ಅನಿವಾಸಿ ಭಾರತೀಯರಿಗಾಗಿ ರಾಜ್ಯಕ್ಕೆ ಪ್ರತ್ಯೇಕ ನೀತಿ ಸಂಹಿತೆ
ಬೆಂಗಳೂರು, ಜ. 6: ವಿದೇಶಗಳಲ್ಲಿರುವ ಅನಿವಾಸಿ ಭಾರತೀಯರಿಗಾಗಿ ವಿಶೇಷ ನೀತಿ ಸಂಹಿತೆ ಹಾಗೂ ಯೋಜನೆಗಳನ್ನು ಘೋಷಿಸಲು ರಾಜ್ಯ ಸರ್ಕಾರ ಮುಂದಾಗಿದೆ.
ಶುಕ್ರವಾರ ನಡೆಯಲಿರುವ ಅನಿವಾಸಿ ಭಾರತೀಯರ ಜಾಗತಿಕ ಸಂಸ್ಥೆಯ (ಜಿಒಪಿಐಒ) ಮಹಾ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೊಸ ನೀತಿ ಸಂಹಿತೆಯನ್ನು ಘೋಷಿಸಲಿದ್ದಾರೆ.
ಅನಿವಾಸಿ ಭಾರತೀಯರು ರಾಜ್ಯದ ಯಾವುದೇ ಹಳ್ಳಿ, ಶಾಲೆ ಅಥವಾ ಪಟ್ಟಣಗಳನ್ನು ದತ್ತು ಪಡೆದು ಅವುಗಳನ್ನು ಅಭಿವೃದ್ಧಿಗೊಳಿಸುವಂಥ ವಿಶೇಷ ಅಂಶಗಳನ್ನು ಈ ಸಂಹಿತೆಯಲ್ಲಿ ಸೇರ್ಪಡೆಗೊಳಿಸಲಾಗಿದೆ ಎನ್ನಲಾಗಿದೆ.
ಸದ್ಯಕ್ಕೆ ಕೇಂದ್ರ ಸರ್ಕಾರದಿಂದ ಆಯೋಜಿಸಲಾಗಿರುವ ಪ್ರವಾಸಿ ಭಾರತೀಯ ದಿನಾಚರಣೆಯಂತೆ, ಕರ್ನಾಟಕ ದಿವಸ್ ಆಚರಿಸಲು ರಾಜ್ಯ ಸರ್ಕಾರ ಚಿಂತನೆ ನಡೆಸಿದೆ. ಈಗಾಗಲೇ ಉತ್ತರ ಪ್ರದೇಶ ರಾಜ್ಯವು ಇಂಥ ದಿನಾಚರಣೆಯನ್ನು ಆರಂಭಿಸಿದೆ.
ಈ ಬಗ್ಗೆ ಮಾಹಿತಿ ನೀಡಿದ ರಾಜ್ಯ ಸರ್ಕಾರದ ಎನ್ ಆರ್ ಐ ವಿಭಾಗದ ಉಪಾಧ್ಯಕ್ಷೆ ಆರತಿ ಕೃಷ್ಣಾ, 'ಎಲ್ಲಾ ಅನಿವಾಸಿ ಕನ್ನಡಿಗರನ್ನು ಒಗ್ಗೂಡಿಸುವುದು, ಅವರಲ್ಲಿನ ಮಾಹಿತಿ ವಿನಿಮಯಕ್ಕೆ ಅವಕಾಶ ಮಾಡಿಕೊಡುವುದು, ಕನ್ನಡದ ಉತ್ತೇಜನಕ್ಕೆ ಒತ್ತು ಕೊಡುವುದು ಮುಂತಾದ ಉದ್ದೇಶಗಳನ್ನು ನೀತಿ ಸಂಹಿತೆ ಒಳಗೊಳ್ಳಲಿದೆ ಎಂದು ತಿಳಿಸಿದ್ದಾರೆ. ಇದರ ಜತೆಯಲ್ಲೇ ವಿದೇಶಗಳಲ್ಲಿ ನೆಲೆಸಿರುವ ಎಲ್ಲಾ ಕನ್ನಡಿಗರ ಪ್ರತ್ಯೇಕ ಡೇಟಾಬೇಸ್ ಅನ್ನು ತಯಾರಿಸಲು ರಾಜ್ಯ ಸರ್ಕಾರ ಆಲೋಚಿಸಿದೆ ಎಂದು ಅವರು ತಿಳಿಸಿದ್ದಾರೆ. ಕೊಲ್ಲಿ ರಾಷ್ಟ್ರಗಳಲ್ಲಿ ಸುಮಾರು 1.5 ಲಕ್ಷ ಹಾಗೂ ಅಮೆರಿಕದಲ್ಲಿ ಸುಮಾರು 90 ಸಾವಿರ ಕನ್ನಡಿಗರಿದ್ದಾರೆಂದು ಅವರು ವಿವರಿಸಿದರು.