ಭೂತಾರಾಧನೆ ದೈವ ನರ್ತಕರಿಗೆ 2,000ರೂ ಮಾಸಾಶನ ಘೋಷಿಸಿದ ಸರ್ಕಾರ
ಬೆಂಗಳೂರು ಅಕ್ಟೋಬರ್ 20: ರಿಷಬ್ ಶೆಟ್ಟಿ ಅಭಿನಯದ ಕಾಂತಾರ ಚಿತ್ರ ತೆರೆ ಕಂಡ ಬಳಿಕ ಕರಾವಳಿಯ ಭೂತಾರಾಧನೆಯ ಖ್ಯಾತಿ ಭಾರತದಾದ್ಯಂತ ಪಸರಿಸಿದೆ. ಜೊತೆಗೆ ದೈವ ನರ್ತಕರ ಮೇಲಿನ ಗೌರವ ಕೂಡ ಇಮ್ಮಡಿಯಾಗಿದೆ. ಇದೀಗ ಸರ್ಕಾರ ಕೂಡ ದೈವ ನರ್ತಕರಿಗೆ ಸಿಹಿ ಸುದ್ದಿ ನೀಡಿದೆ.
60 ವರ್ಷ ಮೇಲ್ಪಟ್ಟ ದೈವ ನರ್ತಕರಿಗೆ ಪ್ರತಿ ತಿಂಗಳು ಮಾಸಾಶನ ನೀಡುವುದಾಗಿ ರಾಜ್ಯ ಕರ್ನಾಟಕ ಸರ್ಕಾರ ಘೋಷಿಸಿದೆ. ಈ ವಿಚಾರವನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸುನಿಲ್ ಕುಮಾರ್ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
"ಕರ್ನಾಟಕ ಸಂಸ್ಕೃತಿ,ಆಚರಣೆಗಳ ನೆಲೆಬೀಡು. ಅದರಲ್ಲಿ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಭೂತಾರಾಧನೆಯು ಸಹ ಒಂದು. ಭೂತಾರಾಧನೆಯಲ್ಲಿ ದೈವ ನರ್ತನ ಮಾಡುವ ಕಲಾವಿದರ ಹಿತದೃಷ್ಟಿಯನ್ನು ಗಮನಿಸಿ, 60 ವರ್ಷ ತುಂಬಿದ ದೈವನರ್ತಕರಿಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಮಾಹೆಯಾನ 2 ಸಾವಿರ ಮಾಸಾಶನ ನೀಡಲು ನಿರ್ಧರಿಸಲಾಗಿದೆ" ಎಂದು ಸುನೀಲ್ ಕುಮಾರ್ ತಮ್ಮ ಸಾಮಾಜಿಕ ಜಾಲತಾಣ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

ಈ ಬಗ್ಗೆ ಬಿಜೆಪಿ ಕರ್ನಾಟಕ ಕೂಡ ಟ್ವಿಟ್ಟರ್ನಲ್ಲಿ ಮಾಹಿತಿ ಹಂಚಿಕೊಂಡಿದೆ. "60 ವರ್ಷ ಮೇಲ್ಪಟ್ಟ ದೈವ ನರ್ತಕರಿಗೆ ಪ್ರತಿ ತಿಂಗಳು ರೂ. 2000 ಮಾಸಾಶನ ನೀಡಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸರ್ಕಾರ ನಿರ್ಧರಿಸಿದೆ. ಈ ಮೂಲಕ ನಮ್ಮ ಸಂಸ್ಕೃತಿ ಆಚರಣೆ ಹಾಗೂ ಧಾರ್ಮಿಕ ಹಿರಿಮೆಯನ್ನು ಸಾರುವ ದೈವ ನರ್ತಕರ ಬದುಕಿನಲ್ಲಿ ಭರವಸೆ ಮೂಡಿಸಿದೆ. ಜನಸ್ನೇಹಿ ಬಿಜೆಪಿ ಸರ್ಕಾರ" ಎಂದು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದೆ.
ಸರ್ಕಾರದ ಈ ನಿರ್ಧಾರಕ್ಕೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದ್ದು, ಕರಾವಳಿಯ ದೈವ ನರ್ತಕರು ಧನ್ಯವಾದ ತಿಳಿಸಿದ್ದಾರೆ. ಕಳೆದ ಎರಡು ವರ್ಷಗಳಲ್ಲಿ ಕೊರೊನಾ ನಿಯಮದ ಹಿನ್ನೆಲೆಯಲ್ಲಿ ಭೂತಾರಾಧನೆ ಆಚರಣೆ ಸಂಖ್ಯೆ ಕಡಿಮೆಯಾಗಿತ್ತು. ಈ ವೇಳೆ ಅನೇಕ ದೈವ ನರ್ತಕರು ಸಂಕಷ್ಟಕ್ಕೆ ಸಿಲುಕಿದ್ದರು. ಇನ್ನು ವರ್ಷದ ಆರು ತಿಂಗಳು ಭೂತಾರಾಧನೆ ಇದ್ದರೆ, ಮಳೆಗಾಲದಲ್ಲಿ ಭೂತಾರಾಧನೆ ಆಚರಣೆ ಕಡಿಮೆಯಾಗಿರುತ್ತದೆ. ಈ ಎಲ್ಲಾ ಕಷ್ಟಗಳ ನಡುವೆ ಸರ್ಕಾರ ಸಿಹಿ ಸುದ್ದಿ ನೀಡಿರುವುದಕ್ಕೆ ದೈವ ನರ್ತಕರು ಸಂತಸ ವ್ಯಕ್ತಪಡಿಸಿದ್ದಾರೆ.












Click it and Unblock the Notifications