'ಸಿದ್ದರಾಮಯ್ಯ ಮಹಾಸುಳ್ಳುಗಾರ'
ಬೆಂಗಳೂರು, ಮೇ 11 : 'ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಜನ ವಿರೋಧಿ. ರಾಜ್ಯದ ಜನರು ಇಂತಹ ಕೆಟ್ಟ ಸರ್ಕಾರವನ್ನು ಹಿಂದೆಂದೂ ನೋಡಿರಲಿಲ್ಲ' ಎಂದು ಕರ್ನಾಟಕ ಬಿಜೆಪಿ ಆರೋಪ ಮಾಡಿದೆ. 'ಬಿಜೆಪಿಯಿಂದ ನೈತಿಕತೆ ಪಾಠ ಕಲಿಯಬೇಕಿಲ್ಲ' ಎಂದು ಸಿದ್ದರಾಮಯ್ಯ ತಿರುಗೇಟು ಕೊಟ್ಟಿದ್ದಾರೆ.
ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಮೂರು ವರ್ಷಗಳನ್ನು ಪೂರೈಸುತ್ತಿದೆ. ಈ ಹಿನ್ನಲೆಯಲ್ಲಿ ಬುಧವಾರ ಕರ್ನಾಟಕ ಬಿಜೆಪಿ 'ಇದು ಜನಪರ ಸರ್ಕಾರವಲ್ಲ, ಜನ ವಿರೋಧಿ ಸರ್ಕಾರ' ಎಂಬ ಕಿರು ಹೊತ್ತಿಗೆಯನ್ನು ಬಿಡುಗಡೆ ಮಾಡಿತು.

ಪ್ರತಿಪಕ್ಷ ನಾಯಕ ಮತ್ತು ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್, ಮಾಜಿ ಉಪಮುಖ್ಯಮಂತ್ರಿ ಆರ್.ಅಶೋಕ್ ಕಿರುಹೊತ್ತಿಗೆಯನ್ನು ಬಿಡುಗಡೆ ಮಾಡಿದರು. ನಂತರ ಮಾತನಾಡಿದ ಜಗದೀಶ್ ಶೆಟ್ಟರ್ ಅವರು, 'ಸಿದ್ದರಾಮಯ್ಯ ಮಹಾಸುಳ್ಳುಗಾರ. ಇಂತಹ ಕೆಟ್ಟ ಸರ್ಕಾರವನ್ನು ಹಿಂದೆಂದೂ ರಾಜ್ಯದ ಜನರು ನೋಡಿಲ್ಲ' ಎಂದು ಆರೋಪ ಮಾಡಿದರು.
'ಪಾರದರ್ಶಕ ಆಡಳಿತ ನಡೆಸುತ್ತೇವೆ ಎಂದು ಹೇಳಿಕೊಂಡು ಸಿದ್ದರಾಮಯ್ಯ ಮುಖ್ಯಮಂತ್ರಿಯಾದರು. ಈಗ ಅವರ ವಿರುದ್ಧವೇ ಹಲವಾರು ಆರೋಪಗಳಿವೆ. ಸಂಪುಟದ ಸಚಿವರು, ಪಕ್ಷದ ಶಾಸಕರ ವಿರುದ್ಧ ಹಲವು ಆರೋಪಗಳು ಕೇಳಿಬರುತ್ತಿವೆ ಪಾರದರ್ಶಕತೆ ಎಲ್ಲಿದೆ?' ಎಂದು ಶೆಟ್ಟರ್ ಪ್ರಶ್ನೆ ಮಾಡಿದರು. [ಎಸಿಬಿ ಬಗ್ಗೆ ಸಿದ್ದರಾಮಯ್ಯ ಸ್ಪಷ್ಟನೆ]
'ರಾಜ್ಯದ ಆಡಳಿತ ಯಂತ್ರ ಸಂಪೂರ್ಣವಾಗಿ ಹದಗೆಟ್ಟಿದೆ. ಬರ ಪರಿಸ್ಥಿತಿ ನಿರ್ವಹಣೆ ಮಾಡುವಲ್ಲಿ ಸರ್ಕಾರ ಸಂಪೂರ್ಣವಾಗಿ ವಿಫಲವಾಗಿದೆ. ಕೇಂದ್ರ ಸರ್ಕಾರ ಬರ ಪರಿಹಾರ ಕಾರ್ಯಕ್ಕಾಗಿ 2200 ಕೋಟಿ ರೂ. ಹಣ ನೀಡಿದರೂ ಸುಮ್ಮನೆ ಟೀಕೆ ಮಾಡಲಾಗುತ್ತಿದೆ. ಸಿದ್ದರಾಮಯ್ಯ ಕಾರ್ಯ ವೈಖರಿಗೆ ಪಕ್ಷದವರೇ ಅಸಮಾಧಾನ ವ್ಯಕ್ತಪಡಿಸಿದ್ದಾರೆ' ಎಂದರು. [ಬರ ಪರಿಹಾರಕ್ಕೆ ಕೇಂದ್ರದ ಮೊರೆ ಹೋದ ರಾಜ್ಯ ಸರ್ಕಾರ]
ಸಿದ್ದರಾಮಯ್ಯ ತಿರುಗೇಟು : ಕರ್ನಾಟಕ ಬಿಜೆಪಿ ನಾಯಕರು ಮಾಡಿರುವ ಆರೋಪಗಳಿಗೆ ಸಿದ್ದರಾಮಯ್ಯ ಅವರು ತಿರುಗೇಟು ಕೊಟ್ಟಿದ್ದಾರೆ. ನವದೆಹಲಿಯಲ್ಲಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, 'ಬಿಜೆಪಿ ಹೇಗೆ ಆಡಳಿತ ನಡೆಸಿದೆ? ಎಂಬುದು ದೇಶಕ್ಕೆ ತಿಳಿದಿದೆ. ಬಿಜೆಪಿ ನಾಯಕರಿಂದ ನೈತಿಕತೆ ಬಗ್ಗೆ ಪಾಠ ಕಲಿಯಬೇಕಿಲ್ಲ' ಎಂದು ಹೇಳಿದರು.












Click it and Unblock the Notifications