ಅಧಿವೇಶನ ಆರಂಭಕ್ಕೆ 1ದಿನ ಮುನ್ನ ರಾಜ್ಯ ಬಿಜೆಪಿಯಲ್ಲಿ ಅಂತರ್ಯುದ್ದ?
ಕರ್ನಾಟಕ ವಿಧಾನಮಂಡಲದ ಚಳಿಗಾಲದ ಅಧಿವೇಶನ ಸೋಮವಾರದಿಂದ (ಡಿ 19) ಆರಂಭವಾಗಲಿದೆ. ಬೆಳಗಾವಿಯಲ್ಲಿ ಡಿಸೆಂಬರ್ 29ರವರೆಗೆ ಅಧಿವೇಶನ ನಡೆಯಲಿದೆ. ಚುನಾವಣಾ ವರ್ಷವಾಗಿರುವುದರಿಂದ ಸದನ ಕಾವೇರುವ ಸಾಧ್ಯತೆಯಿದೆ.
ವಿರೋಧ ಪಕ್ಷಗಳು ಆಡಳಿತ ಪಕ್ಷವನ್ನು ಇಕ್ಕಟ್ಟಿಗೆ ಸಿಲುಕಿಸಲು ಹಲವು ಅಸ್ತಗಳನ್ನು ಈಗಾಗಲೇ ಸಿದ್ದತೆ ಮಾಡಿಟ್ಟುಕೊಂಡಿದೆ. ಬಸವರಾಜ ಬೊಮ್ಮಾಯಿ ನೇತೃತ್ವದ ಸರಕಾರ ಯಾವರೀತಿ ತಮ್ಮ ಸರಕಾರವನ್ನು ಸಮರ್ಥಿಸಿಕೊಳ್ಳುತ್ತಾರೆ ಎನ್ನುವುದು ಒಂದು ಕಡೆಯಾದರೆ, ರಾಜ್ಯ ಬಿಜೆಪಿಗೆ ಹೊಸ ತಲೆನೋವು ಆರಂಭವಾಗಿದೆ ಎನ್ನುವ ಸುದ್ದಿ ಹರಿದಾಡುತ್ತಿದೆ.
ಗುಜರಾತ್ ಚುನಾವಣೆಯ ನಂತರ ಬಿಜೆಪಿ ಹೈಕಮಾಂಡಿನ ಚಿತ್ತ ಕರ್ನಾಟಕದತ್ತ ನೆಟ್ಟಿದೆ. ಅಮಿತ್ ಶಾ ತಮ್ಮದೇ ಮೂಲಗಳಿಂದ ಮಾಹಿತಿಯನ್ನು ಸಂಗ್ರಹಿಸುತ್ತಿರುವ ರಾಜ್ಯ ಬಿಜೆಪಿ ನಾಯಕರು ತಳಮಳದಲ್ಲಿದ್ದಾರೆ ಎನ್ನುವ ಮಾತೂ ಬಿಜೆಪಿ ಪಡಶಾಲೆಯಲ್ಲಿ ಕೇಳಿ ಬರುತ್ತಿದೆ.
ಸಂಪುಟ ವಿಸ್ತರಣೆಯ ಹಲವು ಪ್ರಯತ್ನಗಳನ್ನು ಯಡಿಯೂರಪ್ಪ ಆದಿಯಾಗಿ ಬೊಮ್ಮಾಯಿ ಮಾಡಿದ್ದರೂ ಅದು ಯಾವುದೂ ಉಪಯೋಗಕ್ಕೆ ಬರುತ್ತಿಲ್ಲ. ಇವೆಲ್ಲದರ ನಡುವೆ ಹಿರಿಯ ಮುಖಂಡರು ಸದನಕ್ಕೆ ಗೈರಾಗುವ ಮುನ್ಸೂಚನೆಯನ್ನು ನೀಡಿದ್ದಾರೆ ಎನ್ನುವ ಮಾಹಿತಿಗಳು ಹೊರ ಬರುತ್ತಿವೆ.

ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತರಾಜ್ ಖಾತೆಯನ್ನು ಹೊಂದಿದ್ದ ಕೆ.ಎಸ್.ಈಶ್ವರಪ್ಪ
ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತರಾಜ್ ಖಾತೆಯನ್ನು ಹೊಂದಿದ್ದ ಕೆ.ಎಸ್.ಈಶ್ವರಪ್ಪ, ಜಲಸಂಪನ್ಮೂಲ ಖಾತೆಯನ್ನು ನಿಭಾಯಿಸಿದ್ದ ರಮೇಶ್ ಜಾರಕಿಹೊಳಿ, ಅರಣ್ಯ, ಪ್ರವಾಸೋದ್ಯಮ ಖಾತೆಯನ್ನು ನಿಭಾಯಿಸಿದ್ದ ಸಿ.ಪಿ.ಯೋಗೇಶ್ವರ್ ವಿವಿಧ ಕಾರಣಗಳಿಂದ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಈಗ ಮತ್ತೆ ಅವರು ಸಂಪುಟ ಸೇರಲು ಉತ್ಸುಕರಾಗಿದ್ದರೂ, ಮುಖ್ಯಮಂತ್ರಿ ಮತ್ತು ಬಿಜೆಪಿ ಹೈಕಮಾಂಡಿನಿಂದ ಸ್ಪಂದನೆ ಸಿಗುತ್ತಿಲ್ಲ ಎನ್ನುವ ನೋವು ಅವರನ್ನು ಕಾಡುತ್ತಿದೆ ಮತ್ತು ಇದು ಇನ್ನೊಂದು ಸ್ವರೂಪ ಪಡೆಯುವ ಸಾಧ್ಯತೆಯಿದೆ ಎನ್ನುವ ಮಾತು ಕೇಳಿ ಬರುತ್ತಿದೆ.

ಸಿಎಂ ಬೊಮ್ಮಾಯಿ ದೆಹಲಿಗೆ ಹೋದಾಗಲೂ ಸಂಪುಟ ವಿಸ್ತರಣೆಯ ವಿಚಾರ
ಪ್ರತೀ ಬಾರಿ ಸಿಎಂ ಬೊಮ್ಮಾಯಿ ದೆಹಲಿಗೆ ಹೋದಾಗಲೂ ಸಂಪುಟ ವಿಸ್ತರಣೆಯ ವಿಚಾರ ಗರಿಗೆದರುತ್ತದೆ, ಆದರೆ ಖಾಲಿ ಕೈಯಲ್ಲಿ ವಾಪಸ್ ಆಗುತ್ತಿರುವುದು ಗೊತ್ತಿರುವ ವಿಚಾರ. ಆದರೆ, ಕಳೆದ ಬಾರಿ ಬೊಮ್ಮಾಯಿ ದೆಹಲಿಗೆ ಹೋದಾಗ, ವರಿಷ್ಠರ ಅನುಮತಿಯನ್ನು ಪಡೆದು ಭಾನುವಾರದೊಳಗೆ (ಡಿ 18) ಸಂಪುಟ ವಿಸ್ತರಣೆಯಾಗಬಹುದು ಎನ್ನುವ ವಿಶ್ವಾಸವನ್ನು ಸಚಿವ ಸ್ಥಾನದ ಆಕಾಂಕ್ಷಿಗಳು ಹೊಂದಿದ್ದರು. ಆದರೆ, ಬೊಮ್ಮಾಯಿಯವರಿಗೆ ವರಿಷ್ಠರ ಭೇಟಿ ಸಾಧ್ಯವಾಗಿರಲಿಲ್ಲ.

ಮುನ್ಸೂಚನೆಯನ್ನು ಅರಿತ ಬೊಮ್ಮಾಯಿ ಸರಕಾರ
ಇದರಿಂದ ನಿರಾಶೆಯಾಗಿರುವ ಮೇಲೆ ಉಲ್ಲೇಖಿಸಲಾಗಿರುವ ಮೂವರು ಹಿರಿಯ ಮುಖಂಡರು ಸದನಕ್ಕೆ ಗೈರಾಗುವ ನಿರ್ಧಾರಕ್ಕೆ ಬಂದಿದ್ದಾರೆ, ಜೊತೆಗೆ ಇನ್ನೂ ಕೆಲವರನ್ನು ಈ ಪಟ್ಟಿಗೆ ಸೇರಿಸಿಕೊಳ್ಳಲು ಸಿದ್ದತೆಯನ್ನು ಮಾಡಿಕೊಳ್ಳುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಇದರ ಮುನ್ಸೂಚನೆಯನ್ನು ಅರಿತ ಬೊಮ್ಮಾಯಿ ಸರಕಾರ ಸದನಕ್ಕೆ ತಪ್ಪದೇ ಹಾಜರಾಗುವಂತೆ ಮೌಕಿಕ ಸಂದೇಶವನ್ನು ರವಾನಿಸಿದ್ದಾರೆ.

ಸರಕಾರದ ಕ್ರಮವನ್ನು ಸಮರ್ಥಿಸಿಕೊಳ್ಳುವುದು ಬಿಜೆಪಿಗೆ ಕಷ್ಟ
ಸದನದಲ್ಲಿ ಆಡಳಿತ ಪಕ್ಷದ ಸದಸ್ಯರ ಸಂಖ್ಯೆ ಕಮ್ಮಿಯಿದ್ದರೆ ಸರಕಾರದ ಕ್ರಮವನ್ನು ಸಮರ್ಥಿಸಿಕೊಳ್ಳುವುದು ಬಿಜೆಪಿಗೆ ಕಷ್ಟವಾಗುತ್ತದೆ. ಆ ಕಾರಣಕ್ಕಾಗಿಯೇ ಸದನಕ್ಕೆ ಗೈರಾಗುವ ನಿರ್ಧಾರಕ್ಕೆ ಬಂದರೆ, ಒತ್ತಡಕ್ಕೆ ಬೀಳುವ ಬಿಜೆಪಿ ವರಿಷ್ಠರು ಸೂಕ್ತ ನಿರ್ಧಾರ ತೆಗೆದುಕೊಳ್ಲುತ್ತಾರೆ ಎನ್ನುವ ಮಾತು ಕೇಳಿ ಬರುತ್ತಿದೆ. ಆದರೆ, ಸಂಘದ ಹಿನ್ನಲೆಯ ಈಶ್ವರಪ್ಪರವರಂತಹ ನಾಯಕರು ಪಕ್ಷದ ಸೂಚನೆಗೆ ಬದ್ದರಾಗುವ ಹಿನ್ನಲೆಯುಳ್ಳವರಾಗಿರುವುದರಿಂದ, ಸದನ ಆರಂಭಕ್ಕೆ ಮುನ್ನ ಎಲ್ಲವೂ ಸರಿದಾರಿಗೆ ಬರಲಿದೆ ಎನ್ನುವ ವಿಶ್ವಾಸವನ್ನು ಬಿಜೆಪಿ ಹೊಂದಿದೆ.












Click it and Unblock the Notifications