ಮಕ್ಕಳು ಪೋಷಕರಿಗೆ ಜೀವನಾಂಶ ನೀಡುವ ಕುರಿತು ಕರ್ನಾಟಕ ಹೈಕೋರ್ಟ್ ಕೇಂದ್ರಕ್ಕೆ ಮಹತ್ವದ ಶಿಫಾರಸ್ಸು
ಬೆಂಗಳೂರು, ಸೆಪ್ಟೆಂಬರ್ 11: ಎಷ್ಟೋ ಜನ ಪಾಪಿ ಮಕ್ಕಳು ತಮ್ಮ ವಯಸ್ಸಾದ ತಂದೆ-ತಾಯಿಯನ್ನು ನೋಡಿಕೊಳ್ಳದೆ ಬೀದಿಗೆ ತಳ್ಳಿರುವ ಉದಾಹರಣೆಗಳಿವೆ. ಕಾನೂನಿನ ಪ್ರಕಾರ, ವಯಸ್ಸಾದ ತಂದೆ-ತಾಯಿಯನ್ನು ಚೆನ್ನಾಗಿ ನೋಡಿಕೊಳ್ಳಬೇಕು. ಒಂದು ವೇಳೆ, ಅವರ ಯೋಗಕ್ಷೇಮ ನಿರ್ಲಕ್ಷಿಸಿದರೆ, ಮಕ್ಕಳು ಜೀವನಾಂಶ ನೀಡಬೇಕಾಗುತ್ತದೆ. ಇದೀಗ ಇದರಲ್ಲಿ ತುಸು ಬದಲಾವಣೆ ಮಾಡುವ ಕುರಿತು ಕರ್ನಾಟಕ ಹೈಕೋರ್ಟ್ ಮಹತ್ವದ ಆದೇಶವೊಂದನ್ನು ಹೊರಡಿಸಿದೆ. ಹಾಗಾದ್ರೆ, ಅದೇನು ಎನ್ನುವ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ಇತ್ತೀಚಿನ ದಿನಗಳಲ್ಲಿ ಬಹುತೇಕ ಮಕ್ಕಳು ತಮ್ಮನ್ನು ಸಾಕಿ ಸಲಹಿದ ಪೋಷಕರ ಯೋಗಕ್ಷೇಮವನ್ನು ನೋಡಿಕೊಳ್ಳದೆ ಮೂಲೆ ಗುಂಪು ಮಾಡುತ್ತಿರುವ ಪ್ರಕರಣಗಳು ಬೆಳಕಿಗೆ ಬರುತ್ತಲಿವೆ. ಮತ್ತೆ ಕೆಲವರು ತಮ್ಮ ಪೋಷಕರನ್ನು ಮನೆಗಳಲ್ಲಿ ಚೆನ್ನಾಗಿ ನೋಡಿಕೊಂಡವರಂತೆ ನಟಿಸಿ ಅವರನ್ನು ಮೂಲೆಗುಂಪು ಮಾಡಿರುತ್ತಾರೆ. ಜೊತೆಗೆ ಅವರ ಬಳಿಯೇ ಮನೆ ಕೆಲಸಗಳನ್ನು ಮಾಡಿಸಿಕೊಂಡು ಹಾಕಿದ್ದನ್ನ ತಿನ್ನಬೇಕು ಎನ್ನುವ ರೀತಿಯಲ್ಲಿ ಕಾಣುತ್ತಿದ್ದಾರೆ. ಇವುಗಳು ಬೆಳಕಿಗೆ ಬರುತ್ತಿಲ್ಲ ಅಷ್ಟೇ.

ಒಂದು ವೇಳೆ ಪೋಷಕರೇ ಖುದ್ದಾಗಿ ಈ ಬಗ್ಗೆ ದೂರು ದಾಖಲಿಸಿದರೆ, ಮಕ್ಕಳು ಅವರಿಗೆ ನೀಡಬೇಕಾದ ಜೀವನಾಂಶವನ್ನು ನೀಡಬೇಕಾಗುತ್ತದೆ. ಇದೀಗ ಈ ಜೀವನಾಂಶದಲ್ಲಿ ಹೆಚ್ಚಳದ ಕುರಿತು ಕರ್ನಾಟಕ ಹೈಕೋರ್ಟ್ ಮಹತ್ವದ ನಿರ್ಧಾರ ತೆಗೆದುಕೊಂಡಿದೆ. ತಂದೆ-ತಾಯಿಗೆ ಮಕ್ಕಳು ನೀಡಬೇಕಾದ ಜೀವನಾಂಶದ ಮಿತಿ ಹೆಚ್ಚಳ ಮಾಡುವಂತೆ ಕರ್ನಾಟಕ ಹೈಕೋರ್ಟ್ ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಿದೆ.
2007ರ ಪೋಷಕರ ಕಲ್ಯಾಣ ಕಾಯ್ದೆಯ ಸೆಕ್ಷನ್ 9ರ ಪರಿಶೀಲನೆ ಅಗತ್ಯ ಇದ್ದು, ಮಕ್ಕಳು ನೀಡಬೇಕಾದ ಗರಿಷ್ಠ ಜೀವನಾಂಶದ ಮಿತಿ 10,000 ಇದೆ. 2007ರ ಜೀವನಾಂಶ ನಿರ್ವಹಣಾ ವೆಚ್ಚಕ್ಕೂ 2025ಕ್ಕೂ ವ್ಯತ್ಯಾಸ ಇದೆ ಎಂಬುದಾಗಿ ಅಭಿಪ್ರಾಯ ಪಟ್ಟಿದೆ. ಈ ಹಿನ್ನೆಲೆ ಹಣದುಬ್ಬರವನ್ನು ಪರಿಗಣಿಸಿ ಜೀವನಾಂಶದ ಗರಿಷ್ಠ ಮಿತಿಯನ್ನು ಹೆಚ್ಚಳ ಮಾಡಬೇಕು ಎಂದು ಕರ್ನಾಟಕ ಹೈಕೋರ್ಟ್ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದಂತ ನ್ಯಾಯಪೀಠವು ಅಭಿಪ್ರಾಯ ಪಟ್ಟಿದೆ.
ಜೀವನಾಂಶ ವಿಧಿಸಲು 2007ರ ಪೋಷಕರ ಕಲ್ಯಾಣ ಕಾಯ್ದೆಯಲ್ಲಿ ಅವಕಾಶ ಇದೆ. ತಂದೆ-ತಾಯಿ ಯೋಗಕ್ಷೇಮ ನಿರ್ಲಕ್ಷೆ ಮಾಡುವ ಮಕ್ಕಳಿಗೆ ವಿಧಿಸುವ ಜೀವನಾಂಶ ಇದಾಗಿದೆ ಎಂದು ತಿಳಿಸಿದೆ. ಇದು ಒಂದು ವೇಳೆ ಜಾರಿಯಾದ್ರೆ, ಒಳ್ಳೆಯದೇ ಅಂತಲೇ ಹೇಳಬಹುದು. ಯಾಕಂದ್ರೆ, ಮಕ್ಕಳು ತಮ್ಮ ಪೋಷಕರನ್ನು ದೂರ ತಳ್ಳುವ ಪ್ರಸಂಗಗಳು ನಿರ್ಮಾಣ ಆಗುವುದೇ ಇಲ್ಲ. ಆಗ ಮಕ್ಕಳು ಸಹ ಎಚ್ಚೆತ್ತುಕೊಂಡು ಅವರನ್ನು ಚೆನ್ನಾಗಿ ನೋಡಿಕೊಳ್ಳುಯತ್ತಾರೆ.












Click it and Unblock the Notifications