ನಟ ವಿನೋದ್ ಆಳ್ವ ವಿರುದ್ಧದ ತನಿಖೆಗೆ ಹೈಕೋರ್ಟ್ ತಡೆ
ಬೆಂಗಳೂರು, ಫೆಬ್ರವರಿ 16 : ಕೊಲೆ ಯತ್ನದ ಸಂಚು ಆರೋಪಕ್ಕೆ ಸಂಬಂಧಿಸಿದಂತೆ ಚಿತ್ರ ನಟ ವಿನೋದ್ ಆಳ್ವ ಅವರ ವಿರುದ್ಧ ನಡೆಯುತ್ತಿದ್ದ ತನಿಖೆಗೆ ಕರ್ನಾಟಕ ಹೈಕೋರ್ಟ್ ತಡೆಯಾಜ್ಞೆ ನೀಡಿದೆ. ಈ ಪ್ರಕರಣದಲ್ಲಿ ಬಂಧಿತರಾಗಿದ್ದ ವಿನೋದ್ ಆಳ್ವ ಅವರು ಜಾಮೀನು ಪಡೆದಿದ್ದಾರೆ.
ವಿನೋದ್ ಆಳ್ವ ಅವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಪಿ.ಡಿ.ವೈಂಗಣಕರ ಅವರಿದ್ದ ಏಕಸದಸ್ಯ ಪೀಠ, ಪುತ್ತೂರು ಪೊಲೀಸರು ನಡೆಸುತ್ತಿರುವ ತನಿಖೆಗೆ 2 ವಾರಗಳ ತಡೆಯಾಜ್ಞೆ ನೀಡಿತು. ಆಕ್ಷೇಪಣೆ ಸಲ್ಲಿಸುವಂತೆ ದೂರುದಾರ ಸಚ್ಚಿದಾನಂದ ಮತ್ತು ಕೆ.ಉದಯ ಕುಮಾರ್ ಅವರಿಗೆ ನೋಟಿಸ್ ಜಾರಿ ಮಾಡಿತು. [ನಟ ವಿನೋದ್ ಆಳ್ವಾಗೆ ಜಾಮೀನು]
ಏನಿದು ಪ್ರಕರಣ : ತಮ್ಮ ಹಣಕಾಸು ವ್ಯವಹಾರ ನೋಡಿಕೊಳ್ಳುತ್ತಿದ್ದ ಸಚ್ಚಿದಾನಂದ ಎಂಬುವರನ್ನು ಕೊಲೆ ಮಾಡಲು ವಿನೋದ್ ಆಳ್ವ ಯತ್ನಿಸಿದ್ದಾರೆ ಎಂಬುದು ಆರೋಪವಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪುತ್ತೂರು ಪೊಲೀಸರು 2015ರ ನವೆಂಬರ್ 16ರಂದು ಈಶ್ವರಮಂಗಲದಲ್ಲಿ ವಿನೋದ್ ಆಳ್ವ ಅವರನ್ನು ಬಂಧಿಸಿದ್ದರು.
ವಿನೋದ್ ಆಳ್ವ ಅವರು ಈ ಪ್ರಕರಣದಲ್ಲಿ ಜಾಮೀನು ನೀಡುವಂತೆ ಕೋರ್ಟ್ ಮೆಟ್ಟಿಲೇರಿದ್ದರು. 2015ರ ಡಿಸೆಂಬರ್ 1ರಂದು ತೀರ್ಪು ಪ್ರಕಟಿಸಿದ್ದ ಕೋರ್ಟ್ ಜಾಮೀನು ಮಂಜೂರು ಮಾಡಿತ್ತು. ಪುತ್ತೂರು ಪೊಲೀಸರು ಈ ಪ್ರಕರಣದ ತನಿಖೆ ಮುಂದುವರೆಸಿದ್ದರು. ಇದಕ್ಕೆ ಕರ್ನಾಟಕ ಹೈಕೋರ್ಟ್ ತಡೆಯಾಜ್ಞೆ ನೀಡಿದೆ.