ಸರ್ಕಾರದ ವತಿಯಿಂದ ಟಿಪ್ಪು ಜಯಂತಿ ಆಚರಣೆ : ಸಿಎಂ
ಬೆಂಗಳೂರು, ಡಿ. 23 : ಸರ್ಕಾರದ ವತಿಯಿಂದ ಮೈಸೂರು ಹುಲಿ ಟಿಪ್ಪು ಸುಲ್ತಾನ್ ಜಯಂತಿಯನ್ನು ಆಚರಿಸಲಾಗುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಟಿಪ್ಪು ಜಾತ್ಯತೀತ ಆಡಳಿತಗಾರರಾಗಿದ್ದರು ಎಂದು ಸಿದ್ದರಾಮಯ್ಯ ಬಣ್ಣಿಸಿದರು.
ಖ್ಯಾತ ಇತಿಹಾಸ ತಜ್ಞ ಪ್ರೊ ಬಿ. ಶೇಕ್ ಅಲಿ ಅವರ 'ಟಿಪ್ಪು ಸುಲ್ತಾನ್ : ದಿ ಕ್ರೂಸೇಡರ್ ಫಾರ್ ಚೇಂಜ್' ಕೃತಿಯನ್ನು ಮಂಗಳವಾರ ಲೋಕಾರ್ಪಣೆ ಮಾಡಿ ಮಾತನಾಡಿದ ಸಿಎಂ ಸಿದ್ದರಾಮಯ್ಯ ಅವರು, ಕೇವಲ ಮೈಸೂರು ಪ್ರಾಂತ್ಯಕ್ಕೆ ಮಾತ್ರವಲ್ಲ, ಇಡೀ ರಾಷ್ಟ್ರಕ್ಕೆ ಮಾದರಿ ಆಡಳಿತ ನೀಡುವ ಪ್ರಯತ್ನ ಮಾಡಿದವರು ಟಿಪ್ಪು ಸುಲ್ತಾನ್ ಎಂದು ಹೇಳಿದರು.

ಟಿಪ್ಪು ಸುಲ್ತಾನ್ ಅವರನ್ನು ಕೆಲವು ಪೂರ್ವಾಗ್ರಹಪೀಡಿತ ಮನಸ್ಸುಗಳು ಕೋಮುವಾದಿ ಎಂದು ಬಣ್ಣಿಸಿದರೂ, ದೇವಾಲಯಗಳ ನಿರ್ಮಾಣಕ್ಕೆ ಉದಾರ ಕೊಡುಗೆ ನೀಡಿದ ಅವರು, ಜಾತ್ಯತೀತ ಆಡಳಿತಗಾರರಾಗಿದ್ದರು ಎಂದು ಸಿದ್ದರಾಮಯ್ಯ ತಿಳಿಸಿದರು. [ಬಿಜೆಪಿ ಕೆಣಕುವ ನಿರ್ಧಾರ ಕಾಂಗ್ರೆಸ್ ತಳೆಯುತ್ತಿದೆಯೇ?]
ಬ್ರೀಟಿಷರ ವಿರುದ್ಧ ಹೋರಾಡಿ ಪ್ರಾಣತೆತ್ತ ಟಿಪ್ಪು ಸುಲ್ತಾನ್ ವಾಸ್ತವಿಕವಾಗಿ ಆಗಲೇ ಭಾರತ ಸ್ವಾತಂತ್ರ್ಯ ಹೋರಾಟಕ್ಕೆ ಚಾಲನೆ ನೀಡಿದ್ದರು. ಯುದ್ಧದಲ್ಲಿ ಸೋತು ಶರಣಾಗದೆ ತನ್ನ ಮಕ್ಕಳನ್ನೇ ಒತ್ತೆ ಇಟ್ಟ ಟಿಪ್ಪು ಸುಲ್ತಾನ್ ರಾಷ್ಟ್ರ ಕಂಡ ಉತ್ಕಟ ರಾಷ್ಟ್ರ ಪ್ರೇಮಿ ಎಂದು ಸಿದ್ದರಾಮಯ್ಯ ಬಣ್ಣಿಸಿದರು.

ಟಿಪ್ಪು ಸುಲ್ತಾನ್ ಕುರಿತ ಕೃತಿಯನ್ನು ತೊಂಭತ್ತರ ಇಳಿ ವಯಸ್ಸಿನಲ್ಲಿ ರಚಿಸಿದ ಪ್ರೊ.ಶೇಕ್ ಅಲಿ ಅವರನ್ನು ಸಮಾಜದ ಸಂಪತ್ತು ಎಂದು ಬಣ್ಣಿಸಿದ ಸಿಎಂ, ಅವರು ಶತಾಯುಷಿಯಾಗಿ ನಮ್ಮೊಂದಿಗೆ ಬಾಳಲಿ ಎಂದು ಹಾರೈಸಿದರು.
ಸಮಾರಂಭದಲ್ಲಿ ಹಜ್, ವಾರ್ತಾ ಸಚಿವ ಆರ್.ರೋಷನ್ ಬೇಗ್, ಇಂಧನ ಸಚಿವ ಡಿ.ಕೆ.ಶಿವಕುಮಾರ್, ರಾಜ್ಯಸಭಾ ಸದಸ್ಯ ಕೆ.ರಹಮಾನ್ ಖಾನ್ ಮುಂತಾದವರು ಉಪಸ್ಥಿತರಿದ್ದರು.












Click it and Unblock the Notifications