ಉಪಚುನಾವಣೆಯಲ್ಲಿ ಕಾಂಗ್ರೆಸ್ ಸೋತರೆ, ಏನಾಗಲಿದೆ?
ಎರಡು ಕ್ಷೇತ್ರಗಳನ್ನು ಆಡಳಿತಾರೂಢ ಕಾಂಗ್ರೆಸ್ ಉಳಿಸಿಕೊಳ್ಳಲು ಯತ್ನಿಸುತ್ತಿದೆ. ಆದರೆ, ಒಂದು ಪಕ್ಷ ಸೋಲು ಅನುಭವಿಸಿದರೆ, 2018ರ ಅಸೆಂಬ್ಲಿ ಚುನಾವಣೆಯನ್ನು ಅವಧಿಗೆ ಮುನ್ನ ಎದುರಿಸಬೇಕಾದೀತು ಎಂದು ರಾಜಕೀಯ ವಿಶ್ಲೇಷಕರು ಮುನ್ಸೂಚನೆ ನೀಡಿದ್ದಾರೆ
ಮೈಸೂರು, ಮಾರ್ಚ್ 20: ಬಿಜೆಪಿ ಹಾಗೂ ಕಾಂಗ್ರೆಸ್ಸಿನ ಪ್ರತಿಷ್ಠೆಯ ಕಣವಾಗಿ ಪರಿಣಮಿಸಿರುವ ನಂಜನಗೂಡು ಹಾಗೂ ಗುಂಡ್ಲುಪೇಟೆ ಉಪ ಚುನಾವಣೆಯ ಕಾವು ದಿನೇ ದಿನೇ ಏರುತ್ತಿದೆ. ಎರಡು ಕ್ಷೇತ್ರಗಳನ್ನು ಆಡಳಿತಾರೂಢ ಕಾಂಗ್ರೆಸ್ ಉಳಿಸಿಕೊಳ್ಳಲು ಯತ್ನಿಸುತ್ತಿದೆ.
ಆದರೆ, ಒಂದು ಪಕ್ಷ ಸೋಲು ಅನುಭವಿಸಿದರೆ, 2018ರ ಅಸೆಂಬ್ಲಿ ಚುನಾವಣೆಯನ್ನು ಅವಧಿಗೆ ಮುನ್ನ ಎದುರಿಸಬೇಕಾದೀತು ಎಂದು ರಾಜಕೀಯ ವಿಶ್ಲೇಷಕರು ಮುನ್ಸೂಚನೆ ನೀಡಿದ್ದಾರೆ.[2018ರ ಚುನಾವಣೆಗೆ ಪ್ರಚಾರ ಶುರುವಿಟ್ಟುಕೊಂಡ ಕಾಂಗ್ರೆಸ್]
ನಂಜನಗೂಡು ಹಾಗೂ ಗುಂಡ್ಲುಪೇಟೆ ಉಪ ಚುನಾವಣೆಗೆ ಪ್ರಚಾರ, ತಂತ್ರಗಾರಿಕೆ, ಹೊಂದಾಣಿಕೆ ಭರದಿಂದ ಸಾಗಿದೆ. ಸೋಮವಾರ(ಮಾರ್ಚ್ 20)ದಿಂದ ನಾಮಪತ್ರ ಸಲ್ಲಿಕೆ ಆರಂಭವಾಗಿದೆ. ಈ ನಡುವೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವ್ಯಾಪ್ತಿಗೆ ಒಳಪಡುವ ಈ ಎರಡು ಕ್ಷೇತ್ರಗಳನ್ನು ಕಳೆದುಕೊಂಡರೆ ಪ್ರತಿಷ್ಠೆ ಮಣ್ಣುಪಾಲಾಗಲಿದೆ. ಜತೆಗೆ ಸರ್ಕಾರವನ್ನು ಕೆಳಗಿಳಿಸಲು ವಿಪಕ್ಷಗಳು ಹಾಗಿರಲಿ, ಸ್ವತಃ ಕಾಂಗ್ರೆಸ್ಸಿಗರಿಂದಲ್ಲೇ ಒತ್ತಡ ಶುರುವಾಗಲಿದೆ.[ಸಿದ್ದು, ಎಚ್ಡಿಕೆ ಬಿಟ್ಟು ಬಿಎಸ್ ವೈ ಪರ ಒಲವು ತೋರಿದ ಓದುಗರು]
ಕಾಂಗ್ರೆಸ್ ತೊರೆದು ಬಿಜೆಪಿ ಕೈ ಹಿಡಿದಿರುವ ದಲಿತ ನಾಯಕ ಒಂದು ಕಾಲದ ಸಿದ್ದರಾಮಯ್ಯ ಅವರ ಆಪ್ತರಾದ ಮಾಜಿ ಸಚಿವ ಶ್ರೀನಿವಾಸ್ ಪ್ರಸಾದ್ ಅವರ ಸವಾಲನ್ನು ಸಿದ್ದರಾಮಯ್ಯ ಗೆಲ್ಲಬೇಕಿದೆ. ನಂಜನಗೂಡಿನಲ್ಲಿ ಕಾಂಗ್ರೆಸ್ಸಿನ ಕಳಲೆ ಕೇಶವಮೂರ್ತಿ ವಿರುದ್ಧ ಶ್ರೀನಿವಾಸ್ ಪ್ರಸಾದ್ ಸೆಣೆಸುತ್ತಿದ್ದಾರೆ.
ಗುಂಡ್ಲುಪೇಟೆಯಲ್ಲಿ ದಿವಂಗತ ಸಚಿವ ಮಹದೇವ್ ಪ್ರಸಾದ್ ಅವರ ಪತ್ನಿ ಗೀತಾ ಮಹದೇವಪ್ರಸಾದ್ ಅವರು ಕಾಂಗ್ರೆಸ್ ಅಭ್ಯರ್ಥಿಯಾಗಿದ್ದರೆ, ಬಿಜೆಪಿಯಿಂದ ನಿರಂಜನ್ ಕುಮಾರ್ ಕಣದಲ್ಲಿದ್ದಾರೆ. ಅನುಕಂಪದ ಆಧಾರ ಮೇಲೆ ಈ ಕ್ಷೇತ್ರವನ್ನು ಕಾಂಗ್ರೆಸ್ ಉಳಿಸಿಕೊಳ್ಳುವ ಸಾಧ್ಯತೆಯಿದೆ. ಆದರೆ, ನಂಜನಗೂಡು ಕ್ಷೇತ್ರದಿಂದ ಕಾಂಗ್ರೆಸ್ಸಿಗೆ ಒಳ್ಳೆ ಸುದ್ದಿ ಬರುವುದು ಕಷ್ಟ ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.
ಫಲಿತಾಂಶ 1-1 ಆದರೂ ಸಿದ್ದರಾಮಯ್ಯ ಅವರಿಗೆ ಕಷ್ಟ. ಒಂದು ವೇಳೆ ಬಿಜೆಪಿ 2 ಕ್ಷೇತ್ರಗಳನ್ನು ಗೆದ್ದರೆ, ಸಿದ್ದರಾಮಯ್ಯ ಅವರ ಸರ್ಕಾರ ಅವಧಿ ಮುಕ್ತಾಯ ಮಾಡುವುದು ಕಷ್ಟ. 2018ರ ಅಸೆಂಬ್ಲಿ ಚುನಾವಣೆಯನ್ನು ಮುಂಚಿತವಾಗಿ ಎದುರಿಸುವ ಪ್ರಸಂಗ ಎದುರಾಗಲಿದೆ ಎಂಬ ಮುನ್ಸೂಚನೆ ಸಿಕ್ಕಿದೆ.