ಗೃಹ ಇಲಾಖೆಯ ಪದಕಕ್ಕೆ; ಕರ್ನಾಟಕದ ನಾಲ್ವರು ಪೊಲೀಸರು ಆಯ್ಕೆ
ಬೆಂಗಳೂರು, ಆಗಸ್ಟ್ 12 : ಕರ್ನಾಟಕದ ನಾಲ್ವರು ಸೇರಿದಂತೆ 120 ಪೊಲೀಸ್ ಅಧಿಕಾರಿಗಳನ್ನು ಗೃಹ ಇಲಾಖೆಯ ಪ್ರತಿಷ್ಠಿತ ಪದಕ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಉತ್ತಮ ತನಿಖೆ ಕೈಗೊಂಡ ಅಧಿಕಾರಿಗಳಿಗೆ ಈ ಪದಕಗಳನ್ನು ನೀಡಲಾಗುತ್ತದೆ.
ಬುಧವಾರ ಕೇಂದ್ರ ಗೃಹ ಇಲಾಖೆ ಈ ಕುರಿತು ಅಧಿಕೃತ ಪ್ರಕಟಣೆ ಬಿಡುಗಡೆ ಮಾಡಿದೆ. ಎಸಿಪಿ ಸುಧೀರ್ ಎಂ. ಹೆಗ್ಡೆ, ಡಿವೈಎಸ್ಪಿ ಅಶೋಕ ಡಿ., ಇನ್ಸ್ಪೆಕ್ಟರ್ ಪ್ರಶಾಂತ್ ಬಾಬು ಡಿ. ಎಂ. ಹೆಡ್ ಕಾನ್ಸ್ಟೇಬಲ್ ಶ್ರೀಧರ್ ಹೆಚ್. ಎಸ್. ಕರ್ನಾಟಕದಿಂದ ಪದಕಕ್ಕೆ ಭಾಜನರಾಗಿದ್ದಾರೆ.
ಇಬ್ಬರು ಸಿಬಿಐ ಅಧಿಕಾರಿಗಳಾದ ಇನ್ಸ್ಪೆಕ್ಟರ್ ರಾಕೇಶ್ ರಂಜನ್ ಮತ್ತು ವಿಜಯ ವೈಶಾನಿ ಅವರು ಸಹ ಪದಕ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಈ ಇಬ್ಬರೂ ಅಧಿಕಾರಿಗಳು ಬೆಂಗಳೂರು ಸಿಬಿಐ ವಿಭಾಗದಲ್ಲಿ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ.

ಉತ್ತಮ ತನಿಖೆ ಕೈಗೊಂಡ ಅಧಿಕಾರಿಗಳನ್ನು ಗೌರವಿಸಲು 2018ರಲ್ಲಿ ಕೇಂದ್ರ ಗೃಹ ಇಲಾಖೆ ಈ ಪದಕ ಪ್ರಶಸ್ತಿಯನ್ನು ಸ್ಥಾಪಿಸಿದೆ. ಈ ಬಾರಿಯ ಆಯ್ಕೆಯಾಗಿರುವ 120 ಪೊಲೀಸ್ ಅಧಿಕಾರಿಗಳಲ್ಲಿ 21 ಮಹಿಳಾ ಅಧಿಕಾರಿಗಳು ಸೇರಿದ್ದಾರೆ.
ಈ ಬಾರಿಯ ಪದಕ ಪ್ರಶಸ್ತಿ ಪಟ್ಟಿಯಲ್ಲಿ ಸಿಬಿಐ ಅಧಿಕಾರಿಗಳೇ ಹೆಚ್ಚಿದ್ದಾರೆ. ಒಟ್ಟು 15 ಸಿಬಿಐ ಅಧಿಕಾರಿಗಳಿಗೆ ಪ್ರಶಸ್ತಿ ಸಿಗುತ್ತಿದೆ. ಎನ್ಐಎಯ ಐವರು ಸಿಬ್ಬಂದಿಗಳಿಗೆ ಪದಕ ಸಿಗುತ್ತಿದೆ.












Click it and Unblock the Notifications