ಕರ್ನಾಟಕದ ಶುಕ್ರವಾರದ ತುಣುಕು ಸುದ್ದಿ
ಬೆಂಗಳೂರು, ನ. 21 : ಕರ್ನಾಟಕದಲ್ಲಿನ ವಿದ್ಯಮಾನಗಳ ಈ ದಿನದ ರೌಂಡ್ ಆಪ್ ನಿಮಗಾಗಿ ಇಲ್ಲಿದೆ. ಇಲ್ಲಿ ಬರೀ ಹೆಡ್ ಲೈನ್ ಗಳು, ಟೂ ಲೈನ್ ಅಥವಾ ಒಂದು ಪ್ಯಾರಾ ಸುದ್ದಿಗಳು, ಚುಟುಕು ಮಾಹಿತಿ ಮಾತ್ರ ನಿಮಗೆ ಸಿಗುತ್ತದೆ. ರಾಜ್ಯದ ಒಟ್ಟಾರೆ ಸುದ್ದಿಗಳ ಸಂಗ್ರಹ ನಿಮಗೆ ನೀಡುವ ಪ್ರಯತ್ನ ಇದಾಗಿದೆ.
ಸಮಯ 4 ಗಂಟೆ : ವಿಬ್ ಗಯಾರ್ ಶಾಲಾ ಬಾಲಕಿ ಮೇಲೆ ನಡೆದ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಲೆಯ ಸಂಸ್ಥಾಪಕ ಅಧ್ಯಕ್ಷ ರುಸ್ತುಂ ಕೇರವಾಲಾ ವಿರುದ್ಧದ ತನಿಖೆಗೆ ಹೈಕೋರ್ಟ್ ತಡೆಯಾಜ್ಞೆ ನೀಡಿದೆ. ರುಸ್ತುಂ ಕೇರವಾಲಾ ವಿರುದ್ಧ ಸಾಕ್ಷಿನಾಶದ ಆರೋಪ ಹೊರಿಸಲಾಗಿದ್ದು, ಅವರ ವಿಚಾರಣೆ ನಡೆಯುತ್ತಿದೆ.
ಸಮಯ 3 ಗಂಟೆ : ಶ್ರೀಗಂಧ ಕಾವಲ್ನ 4 ಎಕರೆ ಭೂಮಿ ಮಂಜೂರಾತಿ ಕುರಿತು ಮಾಜಿ ಸಿಎಂ ಜಗದೀಶ್ ಶೆಟ್ಟರ್ ವಿರುದ್ಧ ಬಿಎಂಟಿಎಫ್ ನಡೆಸುತ್ತಿದ್ದ ವಿಚಾರಣೆಗೆ ಹೈಕೋರ್ಟ್ ಶುಕ್ರವಾರ ತಡೆಯಾಜ್ಞೆ ನೀಡಿದೆ.
ಸಮಯ 2 ಗಂಟೆ : ಮೈಸೂರಿನಲ್ಲಿರುವ ಆಡಳಿತ ತರಬೇತಿ ಸಂಸ್ಥೆಯ ಮಹಾನಿರ್ದೇಶಕಿ ರಶ್ಮಿ ಮಹೇಶ್ ಅವರ ಮೇಲೆ ನಡೆದಿರುವ ಹಲ್ಲೆ ಪ್ರಕರಣದ ಸತ್ಯಾಸತ್ಯತೆಯನ್ನು ತಿಳಿಯಲು ಲೋಕಾಯುಕ್ತರಿಂದ ತನಿಖೆ ಮಾಡಿಸಬೇಕು ಎಂದು ಸಿಎಂಗೆ ಮನವಿ ಮಾಡಿರುವುದಾಗಿ ಕಂದಾಯ ಸಚಿವ ವಿ. ಶ್ರೀನಿವಾಸಪ್ರಸಾದ್ ಹೇಳಿದ್ದಾರೆ.
ಸಮಯ 1 ಗಂಟೆ : ಸೌತ್ ವೆಸ್ಟ್ ಮೈನಿಂಗ್ ಕಂಪನಿಯಿಂದ ಕಿಕ್ ಬ್ಯಾಕ್ ಪಡೆದ ಆರೋಪ ಎದುರಿಸುತ್ತಿರುವ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಪ್ರಕರಣದ ವಿಚಾರಣೆಯನ್ನು ಹೈಕೋರ್ಟ್ ಡಿ. 3ಕ್ಕೆ ಮುಂದೂಡಿದೆ.
ಸಮಯ 12 ಗಂಟೆ : 'ಕಿಸ್ ಆಫ್ ಲವ್' ವಿರುದ್ಧ ಭಾರತೀಯ ಕ್ರಾಂತಿ ಸೇನೆಯ ರಾಷ್ಟ್ರಾಧ್ಯಕ್ಷ ಪ್ರಣವಾನಂದ ಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದು, ಮಾನಸಿಕ ಅಸ್ವಸ್ಥರಿಗೆ, ಎಚ್ಐವಿ ಪೀಡಿತರಿಗೆ ಕಿಸ್ ಕೊಡಲಿ ಎಂದು ಸವಾಲು ಹಾಕಿದ್ದಾರೆ. ಕಿಸ್ ಆಫ್ ಲವ್ನಲ್ಲಿ ಪಾಲ್ಗೊಳ್ಳುವವರ ಮೇಲೆ ದಾಳಿ ಮಾಡಲಾಗುತ್ತದೆ ಎಂದು ಅವರು ಎಚ್ಚರಿಕೆ ನೀಡಿದ್ದಾರೆ.
ಸಮಯ 11.15 : ಇಂದು ಮಧ್ಯಾಹ್ನ 3 ಗಂಟೆಗೆ ನಾನು ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿಯನ್ನು ಭೇಟಿ ಮಾಡುತ್ತೇವೆ ಎಂದು ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಹೇಳಿದ್ದಾರೆ.
ಸಮಯ 10.40 : ಮೈಸೂರಿನ ಕೋಟೆ ಮಾರಮ್ಮ ದೇವಾಲಯದ ಪುನರ್ ನಿರ್ಮಾಣ ಕಾರ್ಯಕ್ಕೆ ರಾಣಿ ಪ್ರಮೋದಾ ದೇವಿ ಅವರು ಗುದ್ದಲಿ ಪೂಜೆ ಮಾಡಿದ್ದಾರೆ. ಮೈಸೂರು ಅರಮನೆಗೆ ಹೊಂದಿಕೊಂಡಿರುವ ದೇವಾಲಯದ ಮೇಲೆ ದಸರಾ ಸಂದರ್ಭದಲ್ಲಿ ಮರ ಉರುಳಿ ಬಿದ್ದು ಸಂಪೂರ್ಣವಾಗಿ ಜಖಂಗೊಂಡಿತ್ತು. [ಅರಮನೆ ಆವರಣದಲ್ಲಿ ಗುಡಿ ಮೇಲುರುಳಿದ ಮರ]
ಸಮಯ 9.46 : ಬೆಂಗಳೂರಿನ ಜಾಲಹಳ್ಳಿ ಬಳಿ ಇರುವ ಆರ್ಕಿಡ್ಸ್ ಇಂಟರ್ನ್ಯಾಶನಲ್ ಶಾಲೆಯ ಪ್ರಿ ನರ್ಸರಿ, 6 ಹಾಗೂ 7ನೇ ತರಗತಿಗಳನ್ನು ಪುನಃ ಆರಂಭಿಸಲಾಗಿದೆ. ಬುಧವಾರದಿಂದ ತರಗತಿಗಳನ್ನು ಬೇರೆ ಶಾಲೆಗೆ ವರ್ಗಾಯಿಸಬೇಕೆಂದು ಶಿಕ್ಷಣ ಇಲಾಖೆ ನೀಡಿದ್ದ ಆದೇಶಕ್ಕೆ ಹೈಕೋರ್ಟ್ ತಡೆಯಾಜ್ಞೆ ನೀಡಿದ್ದು, ಶಾಲೆಯನ್ನು ಆರಂಭಿಸುವಂತೆ ಸೂಚನೆ ನೀಡಿತ್ತು. ಗುರುವಾರ ಶಾಲೆಗೆ ರಜೆ ಘೋಷಣೆ ಮಾಡಲಾಗಿತ್ತು.
ಸಮಯ 9.14 : ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಮಂಡೂರಿಗೆ ಕಸ ವಿಲೇವಾರಿಯನ್ನು ಶುಕ್ರವಾರದಿಂದ ಸ್ಥಗಿತಗೊಳಿಸಿದೆ. ಡಿಸೆಂಬರ್ 1ರಿಂದ ಮಂಡೂರಿನಲ್ಲಿ ಕಸ ಹಾಕುವುದಿಲ್ಲ ಎಂದು ಬಿಬಿಎಂಪಿ ಮತ್ತು ಸರ್ಕಾರ ಮಂಡೂರಿನ ಜನರಿಗೆ ಭರವಸೆ ನೀಡಿತ್ತು. ಅದರಂತೆ ಇಂದಿನಿಂದಲೇ ಕಸ ಹಾಕುವುದನ್ನು ನಿಲ್ಲಿಸಲಾಗಿದೆ.
ಸಮಯ 9 ಗಂಟೆ : ನಿಗಮ ಮಂಡಳಿ ನೇಮಕ ಪಟ್ಟಿಗೆ ಹೈಕಮಾಂಡ್ ಅಂತಿಮ ಒಪ್ಪಿಗೆ ಪಡೆಯಲು ಸಿಎಂ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ದೆಹಲಿಗೆ ತೆರಳಿದ್ದಾರೆ. ಶನಿವಾರ ಸಂಜೆಯ ತನಕ ಉಭಯ ನಾಯಕರು ದೆಹಲಿಯಲ್ಲಿ ಇರಲಿದ್ದು, ಪ್ರಮುಖ ನಿಗಮ ಮಂಡಳಿಗಳ ಅಧ್ಯಕ್ಷ, ಉಪಾಧ್ಯಕ್ಷರ ಹುದ್ದೆಗಳನ್ನು ಭರ್ತಿ ಮಾಡಲು ಅಂತಿಮ ಒಪ್ಪಿಗೆ ಪಡೆದುಕೊಂಡು ಬರಲಿದ್ದಾರೆ.

ಸಮಯ 8 ಗಂಟೆ : ಚಿಕ್ಕಮಗಳೂರಿನ ಪಂಡರವಳ್ಳಿಯಲ್ಲಿ ಮೂರು ದಿನಗ ಹಿಂದೆ ನರಭಕ್ಷಕ ಹುಲಿಯನ್ನು ಅರಣ್ಯ ಇಲಾಖೆ ಸಿಬ್ಬಂದಿ ಸೆರೆ ಹಿಡಿದಿದ್ದರು. ಇಂದು ಅತ್ತಿಗುಂಡಿ, ಕೈಮರ ಭಾಗಗಳಲ್ಲಿ ಮತ್ತೊಂದು ಹುಲಿ ಕಾಣಿಸಿಕೊಂಡಿದ್ದು, ಗ್ರಾಮಸ್ಥರು ಆತಂಕಗೊಂಡಿದ್ದಾರೆ.












Click it and Unblock the Notifications