Heat Waves In Karnataka: ಸೂರ್ಯನ ರೌದ್ರಾವತಾರ: ಬಿಸಿಲ ಬೇಗೆಗೆ ಬೆಂದ ಕರ್ನಾಟಕ!
ಬೆಂಗಳೂರು, ಏಪ್ರಿಲ್ 14: ಬೇಸಿಗೆ ಇನ್ನೇನು ಮುಗಿಯಲಿದೆ. ಆದರೆ ಬೇಸಿಗೆ ಅಂತ್ಯವಾಗುವುದಕ್ಕೂ ಮುನ್ನ ಭೀಕರ ಬಿಸಿಲ ಧಗೆ ಕರ್ನಾಟಕಕ್ಕೆ ಅಪ್ಪಳಿಸಿದೆ. ಬಿಸಿಲಿನ ಅಬ್ಬರ ಹೇಗಿದೆ ಎಂದರೆ ಜನರು ಅಕ್ಷರಶಃ ಬೆಂದು ಹೋಗುತ್ತಿದ್ದಾರೆ. ಈಗಿನ ಸ್ಥಿತಿ ನೋಡಿದರೆ, ಮುಂದಿನ ದಿನಗಳಲ್ಲಿ ಮತ್ತಷ್ಟು ಬಿಸಿಲು ಕಾಡುವುದು ಪಕ್ಕಾ. ಅದರಲ್ಲೂ ಕಲಬುರಗಿಯಲ್ಲಿ ಗರಿಷ್ಠ 41 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿದೆ.
ಹವಾಮಾನ ಬದಲಾವಣೆ, ಜಾಗತಿಕ ತಾಪಮಾನ ಏರಿಕೆ ಸೇರಿದಂತೆ ಹಲವು ಕಾರಣಗಳಿಂದ ಬಿಸಿಲಿನ ಧಗೆ ಹೆಚ್ಚಾಗುತ್ತಿದೆ. ರಾಜ್ಯದ ಮೂಲೆ ಮೂಲೆಯಲ್ಲೂ ಇಂತಹದ್ದೇ ಪರಿಸ್ಥಿತಿ ನಿರ್ಮಾಣವಾಗಿದೆ. ಅದರಲ್ಲೂ ರಾಜಧಾನಿ ಬೆಂಗಳೂರಿನಲ್ಲಿ ಇಂದು ಗರಿಷ್ಠ 36 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿದೆ. ಹೊರಬರಲು ಜನ ಯೋಚಿಸುವ ಸ್ಥಿತಿ ನಿರ್ಮಾಣವಾಗಿದೆ. ಸೂರ್ಯನ ರೌದ್ರಾವತಾರ ಕಂಡು ಕರ್ನಾಟಕದ ಜನತೆ ಸುಸ್ತಾಗಿದ್ದಾರೆ. ಬಿಸಿಲಿನ ಬೇಗೆಯಿಂದ ರಕ್ಷಣೆ ಪಡೆಯಲು ನಾನಾ ತಂತ್ರದ ಮೊರೆ ಹೋಗುತ್ತಿದ್ದಾರೆ.

ಕಲಬುರಗಿ, ರಾಯಚೂರು ಧಗಧಗ
ದಕ್ಷಿಣ ಕರ್ನಾಟಕಕ್ಕೆ ಹೋಲಿಸಿದರೆ ಉತ್ತರ ಕರ್ನಾಟಕ ಭಾಗದಲ್ಲಿ ಬಿಸಿಲು ಇನ್ನಷ್ಟು ಹೆಚ್ಚಿದೆ. ಅದರಲ್ಲೂ ಕಲಬುರಗಿಯಲ್ಲಿ ಗರಿಷ್ಠ 41 ಡಿಗ್ರಿ ಸೆಲ್ಸಿಯಸ್ ಹಾಗೂ ರಾಯಚೂರಿನಲ್ಲಿ 40 ಡಿಗ್ರಿ ತಾಪಮಾನ ದಾಖಲಾಗಿದೆ. ಹೀಗಾಗಿ ಜನರು ದೇಹ ತಂಪು ಮಾಡಿಕೊಳ್ಳಲು ಎಳನೀರು, ಐಸ್ ಕ್ರೀಂ ಸೇರಿದಂತೆ ತಂಪು ಪಾನೀಯಗಳ ಮೊರೆ ಹೋಗುತ್ತಿದ್ದಾರೆ. ಮನೆಯಿಂದ ಹೊರಗೆ ಬಂದರೆ ಸಾಕು ಬೆಂದು ಹೋಗುವಂತಹ ಅನುಭವ ನಿರ್ಮಾಣ ಆಗುತ್ತಿದೆ. ಅದರಲ್ಲೂ ಮಧ್ಯಾಹ್ನದ ವೇಳೆಯಲ್ಲಿ ಜನ ಮನೆಯಿಂದ ಹೊರಗೆ ಕಾಲಿಡುತ್ತಿಲ್ಲ.
ಎಲ್ಲೆಲ್ಲಿ ಎಷ್ಟೆಷ್ಟು ತಾಪಮಾನ?
ನಿರಂತರವಾಗಿ ಕಲಬುರಗಿ ಜಿಲ್ಲೆಯಲ್ಲೇ ಗರಿಷ್ಠ ತಾಪಮಾನ ದಾಖಲಾಗುತ್ತಿದೆ. 41 ಡಿಗ್ರಿ ಸೆಲ್ಸಿಯಸ್ ಆಸುಪಾಸಿನಲ್ಲೇ ಉಷ್ಣಾಂಶ ದಾಖಲಾಗುತ್ತಿದೆ. ಮಾಮೂಲಿಗಿಂತ 2 ಡಿಗ್ರಿ ಸೆಲ್ಸಿಯಸ್ ಏರಿಕೆ ಕಂಡಿದೆ. ಬೆಂಗಳೂರು ನಗರದಲ್ಲಿ ಗರಿಷ್ಠ 36 ಡಿಗ್ರಿ, ಮಂಗಳೂರಲ್ಲಿ ಗರಿಷ್ಠ 34 ಡಿಗ್ರಿ, ಶಿವಮೊಗ್ಗದಲ್ಲಿ ಗರಿಷ್ಠ 39 ಡಿಗ್ರಿ, ಬೆಳಗಾವಿ ಜಿಲ್ಲೆಯಲ್ಲಿ ಗರಿಷ್ಠ 37 ಡಿಗ್ರಿ, ಮೈಸೂರು ಗರಿಷ್ಠ 37, ಮಂಡ್ಯದಲ್ಲಿ ಗರಿಷ್ಠ 38, ಮಡಿಕೇರಿಯಲ್ಲಿ ಗರಿಷ್ಠ 33, ರಾಮನಗರದಲ್ಲಿ ಗರಿಷ್ಠ 36, ಹಾಸನದಲ್ಲಿ ಗರಿಷ್ಠ 36 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ.

ಬೆಣ್ಣೆ ನಗರಿಯೂ ಧಗಧಗ
ಇನ್ನುಳಿದಂತೆ ಚಾಮರಾಜನಗರ ಜಿಲ್ಲೆಯಲ್ಲಿ ಗರಿಷ್ಠ 37 ಡಿಗ್ರಿ, ಚಿಕ್ಕಬಳ್ಳಾಪುರದಲ್ಲಿ ಗರಿಷ್ಠ 36 ಡಿಗ್ರಿ, ಕೋಲಾರದಲ್ಲಿ ಗರಿಷ್ಠ 36, ತುಮಕೂರು ಜಿಲ್ಲೆಯಲ್ಲಿ ಗರಿಷ್ಠ 37, ಉಡುಪಿ ಜಿಲ್ಲೆಯಲ್ಲಿ ಗರಿಷ್ಠ 34, ಕಾರವಾರದಲ್ಲಿ ಗರಿಷ್ಠ 33, ಚಿಕ್ಕಮಗಳೂರಿನಲ್ಲಿ ಗರಿಷ್ಠ 36, ದಾವಣಗೆರೆ ಜಿಲ್ಲೆಯಲ್ಲಿ ಗರಿಷ್ಠ 39 ಡಿಗ್ರಿ, ಹುಬ್ಬಳ್ಳಿಯಲ್ಲಿ ಗರಿಷ್ಠ 39, ಚಿತ್ರದುರ್ಗ ಜಿಲ್ಲೆಯಲ್ಲಿ ಗರಿಷ್ಠ 38 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿದೆ.
ಗಣಿನಾಡಿನಲ್ಲೂ ಬಿಸಿಗಾಳಿ ಕಾಟ
ಮತ್ತೊಂದು ಕಡೆ ಹಾವೇರಿಯಲ್ಲಿ ಗರಿಷ್ಠ 39, ಬಳ್ಳಾರಿ ಜಿಲ್ಲೆಯಲ್ಲಿ ಗರಿಷ್ಠ 41 ಡಿಗ್ರಿ, ಗದಗ ಜಿಲ್ಲೆಯಲ್ಲಿ ಗರಿಷ್ಠ 39 ಡಿಗ್ರಿ ಕೊಪ್ಪಳದಲ್ಲಿ ಗರಿಷ್ಠ 39 ಡಿಗ್ರಿ, ರಾಯಚೂರಿನಲ್ಲಿ 41 ಗರಿಷ್ಠ, ಯಾದಗಿರಿ ಜಿಲ್ಲೆಯಲ್ಲಿ ಗರಿಷ್ಠ 41, ವಿಜಯಪುರದಲ್ಲಿ ಗರಿಷ್ಠ 39, ಬೀದರ್ ಜಿಲ್ಲೆಯಲ್ಲಿ ಗರಿಷ್ಠ 38, ಕಲಬುರಗಿಯಲ್ಲಿ ಗರಿಷ್ಠ 41, ಬಾಗಲಕೋಟೆ ಜಿಲ್ಲೆಯಲ್ಲಿ ಗರಿಷ್ಠ 40 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿದೆ.
ಒಟ್ನಲ್ಲಿ ಬಿಸಿಲಿನ ಧಗೆಯಿಂದ ಬೇಸರಗೊಂಡಿರುವ ರಾಜ್ಯದ ಜನತೆಗೆ ಶೀಘ್ರದಲ್ಲೇ ಮಳೆರಾಯ ತಂಪೆರೆಯುವ ಸಾಧ್ಯತೆ ಇದೆ. ಅದರಲ್ಲೂ ಏಪ್ರಿಲ್ 18ರ ನಂತರ ಬೆಂಗಳೂರಿನಲ್ಲಿ ಉತ್ತಮವಾಗಿ ಮಳೆ ಬೀಳುವ ಮುನ್ಸೂಚನೆ ಸಿಕ್ಕಿದೆ. ಹೀಗಾಗಿ ಜನರು ಕೂಡ ಮಳೆರಾಯನ ಆಗಮನಕ್ಕಾಗಿ ಕಾಯುತ್ತಿದ್ದು, ಬಿಸಿಲಿನ ಧಗೆಯಿಂದ ಬೇಗ ಮುಕ್ತಿ ಸಿಗಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತಿದ್ದಾರೆ.












Click it and Unblock the Notifications