ಲೋಕಾಯುಕ್ತಕ್ಕೆ ಮುಕ್ತಿನೇ ಇಲ್ಲ: ಸರಕಾರಕ್ಕೆ ಮತ್ತೆ ಹಿನ್ನಡೆ
ಲೋಕಾಯುಕ್ತ ಹುದ್ದೆಗೆ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ನ್ಯಾ.ವಿಶ್ವನಾಥ್ ಶೆಟ್ಟಿ ಹೆಸರು ಅಂತಿಮಗೊಳಿಸಿ, ರಾಜ್ಯಪಾಲರ ಅನುಮೋದನೆಗೆ ಕಳುಹಿಸಿದ್ದ ಸರಕಾರಕ್ಕೆ ತಾತ್ಕಾಲಿಕ ಹಿನ್ನಡೆ.
ಬೆಂಗಳೂರು, ಜ 16: ಕರ್ನಾಟಕ ಲೋಕಾಯುಕ್ತ ಹುದ್ದೆಗೆ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ನ್ಯಾ ವಿಶ್ವನಾಥ್ ಶೆಟ್ಟಿ ಹೆಸರು ಅಂತಿಮಗೊಳಿಸಿ, ರಾಜ್ಯಪಾಲರ ಅನುಮೋದನೆಗೆ ಕಳುಹಿಸಿದ್ದ ಸರಕಾರಕ್ಕೆ ತಾತ್ಕಾಲಿಕ ಹಿನ್ನಡೆಯಾಗಿದೆ.
ವಿಶ್ವನಾಥ್ ಶೆಟ್ಟಿಯವರ ಮೇಲೆ ದೂರು ಇರುವ ಹಿನ್ನಲೆಯಲ್ಲಿ, ರಾಜ್ಯಪಾಲ ವಜುಭಾಯಿ ವಾಲಾ ಸರಕಾರಕ್ಕೆ ಸುದೀರ್ಘ ಪತ್ರ ಬರೆದಿದ್ದು, ತನ್ನ ನಿರ್ಧಾರವನ್ನು ಮರುಪರಿಶೀಲನೆ ನಡೆಸುವಂತೆ ಸರಕಾರಕ್ಕೆ ಸೂಚಿಸಿದ್ದಾರೆ. (ಲೋಕಾಯುಕ್ತ ಹುದ್ದೆಗೆ ವಿಶ್ವನಾಥ್ ಶೆಟ್ಟಿ ಹೆಸರು ಅಂತಿಮ)
ನ್ಯಾ. ವಿಶ್ವನಾಥ್ ಶೆಟ್ಟಿಯವರ ಮೇಲಿನ ದೂರಿನ ಬಗ್ಗೆ ಪತ್ರದಲ್ಲಿ ರಾಜ್ಯಪಾಲರು ಸ್ಪಷ್ಟನೆ ಕೋರಿದ್ದು, ಲೋಕಾಯುಕ್ತ ಹುದ್ದೆಗೆ ನ್ಯಾ. ಶೆಟ್ಟಿಯವರ ಅನುಮೋದನೆ ಮಾಡಿ ಸರಕಾರ ಕಳುಹಿಸಿದ್ದ ಕಡತವನ್ನು ವಾಪಸ್ ಕಳುಹಿಸಿದ್ದಾರೆ.

ಸೋಮವಾರ (ಜ 9) ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದಿದ ಸರ್ವಪಕ್ಷ ಸಭೆಯಲ್ಲಿ ನ್ಯಾ. ವಿಶ್ವನಾಥ್ ಶೆಟ್ಟಿಯವರ ಹೆಸರನ್ನು ಅಂತಿಮಗೊಳಿಸಿ, ರಾಜ್ಯಪಾಲರ ಸಹಿಗೆ ಕಳುಹಿಸಲಾಗಿತ್ತು.
ನ್ಯಾಯಮೂರ್ತಿ ಆನಂದ್ ಬೈರಾರೆಡ್ಡಿ, ನಿವೃತ್ತ ನ್ಯಾಯಮೂರ್ತಿ ಎನ್.ಕೆ.ಪಾಟೀಲ್ ಹಾಗೂ ಸಿ.ವಿಶ್ವನಾಥ್ ಶೆಟ್ಟಿ ಅವರ ಹೆಸರು ಸರ್ವಪಕ್ಷದ ಸಭೆಯಲ್ಲಿ ಪ್ರಸ್ತಾಪವಾಗಿತ್ತು.
ಮುಖ್ಯಮಂತ್ರಿ ಸಿದ್ದರಾಮಯ್ಯನವರು ವಿಶ್ವನಾಥ್ ಶೆಟ್ಟಿ ಪರ ಒಲವು ತೋರಿದ್ದು, ಇದಕ್ಕೆ ವಿರೋಧ ಪಕ್ಷಗಳೂ ಸಹಮತ ವ್ಯಕ್ತಪಡಿಸಿದ್ದವು.
ಈ ಹಿಂದೆ ಎರಡು ಬಾರಿ ಸಿದ್ದರಾಮಯ್ಯ ಸರಕಾರ ನ್ಯಾ. ಎಸ್.ಆರ್. ನಾಯಕ್ ಅವರ ಹೆಸರನ್ನು ಶಿಫಾರಸು ಮಾಡಿತ್ತು. ಆದರೆ ಎರಡೂ ಬಾರಿ ರಾಜ್ಯಪಾಲರು ಇದಕ್ಕೆ ಒಪ್ಪಿಗೆ ನೀಡದೇ ಸರಕಾರ ಮುಖಭಂಗ ಅನುಭವಿಸಿದ್ದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದಾಗಿದೆ.












Click it and Unblock the Notifications