ವಿಧಾನ ಪರಿಷತ್ ಚುನಾವಣೆ: ಇಲ್ಲಿದೆ BJP ಅಭ್ಯರ್ಥಿಗಳ ಪಟ್ಟಿ!
ಬೆಂಗಳೂರು, ಜೂ. 15: ಸುದೀರ್ಘ ಸಭೆಯ ಬಳಿಕ ವಿಧಾನ ಪರಿಷತ್ ಚುನಾವಣೆಗೆ ಬಿಜೆಪಿ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿ ಕೊನೆಗೂ ಸಿದ್ಧವಾಗಿದೆ. ಮಲ್ಲೇಶ್ವರದ ರಾಜ್ಯ ಬಿಜೆಪಿ ಕಚೇರಿಯಲ್ಲಿ ಸುದೀರ್ಘವಾಗಿ ನಡೆದ ಕೋರ್ ಕಮಿಟಿ ಸಭೆಯಲ್ಲಿ ಬಿಜೆಪಿ ನಾಯಕರು ಅಳೆದು ತೂಗಿ ಸಂಭಾವ್ಯ ಅಭ್ಯರ್ಥಿಗಳ ಹೆಸರುಗಳನ್ನು ಅಂತಿಮಗೊಳಿಸಿದ್ದಾರೆ. ರಾಜ್ಯ ಬಿಜೆಪಿಯಿಂದ ಪಟ್ಟಿಯನ್ನು ಕೇಂದ್ರ ಚುನಾವಣಾ ಸಮಿತಿಗೆ ಕಳುಹಿಸಲಾಗಿದ್ದು, ಅಧಿಕೃತವಾಗಿ ಅಭ್ಯರ್ಥಿಗಳ ಹೆಸರುಗಳನ್ನು ಕೇಂದ್ರ ಚುನಾವಣಾ ಸಮಿತಿ ಪ್ರಕಟಿಸಲಿದೆ.
Recommended Video
ವಿಧಾನ ಪರಿಷತ್ನ 4 ಸ್ಥಾನಗಳಿಗೆ ಅಭ್ಯರ್ಥಿಗಳ ಹೆಸರುಗಳನ್ನು ಕೇಂದ್ರೀಯ ಚುನಾವಣಾ ಸಮಿತಿಗೆ ರಾಜ್ಯ ಬಿಜೆಪಿ ನಾಯಕರು ಕಳುಹಿಸಿದ್ದಾರೆ. ಕೋರ್ ಕಮಿಟಿ ಸಭೆಯಲ್ಲಿ ನಿರ್ಧಾರ ಮಾಡಿದಂತೆ ಎರಡು ವಿಭಾಗಗಳಲ್ಲಿ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿಯನ್ನು ಸಿದ್ಧಮಾಡಲಾಗಿದೆ. ಮೊದಲನೆಯದಾಗಿ ಸರ್ಕಾರ ರಚನೆಗೆ ಕಾರಣರಾದವರು ಮತ್ತು ಎರಡನೇಯದಾಗಿ ಪಕ್ಷಕ್ಕಾಗಿ ದುಡಿದಿರುವ ಕಾರ್ಯಕರ್ತರು ಎಂದು ವಿಭಾಗಿಸಲಾಗಿರುವುದು ವಿಶೇಷ.
ವಿಧಾನ ಪರಿಷತ್ ಚುನಾವಣೆ; ಯಡಿಯೂರಪ್ಪ ಮಾತೇ ಅಂತಿಮ!
ಸರ್ಕಾರ ರಚನೆಗೆ ಕಾರಣರಾದವರು
ಸರ್ಕಾರ ರಚನೆಗೆ ಕಾರಣರಾದವರ ಪೈಕಿ ಮಾಜಿ ಸಚಿವ ಎಂಟಿಬಿ ನಾಗರಾಜ್, ಎಚ್. ವಿಶ್ವನಾಥ್, ಆರ್. ಶಂಕರ್ ಹೆಸರಿನ ಜೊತೆ ಮಾಜಿ ಸಚಿವ ಸುನೀಲ್ ವಲ್ಯಾಪುರೆ ಹೆಸರು ಕೂಡ ಸೇರಿಸಲಾಗಿದೆ. ಇನ್ನು ಬಿಜೆಪಿ ಪಕ್ಷದ ಕಾರ್ಯಕರ್ತರ ಪೈಕಿ ಮಾಜಿ ಸಚಿವ ಸಿ.ಪಿ. ಯೋಗೇಶ್ವರ್, ಪಿ.ಎಚ್. ಪೂಜಾರ್, ಗೋಪಿನಾಥ್ ರೆಡ್ಡಿ ಸೇರಿ ಆರು ಹೆಸರುಗಳನ್ನು ಪಟ್ಟಿಯಲ್ಲಿ ಸೇರಿಸಲಾಗಿದೆ. ಹೀಗೆ ಒಟ್ಟು 10 ಅಭ್ಯರ್ಥಿಗಳ ಹೆಸರುಗಳನ್ನು ಕಳುಹಿಸಲಾಗಿದೆ.
ಮಾತು ಕೊಟ್ಟಿದ್ದೇನೆ
ಕೋರ್ ಕಮಿಟಿ ಸಭೆಯಲ್ಲಿ ಒಟ್ಟು 163 ಆಕಾಂಕ್ಷಿಗಳ ಹೆಸರುಗಳು ಪ್ರಸ್ತಾಪವಾಗಿವೆ.
ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಮಾಜಿ ಸಚಿವರಾದ ಎಂಟಿಬಿ ನಾಗರಾಜ್, ಎಚ್. ವಿಶ್ವನಾಥ್, ಆರ್. ಶಂಕರ್,ಸುನೀಲ್ ವಲ್ಯಾಪುರೆಅವರಿಗೆ ನಾನು ಮಾತು ಕೊಟ್ಟಿದ್ದೇವೆ ಎಂದು ಸಭೆಯಲ್ಲಿ ಹೇಳಿದ್ದಾರೆ. ಹೀಗಾಗಿ ಈ ನಾಲ್ವರ ಹೆಸರುಗಳಲ್ಲಿ ಹೆಚ್ಚಿನ ಬದಲಾವಣೆ ಆಗುವ ಸಾಧ್ಯತೆಗಳು ತೀರಾ ಕಡಿಮೆ.
ಬಿಜೆಪಿ ವರ್ಚುಯಲ್ ಜನ ಸಂವಾದ ಭರ್ಜರಿ ಯಶಸ್ಸು: ಶೆಟ್ಟರ್
ಚಿಂಚೋಳಿ ಚುನಾವಣೆ
ಶಾಸಕ ಸ್ಥಾನಕ್ಕೆ ರಾಜಿನಾಮೆ ಕೊಟ್ಟು ಬಿಜೆಪಿ ಸೇರಿದ್ದ ಡಾ. ಉಮೇಶ್ ಜಾಧವ್ ಅವರ ಪುತ್ರ ಡಾ. ಅವಿನಾಶ್ ಜಾಧವ್ ಅವರಿಗೆ ಚಿಂಚೋಳಿ ವಿಧಾನಸಭಾ ಉಪ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್ ಕೊಡಲಾಗಿತ್ತು. ಜೊತೆಗೆ ಕಲಬುರಗಿ ಲೋಕಸಭಾ ಕ್ಷೇತ್ರದ ಟಿಕೆಟ್ನ್ನು ಡಾ. ಉಮೇಶ್ ಜಾಧವ್ ಅವರಿಗೆ ಕೊಡಲಾಗಿತ್ತು.
ಆಗ ಬಿಜೆಪಿ ಮಾಜಿ ಶಾಸಕ ಸುನೀಲ್ ವಲ್ಯಾಪುರೆ ಬಿಜೆಪಿ ಟಿಕೆಟ್ನಿಂದ ವಂಚಿತರಾಗಿದ್ದರು. ಆಗ ಕೊಟ್ಟಿದ್ದ ಮಾತನ್ನು ಉಳಿಸಿಕೊಳ್ಳಲು ಸಿಎಂ ಯಡಿಯೂರಪ್ಪ ಈಗ ಮುಂದಾಗಿದ್ದಾರೆ.ಹೀಗಾಗಿ ಮಾಜಿ ಶಾಸಕ ಸುನೀಲ್ ವಲ್ಯಾಪುರೆ ಅವರು ವಿಧಾನ ಪರಿಷತ್ ಪ್ರವೇಶಿಸುವುದು ಖಚಿತ.
ಎಲ್ಲ ಸದಸ್ಯರು ಭಾಗಿ
ವಿಧಾನ ಪರಿಷತ್ ಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳಆಯ್ಕೆಗೆ ನಡೆದ ಮಹತ್ವದ ಕೋರ್ ಕಮಿಟಿ ಸಭೆಯಲ್ಲಿ ಸಿಎಂ ಯಡಿಯೂರಪ್ಪ, ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್, ಕೆ ಎಸ್ ಈಶ್ವರಪ್ಪ, ಸಿ ಟಿ ರವಿ, ಆರ್ ಅಶೋಕ್, ಅರವಿಂದ ಲಿಂಬಾವಳಿ, ಡಿಸಿಎಂ ಡಿಸಿಎಂ ಗೋವಿಂದ ಕಾರಜೋಳ, ಜಗದೀಶ್ ಶೆಟ್ಟರ್ ಭಾಗಿಯಾಗಿದ್ದರು.
ದೆಹಲಿಯಿಂದ ವಿಡಿಯೋ ಕಾನ್ಫರೆನ್ಸ್ ಮೂಲಕ ಕೇಂದ್ರ ಸಚಿವರಾದ ಡಿ.ವಿ. ಸದಾನಂದಗೌಡ, ಪ್ರಲ್ಹಾದ್ ಜೋಷಿ ಭಾಗವಹಿಸಿದ್ದರು.
ಜೊತೆಗೆ ಹೈದ್ರಾಬಾದ್ ನಿಂದ ವೀಡಿಯೋ ಕಾನ್ಫರೆನ್ಸ್ ಮೂಲಕ ರಾಜ್ಯ ಉಸ್ತುವಾರಿ ಮುರಳೀಧರ ರಾವ್ ಮತ್ತು ಸಹ ಉಸ್ತುವಾರಿ ಪುರಂದೇಶ್ವರಿ ಭಾಗವಹಿಸಿದ್ದರು.