವಾದ ಪಡೆದ ಸಿಎಂ ಬಸವರಾಜ ಬೊಮ್ಮಾಯಿ!
ಇವುಗಳೊಂದಿಗೆ ಸಿಎಂ ಬಸವರಾಜ ಬೊಮ್ಮಾಯಿ ತುಮಕೂರಿನ ಸಿದ್ಧಗಂಗಾ ಮಠಕ್ಕೆ ಭೇಟಿ ಸಿದ್ದಲಿಂಗ ಶ್ರೀಗಳ ಆಶೀರ್ವಾದ ಪಡೆದಿದ್ದಾರೆ. ಜೊತೆಗೆ ಮಠದ ಆವರಣದಲ್ಲಿನ ಶಿವಕುಮಾರ ಸ್ವಾಮಿಗಳ ಗದ್ದುಗೆಗೆ ಭೇಟಿಕೊಟ್ಟು ನಮನ ಸಲ್ಲಿಸಿದ್ದಾರೆ. ಬಳಿಕ ಸಿದ್ದಲಿಂಗ ಶ್ರೀಗಳನ್ನು ಭೇಟಿ ಮಾಡಿ ಆಶೀರ್ವಾದ ಪಡೆದಿದ್ದಾರೆ. ಸಚಿವರಾದ ವಿ. ಸೋಮಣ್ಣ, ಮುರುಗೇಶ್ ನಿರಾಣಿ, ಜೆ ಸಿ ಮಾಧುಸ್ವಾಮಿ, ಬಿ ಸಿ ನಾಗೇಶ, ಸಂಸದ ಜಿ ಎಸ್ ಬಸವರಾಜ, ಶಾಸಕರಾದ ಮಹಾಂತೇಶ್ ಕವಟಗಿಮಠ, ಜ್ಯೋತಿ ಗಣೇಶ, ರಾಜೇಶಗೌಡ, ಮಾಜಿ ಸಚಿವರಾದ ರೇಣುಕಾಚಾರ್ಯ, ಸೊಗಡು ಶಿವಣ್ಣ ಮತ್ತು ಇತರರು ಜೊತೆಗಿದ್ದರು.

ಚುನಾವಣಾ ರಾಜಕೀಯಕ್ಕೆ ವಿದಾಯ ಹೇಳಿದ ವಿ. ಶ್ರೀನಿವಾಸ ಪ್ರಸಾದ್!
ಇನ್ನು ಚುನಾವಣಾ ರಾಜಕೀಯಕ್ಕೆ ಸಂಸದ ವಿ. ಶ್ರೀನಿವಾಸ ಪ್ರಸಾದ್ ವಿದಾಯ ಘೋಷಿಸಿದ್ದಾರೆ. ತಮ್ಮ ಹುಟ್ಟುಹಬ್ಬ ಆ. 06ರಂದೇ ಈ ನಿರ್ಧಾರ ಮಾಡಿರುವುದು ವಿಶೇಷ. ಈ ಬಗ್ಗೆ ಮಾತನಾಡಿರುವ ಅವರು, "ನಾನು ಇದುವರೆಗೆ 14 ಚುನಾವಣೆ ಎದುರಿಸಿದ್ದೇನೆ. 12ನೇ ಚುನಾವಣೆಯೇ ನಂಗೆ ಸಾಕಾಗಿತ್ತು. ಕಂದಾಯ ಸಚಿವನಾಗಿ ಅವಧಿ ಪೂರ್ಣಗೊಳಿಸಲು ಎರಡು ವರ್ಷ ಅವಕಾಶ ನೀಡಿದ್ದರೆ ಸಾಕಿತ್ತು. ಆದರೆ ಹಾಗಾಗಲಿಲ್ಲ. ಹೀಗಾಗಿ ಅನಿವಾರ್ಯವಾಗಿ ಮತ್ತೆರಡು ಚುನಾವಣೆ ಎದುರಿಸಬೇಕಾಯ್ತು. ಇಲ್ಲದಿದ್ದರೆ ಅದೇ ನನ್ನ ಕೊನೆಯ ಚುನಾವಣೆ ಆಗುತ್ತಿತ್ತು. ಇದುವರೆಗಿನ ರಾಜಕೀಯ ಜೀವನದ ಬಗ್ಗೆ ತೃಪ್ತಿ ಇದೆ. ಚುನಾವಣಾ ರಾಜಕಾರಣ ನನಗೆ ಸಾಕಾಗಿದೆ. ಇನ್ನು ಮುಂದೆ ಚುನಾವಣೆಗೆ ನಿಲ್ಲುವುದಿಲ್ಲ" ಎಂದು ಮೈಸೂರಿನಲ್ಲಿ ಚಾಮರಾಜನಗರ ಸಂಸದ, ಬಿಜೆಪಿ ಹಿರಿಯ ನಾಯಕ ವಿ. ಶ್ರೀನಿವಾಸ ಪ್ರಸಾದ್ ಹೇಳಿಕೆ ನೀಡಿದ್ದಾರೆ.

ತಾಯಿಯಿಂದಲೇ ನಂಗೆ ಮೋಸವಾಗಿದೆ: ಎನ್. ಮಹೇಶ್!
ಹುಟ್ಟುಹಬ್ಬದ ಶುಭಾಶಯ ಕೋರಲು ಸಂಸದ ವಿ. ಶ್ರೀನಿವಾಸ ಪ್ರಸಾದ್ರನ್ನು ಭೇಟಿ ಮಾಡಿದ್ದ ಕೊಳ್ಳೇಗಾಲ ಶಾಸಕ ಎನ್. ಮಹೇಶ್ ತಾವು ಬಿಎಸ್ಪಿ ಬಿಟ್ಟು ಬಿಜೆಪಿ ಸೇರಿದ್ದಕ್ಕೆ ಶುಕ್ರವಾರ ಮತ್ತೊಮ್ಮೆ ಸ್ಪಷ್ಟನೆ ನೀಡಿದ್ದಾರೆ. ಮೈಸೂರಿನಲ್ಲಿ ಮಾತನಾಡಿರುವ ಅವರು, "ಬಿಎಸ್ಪಿ ನನ್ನ ತಾಯಿ ಅಂತ ಹೇಳಿದ್ದೆ. ತಾಯಿಯಿಂದಲೇ ನನಗೆ ಮೋಸ ಆಗಿದೆ. ತಾಯಿಯೇ ಮಗನಿಗೆ ಮೋಸ ಮಾಡಿದಾಗ ಮಗ ಏನು ಮಾಡಬೇಕು? ಮಗ ಅನಾಥನಾಗಿದ್ದ, ಹೀಗಾಗಿ ರಾಜಕೀಯವಾಗಿ ದಾರಿ ಕಂಡುಕೊಂಡಿದ್ದೇನೆ. ನನ್ನನ್ನು ಟ್ರೋಲ್ ಮಾಡುತ್ತಿರುವವರು ಯಾರು ಎಂಬುದು ನನಗೆ ಗೊತ್ತಿದೆ. ಬಿಎಸ್ಪಿ ಗೆಳೆಯರಿಗೆ ನಾನು ಹೇಳುವುದಿಷ್ಟೆ. ನನ್ನನ್ನು ಟ್ರೋಲ್ ಮಾಡಿಕೊಂಡು ಸಮಯ ವ್ಯರ್ಥ ಮಾಡಬೇಡಿ. ಆ ಸಮಯವನ್ನು ಬಿಎಸ್ಪಿ ಪಕ್ಷ ಕಟ್ಟಲು ಬಳಸಿ. ನನ್ನನ್ನು ಟ್ರೋಲ್ ಮಾಡುತ್ತಿರುವವರಿಗೆ ಮಲೆ ಮಹದೇಶ್ವರ ಸ್ವಾಮಿ ಒಳೆಯದು ಮಾಡಲಿ. ಅವತ್ತಿನ ರಾಜಕೀಯ ಸಂದರ್ಭಕ್ಕೆ ಹೇಳಿದ ಮಾತನ್ನು, ಇವತ್ತಿನ ನೆಲೆಯಲ್ಲಿ ನಿಂತು ನೋಡಬಾರದು. ಹೋರಾಟಗಳ ವೇಳೆ ಹೇಳಿದ ಮಾತೇ ಬೇರೆ. ಆ ಮಾತುಗಳು ಅಧಿಕಾರದ ಸ್ಥಾನಕ್ಕೆ ಬಂದಾಗ ನಡೆಯಲ್ಲ ಅಂತ ಅರ್ಥವಾಗಿದೆ. ನನಗೆ ಬಿಜೆಪಿ ಸೇರುವುದು ಬಿಟ್ಟು ಬೇರೆ ದಾರಿಯೇ ಇರಲಿಲ್ಲ. ಮುಂದೆಯೂ ಚುನಾವಣಾ ರಾಜಕಾರಣ ಬಿಡಬೇಕಿತ್ತು. ಹೀಗಾಗಿ ಬಿಜೆಪಿ ಸೇರಿದ್ದೇನೆ. ಎಲ್ಲ ಸಮುದಾಯದವರೂ ವೋಟ್ ಹಾಕಿ ನನ್ನನ್ನು ಗೆಲ್ಲಿಸಿದ್ದಾರೆ. ನನ್ನ ಚಿಂತನೆ, ಆಲೋಚನೆ, ಬದ್ಧತೆಯನ್ನು ಎಲ್ಲಿಗೇ ಹೋದರೂ ನಾನು ಉಳಿಸಿಕೊಳ್ಳುತ್ತೇನೆ. ಆದ್ದರಿಂದ ಬಿಜೆಪಿಗೆ ಸೇರಿರುವುದರಿಂದ ಸಮಸ್ಯೆ ಆಗಲ್ಲ" ಎಂದು ಹೇಳಿದ್ದಾರೆ.

ಮತ್ತೆ ಜಮೀರ್ ಅಹ್ಮದ್ ಖಾನ್ ಸಮರ್ಥಿಸಿಕೊಂಡ ಡಿಕೆಶಿ
ಇನ್ನು ಕಾಂಗ್ರೆಶ್ ಶಾಸಕ ಜಮೀರ್ ಅಹ್ಮದ್ ಖಾನ್ ಅವರ ಮೇಲೆ ನಡೆದ ಇಡಿ ದಾಳಿಯನ್ನು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಇವತ್ತೂ ಖಂಡಿಸಿದ್ದಾರೆ. "ಇ.ಡಿ. ಅಧಿಕಾರಿಗಳು ಐಎಂಎ ವಿಚಾರಕ್ಕೆ ದಾಳಿ ಮಾಡಿಲ್ಲ, ಆಸ್ತಿ ವಿಚಾರವಾಗಿ ದಾಳಿ ಮಾಡಿದ್ದಾರೆ ಎಂದು ನಮ್ಮ ಶಾಸಕರಾದ ಜಮೀರ್ ಅಹಮದ್ ಅವರು ಹೇಳಿದ್ದಾರೆ. ಆಸ್ತಿ ಗಳಿಕೆ ವಿಚಾರವಾಗಿ ಆದಾಯ ಇಲಾಖೆ (IT) ಬದಲು ಜಾರಿ ನಿರ್ದೇಶನಾಲಯ (ED) ದಾಳಿ ಮಾಡಿರುವುದು ಅಚ್ಚರಿ ಮೂಡಿಸಿದೆ' ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಹೇಳಿದ್ದಾರೆ.
'ಈ ದಾಳಿಗೂ ಐಎಂಎ ವಿಚಾರಕ್ಕೂ ಸಂಬಂಧವಿಲ್ಲ. ನನ್ನ ಆಸ್ತಿ ವಿಚಾರವಾಗಿ ಇಡಿ ಅಧಿಕಾರಿಗಳು ದಾಳಿ ಮಾಡಿದ್ದಾರೆ ಎಂದು ನಮ್ಮ ಶಾಸಕರು ಹೇಳಿದ್ದಾರೆ. ಜಮೀರ್ ಅಹಮದ್ ಖಾನ್ ಅವರು ಹಿಂದೆ ವಿಧಾನಸೌಧದಲ್ಲಿ ಮಾತನಾಡಿ ಐಎಂಎ ಪ್ರಕರಣದಲ್ಲಿ ನಷ್ಟ ಅನುಭವಿಸಿರುವ 40 ಸಾವಿರ ಜನರಿಗೂ ನ್ಯಾಯ ಒದಗಿಸಿಕೊಡಬೇಕು ಎಂದು ಹೇಳಿದ್ದರು. ಇದು ನಮ್ಮ ಪಕ್ಷದ ನಿಲುವೂ ಆಗಿದೆ." ಎಂದು ಶಾಸಕ ಜಮೀರ್ ಅಹ್ಮದ್ ಖಾನ್ ಮೇಲಿನ ಇಡಿ ದಾಳಿಯನ್ನು ಡಿಕೆಶಿ ಖಂಡಿಸಿದ್ದಾರೆ. ಇದೇ ಸಂದರ್ಭದಲ್ಲಿ ದೆಹಲಿಯಲ್ಲಿ ಸಂಸದ ಡಿ.ಕೆ. ಸುರೇಶ್ ಧರಣಿ ನಿರತ ರೈತರನ್ನು ಭೇಟಿ ಮಾಡಿ ಬೆಂಬಲ ಕೊಟ್ಟಿದ್ದಾರೆ.
Recommended Video

ದೆಹಲಿಯಲ್ಲಿ ಧರಣಿ ನಿರತ ರೈತರ ಭೇಟಿ ಮಾಡಿದ ಸಂಸದ ಡಿಕೆ ಸುರೇಶ್
ಕೇಂದ್ರ ಸರಕಾರದ ರೈತ ವಿರೋಧಿ ನೀತಿ, ಕರಾಳ ಕಾಯ್ದೆಗಳನ್ನು ವಿರೋಧಿಸಿ ಕಳೆದೊಂದು ವರ್ಷದಿಂದ ಹರಿಯಾಣ, ದೆಹಲಿ ಗಡಿಭಾಗದ ಕುಂದಲಿಯಲ್ಲಿ ಸುದೀರ್ಘ ಪ್ರತಿಭಟನೆ ನಡೆಸುತ್ತಿರುವ ರೈತರು ಹಾಗೂ ರೈತ ಮುಖಂಡರನ್ನು ಬೆಂಗಳೂರು ಗ್ರಾಮಾಂತರ ಲೋಕಸಭೆ ಕ್ಷೇತ್ರದ ಸದಸ್ಯ ಡಿ.ಕೆ. ಸುರೇಶ್ ಅವರು ಶುಕ್ರವಾರ ಭೇಟಿ ಮಾಡಿ, ಅವರ ಯೋಗಕ್ಷೇಮ ವಿಚಾರಿಸಿದರು. ಇದೇ ಸಂದರ್ಭದಲ್ಲಿ ತಮ್ಮ ಸಮಸ್ಯೆ ಕೇಳಲು ಆಗಮಿಸಿದ ಸಂಸದ ಸುರೇಶ್ರ್ನ್ನು ರೈತರು ಅಭಿನಂದಿಸಿದರು.












Click it and Unblock the Notifications