ದೇವಾಲಯದಲ್ಲಿ ಗೋಪೂಜೆಗೆ ಕರ್ನಾಟಕ ಸರ್ಕಾರದ ಆದೇಶ
ಬೆಂಗಳೂರು, ಅಕ್ಟೋಬರ್ 26; ದೀಪಾವಳಿ ಹಬ್ಬದಂದು ಕರ್ನಾಟಕದ ಮುಜರಾಯಿ ಇಲಾಖೆ ವ್ಯಾಪ್ತಿಯ ದೇವಾಲಯಗಳಲ್ಲಿ ಗೋಪೂಜೆ ನಡೆಯಲಿದೆ. ದೇವಾಲಯಗಳಲ್ಲಿ ಗೋಪೂಜೆ ನಡೆಸುವಂತೆ ಕರ್ನಾಟಕ ಸರ್ಕಾರ ಆದೇಶ ಹೊರಡಿಸಿದೆ.
ನವೆಂಬರ್ 5ರ ಬಲಿಪಾಡ್ಯಮಿ ಹಬ್ಬದ ದಿನ ದೇವಾಲಯಗಳಲ್ಲಿ ಗೋಪೂಜೆ ನಡೆಸಬೇಕು ಎಂದು ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮದಾಯ ದತ್ತಿ ಇಲಾಖೆ ಆದೇಶ ಹೊರಡಿಸಿದೆ. ಸಂಜೆ 5.30ರಿಂದ 6.30ರ ತನಕ ಗೋಧೂಳಿ ಲಗ್ನದಲ್ಲಿ ಗೋಪೂಜೆ ಕಾರ್ಯಕ್ರಮ ನಡೆಸುವಂತೆ ಸೂಚನೆ ನೀಡಲಾಗಿದೆ.
ಹಿಂದೂ ಧರ್ಮದಲ್ಲಿ ಹಸುವಿಗೆ ತಾಯಿಯ ಸ್ಥಾನವನ್ನು ನೀಡಲಾಗಿದೆ. ಗೋಮಾತೆ ದೇವತೆ ಎಂದು ಭಾವಿಸಿ ಪೂಜಿಸಲಾಗುತ್ತದೆ. ಹಿಂದೂ ಧರ್ಮದ ಪುರಾಣ ಉಪನಿಷತ್ತುಗಳಲ್ಲಿ ಗೋಮಾತೆಗೆ ವಿಶೇಷ ಸ್ಥಾನಮಾನವಿದೆ. ಗೋಮಾತೆ ಪೂಜಿಸಿದರೆ ಅನೇಕ ಸಮಸ್ಯೆಗಳು ಪರಿಹಾರವಾಗುತ್ತದೆ ಮತ್ತು ವಾಸ್ತು ದೋಷವು ನಿವಾರಣೆಯಾಗುತ್ತದೆ ಎಂಬ ಬಲವಾದ ನಂಬಿಕೆ ನಮ್ಮ ಸಮಾಜದಲ್ಲಿದೆ ಎಂದು ತಿಳಿಸಲಾಗಿದೆ.

ಇತ್ತೀಚಿನ ದಿನಗಳಲ್ಲಿ ಪಟ್ಟಣ, ಮಹಾನಗರದಲ್ಲಿರುವ ಜನರು ಗೋಪೂಜೆಯನ್ನು ಮರೆತುಬಿಡುತ್ತಿದ್ದಾರೆ. ಈ ಕಾರಣಕ್ಕಾಗಿ ಹಿಂದೂ ಸನಾತನ ಧರ್ಮದ ಗೋಮಾತೆಯನ್ನು ದೇವತೆಯೆಂದು ತಿಳಿದು ಪೂಜಿಸುವ ಸಂಪ್ರದಾಯ/ ಪದ್ಧತಿ ಬಿಡಬಾರದೆಂಬ ದೃಷ್ಟಿಯಿಂದ ಮುಂದಿನ ಪೀಳಿಗೆಗೆ ಗೋವುಗಳ ಪೂಜೆಯನ್ನು ಪರಿಚಯಿಸಲು ಗೋಪೂಜೆ ನಡೆಸಲು ಸೂಚಿಸಲಾಗಿದೆ.
ವರ್ಷದಲ್ಲಿ ಒಂದು ದಿನವಾದರೂ ಗೋವುಗಳ ಪೂಜೆಯನ್ನು ಧಾರ್ಮಿಕ ದತ್ತಿ ಇಲಾಖೆಯ ಅಧಿಸೂಚಿತ ದೇವಾಲಯಗಳಲ್ಲಿ/ ಸಂಸ್ಥೆಗಳಲ್ಲಿ ದೀಪಾವಳಿಯ ಮತ್ತು ಬಲಿಪಾಡ್ಯಮಿಯ ದಿನದಂದು ಕಡ್ಡಾಯವಾಗಿ ನಡೆಸಿ ಸನಾತನ ಹಿಂದೂ ಧರ್ಮದ ಗೋಪೂಜಾ ವಿಧಿ-ವಿಧಾನಗಳನ್ನು ಸಂಪ್ರದಾಯಗಳನ್ನು ಉಳಿಸಿ, ಬೆಳೆಸುವ ನಿಟ್ಟಿನಲ್ಲಿ ದೀಪಾವಳಿಯ/ ಬಲಿಪಾಡ್ಯಮಿ ಹಬ್ಬದ ದಿನದಂದು ಗೋಪೂಜೆ ನಡೆಸಿ ಜಾರಿಗೊಳಿಸುವುದು ಸೂಕ್ತವು, ಶಾಸ್ತ್ರ ಸಮ್ಮತವೂ ಆಗಿರುತ್ತದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.
ನಮ್ಮ ಧಾರ್ಮಿಕ ಮತ್ತು ಸಾಂಸ್ಕೃತಿಕ ಪರಂಪರೆಯ ಅವಿಭಾಜ್ಯ ಅಂಗವಾದ ಗೋವುಗಳ ಮಹತ್ವ ಮತ್ತು ಸಂರಕ್ಷಣೆ ಬಗ್ಗೆ ಜನ ಜಾಗೃತಿ ಮೂಡಿಸಬೇಕಾಗಿರುವುದರಿಂದ ಮುಂಬರುದ ದೀಪಾವಳಿ ಹಬ್ಬದ ಬಲಿಪಾಡ್ಯಮಿ ದಿನದಂದು ಪ್ರತಿ ದೇವಾಲಯದಲ್ಲಿ ಒಂದೊಂದು ಗೋಮಾತೆಯನ್ನು ಪೂಜಿಸಿ, ಗೋಮಾತೆಯನ್ನು ಸಂರಕ್ಷಿಸುವ ಬಗ್ಗೆ ಸುತ್ತೋಲೆಯನ್ನು ಹೊರಡಿಸಲು ಉಲ್ಲೇಖಿತ ಟಿಪ್ಪಣಿಯಲ್ಲಿ ಸೂಚಿಸಲಾಗಿದೆ.
ಮುಂಬರುವ ದೀಪಾವಳಿಯ/ ಬಲಿಪಾಡ್ಯಮಿ ದಿನದಂದು ರಾಜ್ಯದ ಎಲ್ಲಾ ಅಧಿಸೂಚಿತ ದೇವಾಲಯ/ಸಂಸ್ಥೆಗಳಲ್ಲಿ ಗೋವುಗಳನ್ನು ಪೂಜಿಸುವ ವಿಚಾರವಾಗಿ, ಆ ದಿನ ಗೋವುಗಳಿಗೆ ಸ್ನಾನ ಮಾಡಿಸಿ, ದೇವಾಲಯಕ್ಕೆ ಕರೆತಂದು ಅರಿಶಿಣ, ಕುಂಕುಮ, ಹೂಗಳಿಂದ ಅಲಂಕರಿಸಿ, ಅಕ್ಕಿ ಬೆಲ್ಲ, ಬಾಳೆಹಣ್ಣು ಸಿಹಿ ತಿನಿಸು ನೀಡಿ ಧೂಪ ದೀಪಗಳಿಂದ ಪೂಜಿಸಿ ನಮಸ್ಕರಿಸುವ ವ್ಯವಸ್ಥೆಯನ್ನು ಮಾಡಬೇಕು ಎಂದು ತಿಳಿಸಲಾಗಿದೆ.
ಅನಾದಿಕಾಲದಿಂದಲೂ ಹಿಂದೂ ಧರ್ಮದವರು ಭಾರತ ದೇಶದಲ್ಲಿ ಗೋಮಾತೆಯನ್ನು ಕಾಲ ಕಾಲಕ್ಕೆ ಅನುಗುಣವಾಗಿ ಪೂಜಿಸಿಕೊಂಡು ಬರುತ್ತಿದ್ದಾರೆ. ಹಿಂದೂಗಳು ದೀಪಾವಳಿಯ ದಿನದಂದು ಗೋವುಗಳಿಗೆ ಸ್ನಾನ ಮಾಡಿಸಿ, ಅರಿಶಿಣ ಕುಂಕುಮ, ಹೂಗಳಿಂದ ಅಲಂಕರಿಸಿ, ಅಕ್ಕಿ ಬೆಲ್ಲ, ಸಿಹಿ ತಿನಿಸುಗಳನ್ನು ನೀಡಿ ಪೂಜಾದಿಗಳನ್ನು ನಡೆಸಿಕೊಂಡು ಬರುತ್ತಿರುವುದನ್ನು ಈಗಲೂ ಕಾಣಬಹುದಾಗಿದೆ. ಆದರಂತೆ ಕರ್ನಾಟಕದಲ್ಲಿಯೂ ಸಹ ಗೋಪೂಜೆಯನ್ನು/ ಬಲಿಪಾಡ್ಯಮಿಯಂದು ನಡೆಸಿಕೊಂಡು ಬರಲಾಗುತ್ತಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಇತಿಹಾಸದ ಉಲ್ಲೇಖ; ಭಗವದ್ಗೀತೆ, ಭಾಗವತ ಮಹಾಪುರಾಣ ಮುಂತಾದ ಪುರಾಣಗಳಲ್ಲಿ ಗೋವುಗಳ ಮಹತ್ವಗಳ ಬಗ್ಗೆ ಉಲ್ಲೇಖಿಸಿರುವುದನ್ನು ಕಾಣುತ್ತೇವೆ ಭಗವದ್ ಶ್ರೀ ಕೃಷ್ಣ ಪರಮಾತ್ಮನು ಗೋವರ್ಧನಗಿರಿಯನ್ನು ಕಿರುಬೆರಳಿನಲ್ಲಿ ಎತ್ತಿ ಹಿಡಿದು ಗೋವುಗಳ ಸಂರಕ್ಷಣೆ ಮತ್ತು ಅವುಗಳ ಪಾಲನೆ ಪೋಷಣೆಗಳನ್ನು ಮಾಡುತ್ತಿದ್ದನೆಂದು ಗೋವುಗಳಿಗೆ ಪೂಜಾಧಿಗಳನ್ನು ನಡೆಸಿ ಅವುಗಳ ರಕ್ಷಣೆಯೊಂದಿಗೆ ಉತ್ತಮ ಫಲವನ್ನು ಪಡೆದೆನೆಂಬ ಮತ್ತು ಹಿಂದೂ ದೇವತೆಗಳು ಗೋವುಗಳಲ್ಲಿ ನೆಲೆಸಿರುತ್ತಾರೆ ಎಂಬುದಾಗಿಯೂ ಹಿಂದೂ ಧರ್ಮ ಗ್ರಂಥಗಳು ಹೇಳಲ್ಟಡುತ್ತವೆ.












Click it and Unblock the Notifications