ಈದ್-ಮಿಲಾದ್: ರಾಜ್ಯ ಸರ್ಕಾರದಿಂದ ಕೊವಿಡ್ 19 ಮಾರ್ಗಸೂಚಿ ಪ್ರಕಟ
ಬೆಂಗಳೂರು, ಅಕ್ಟೋಬರ್ 19: ಈದ್-ಮಿಲಾದ್ ಅಕ್ಟೋಬರ್ 30ರಂದು ಆಚರಿಸಲಾಗುತ್ತಿದ್ದು, ರಾಜ್ಯ ಸರ್ಕಾರವು ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದೆ. ಈದ್ ಮಿಲಾದ್ ಆಚರಣೆ ಮಾಡುವವರು ಸರ್ಕಾರದ ಮಾರ್ಗಸೂಚಿಗಳನ್ನು ಪಾಲಿಸುವಂತೆ ತಿಳಿಸಿದೆ.
ಕೊರೊನಾ ದೇಶದೆಲ್ಲೆಡೆ ವ್ಯಾಪಕವಾಗಿ ಹರಡುತ್ತಿರುವ ಸಂದರ್ಭದಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಹಲವು ನಿರ್ಧಾರಗಳನ್ನು ಕೈಗೊಳ್ಳಲಾಗಿದೆ. ಈ ಬಾರಿ ಸಾಮೂಹಿಕ ಮೆರವಣಿಗೆ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಒಂದೆಡೆ ಸೇರುವುದಕ್ಕೆ ಸರ್ಕಾರ ಅವಕಾಶ ನಿರಾಕರಿಸಿದೆ.
ಈದ್ ಮಿಲಾದ್ ದಿನದಂದು ನಡೆಯುವ ಯಾವುದೇ ರೀತಿಯ ಹಗಲು ಅಥವಾ ರಾತ್ರಿಯ ಧಾರ್ಮಿಕ ಕಾರ್ಯಕ್ರಮ, ಸಭೆಗಳನ್ನೂ ಸಹ ಕಡ್ಡಾಯವಾಗಿ ನಿಷೇಧಿಸಿದೆ. 60 ವರ್ಷ ಮೇಲ್ಪಟ್ಟವರು ಮತ್ತು 10 ವರ್ಷದೊಳಗಿನ ಮಕ್ಕಳು ಮನೆಯಲ್ಲಿಯೇ ಹಬ್ಬ ಆಚರಿಸಬೇಕು.

-ಪ್ರಾರ್ಥನಾ ಮಂದಿರದಲ್ಲಿ ಸ್ಯಾನಿಟೈಸ್ ಹಾಗೂ ಸೋಪಿನಿಂದ ಕೈ ತೊಳೆಯಲು ಪ್ರವೇಶ ದ್ವಾರದಲ್ಲೇ ಸೂಕ್ತ ವ್ಯವಸ್ಥೆ ಕಲ್ಪಿಸಬೇಕು. ಕಡ್ಡಾಯವಾಗಿ ಎಲ್ಲರೂ 6 ಅಡಿ ಅಂತರದ ದೈಹಿಕ ಅಂತರ ಕಾಯ್ದುಕೊಳ್ಳಲೇಬೇಕೆಂದು ಹೇಳಲಾಗಿದೆ.
-ಕೊವಿಡ್ 19 ಶಿಷ್ಟಾಚಾರದಂತೆ ಮಸೀದಿ, ದರ್ಗಾಗಳಲ್ಲಿ ಸಾಮಾಜಿಕ ಅಂತರ ಕಾಯ್ದುಕೊಂಡು ಪ್ರಾರ್ಥನೆ ಸಲ್ಲಿಸಬೇಕೆಂದು ಸೂಚಿಸಲಾಗಿದೆ.
-ರಾಜ್ಯದ ವಕ್ಫ್ ಮಂಡಳಿಯ ಜಿಲ್ಲಾ ವಕ್ಫ್ ಅಧಿಕಾರಿಗಳ ಮೂಲಕ ಜಿಲ್ಲಾಧಿಕಾರಿ, ಪೊಲೀಸ್ ವರಿಷ್ಠಾಧಿಕಾರಿಗಳು ಎಲ್ಲಾ ಈದ್ಗಾ, ಮಸೀದಿ, ದರ್ಗಾ ಮತ್ತಿತರೆ ಸಂಸ್ಥೆಗಳಿಗೆ ಈ ಆದೇಶವನ್ನು ಜಾರಿ ಮಾಡುವುದು, ಈ ಆದೇಶವನ್ನು ಎಲ್ಲಾ ವಕ್ಫ್ ಸಂಸ್ಥೆ ಕಟ್ಟು ನಿಟ್ಟಾಗಿ ಆದೇಶವನ್ನು ಜಾರಿ ಮಾಡುವುದು.












Click it and Unblock the Notifications