ಭ್ರಷ್ಟರನ್ನು ಕಂಡರೆ ಒಂದು ಕರೆ/ಮೆಸೇಜ್ ಕಳಿಸಿ ಸಾಕು
ಬೆಂಗಳೂರು, ನ,.24: ಭ್ರಷ್ಟರ ಪಾಲಿಗೆ ಸಿಂಹಸ್ವಪ್ನವಾಗಿ ಸಾರ್ವಜನಿಕರ ನಂಬುಗೆಯ ಸಂಸ್ಥೆ ಎನಿಸಿರುವ ಕರ್ನಾಟಕ ಲೋಕಾಯುಕ್ತ ಜನರಿಗೆ ಇನ್ನಷ್ಟು ಹತ್ತಿರವಾಗುತ್ತಿದೆ. ಯಾರಾದರೂ ಲಂಚ ಕೇಳಿದರೆ, ಇಲಾಖೆಗಳಲ್ಲಿ ಭ್ರಷ್ಟಾಚಾರ ಕಂಡು ಬಂದರೆ ಲೋಕಾಯುಕ್ತ ಸಂಸ್ಥೆಗೆ ತುರ್ತು ಕರೆ, ಸಂದೇಶ ಕಳಿಸಲು ಅನುಕೂಲವಾಗಲು ಇದ್ದ ಸಹಾಯವಾಣಿಯನ್ನು ಮತ್ತೆ ಹೊಸ ರೂಪದೊಂದಿಗೆ ಲೋಕಾರ್ಪಣೆ ಮಾಡಲಾಗಿದೆ.
ಈಗಾಗಲೇ ಪೋಸ್ಟ್ ಪೇಯ್ಡ್ ಮೊಬೈಲ್ ಫೋನ್ ಚಂದಾದಾರರಿಗೆ ಆಂಗ್ಲಭಾಷೆಯಲ್ಲಿ ಸಂಸ್ಥೆ ಪರವಾಗಿ ಸಂದೇಶ ಬಂದಿರಲೂಬಹುದು. ಸಮಸ್ಯೆ ಇದ್ದಾಗ ಕರ್ನಾಟಕ ಲೋಕಾಯುಕ್ತ ಎಸ್ ಪಿ ಅವರನ್ನು ಸಂಪರ್ಕಿಸಿ ಎಂದು ಎರಡು ಸಂಖ್ಯೆಗಳನ್ನು ನೀಡಲಾಗಿದೆ. ಈ ಹಿಂದೆ 2008ರಲ್ಲಿ ದೇಶದಲ್ಲೆ ಮೊಟ್ಟ ಮೊದಲ ಬಾರಿಗೆ ಸಾರ್ವಜನಿಕ ಹಿತ ರಕ್ಷಣೆಗಾಗಿ ಲೋಕಾಯುಕ್ತ ಸಂಸ್ಥೆ ಸಹಾಯವಾಣಿ ಆರಂಭಿಸಿತ್ತು. ಈಗ ಈ ಸಂಖ್ಯೆ ಬದಲಾಗಿತ್ತು. ದಯವಿಟ್ಟು ಕೆಳಗಿನ ಸಂಖ್ಯೆಗಳನ್ನು ನೋಟ್ ಮಾಡ್ಕೊಳ್ಳಿ
* ಸ್ಥಿರ ದೂರವಾಣಿ: (080) 2235 3755
* ಮೊಬೈಲ್ ಫೋನ್: 99006 44333

ಭ್ರಷ್ಟಾಚಾರ, ದುರಾಡಳಿತ, ಸರ್ಕಾರಿ ಕೆಲಸದಲ್ಲಿ ವಿಳಂಬದ ಬಗ್ಗೆ ದೂರು ಸಲ್ಲಿಸುವುದರ ಜೊತೆಗೆ ರಾತ್ರಿ ವೇಳೆ ನಿಮಗೆ ಅಸುರಕ್ಷತೆ ಕಂಡು ಬಂದರೆ, ತುರ್ತು ಪರಿಸ್ಥಿತಿ ವೇಳೆಯಲ್ಲೂ ಕೂಡಾ ಮೇಲ್ಕಂಡ ಸಂಖ್ಯೆಗಳನ್ನು ಬಳಸಬಹುದು. ಇದಲ್ಲದೆ ಲೋಕಾಯುಕ್ತ ವೆಬ್ ತಾಣದಲ್ಲಿ ಲೋಕಾಯುಕ್ತ ಅಧಿಕಾರಿಗಳ ಸಂಪರ್ಕ ಸಂಖ್ಯೆಗಳು ಕೂಡಾ ಲಭ್ಯವಿದೆ.
ಇದರ ಜತೆಗೆ ಲೋಕಾಯುಕ್ತ ಅಧಿಕಾರಿಗಳ ಆಸ್ತಿ ವಿವರ, ಸಾರ್ವಜನಿಕರು ಸಲ್ಲಿಸಿದ ದೂರಿನ ಸ್ಥಿತಿ ಗತಿ, ಮಾಹಿತಿ ಹಕ್ಕು ಕಾಯಿದೆ ವಿವರಗಳನ್ನು ವೆಬ್ ತಾಣದಿಂದ ಪಡೆದುಕೊಳ್ಳಬಹುದಾಗಿದೆ.
ರಾಜ್ಯದೆಲ್ಲೆಡೆ ಬಳಕೆ : 'ಮೇಲ್ಕಂಡ ಸಂಖ್ಯೆಗಳನ್ನು ಬಳಸಿ ರಾಜ್ಯದ ಯಾವುದೇ ಭಾಗದಲ್ಲಾಗಲಿ ಸರ್ಕಾರಿ ಅಧಿಕಾರಿಗಳು ಲಂಚಕ್ಕೆ ಪೀಡಿಸಿದರೆ ಸಾರ್ವಜನಿಕರು ಕರೆ ಮಾಡಿ ಅಥವಾ ಸಂದೇಶ ಕಳಿಸಿ ದೂರು ನೀಡಬಹುದು. ಕರೆಗಳ ಮಾಹಿತಿ ಆಧರಿಸಿ ಲೋಕಾಯುಕ್ತ ಪೊಲೀಸರು ಭ್ರಷ್ಟರ ವಿರುದ್ಧ ನಿಗದಿತ ಅವಧಿಯೊಳಗೆ ಕಾರ್ಯಾಚರಣೆ ನಡೆಸುತ್ತಾರೆ. ಜಿಲ್ಲೆ, ತಾಲೂಕು ಕೇಂದ್ರಗಳಿಗೆ ಸಂಬಂಧಿಸಿದ ಕರೆಗಳಾಗಿದ್ದರೆ, ಅವನ್ನು ಜಿಲ್ಲಾ ಲೋಕಾಯುಕ್ತ ಪೊಲೀಸ್ ತಂಡಗಳ ಮೂಲಕ ಕಾರ್ಯಾಚರಣೆ ನಡೆಸಲಾಗುವುದು' ಎಂದು ಲೋಕಾಯುಕ್ತ ಎಡಿಜಿಪಿ ಎಚ್.ಎನ್. ಸತ್ಯನಾರಾಯಣರಾವ್ ಹೇಳಿದ್ದಾರೆ.












Click it and Unblock the Notifications