ದೆಹಲಿ ಸುತ್ತಿದವರು ಪಲ್ಟಿ, ಬಿಎಸ್ವೈ ಸುತ್ತಿದವರಿಗೆ ಲಾಟರಿ! ಇದೇ ರಾಜಕೀಯದ ತಂತ್ರ, ಮಂತ್ರ
ಯಡಿಯೂರಪ್ಪನವರು ರಾಜೀನಾಮೆ ನೀಡುವ ಒಂದೆರಡು ತಿಂಗಳ ಆಸುಪಾಸಿನಲ್ಲಿ ಮತ್ತು ಅವರು ರಾಜೀನಾಮೆ ನೀಡಿದ ನಂತರ ಹೀಗೇ ರಾಜ್ಯ ರಾಜಕೀಯ ಸಾಗಲಿದೆ ಎಂದು ಅರಿತವರು ಗೆದ್ದು ಬೀಗಿದರು. ನಮ್ಮದೇನಿದ್ದರೂ, ಹೈಕಮಾಂಡ್ ಲೆವೆಲ್ ಎಂದವರು ಪಲ್ಟಿ ಹೊಡೆದರು.
ಯಡಿಯೂರಪ್ಪನವರು ರಾಜೀನಾಮೆ ನೀಡಿದ ನಂತರ ನಡೆದ ಎರಡು ಪ್ರಮುಖ ಬೆಳವಣಿಗೆಗಳನ್ನು ಅವಲೋಕಿಸುವುದಾದರೆ ಗೆದ್ದದ್ದು ಅತ್ಯಂತ ಸ್ಪಷ್ಟವಾಗಿ ಬಿಎಸ್ವೈ. ಒಂದು ಮುಖ್ಯಮಂತ್ರಿಯ ಆಯ್ಕೆ, ಇನ್ನೊಂದು ಸಚಿವ ಸಂಪುಟ ರಚನೆ.
ಮುಖ್ಯಮಂತ್ರಿ ಆಯ್ಕೆಯ ವಿಚಾರವನ್ನು ಗಮನಿಸುವುದಾದರೆ, ಕಳೆದ ಎರಡ್ಮೂರು ತಿಂಗಳಿನಿಂದ ಅರವಿಂದ್ ಬೆಲ್ಲದ್, ಮುರುಗೇಶ್ ನಿರಾಣಿ, ಜಗದೀಶ್ ಶೆಟ್ಟರ್, ಬಸನಗೌಡ ಪಾಟೀಲ್ ಯತ್ನಾಳ್ ಪ್ರಯತ್ನಿಸಿದ್ದೇ ಪ್ರಯತ್ನಿಸಿದ್ದು. ಆದರೆ ಆಗಿದ್ದೇನು?
ಇತ್ತ, ಅವರೆಲ್ಲರೂ ದೆಹಲಿ ಮಟ್ಟದಲ್ಲಿ ಲಾಬಿ ನಡೆಸುತ್ತಿದ್ದರೆ, ಬಸವರಾಜ ಬೊಮ್ಮಾಯಿಯವರು ಯಡಿಯೂರಪ್ಪನವರನ್ನು ಬಿಟ್ಟು ಕದಲಲಿಲ್ಲ. ಅವರೇ ನನ್ನ ಮಾರ್ಗದರ್ಶಕರು ಅಂದರು, ಅವರ ದಾರಿಯಲ್ಲೇ ಸಾಗುವೆ ಎಂದರು. ಅದರ ಫಲಿತಾಂಶವೇ ಬೊಮ್ಮಾಯಿ ನೂತನ ಸಿಎಂ.

ಸಿಎಂ ರೇಸಿನಲ್ಲಿದ್ದ ಅರವಿಂದ್ ಬೆಲ್ಲದ್ ಗೆ ಸಚಿವ ಸ್ಥಾನವೂ ಸಿಗಲಿಲ್ಲ
ತಿಂಗಳುಗಟ್ಟಲೆ ದೆಹಲಿಯಲ್ಲಿ ಕೂತು ಸಿಎಂ ಹುದ್ದೆಗೆ ಪ್ರಯತ್ನಿಸುತ್ತಿದ್ದ ಅರವಿಂದ್ ಬೆಲ್ಲದ್ ಅವರಿಗೆ ಕನಿಷ್ಠ ಮಂತ್ರಿ ಸ್ಥಾನವೂ ಸಿಗಲಿಲ್ಲ. ಬಿಎಸ್ವೈ ಉಗ್ರ ಟೀಕಾಕಾರ ಬಸನಗೌಡ ಪಾಟೀಲ್ ಯತ್ನಾಳ್ ಅವರಿಗೂ ಹೈಕಮಾಂಡ್ ಮಣೆ ಹಾಕಲಿಲ್ಲ. ವಿಜಯಪುರ ಛತ್ರಪತಿ ಶಿವಾಜಿ ಪೂಜೆ ಮಾಡಿದ ಪುಣ್ಯಭೂಮಿ, ನಮ್ಮ ನೆಲವನ್ನು ಈ ಬಾರಿ ಮರೆಯುವ ಹಾಗಿಲ್ಲ ಎಂದು ಯತ್ನಾಳ್ ಹೇಳಿಕೆ, ಅವರ ಹಿಂದಿನ ಹೇಳಿಕೆಯಂತೆ ಠುಸ್ ಆಯಿತು.

ಇದ್ದಿದ್ದರಲ್ಲಿ ಬಚಾವ್ ಆಗಿದ್ದು ಎಂದರೆ ಅದು ಮುರುಗೇಶ್ ನಿರಾಣಿ
ಇನ್ನು, ಜಗದೀಶ್ ಶೆಟ್ಟರ್ ಅವರು ಹೈಕಮಾಂಡ್ ನೋ ಎನ್ನುವ ಮೊದಲೇ ಹುಷಾರಾಗಿ ಬಿಟ್ಟರು. ನನಗಿಂತ ಕಿರಿಯ ಸಿಎಂ ಆದಾಗ, ನಾನು ಹೇಗೆ ಅವರ ಮಂತ್ರಿ ಮಂಡಲದಲ್ಲಿ ಇರಲಿ ಎಂದರು. ಈ ನಿರ್ಧಾರ ಅವರು ತೆಗೆದುಕೊಳ್ಳದಿದ್ದರೂ, ಸಂಪುಟ ರಚನೆಯಲ್ಲಿ ಸ್ಥಾನ ಸಿಗುತ್ತಿರಲಿಲ್ಲ ಎನ್ನುವ ಅರಿವು ಅವರಿಗೆ ಮೊದಲೇ ಇದ್ದಂತಿತ್ತು. ಇದ್ದಿದ್ದರಲ್ಲಿ ಬಚಾವ್ ಆಗಿದ್ದು ಎಂದರೆ ಅದು ಮುರುಗೇಶ್ ನಿರಾಣಿ. ಅವರೇನೂ ಸಿಎಂ ಸ್ಥಾನಕ್ಕಾಗಿ ಕಮ್ಮಿ ಪ್ರಯತ್ನವನ್ನು ಮಾಡಿರಲಿಲ್ಲ. ಆದರೂ, ಬಿಎಸ್ವೈ ಮೇಲಿನ ಒಂದು ಕಾಲದ ನಿಯತ್ತು ಅವರನ್ನು ಸಚಿವರನ್ನಾಗಿ ಮಾಡಿರಬಹುದು.

ಸಾಮ್ರಾಟ್ ಅಶೋಕ್ ಕೂಡಾ ಬಿಎಸೈ ಹಿಂದೆನೇ ಸುತ್ತುತ್ತಿದ್ದರು
ಇತ್ತ, ಸಾಮ್ರಾಟ್ ಅಶೋಕ್ ಕೂಡಾ ಬಿಎಸೈ ಹಿಂದೆನೇ ಸುತ್ತುತ್ತಿದ್ದರು. ಡಿಸಿಎಂ ಸ್ಥಾನ ಸಿಗದಿದ್ದರೂ, ಪ್ರಭಾವೀ ಕ್ಯಾಬಿನೆಟ್ ದರ್ಜೆ ಅವರಿಗೆ ಸಿಗುವುದು ಪಕ್ಕಾ. ವಿಜಯೇಂದ್ರಗೆ ಸಚಿವ ಸ್ಥಾನ ಸಿಗದ ಹಿಂದೆ, ರಾಜಕೀಯ ಗೇಂ ಪ್ಲ್ಯಾನ್ ಇದೆ ಎಂದು ಹೇಳಲಾಗುತ್ತಿದೆ. ಯಾಕೆಂದರೆ, ಸಿಎಂ ಬೊಮ್ಮಾಯಿ ನೀಡಿದ್ದ ಮೂರು ಆಯ್ಕೆಯ ಪಟ್ಟಿಗಳಲ್ಲಿ ಮೂರರಲ್ಲೂ ವಿಜಯೇಂದ್ರ ಹೆಸರಿತ್ತು. ಸಂಪುಟ ರಚನೆಯ ಬೆಳಗ್ಗೆ ನೇರವಾಗಿ ಹೈಕಮಾಂಡ್, ಯಡಿಯೂರಪ್ಪನವರ ಜೊತೆ ಮಾತುಕತೆ ನಡೆಸಿದ್ದರು.

ಹೈಕಮಾಂಡ್ ಸುತ್ತಿದವರು ಪಲ್ಟಿ, ಯಡಿಯೂರಪ್ಪ ಸುತ್ತಿದವರಿಗೆ ಲಾಟರಿ
ಇನ್ನು ಬಾಂಬೆ ಫ್ರೆಂಡ್ಸ್ ವಿಚಾರಕ್ಕೆ ಬಂದಾಗಲೂ ಇಲ್ಲೂ ಮೇಲಾಗಿದ್ದು ಯಡಿಯೂರಪ್ಪನವರ ಮಾತು. ಒಂದಿಬ್ಬರನ್ನು ಬಿಟ್ಟು, ಎಲ್ಲರೂ ಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಯಾವ ಖಾತೆ ಸಿಗುತ್ತೆ ಎನ್ನುವುದು ಆನಂತರದ ವಿಚಾರವಾದರೂ, ಗೆದ್ದದ್ದು ಇಲ್ಲಿ ಮತ್ತೆ ಬಿಎಸ್ವೈ. ವಲಸೆ ಕೋಟಾದಲ್ಲಿ ನಾಲ್ಕೈದು ಜನರಿಗೆ ಮಾತ್ರ ಸಚಿವ ಸ್ಥಾನ ಎನ್ನುವ ಸುದ್ದಿ ಹರಿದಾಡುತ್ತಿತ್ತು. ಆದರೆ, ತನ್ನ ಸರಕಾರದಲ್ಲಿ ಯಾರು ಯಾರು ಇದ್ದರೋ, ಅವರ ಜೊತೆಗೆ, ಮುನಿರತ್ನ ಅವರನ್ನೂ ಸಚಿವರನ್ನಾಗಿ ಮಾಡುವಲ್ಲಿ ಯಡಿಯೂರಪ್ಪ ಯಶಸ್ವಿಯಾದರು. ಅಲ್ಲಿಗೆ, ಹೈಕಮಾಂಡ್ ಸುತ್ತಿದವರು ಪಲ್ಟಿ ಹೊಡೆದಂತಾಯಿತು, ಯಡಿಯೂರಪ್ಪ ಸುತ್ತಿದವರಿಗೆ ಲಾಟರಿ ಹೊಡೆದಂತಾಯಿತು. ಅದೇ.. ರಾಜಕೀಯ..












Click it and Unblock the Notifications