ರಾಜಧಾನಿ ಸೇರಿ ರಾಜ್ಯಾದ್ಯಂತ ಧಾರಾಕಾರ ಮಳೆ
ಬೆಂಗಳೂರು, ಸೆಪ್ಟೆಂಬರ್. 07: ಬೆಂಗಳೂರು ಸೇರಿದಂತೆ ರಾಜ್ಯದ ದಕ್ಷಿಣ ಒಳನಾಡು ಹಾಗೂ ಹೈದರಾಬಾದ್ ಕರ್ನಾಟಕ ಭಾಗದಲ್ಲಿ ಧಾರಾಕಾರ ಮಳೆ ಸುರಿದಿದೆ. ಇನ್ನು ಮೂರು ದಿನ ಕಾಲ ಮಳೆ ಬೀಳಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಕೊಪ್ಪಳ, ಬಳ್ಳಾರಿ, ಕಲಬುರ್ಗಿ, ರಾಯಚೂರು, ಯಾದಗಿರಿ ಸೇರಿದಂತೆ ಹೈದರಬಾದ್ ಕರ್ನಾಟಕದ ರೈತರ ಹಲವು ದಿನದ ನೀರಿಕ್ಷೆ ಫಲಿಸಿದೆ. ಆದರೆ ಮಳೆಯಾಗಿರುವುದು ತಡವಾಗಿದ್ದು ಪ್ರಯೋಜನಕ್ಕಿಂತ ಹಾನಿಯೇ ಅಧಿಕ ಎಂದು ರೈತರು ಹೇಳುತ್ತಿದ್ದಾರೆ.[ಜೋಗ ಮೈದುಂಬಿದೆ, ಹೋಗೋಣ ಬರ್ತೀರಾ ಆಕಡೆಗೆ]
ಉಳಿದಂತೆ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ರಾಮನಗರ, ಚಿತ್ರದುರ್ಗ, ತುಮಕೂರು, ಚಿಕ್ಕಮಗಳೂರು ಜಿಲ್ಲೆಗಳಲ್ಲೂ ಮಳೆ ಬಿದ್ದಿದೆ. ಚಾಮರಾಜನಗರ, ಹಾಸನ, ಬೀದರ್, ದಾವಣಗೆರೆ, ಕೋಲಾರ ಭಾಗದಲ್ಲೂ ಮಳೆ ಬಿದ್ದಿದೆ. ವಿಜಯಪುರ, ಬಾಗಲಕೋಟೆ, ಕೊಡಗು, ಮೈಸೂರು, ಬೆಳಗಾವಿ, ಶಿವಮೊಗ್ಗ ಉತ್ತರ ಕನ್ನಡ ಹಾಗೂ ಕರಾವಳಿ ಭಾಗದಲ್ಲೂ ಚದುರಿದಂತೆ ಮಳೆಯಾಗಿದೆ.

ಹಂಪಿ ವಿಜಯ ವಿಠ್ಠಲ ದೇವಾಲಯಕ್ಕೆ ಹಾನಿ
ಧಾರಾಕಾರ ಮಳೆಯಿಂದ ಇತಿಹಾಸ ಪ್ರಸಿದ್ಧ ಹಂಪಿ ವಿಜಯ ವಿಠ್ಠಲ ದೇವಾಲಯದ ಮಂಟಪಕ್ಕೆ ಹಾನಿಯಾಗಿದೆ. ಅಲ್ಲಿನ ಸಿಬ್ಬಂದಿ ಹೇಳುವಂತೆ ಮೇಲ್ಛಾವಣಿಗೆ ಹಾನಿಯಾಗಿದ್ದು ಕಲ್ಲುಗಳು ನೆಲಕ್ಕೆ ಉರುಳುವಂತೆ ಆಗಿದೆ.

ತತ್ತರಿಸಿದ ಬೆಂಗಳೂರು
ಶುಕ್ರವಾರದಿಂದ ಪ್ರತಿದಿನ ಸಂಜೆ ಬೆಂಗಳೂರಿಗರಿಗೆ ವರುಣ ಕಾಟ ಕೊಡುತ್ತಿದ್ದಾನೆ. ಪವರ್ ಕಟ್ ನಿಂದ ಸಂಕಷ್ಟಕ್ಕೆ ಸಿಲುಕಿರುವವರು ಭಾನುವಾರ ರಾತ್ರಿಯನ್ನು ಕತ್ತಲೆಯಲ್ಲಿ ಕಳೆಯುವಂತಾಯಿತು.

ಹಳ್ಳಕ್ಕೆ ಉರುಳಿದ ಬಸ್
ಬಳ್ಳಾರಿ ಜಿಲ್ಲೆಯ ಸಿರಗುಪ್ಪ ತಾಲೂಕಿನಲ್ಲಿ ಮಳೆಗೆ ಹಳ್ಳ ಕೊಳ್ಳಗಳು ತುಂಬಿ ಹರಿಯುತ್ತಿವೆ. ಸಿರಗುಪ್ಪ ತಾಲೂಕಿನ ದರೂರು ಬಳಿ ನದಿಗೆ ಬಸ್ ವೊಂದು ಉರುಳಿದೆ. ಪ್ರಯಾಣಿಕರನ್ನು ಅಪಾಯದಿಂದ ಪಾರು ಮಾಡಲಾಗಿದೆ.

ಮರೆಯಾಗಿದ್ದ ಮಳೆ
ಕಳೆದ 15 ದಿನಗಳಿಂದ ಮರೆಯಾಗಿದ್ದ ಮಳೆ ಏಕಾಏಕಿ ಆರ್ಭಟಿಸಿತೊಡಗಿದೆ. ಜಲಾಶಯಗಳು ಸಹ ಭರ್ತಿಯಾಗದೇ ರಾಜ್ಯದಲ್ಲಿ ಲೋಡ್ ಶೆಡ್ಡಿಂಗ್ ಜಾರಿ ಮಾಡಲಾಗಿತ್ತು. ಒಂದೆರಡು ವಾರ ಮಳೆಯಾದರೆ ಸಮಸ್ಯೆ ತಕ್ಕ ಮಟ್ಟಿನ ಪರಿಹಾರ ಕಂಡುಕೊಳ್ಳಬಹುದು.












Click it and Unblock the Notifications