'ಕಾನೂನು ತಂತ್ರಗಾರಿಕೆಯಲ್ಲಿ ದಾರಿ ತಪ್ಪಿತು ರಾಜ್ಯ ಸರ್ಕಾರ'
ಬೆಂಗಳೂರು, ಸೆಪ್ಟೆಂಬರ್ 12: ಕಾವೇರಿ ನೀರು ಹಂಚಿಕೆ ಪ್ರಕರಣದಲ್ಲಿ ಸಿದ್ದರಾಮಯ್ಯ ನೇತೃತ್ವದ ಸರಕಾರ ಕಾನೂನು ತಂತ್ರಗಾರಿಕೆಯನ್ನು ಸರಿಯಾಗಿ ರೂಪಿಸದೆ ದಾರಿ ತಪ್ಪಿದೆ ಎಂದು ರಾಜ್ಯಸಭಾ ಸದಸ್ಯ ರಾಜೀವ್ ಚಂದ್ರಶೇಖರ್ ಟೀಕಿಸಿದ್ದಾರೆ.
ತಮಿಳುನಾಡಿಗೆ ಕಾವೇರಿ ನೀರು ಬಿಡುವ ವಿಚಾರವಾಗಿ ಸುಪ್ರೀಂ ಕೋರ್ಟ್ ತೀರ್ಪಿನ ಹಿನ್ನೆಲೆಯಲ್ಲಿ ರಾಜ್ಯ ಸರಕಾರ ಮೇಲ್ಮನವಿ ಸಲ್ಲಿಸಿದ ನಂತರ ರಾಜೀವ್ ಚಂದ್ರಶೇಖರ್ ಈ ರೀತಿ ಪ್ರತಿಕ್ರಿಯಿಸಿದ್ದಾರೆ.[Live : 12 ಸಾವಿರ ಕ್ಯೂಸೆಕ್ ನೀರು ಹರಿಸಲು ಆದೇಶ]

ಕಳೆದ ವಾರ ಹಿರಿಯ ವಕೀಲ ಫಾಲಿ ನಾರಿಮನ್ ನೀರು ಬಿಡುವ ವಿಚಾರವಾಗಿ ಸುಪ್ರೀಂ ಕೋರ್ಟ್ ಗೆ ತಿಳಿಸುವ ಮುನ್ನ ರಾಜ್ಯ ಸರಕಾರದ ಬಳಿ ಮಾತುಕತೆ ನಡೆಸಿರಲಿಲ್ಲ ಎಂದು ಸಿದ್ದರಾಮಯ್ಯ ಅವರು ಸ್ಪಷ್ಟನೆ ನೀಡಿದ್ದು, ಆ ಹಿನ್ನೆಲೆಯಲ್ಲಿ ಅವರು ಮಾತನಾಡಿದ್ದಾರೆ.
ರಾಜ್ಯ ಸರಕಾರದ ಕ್ರಮವನ್ನು ಟೀಕಿಸಿದ್ದಾರೆ. "ಈ ಪ್ರಕರಣದಲ್ಲಿ ರಾಜ್ಯದ ಕಾನೂನು ತಂತ್ರಗಾರಿಕೆ ದಾರಿ ತಪ್ಪಿದೆ. ಸರಕಾರದ ಪ್ರತಿನಿಧಿಯೊಬ್ಬರು 10 ಸಾವಿರ ಕ್ಯೂಸೆಕ್ ನೀರು ಬಿಡುವ" ಪ್ರಸ್ತಾವ ಇರಿಸಿದ್ದರು ಎಂದು ಅವರು ಹೇಳಿದ್ದಾರೆ.[ತಮಿಳುನಾಡಿನಲ್ಲಿ ಕನ್ನಡಿಗರ ಮೇಲೆ ದುಷ್ಕರ್ಮಿಗಳಿಂದ ಹಲ್ಲೆ]
ಕರ್ನಾಟಕಕ್ಕೆ ಹಿನ್ನಡೆಯಾದ ಹಿನ್ನೆಲೆಯಲ್ಲಿ ವಕೀಲ ಫಾಲಿ ನಾರಿಮನ್ ಬದಲಿಸಬೇಕು ಎಂಬ ಒತ್ತಡದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಇದಕ್ಕೆ ವಕೀಲರು ಹೊಣೆಯಲ್ಲ, ಕರ್ನಾಟಕ ಜವಾಬ್ದಾರಿ ಎಂದಿದ್ದಾರೆ. ನಾರಿಮನ್ ಬಗ್ಗೆ ಗೌರವದಿಂದ ಮಾತನಾಡಿರುವ ಅವರು, 32 ವರ್ಷಗಳಿಂದ ನಾರಿಮನ್ ಕರ್ನಾಟಕದ ಕಾನೂನು ಸಲಹೆಗಾರರಾಗಿದ್ದಾರೆ. ದೇಶದ ಪ್ರಕಾಂಡ ಕಾನೂನು ಪಂಡಿತರ ಪೈಕಿ ಅವರೂ ಒಬ್ಬರು ಎಂದು ಹೇಳಿದ್ದಾರೆ.
ಆದಾಯಕ್ಕಿಂತ ಹೆಚ್ಚಿನ ಆಸ್ತಿ ಹೊಂದಿದ್ದ ಪ್ರಕರಣದಲ್ಲಿ 2014ರಲ್ಲಿ ಜಯಲಲಿತಾ ಪರವಾಗಿ ವಾದಿಸಿದ್ದ ನಾರಿಮನ್, ಆಕೆಗೆ ಜಾಮೀನು ಸಿಗುವಂತೆ ಮಾಡಿದ್ದರು. ಇದು "ಹಿತಾಸಕ್ತಿ ಸಂಘರ್ಷ"ದ ವಿಚಾರವೇ ಎಂಬ ಪ್ರಶ್ನೆಗೆ ರಾಜೀವ್ ಚಂದ್ರಶೇಖರ್ ಸ್ಪಷ್ಟವಾಗಿ ನಿರಾಕರಿಸಿದ್ದಾರೆ.
ಮಹದಾಯಿ ಜಲ ವಿವಾದದಲ್ಲೂ ಕರ್ನಾಟಕ ಸರಕಾರ ಕಾನೂನು ವಿಚಾರದಲ್ಲಿ ಗಲಿಬಿಲಿ ಮಾಡಿದೆ. ಮಧ್ಯಂತರ ಅರ್ಜಿಯನ್ನು ಸಲ್ಲಿಸುವುದು ಬೇಡ ಎಂದು ಕಾನೂನು ತಜ್ಞರ ತಂಡದ ಸಲಹೆಯನ್ನೂ ಮೀರಿ, ಜುಲೈನಲ್ಲಿ ಅರ್ಜಿ ಸಲ್ಲಿಸಿದೆ. ಸರಕಾರ ಆ ತಕ್ಷಣದ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದೆಯೇ ವಿನಾ ದೀರ್ಘಾವಧಿ ಆಲೋಚನೆ ಮಾಡುತ್ತಿಲ್ಲ ಎಂದು ಅವರು ಅರೋಪಿಸಿದ್ದಾರೆ.[ಕಾವೇರಿ ವಿವಾದ : ಸುಪ್ರೀಂಗೆ ಸಲ್ಲಿಸಿರುವ ಅರ್ಜಿಯಲ್ಲೇನಿದೆ?]
ಸರಕಾರ ರೈತರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು. ಕಳೆದ ವರ್ಷ ರೈತರಿಗೆ ಬೆಳೆವಿಮೆ ನೀಡಬೇಕಿತ್ತು. ಕುಡಿಯುವ ನೀರಿನ ಪರ್ಯಾಯ ಯೋಜನೆಗಳ ಬಗ್ಗೆಯೂ ಆಲೋಚಿಸಬೇಕು. ರೈತರಿಗೆ ಕೃಷಿ ಚಟುವಟಿಕೆಗಳಿಗೆ ನೀರು ಹರಿಸುವುದಕ್ಕೆ, ಬೆಂಗಳೂರಿಗೆ ಕುಡಿಯುವ ನೀರಿಗೆ ಏನು ಮಾಡುತ್ತಾರೆ ಎಂಬುದಕ್ಕೆ ಇನ್ನೂ ಉತ್ತರ ಸಿಕ್ಕಿಲ್ಲ ಎಂದು ರಾಜೀವ್ ಚಂದ್ರಶೇಖರ್ ಹೇಳಿದ್ದಾರೆ.












Click it and Unblock the Notifications