ಸಿಎಂ, ಸಚಿವರ ಕಚೇರಿಗಳಲ್ಲಿ ಶೀಘ್ರದಲ್ಲೇ ಟೈಟ್ ರೂಲ್ಸ್
ರಾಜ್ಯ ಸರ್ಕಾರವು ತನ್ನ ಆಡಳಿತವನ್ನು ಚುರುಕುಗೊಳಿಸಲು ಮಹತ್ವದ ನಿರ್ಧಾರಕ್ಕೆ ಮುಂದಾಗಿದೆ. ಸಿಎಂ ಕಚೇರಿ ಹಾಗೂ ಸಚಿವರ ಕಚೇರಿಗಳಲ್ಲಿ ಹೆಚ್ಚು ಜನಸಂದಣಿ ಇರುವುದನ್ನು ನೋಡಿರುತ್ತೇವೆ. ಸಚಿವರ ಹಿಂದೆ ಮುಂದೆ ಜನ ಸುತ್ತಿಕೊಂಡೇ ಇರುತ್ತಾರೆ. ಇನ್ನು ಯಾರೆಂದರವರು ಕಚೇರಿಗಳ ಸುತ್ತ ಅಲೆಯುತ್ತಿರುತ್ತಾರೆ. ಈಗ ಇಂತಹ ಅನಗತ್ಯ ಜನರಿಗೆ ಬ್ರೇಕ್ ಹಾಕಲು ಸರ್ಕಾರ ಮುಂದಾಗಿದೆ ಎಂದು ಹೇಳಲಾಗಿದೆ.
ಸಿಎಂ ಕಚೇರಿ ಸೇರಿದಂತೆ ಸಚಿವರ ಕಚೇರಿಗಳಲ್ಲಿ ಅನಗತ್ಯವಾಗಿರುವ ಸಿಬ್ಬಂದಿಗೂ ಶೀಘ್ರದಲ್ಲೇ ಗೇಟ್ಪಾಸ್ ಕೊಡಲು ಸರ್ಕಾರ ಚಿಂತನೆ ನಡೆಸಿದೆ. ಆಡಳಿತದ ಮೇಲೆ ಹದ್ದಿನಕಣ್ಣಿಡಲು ಈ ಸುಧಾರಣೆ ತರಲು ಮುಂದಾಗಿದೆ ಎಂದು ಹೇಳಲಾಗುತ್ತಿದೆ.

ಕೆಲವರು ಕೆಲಸವೇ ಇಲ್ಲದಿದ್ದರೂ ಅನಗತ್ಯವಾಗಿ ಕಚೇರಿಗಳಲ್ಲಿ ಇರುವುದು ಸರ್ಕಾರದ ಗಮನಕ್ಕೆ ಬಂದಿದ್ದು, ಇವರನ್ನೆಲ್ಲ ಮನೆಗೆ ಕಳಿಸಲು ನಿರ್ಧರಿಸಿದೆ. ಕಚೇರಿಗಳಲ್ಲಿ ಕಟ್ಟುನಿಟ್ಟಿನ ರೂಲ್ಸ್ ಜಾರಿಯಾಗಲಿದ್ದು, ಯಾರೆಂದರವರು ಕಚೇರಿಗಳಲ್ಲಿ ಇರುವಂತಿಲ್ಲ ಎಂದು ಮೂಲಗಳು ತಿಳಿಸಿವೆ.
ಸರ್ಕಾರಕ್ಕೆ ಸಂಬಂಧಿಸಿದ ಸಿಎಂ ಕಚೇರಿ, ಸಚಿವರ ಕಚೇರಿಯಲ್ಲಿ ಬೇಕಾಬಿಟ್ಟಿ ಇರುವ ಸಿಬ್ಬಂದಿಯನ್ನೂ ಮನೆಗೆ ಕಳುಹಿಸಲು ಮುಂದಾಗಿದೆ. ಈ ಸಂಬಂಧ ಈಗಾಗಲೇ ಈ ಕಚೇರಿಗಳಲ್ಲಿರುವ ಅನಗತ್ಯ ಸಿಬ್ಬಂದಿ ಬಗ್ಗೆ ವರದಿ ನೀಡುವಂತೆ ಹಿರಿಯ ಅಧಿಕಾರಿಗಳಿಗೆ ಸೂಚನೆ ಕೂಡ ನೀಡಲಾಗಿದೆಯಂತೆ.
ಇತ್ತೀಚೆಗೆ ಸರ್ಕಾರಕ್ಕೆ ಸಂಬಂಧಿಸಿದ ಮಹತ್ವದ ದಾಖಲೆಗಳು, ಕಡತಗಳು ಸಹ ಲೀಕ್ ಆಗುತ್ತಿದೆ ಎನ್ನುವ ಆರೋಪವಿದ್ದು, ಇದಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಸರ್ಕಾರ ಈ ಬಿಗಿ ನಿಯಮ ತರಲು ನಿರ್ಧರಿಸಿದೆ. ಕಚೇರಿಗಳಲ್ಲಿ ಅನಗತ್ಯವಾಗಿ ಓಡಾಡಿಕೊಂಡಿರುವ ಸಿಬ್ಬಂದಿಯಿಂದಲೂ ಈ ರೀತಿ ನಡೆಯುತ್ತಿರುವ ಬಗ್ಗೆ ಅನುಮಾನವಿದ್ದು, ಆಡಳಿತ ಯಂತ್ರವನ್ನು ಭದ್ರಪಡಿಸಲು ಕಾಂಗ್ರೆಸ್ ಸರ್ಕಾರ ಪ್ಲ್ಯಾನ್ ಮಾಡಿದೆ.

ಅನಗತ್ಯ ಸಿಬ್ಬಂದಿಗೆ ಗೇಟ್ ಪಾಸ್ ಕೊಡುವ ಕಟ್ಟುನಿಟ್ಟಿನ ತೀರ್ಮಾನವನ್ನು ಸರ್ಕಾರ ಕೈಗೊಂಡಿದ್ದು, ಸಿಎಂ ಹಾಗೂ ಸಚಿವರ ಕಚೇರಿಯಲ್ಲಿರುವ ಅಧಿಕಾರಿ, ಸಿಬ್ಬಂದಿ ವರ್ಗದ ಮಾಹಿತಿ ನೀಡುವಂತೆ ಈಗಾಗಲೇ ಹಿರಿಯ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಜೊತೆಗೆ ಸರ್ಕಾರಕ್ಕೆ ಸಂಬಂಧಿಸಿದ ಮಾಹಿತಿ ಸೋರಿಕೆ ಮಾಡುವವರ ವಿರುದ್ಧವೂ ಕಠಿಣ ಕ್ರಮ ತೆಗೆದುಕೊಳ್ಳಲು ಪ್ರತ್ಯೇಕ ವರದಿ ನೀಡುವಂತೆ ಸರ್ಕಾರ ಪಟ್ಟು ಹಿಡಿದಿದೆ ಎಂದು ವರದಿಯಾಗಿದೆ.
ಇಲ್ಲಿವರೆಗೆ ಸಿಎಂ ಕಚೇರಿ ಹಾಗೂ ಸಚಿವರ ಕಚೇರಿಗಳಲ್ಲಿ ಈ ರೀತಿ ಅನಗತ್ಯವಾಗಿ ತಿರುಗಾಡುತ್ತಾ ಕಾಲಹರಣ ಮಾಡುತ್ತಿದ್ದವರು, ರಾಜಕಾರಣಿಗಳ ಹೆಸರೇಳಿಕೊಂಡು ದಂಧೆ ನಡೆಸುತ್ತಿದ್ದವರು, ಮಧ್ಯವರ್ತಿಗಳಂತೆ ಕಚೇರಿಗಳಲ್ಲಿ ಸುತ್ತಾಡುತ್ತಿರುವ ಎಲ್ಲರ ಮೇಲೂ ರಾಜ್ಯ ಸರ್ಕಾರ ಹದ್ದಿನ ಕಣ್ಣಿಡಲು ಮುಂದಾಗಿದೆ.
ಹಿರಿಯ ಅಧಿಕಾರಿಗಳಿಂದ ಬರುವ ವರದಿ ಆಧರಿಸಿ, ಯಾರೆಲ್ಲರಿಗೆ ಗೇಟ್ಪಾಸ್ ನೀಡಬೇಕು ಎಂಬುದರ ಬಗ್ಗೆ ನಿರ್ಧಾರವಾಗಲಿದೆ. ಒಟ್ಟಿನಲ್ಲಿ ಇಂತಹ ಅನಗತ್ಯ ಸಿಬ್ಬಂದಿಯನ್ನು ಮನೆಗಳಿಗೆ ಕಳುಹಿಸುವುದಂತೂ ಗ್ಯಾರಂಟಿ ಎನ್ನಲಾಗಿದೆ. ಸರ್ಕಾರದ ಆಡಳಿತ ವೈಖರಿಯನ್ನು ಬಲಗೊಳಿಸಲು ಈ ಕ್ರಮ ಹೆಚ್ಚು ಅನುಕೂಲ ಮಾಡಿಕೊಡಲಿದೆ ಎಂದು ಹೇಳಲಾಗಿದೆ. ಯಾರೆಲ್ಲ ಗೇಟ್ಪಾಸ್ ತೆಗೆದುಕೊಳ್ಳಲಿದ್ದಾರೆ ಎನ್ನುವ ಮಾಹಿತಿ ಸದ್ಯದಲ್ಲೇ ಹೊರಬರುವ ಸಾಧ್ಯತೆ ಇದೆ.












Click it and Unblock the Notifications