'ಊದೋರು ಶಂಖ ಊದ್ರಿ, ಶಿವನ ಪೂಜೆ ಆಗಲಿ ಬಿಡಲಿ'
ಬೆಂಗಳೂರು, ಮಾ. 25 : ವಿಧಾನಸೌಧದಲ್ಲಿ ನಡೆಯುತ್ತಿರುವ ಬಜೆಟ್ ಅಧಿವೇಶನ ಸ್ವಾರಸ್ಯಕರ ಚರ್ಚೆಗಳಿಗೆ ಸಾಕ್ಷಿಯಾಗುತ್ತಿದೆ. ಮಂಗಳವಾರದ ಕಲಾಪದಲ್ಲಿಯೂ ವಿಧಾನಸಭೆ ಮತ್ತು ಪರಿಷತ್ತಿನಲ್ಲಿ ಹಲವಾರು ಚರ್ಚೆಗಳು ನಡೆದವು, ಅವುಗಳ ವಿವರಗಳು ಇಲ್ಲಿವೆ.
ಊದೋರು ಶಂಖ ಊದ್ರಿ : ಬಜೆಟ್ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡು ಪ್ರತಿಪಕ್ಷ ನಾಯಕ ಜಗದೀಶ್ ಶೆಟ್ಟರ್ ಮಾತನಾಡುತ್ತಿದ್ದಾಗ ಸಚಿವರು ಮತ್ತು ಅಧಿಕಾರಿಗಳ ಹಾಜರಾತಿ ಕಡಿಮೆ ಇತ್ತು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಬಿಜೆಪಿಯ ಗೋವಿಂದ ಕಾರಜೋಳ ಅವರು, 'ಊದೋರು ಶಂಖ ಊದ್ರಿ, ಶಿವನ ಪೂಜೆ ಆಗಲಿ ಬಿಡಲಿ' ಎಂಬ ಗಾದೆ ಹೇಳಿ ಸರ್ಕಾರವನ್ನು ತಿವಿದರು.
ಹೇರ್ ಡ್ರೈಯರ್ ಕೊಟ್ಟರೆ ಗತಿ ಏನು : ಜಗದೀಶ್ ಶೆಟ್ಟರ್ ಅವರು ಸರ್ಕಾರ ನೀಡಿರುವ ಭಾಗ್ಯಗಳ ಬಗ್ಗೆ ಮಾತನಾಡುತ್ತಿದ್ದರು. ಈ ಸಂದರ್ಭದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಎಚ್.ಕೆ.ಪಾಟೀಲ್ ಸದನಕ್ಕೆ ಆಗಮಿಸಿದರು. [ಮಂಗಳವಾರದ ಕಲಾಪದ ಮುಖ್ಯಾಂಶಗಳು]

ಆಗ ಎದ್ದುನಿಂತ ಬಿಜೆಪಿಯ ಲಕ್ಷ್ಮಣ ಸವದಿ, 'ಎಚ್.ಕೆ.ಪಾಟೀಲರು ಬಚ್ಚಲು ಭಾಗ್ಯ ಯೋಜನೆ ಘೋಷಿಸಿ ಹೇರ್ ಡ್ರೈಯರ್, ಶವರ್ ಅಳವಡಿಸುವುದಾಗಿ ಹೇಳಿದ್ದಾರೆ. ಅದು ನನ್ನಲ್ಲಿ ಆತಂಕ ಉಂಟು ಮಾಡಿದೆ' ಎಂದು ಸದನದ ಗಮನ ಸೆಳೆದರು. [ಈಶ್ವರಪ್ಪ ಆರತಕ್ಷತೆ ಗುಂಗಿನಲ್ಲಿಯೇ ಇದ್ದಾರೆ]
'ಹೇರ್ ಡ್ರೈಯರ್ ಬಳಸಿದರೆ ಕೂದಲು ಉದುರುತ್ತದೆ ಎಂದು ಸಲೂನ್ ನವರು ನನಗೆ ಹೇಳಿದರು, ಆಗ ನನಗೆ ಬಚ್ಚಲು ಭಾಗ್ಯ ಯೋಜನೆ ನೆನಪಾಗಿ ನಮ್ಮ ಹಳ್ಳಿ ಹೆಣ್ಣು ಮಕ್ಕಳ ತಲೆ ಕೂದಲ ಗತಿಯೇನು?' ಎಂಬ ಆತಂಕ ಉಂಟಾಯಿತು ಎಂದು ಹೇಳಿದಾಗ ಸದನದಲ್ಲಿ ನಗುವಿನ ಅಲೆ ಎದ್ದಿತು.
ದತ್ತು ಮಕ್ಕಳಾಗಲು ತಾರಾ, ಮೋಟಮ್ಮ ಪೈಪೋಟಿ : ವಿಧಾನಪರಿಷತ್ತಿನಲ್ಲಿ ಬಿಜೆಪಿಯ ಸದಸ್ಯೆ ವಿಮಲಾಗೌಡ ಅವರ ದತ್ತು ಮಕ್ಕಳಾಗಲು ಮೋಟಮ್ಮ ಹಾಗೂ ತಾರಾ ಅನುರಾಧ ನಡುವೆ ಪೈಪೋಟಿ ನಡೆಯಿತು. ಹೆಣ್ಣು ಭ್ರೂಣ ಹತ್ಯೆ ತಡೆ ಬಗ್ಗೆ ಮಾತನಾಡುತ್ತಿದ್ದ ವಿಮಲಾಗೌಡರು ನನಗೆ ಹೆಣ್ಣು ಮಕ್ಕಳಿಲ್ಲ ಎಂಬ ಕೊರಗಿದೆ ಎಂದು ಹೇಳಿದರು.
ಆಗ ಎದ್ದುನಿಂತ ತಾರಾ ಅವರು "ಅಮ್ಮ ನನ್ನನ್ನು ಮಗಳನ್ನಾಗಿ ಮಾಡಿಕೊಳ್ಳಿ' ಎಂದು ಬೇಡಿಕೆ ಇಟ್ಟರು. ದತ್ತು ಪಡೆದರೆ ಆಸ್ತಿಯಲ್ಲಿ ಪಾಲು ಸಿಗುತ್ತದೆ ಎಂದು ತಾರಾ ಹೇಳಿದರು. ಆಗ ಮೋಟಮ್ಮ ಅವರು ನನಗೆ ಚಿನ್ನದ ಒಡವೆಗಳು ಸಿಕ್ಕರೆ ಸಾಕು ಎಂದರು.












Click it and Unblock the Notifications