ಬಿಜೆಪಿ ಹೈಕಮಾಂಡ್ ಜೊತೆಗಿನ ಸಭೆ ಬಳಿಕ ಕಾಂಗ್ರೆಸ್ ಸೇರುವ ಬಗ್ಗೆ ನಿರ್ಧಾರ: ಎಸ್ಟಿ ಸೋಮಶೇಖರ್
ಬೆಂಗಳೂರು, ಆಗಸ್ಟ್ 22: ಯಶವಂತಪುರದ ಬಿಜೆಪಿ ಶಾಸಕ ಎಸ್ಟಿ ಸೋಮಶೇಖರ್ ಕಾಂಗ್ರೆಸ್ ಸೇರುವ ಕುರಿತ ವದಂತಿಗಳು ಹರಿದಾಡುತ್ತಲೇ ಇವೆ. ಈ ಕುರಿತು ಮಾತನಾಡಿರುವ ಸೋಮಶೇಖರ್, ಆ.25ರಂದು ದೆಹಲಿಯಲ್ಲಿ ಪಕ್ಷದ ಹೈಕಮಾಂಡ್ ಜೊತೆ ಸಭೆ ನಡೆಯಲಿದೆ. ಆ ಬಳಿಕವೇ ಅಂತಿಮ ನಿರ್ಧಾರ ಕೈಗೊಳ್ಳುವುದಾಗಿ ಮಂಗಳವಾರ ಹೇಳಿದರು.
ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ಸಮ್ಮುಖದಲ್ಲಿ ಸೋಮಶೇಖರ್ ಅವರ ಅನೇಕ ಬೆಂಬಲಿಗರು ಸೊಮವಾರ ಕಾಂಗ್ರೆಸ್ ಸೇರಿದ್ದಾರೆ. ಇದರ ಮರುದಿನ ಸೋಮಶೇಖರ್ ಅವರಿಗೆ ದೆಹಲಿಗೆ ಬರುವಂತೆ ಬಿಜೆಪಿ ಹೈಕಮಾಂಡ್ ಸೂಚಿಸಿದೆ.

'ನಾನು ಆಗಸ್ಟ್ 25 ರಂದು ದೆಹಲಿಗೆ ಹೋಗುತ್ತಿದ್ದೇನೆ. ಹಿರಿಯ ನಾಯಕರನ್ನು ಭೇಟಿಯಾದ ನಂತರವೇ ನಾನು ನಿರ್ಧಾರ ತೆಗೆದುಕೊಳ್ಳುತ್ತೇನೆ. ಹೈಕಮಾಂಡ್ ಭೇಟಿಗೂ ಮುನ್ನ ಯಾವುದೇ ನಿರ್ಧಾರ ಪ್ರಕಟಿಸದಂತೆ ಮನವಿ ಮಾಡಲಾಗಿದ್ದು, ಒಪ್ಪಿಗೆ ಸೂಚಿಸಿದ್ದೇನೆ. ನಾನು ಗ್ರೌಂಡ್ ರಿಯಾಲಿಟಿ ಬಗ್ಗೆ ಹೇಳುತ್ತೇನೆ. ಆ ನಂತರ ಏನಾಗುತ್ತದೆ ಎಂಬುದನ್ನು ನೋಡೋಣ' ಎಂದು ಸೋಮಶೇಖರ್ ಹೇಳಿದರು.
ಇತ್ತೀಚೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಶಿವಕುಮಾರ್ ಅವರನ್ನು ಭೇಟಿ ಮಾಡಿ ತಮ್ಮ ಕ್ಷೇತ್ರಕ್ಕೆ ಕುಡಿಯುವ ನೀರು ಪೂರೈಸಲು ಹಣ ನೀಡುವಂತೆ ಸೋಮಶೇಖರ್ ಒತ್ತಾಯಿಸಿದ್ದರು. ಮಂಗಳವಾರ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಆಡಳಿತಾಧಿಕಾರಿಗಳು ಯಶವಂತಪುರ ಕ್ಷೇತ್ರಕ್ಕೆ 7.63 ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡಿದ್ದಾರೆ.
ಕುಡಿಯುವ ನೀರಿಗೆ ಹಣ ನೀಡುವಂತೆ ಮನವಿ ಮಾಡಿದ್ದರೂ ಬಿಡುಗಡೆ ಮಾಡಿರಲಿಲ್ಲ. ನಾನು ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿ ಅವರನ್ನು ಭೇಟಿ ಮಾಡಿ ಹಣ ನೀಡುವಂತೆ ಮನವಿ ಮಾಡಿದ್ದೇನೆ. ಕಾಂಗ್ರೆಸ್ ಸೇರುವಂತೆ ಯಾರೂ ನನಗೆ ಆಹ್ವಾನ ನೀಡಿಲ್ಲ ಎಂದು ಸೋಮಶೇಖರ್ ಹೇಳಿದರು.
ತಮ್ಮ ಬೆಂಬಲಿಗರು ಕಾಂಗ್ರೆಸ್ಗೆ ಸೇರ್ಪಡೆಯಾಗುತ್ತಿರುವ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಶಾಸಕರು, ಇದು ಮುಂಬರುವ ಬಿಬಿಎಂಪಿ ಚುನಾವಣೆಗೆ ಕೈಗೊಂಡಿರುವ ನಿರ್ಧಾರ ಎಂದು ತಿಳಿಸಿದರು.
'ನಾನು ಅವರಿಗೆ ಕಾರ್ಪೊರೇಷನ್ ಟಿಕೆಟ್ ಭರವಸೆ ನೀಡಿದ್ದೆ. ಆದರೆ, ಅವರು ನನ್ನನ್ನು ನಂಬಲಿಲ್ಲ. ಆಡಳಿತಾರೂಢ ಪಕ್ಷವಾಗಿರುವ ಕಾಂಗ್ರೆಸ್ ಸೇರುವುದರಿಂದ ಅನುಕೂಲವಾಗುತ್ತದೆ ಎಂದು ಅವರು ಭಾವಿಸಿದ್ದರು. ಪಕ್ಷವು ಅವರಿಗೆ ಟಿಕೆಟ್ ಭರವಸೆ ನೀಡಿದರೆ, ಅವರು ಬಿಜೆಪಿಗೆ ಮರಳಬಹುದು' ಎಂದು ಮಾಜಿ ಸಚಿವ ಸೋಮಶೇಖರ್ ಹೇಳಿದರು.
ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ ಮತ್ತಿತರ ಮುಖಂಡರು ಸೋಮಶೇಖರ್ ಅವರನ್ನು ಭೇಟಿ ಮಾಡಿ ಬಿಜೆಪಿಯಲ್ಲೇ ಇರುವಂತೆ ಮನವೊಲಿಸಿದ್ದಾರೆ.












Click it and Unblock the Notifications