ಮಹಾರಾಷ್ಟ್ರದ ಗಡಿ ಕ್ಯಾತೆ: ಎರಡೂ ರಾಜ್ಯಗಳ 'ಬಿಜೆಪಿ' ಸರ್ಕಾರಗಳು ಕನ್ನಡಿಗರನ್ನು ವಂಚಿಸುತ್ತಿವೆ ಎಂದ ಕಾಂಗ್ರೆಸ್
ಬೆಂಗಳೂರು, ಡಿಸೆಂಬರ್ 03: ಗಡಿ ಕ್ಯಾತೆ ವಿಚಾರವಾಗಿ ಕರ್ನಾಟಕ ಹಾಗೂ ಮಹಾರಾಷ್ಟ್ರ ಸರ್ಕಾರಗಳನ್ನು ಕಾಂಗ್ರೆಸ್ ತರಾಟೆಗೆ ತೆಗೆದುಕೊಂಡಿದೆ.
ಈ ಎರಡೂ ರಾಜ್ಯಗಳಲ್ಲಿ 'ಬಿಜೆಪಿ ಸರ್ಕಾರ' ಅಸ್ತಿತ್ವದಲ್ಲಿದೆ. ಆದರೂ, ಗಡಿ ವಿಚಾರವಾಗಿ ಕನ್ನಡಿಗರಿಗೆ ಅನ್ಯಾಯವಾಗುತ್ತಿದೆ ಎಂದು ಕರ್ನಾಟಕ ಕಾಂಗ್ರೆಸ್ ಟ್ವೀಟ್ ಮಾಡಿದೆ.
ಕನ್ನಡಿಗರಿಗೆ ವಂಚನೆ ಮಾಡುತ್ತಿರುವ ಬಿಜೆಪಿ
ಕರ್ನಾಟಕ ಹಾಗೂ ಮಹಾರಾಷ್ಟ್ರದ ಗಡಿ ವಿವಾದ ಮತ್ತೆ ಭುಗಿಲೆದ್ದಿದೆ. ಈ ವಿಚಾರವಾಗಿ ಟ್ವೀಟ್ ಮಾಡಿರುವ ಕೆಪಿಸಿಸಿ, 'ಮಹಾರಾಷ್ಟ್ರದ ಗಡಿ ಕ್ಯಾತೆ ವಿಚಾರದಲ್ಲಿ ಏಕೆ ಎಲ್ಲಾ ಸಚಿವರ ಬಾಯಿ ಬಂದ್ ಆಗಿದೆ' ಎಂದು ಪ್ರಶ್ನಿಸಿದೆ.
'ಅಲ್ಲೂ (ಮಹಾರಾಷ್ಟ್ರ) ಬಿಜೆಪಿ, ಇಲ್ಲೂ (ಕರ್ನಾಟಕ) ಬಿಜೆಪಿ ಇದೆ. ಎರಡೂ ಸರ್ಕಾರಗಳು ಸೇರಿಕೊಂಡು ಕನ್ನಡಿಗರನ್ನು ವಂಚಿಸುತ್ತಿವೆ' ಎಂದು ಕಾಂಗ್ರೆಸ್ ಆರೋಪಿಸಿದೆ.
'ಬೆಳಗಾವಿಯಲ್ಲಿ ಕನ್ನಡಿಗರ ಮೇಲೆ ದೌರ್ಜನ್ಯವಾಗುತ್ತಿದ್ದರೂ ಸರ್ಕಾರ ಕಣ್ಮುಚ್ಚಿ ಕುಳಿದಿದೆ. ಅಲ್ಲೂ ನಮ್ಮದೇ ಸರ್ಕಾರ ಎಂಬ ಮಮಕಾರವೇ ಬಿಜೆಪಿಗೆ' ಎಂದು ಕೆಪಿಸಿಸಿ ಕೇಳಿದೆ.
ಕರ್ನಾಟಕದ ಮೇಲೆ ಹಗೆ ಸಾಧಿಸುತ್ತಿರುವ ಬಿಜೆಪಿ ಸರ್ಕಾರ
ಕರ್ನಾಟಕದ ಮೇಲೆ ಮಹಾರಾಷ್ಟ್ರ ಸರ್ಕಾರಕ್ಕಿಂತ ಬಸವರಾಜ ಬೊಮ್ಮಾಯಿ ಸರ್ಕಾರವೇ ಹೆಚ್ಚು ಹಗೆ ಸಾಧಿಸುತ್ತಿರುವಂತಿದೆ. ಕನ್ನಡದ ನೆಲದಲ್ಲಿ ಕನ್ನಡ ಧ್ವಜ ಹಿಡಿದ ವಿದ್ಯಾರ್ಥಿಗೆ ಕರ್ನಾಟಕದ ಪೊಲೀಸರೇ ಥಳಿಸಿದ್ದಾರೆ, ಬೆಳಗಾವಿಯಲ್ಲಿ ಕನ್ನಡ ಧ್ವಜವನ್ನು ಪೊಲೀಸರೇ ತೆಗೆದಿದ್ದಾರೆ. ಕನ್ನಡಿಗರ ಮೇಲೆ ದೌರ್ಜನ್ಯವೆಸಗಲು ಪೊಲೀಸರಿಗೆ ಸರ್ಕಾರವೇ ನಿರ್ದೇಶಿಸಿದೆಯೇ' ಎಂದು ಕಾಂಗ್ರೆಸ್ ಕೇಳಿದೆ.
ಕನ್ನಡ ಬಾವುಟ ಹಾರಿಸಿದ ವಿದ್ಯಾರ್ಥಿಯ ಮೇಲೆ ಹಲ್ಲೆ
ಬೆಳಗಾವಿ ಗೋಕಟೆ ಎಂಜಿನಿಯರಿಂಗ್ ಕಾಲೇಜ್ನಲ್ಲಿ ಕನ್ನಡ ಬಾವುಟ ಹಾರಿಸಿದ ವಿದ್ಯಾರ್ಥಿಯನ್ನು ಮರಾಠಿ ಪುಂಡರು ಥಳಿಸಿದ ಘಟನೆ ನಡೆದಿದೆ. ಈ ಪ್ರಕರಣವೀಗ ದೇಶದಾದ್ಯಂತ ಚರ್ಚೆಗೆ ಗ್ರಾಸವಾಗಿದೆ. ಈ ಘಟನೆಯನ್ನು ಖಂಡಿಸಿ ಬೆಳಗಾವಿಯಲ್ಲಿ ಕನ್ನಡ ಪರ ಸಂಘಟನೆಗಳು ಪ್ರತಿಭಟನೆ ನಡೆಸಿವೆ. ಕಾಲೇಜಿಗೆ ಮುತ್ತಿಗೆ ಹಾಕಲು ಕನ್ನಡ ಪರ ಸಂಘಟನೆಗಳ ಬೆಂಬಲಿಗರು ಯತ್ನಿಸಿದ್ದಾರೆ. ವಿದ್ಯಾರ್ಥಿಯ ಮೇಲೆ ಹಲ್ಲೆ ನಡೆಸಿರುವ ಅಧಿಕಾರಿಗಳು ಹಾಗೂ ಆರೋಪಿಗಳನ್ನು ಕೆಲಸದಿಂದ ವಜಾಗೊಳಸಿಬೇಕು. ಅವರನ್ನು ಬಂಧಿಸಬೇಕೆಂದು ಕನ್ನಡ ಪರ ಸಂಘಟನೆಗಳು ಒತ್ತಾಯಿಸಿವೆ.
ವಿದ್ಯಾರ್ಥಿ ಮೇಲಿನ ಹಲ್ಲೆಗೆ ಕರವೇ ನಾರಾಯಣಗೌಡ ಖಂಡನೆ
ಬೆಳಗಾವಿಯಲ್ಲಿ ಕನ್ನಡ ಬಾವುಟ ಹಾರಿಸಿದ ವಿದ್ಯಾರ್ಥಿಯ ಮೇಲೆ ಹಲ್ಲೆ ನಡೆಸಿದ ಮರಾಠಿ ಪುಂಡರ ವಿರುದ್ಧ ಕರ್ನಾಟಕ ರಕ್ಷಣಾ ವೇದಿಕೆಯ ನಾರಾಯಣಗೌಡ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಘಟನೆಯ ಕುರಿತಂತೆ ಸುದ್ದಿಗಾರರೊಂದಿಗೆ ಮಾತನಾಡಿರುವ ಕನ್ನಡ ರಕ್ಷಣಾ ವೇದಿಕೆ ಅಧ್ಯಕ್ಷ ನಾರಾಯಣ ಗೌಡ ಅವರು, 'ವಿದ್ಯಾರ್ಥಿಗಳ ಮೇಲೆ ಮಾಡಿದ ಇಬ್ಬರು ಅಧಿಕಾರಿಗಳನ್ನು ತಕ್ಷಣವೇ ಸಂಸ್ಪೆಂಡ್ ಮಾಡಬೇಕು' ಎಂದು ಒತ್ತಾಯಿಸಿದ್ದಾರೆ. ಒಂದು ಅಧಿಕಾರಿಗಳನ್ನು ಅಮಾನತು ಮಾಡದೇ ಹೋದಲ್ಲಿ, ಬೆಳಗಾವಿಯಲ್ಲಿ ಮುಂದೆ ನಡೆಯುವ ಅನಾಹುತಕ್ಕೆ ಜಿಲ್ಲಾಡಳಿತವೇ ಹೊಣೆ ಎಂದು ಎಚ್ಚರಿಕೆ ನೀಡಿದ್ದಾರೆ. ಕರವೇ ಕಾರ್ಯಕರ್ತರು ಬೆಳಗಾವಿಗೆ ನುಗ್ಗಿ ಸಾವಿರಾರು ಕನ್ನಡ ಬಾವುಟ ಹಾರಿಸುವುದಾಗಿ ಹೇಳಿದ್ದಾರೆ.
ಎಚ್.ಡಿ.ಕುಮಾರಸ್ವಾಮಿ ಕೆಂಡಾಮಂಡಲ
ಕನ್ನಡ ಬಾವುಟ ಹಾರಿಸಿದ ವಿದ್ಯಾರ್ಥಿಯ ಮೇಲಿನ ಹಲ್ಲೆ ಕುರಿತು ಸರಣಿ ಟ್ವೀಟ್ ಮಾಡಿರುವ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ, 'ಬೆಳಗಾವಿಯ ತಿಲಕವಾಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕನ್ನಡ ಬಾವುಟ ಹಾರಿಸಿದ ವಿದ್ಯಾರ್ಥಿ ಮೇಲೆ ನಡೆದಿರುವ ಹಲ್ಲೆಯನ್ನು ಉಗ್ರವಾಗಿ ಖಂಡಿಸುತ್ತೇನೆ. ದೂರು ಕೊಡಲು ಹೋದ ಆ ವಿದ್ಯಾರ್ಥಿ ಮೇಲೆ ಪೊಲೀಸರು ಕೂಡ ಅಮಾನುಷವಾಗಿ ಹಲ್ಲೆ ನಡೆಸಿರುವುದು ಕನ್ನಡಕ್ಕೆ, ಕರ್ನಾಟಕಕ್ಕೆ ಬಗೆದ ದೊಡ್ಡ ದ್ರೋಹ' ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬೆಳಗಾವಿಯಲ್ಲಿ ನಾಲ್ವರು ಮರಾಠಿ ಪುಂಡರ ಬಂಧನ
ಬೆಳಗಾವಿ ಗೋಕಟೆ ಎಂಜಿನಿಯರಿಂಗ್ ಕಾಲೇಜಿನಲ್ಲಿ ಕನ್ನಡ ಬಾವುಟ ಹಾರಿಸಿ ವಿದ್ಯಾರ್ಥಿಯ ಮೇಲೆ ಹಲ್ಲೆ ಮಾಡಿದ ಮರಾಠಿ ಪುಂಡರನ್ನು ಬಂಧಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.