ಕರ್ನಾಟಕದಲ್ಲಿ ಜಲ ಜೀವನ್ ಮಿಷನ್ ಯೋಜನೆ ವಿಫಲ?: ಆರೋಪ-ಪ್ರತ್ಯಾರೋಪವೇನು?
ಬೆಂಗಳೂರು, ಫೆಬ್ರವರಿ 17: ಜಲ ಜೀವನ್ ಮಿಷನ್ (ಜೆಜೆಎಂ) ಅಡಿಯಲ್ಲಿ ಕೇಂದ್ರ ಸರ್ಕಾರವು ಕರ್ನಾಟಕ ರಾಜ್ಯಕ್ಕೆ ಬಿಡುಗಡೆ ಮಾಡಿರುವ ಅನುದಾನ ಬಳಸಿಕೊಳ್ಳುವಲ್ಲಿ ವಿಫಲವಾಗಿದೆ ಎಂದು ಕೇಂದ್ರ ಜಲಶಕ್ತಿ ರಾಜ್ಯ ಸಚಿವರು ಮಾಡಿರುವ ಆರೋಪ ನಿರಾಧಾರವಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಮಾಹಿತಿ ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
ಈ ಬಗ್ಗೆ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಸವಿವರವಾಗಿ ಬರೆದುಕೊಂಡಿರುವ ಸಚಿವ ಪ್ರಿಯಾಂಕ್ ಖರ್ಗೆ, ನಿಧಿ ಬಳಕೆಯಲ್ಲಿ ವಿಫಲ ಎಂಬ ಆರೋಪ ಶುದ್ಧ ಸುಳ್ಳು. 2019-20ರಿಂದ 2024-25ರ ಅವಧಿಗೆ ₹ 28,623.89 ಕೋಟಿ ಸೂಚಕ ಹಂಚಿಕೆಯಾಗಿದ್ದು, ವಾಸ್ತವವಾಗಿ ಅಷ್ಟು ಗಾತ್ರದ ಅನುದಾನ ಕೇಂದ್ರ ಸರ್ಕಾರದಿಂದ ಬಿಡುಗಡೆಯಾಗಿರುವುದಿಲ್ಲ. ಈ ಅವಧಿಯಲ್ಲಿ 2025ರ ಫೆಬ್ರವರಿ 10ರವರೆಗೆ ಕೇಂದ್ರ ಸರ್ಕಾರ ₹11,760.00 ಕೋಟಿ ಮಾತ್ರ ಬಿಡುಗಡೆ ಮಾಡಿದೆ. ಈ ಅನುದಾನವನ್ನು ಕರ್ನಾಟಕ ರಾಜ್ಯ ಸರ್ಕಾರವು ಸಂಪೂರ್ಣವಾಗಿ (99.95%) ಬಳಸಿಕೊಂಡಿದೆ. ಆದ್ದರಿಂದ, ಕರ್ನಾಟಕ ರಾಜ್ಯವು ಜೆಜೆಎಂ ನಿಧಿಗಳನ್ನು ಬಳಸಿಕೊಳ್ಳುವಲ್ಲಿ ವಿಫಲವಾಗಿದೆ ಎಂಬ ಆರೋಪವು ಸತ್ಯಕ್ಕೆ ದೂರವಾಗಿದೆ ಮತ್ತು ದಾರಿತಪ್ಪಿಸುವಂತಿದೆ.

ಜಲಜೀವನ್ ಮಿಷನ್ ಯೋಜನೆಯ ಅನುಷ್ಠಾನದಲ್ಲಿ ಕರ್ನಾಟಕ ಬದ್ಧತೆಯನ್ನು ತೋರಿದ್ದರೂ ಕೇಂದ್ರ ಸಚಿವರು ಕರ್ನಾಟಕ ಸರ್ಕಾರ ಜೆಜೆಎಂ ಅನುಷ್ಠಾನದಲ್ಲಿ ಮಂದಗತಿಯನ್ನು ತೋರುತ್ತಿದೆ ಎಂದು ಆರೋಪಿಸಿದ್ದಾರೆ. ಆದರೆ ವಾಸ್ತವವಾಗಿ 2023-24ನೇ ಹಣಕಾಸು ವರ್ಷದಲ್ಲಿ, ಕರ್ನಾಟಕವು ಕೇಂದ್ರ ಸರ್ಕಾರ ನೀಡಿದ ಎಲ್ಲಾ ನಾಲ್ಕು ಕಂತುಗಳ ನಿಧಿಯನ್ನು ಪೂರ್ಣವಾಗಿ ಬಳಸಿಕೊಂಡಿದೆ.
ಕೇಂದ್ರ ಸರ್ಕಾರ ಬಿಡುಗಡೆ ಮಾಡಿದ ₹5,767.12 ಕೋಟಿಯಲ್ಲಿ ರಾಜ್ಯ ಸರ್ಕಾರವೂ 2023-24ನೆ ಸಾಲಿನಲ್ಲಿ₹5,563.38 ಕೋಟಿ ವೆಚ್ಚ ಮಾಡಿ ಪ್ರಗತಿ ಸಾಧಿಸಿದೆ. ರಾಜ್ಯ ಸರ್ಕಾರವು ತನ್ನ ಪಾಲಿನ ನಿಗದಿತ ಮಿತಿಯನ್ನು ಮೀರಿ ₹9,310.00 ಕೋಟಿಗಳನ್ನು ಖರ್ಚು ಮಾಡಿದೆ. ಅಲ್ಲದೇ, 21-03-2024ರ ಮಾರ್ಚ್ 21ರಂದು ಕೇಂದ್ರ ಸರ್ಕಾರಕ್ಕೆ ಪತ್ರ ಬರೆದು ಹೆಚ್ಚುವರಿ ಅನುದಾನ ಕೇಳಿದ್ದರೂ, ಇದುವರೆಗೂ ಪ್ರತಿಕ್ರಿಯೆ ನೀಡಿಲ್ಲ.

2024-25ರ ಆರ್ಥಿಕ ವರ್ಷದಲ್ಲಿ ಕರ್ನಾಟಕ ಸರ್ಕಾರವು ಮೊದಲ ಕಂತಿನ ಅನುದಾನ ಮಂಜೂರು ಮಾಡುವಂತೆ 2024ರ ಏಪ್ರಿಲ್ 8ರಂದು ವಿನಂತಿ ಮಾಡಲಾಗಿತ್ತು. ಆದರೆ, ಕೇಂದ್ರ ಸರ್ಕಾರ ವಿಳಂಬ ಮಾಡಿ, ₹3,804.41 ಕೋಟಿ ಬೇಡಿಕೆಗೆ ಬದಲಾಗಿ ಕೇವಲ ₹570.66 ಕೋಟಿ ಮಾತ್ರ 30-07-2024ರ ಜುಲೈ 30ರಂದು ಬಿಡುಗಡೆ ಮಾಡಿತು. ಹಲವು ಮನವಿಗಳ ಹೊರತಾಗಿಯೂ ಕೇಂದ್ರ ಸರ್ಕಾರ ಸಮರ್ಪಕವಾಗಿ ಪ್ರತಿಕ್ರಿಯೆ ನೀಡಿಲ್ಲ. ಕೇಂದ್ರ ಜಲಶಕ್ತಿ ಸಚಿವರನ್ನು ಕೇಂದ್ರದ ಪಾಲಿನ ಅನುದಾನ ಬಿಡುಗಡೆಗಾಗಿ ನಾನೇ ವೈಯಕ್ತಿಕವಾಗಿ 2024ರ ನವೆಂಬರ್ 16ರಂದು ವಿನಂತಿಸಿದ್ದರೂ, ಯಾವುದೇ ಪ್ರತಿಕ್ರಿಯೆ ನೀಡದೆ ಮಲತಾಯಿ ಧೋರಣೆ ತೋರಿದ್ದಾರೆ.
ಭಾರತ ಸರ್ಕಾರ ನಿಧಿ ಬಿಡುಗಡೆ ವಿಳಂಬ ಮಾಡಿದ್ದರಿಂದಾಗಿ ಯೋಜನೆ ಅನುಷ್ಠಾನ ಕುಂಠಿತವಾಗಬಾರದು ಎಂಬ ಕಾರಣಕ್ಕೆ ಕರ್ನಾಟಕ ಸರ್ಕಾರವು ₹4,977.25 ಕೋಟಿ ಮುಂಗಡವಾಗಿ ಬಿಡುಗಡೆ ಮಾಡಿದ್ದು. ಈ ಸಲುವಾಗಿ ರಾಜ್ಯ ಆಯವ್ಯಯದಲ್ಲಿ₹ 7,652.99 ಕೋಟಿ ಹಂಚಿಕೆ ಮಾಡಿದೆ.
ಜಲ ಜೀವನ್ ಮಿಷನ್ ಅಡಿಯಲ್ಲಿ ಕರ್ನಾಟಕದ ಸಾಧನೆಗಳು
*ಒಟ್ಟು ಅನುಮೋದಿತ ಗ್ರಾಮ ಕಾಮಗಾರಿಗಳು: 42,559
*ಈಗಾಗಲೇ ಕೈಗೊಂಡಿರುವ ಕಾಮಗಾರಿಗಳು: 39,098
*ಈಗಾಗಲೇ ಒದಗಿಸಲಾದ ನಲ್ಲಿ ಸಂಪರ್ಕಗಳು: 59.93 ಲಕ್ಷ
*ಬಹು-ಗ್ರಾಮ ಯೋಜನೆಗಳು: 135
ಕರ್ನಾಟಕ ಸರ್ಕಾರವು ಲಭ್ಯವಿರುವ ಹಣವನ್ನು ಪರಿಣಾಮಕಾರಿಯಾಗಿ ಬಳಸಿಕೊಂಡಿದೆ ಮತ್ತು ಜಲಜೀವನ ಮಿಷನ್ ಯೋಜನೆಯನ್ನು ಕಾರ್ಯಗತಗೊಳಿಸಲು ಪೂರ್ವಭಾವಿ ಆರ್ಥಿಕ ಬದ್ಧತೆಯನ್ನು ಪ್ರದರ್ಶಿಸಿದೆಯಲ್ಲದೆ, ಜೆಜೆಎಂ ಯೋಜನೆಯನ್ನು ಪೂರ್ಣಗೊಳಿಸಲು ತ್ವರಿತವಾಗಿ ಬಾಕಿ ಇರುವ ಅನುದಾನ ಬಿಡುಗಡೆ ಮಾಡಬೇಕೆಂದು ಕೇಂದ್ರ ಸರ್ಕಾರವನ್ನು ಈ ಮೂಲಕ ಒತ್ತಾಯಿಸುತ್ತೇನೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.












Click it and Unblock the Notifications