ಕೇಂದ್ರೀಕೃತ ಕೈಗಾರಿಕಾ ತಪಾಸಣೆ ವ್ಯವಸ್ಥೆಯಲ್ಲಿ ರಾಜ್ಯಕ್ಕೆ 'ಚಿನ್ನ'ದ ಪದಕ
ಬೆಂಗಳೂರು, ಅಕ್ಟೋಬರ್ 27: ಸುಲಲಿತ ವ್ಯವಹಾರಕ್ಕೆ ಆದ್ಯತೆ ನೀಡುವ ರಾಜ್ಯಗಳ ಸಾಲಿನಲ್ಲಿ ಕರ್ನಾಟಕವು ಅಗ್ರಸ್ಥಾನದಲ್ಲಿ ಗುರುತಿಸಿಕೊಂಡಿದ್ದು, ಕೇಂದ್ರೀಕೃತ ಕೈಗಾರಿಕಾ ತಪಾಸಣಾ ವ್ಯವಸ್ಥೆ ಜಾರಿಗಾಗಿ ಸ್ಕಾಚ್ ಅವಾರ್ಡ್ನಲ್ಲಿ ಚಿನ್ನವನ್ನು ಪಡೆದುಕೊಂಡಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆಗಳ ಸಚಿವ ಮುರುಗೇಶ್ ನಿರಾಣಿ ತಿಳಿಸಿದ್ದಾರೆ.
"ಸುಲಲಿತ ವ್ಯವಹಾರಕ್ಕೆ ಅಫಿಡವಿಟ್ ಬೇಸ್ಡ್ ಕ್ಲಿಯರೆನ್ಸ್ ಯೋಜನೆ ಜಾರಿಗೊಳಿಸಿರುವ ಕರ್ನಾಟಕ, ಈಸ್ ಆಫ್ ಡೂಯಿಂಗ್ ಬ್ಯುಸಿನೆಸ್ ಶ್ರೇಯಾಂಕ ಪಟ್ಟಿಯಲ್ಲಿ "ಟಾಪ್ ಅಚೀವರ್" ಆಗಿ ಹೊರಹೊಮ್ಮಿದೆ. ಇದೀಗ ಕೈಗಾರಿಕೆಗಳಿಗೆ ಕೇಂದ್ರೀಕೃತ ತಪಾಸಣೆ ವ್ಯವಸ್ಥೆ ಜಾರಿಗೊಳಿಸಿರುವ ರಾಜ್ಯ 'ಸ್ಕಾಚ್ ಅವಾರ್ಡ್ಸ್ನಲ್ಲಿ ಚಿನ್ನ ಪಡೆದಿರುವುದು ಸಂತಸದ ವಿಷಯ," ಎಂದು ಸಂತಸ ವ್ಯಕ್ತಪಡಿಸಿದ್ದಾರೆ.
₹1747.37 ಕೋಟಿ ಬಂಡವಾಳ ಹೂಡಿಕೆಯ 35 ಯೋಜನೆಗಳಿಗೆ ಅನುಮೋದನೆ: ಮುರುಗೇಶ್ ನಿರಾಣಿ
"ಕೈಗಾರಿಕೆಗಳ ಕಾರ್ಯ ನಿರ್ವಹಣೆ ನಿಯಮಗಳ ಪಾಲನೆಗಳ ತಪಾಸಣೆ, ಮೇಲ್ವಿಚಾರಣೆಗಾಗಿ ನಾನಾ ಇಲಾಖೆಗಳು ಪ್ರತ್ಯೇಕವಾಗಿ ತಪಾಸಣಾ ಭೇಟಿ ನೀಡುವುದರಿಂದ ಉಂಟಾಗುವ ಅನಗತ್ಯ ಕಿರಿಕಿರಿ ತಪ್ಪಿಸಲು ಹಾಗೂ ಪಾರದರ್ಶಕ ಪರಿಶೀಲನೆಗಾಗಿ ವಾಣಿಜ್ಯ ಕೈಗಾರಿಕಾ ಇಲಾಖೆಯು ಕೇಂದ್ರೀಕೃತ ಪರಿವೀಕ್ಷಣಾ ವ್ಯವಸ್ಥೆಯನ್ನು ಜಾರಿಗೊಳಿಸಲಾಗಿದೆ," ಎಂದರು.
ಸಂಬಂಧಪಟ್ಟ ಇಲಾಖೆಗಳಿಂದ ಪರಿಶೀಲನೆ:
"ರಾಜ್ಯದ ಕೈಗಾರಿಕೆಗಳಲ್ಲಿ ನಿಯಮಾವಳಿಗಳ ಪಾಲನೆ, ಕಾರ್ಮಿಕರಿಗೆ ಸಂಬಂಧಪಟ್ಟ ಕಾನೂನುಗಳ ಅನುಷ್ಠಾನ ಮಾಲಿನ್ಯ ನಿಯಂತ್ರಣಕ್ಕೆ ಕೈಗೊಂಡಿರುವ ಕ್ರಮಗಳ ಸ್ಥಿತಿಗತಿ ಹಾಗೂ ಇತರೆ ಅಂಶಗಳ ಪರಿಶೀಲನೆಗಾಗಿ ಸಂಬಂಧಪಟ್ಟ ಇಲಾಖೆಗಳು ಭೇಟಿ ನೀಡಿ ಪರಿಶೀಲನೆ ನಡೆಸುತ್ತವೆ. ಮುಖ್ಯವಾಗಿ ಕಾರ್ಮಿಕ ಇಲಾಖೆ, ಕಾರ್ಖಾನೆಗಳು- ಬಾಯ್ಲರ್ಗಳು, ಕಾನೂನು ಮಾಪನಶಾಸ್ತ್ರ ಇಲಾಖೆ ಹಾಗೂ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಪರಿಶೀಲನೆ ನಡೆಸುತ್ತವೆ," ಎಂದು ಸಚಿವ ಮುರುಗೇಶ್ ನಿರಾಣಿ ತಿಳಿಸಿದರು.
"ಪ್ರತಿಯೊಂದು ಇಲಾಖೆಗಳು ಪ್ರತ್ಯೇಕವಾಗಿ ಭೇಟಿ ನೀಡುವುದರಿಂದ ವರ್ಷವಿಡೀ ತಪಾಸಣೆ ಕಾರ್ಯ ನಡದಿರುತ್ತದೆ. ಪ್ರತಿ ಇಲಾಖೆಯು ಅಧಿಕಾರಿಗಳು ಭೇಟಿ ನೀಡಿದಾಗ ಮಾಹಿತಿ ಒದಗಿಸುವುದು, ಪ್ರಾಯೋಗಿಕ ಪರಿಶೀಲನೆ ಕಾರ್ಯ ನಡೆಯುವುದರಿಂದ ಕೈಗಾರಿಕೆಗಳಿಗೆ ಕಿರಿಕಿರಿಯಾಗುತ್ತಿದೆ ಎಂಬ ದೂರು ಇತ್ತು. ಇದಕ್ಕೆ ಪರಿಹಾರವಾಗಿ 'ಕೇಂದ್ರೀಕೃತ ಪರಿವೀಕ್ಷಣಾ ವ್ಯವಸ್ಥೆ' ರೂಪಿಸಿದ್ದೇವೆ," ಎಂದು ಸಚಿವರು ತಿಳಿಸಿದರು.
"ಕೇಂದ್ರ ಸರ್ಕಾರ ಈಸ್ ಆಫ್ ಡೂಯಿಂಗ್ ವ್ಯವಸ್ಥೆಯಡಿ ಕೈಗಾರಿಕೆಗಳ ಸುಗಮ ಕಾರ್ಯ ನಿರ್ವಹಣೆಗೆ ಸೂಕ್ತ ಕ್ರಮ ವಹಿಸುವಂತೆ ನೀಡಿರುವ ನಿರ್ದೇಶದನ್ವಯ ಹೊಸ ಸಿಐಎಸ್ ತಂತ್ರಾಂಶ ರೂಪುಗೊಂಡಿದೆ. ಈ ತಂತ್ರಾಂಶದ ಬಳಕೆಯಿಂದ ಕೈಗಾರಿಕೆಗಳ ತಪಾಸಣೆ, ನಿಯಮಗಳ ಪಾಲನೆ ಹಾಗೂ ಗುಣಮಟ್ಟದ ನಿರ್ವಹಣೆಗೆ ಸಹಕಾರಿಯಾಗಲಿದೆ,"ಎಂದು ಕೈಗಾರಿಕಾಭಿವೃದ್ಧಿ ಆಯುಕ್ತರಾದ ಗುಂಜನ್ ಕೃಷ್ಣ ವಿವರಿಸಿದ್ದಾರೆ.
ಏನಿದು ಸಿಐಎಸ್ ವ್ಯವಸ್ಥೆ:
"ಸಿಐಎಸ್ ವ್ಯವಸ್ಥೆಯಡಿ ಸಂಬಂಧಪಟ್ಟ ಇಲಾಖೆಗಳು ಪರಸ್ಪರ ಚರ್ಚಿಸಿ ಜಂಟಿ ತಪಾಸಣೆಗೆ ಆದ್ಯತೆ ನೀಡುವುದು. ಈ ತಪಾಸಣೆ ಬಗ್ಗೆ ಕೈಗಾರಿಕೆಗಳಿಗೆ ಮೊದಲೇ ಮಾಹಿತಿ ನೀಡದೇ, ಆ ದಿನ ಆಯಾ ಇಲಾಖೆಯು ತನ್ನ ಕಾರ್ಯವ್ಯಾಪ್ತಿಯಲ್ಲಿನ ಅಂಶಗಳ ಪರಿಶೀಲನೆ ಮಾಡುವುದು. ನಿಯಮ ಉಲ್ಲಂಘನೆ, ಲೋಪಗಳ ಪತ್ತೆ ಕಾರ್ಯವನ್ನು ಏಕಕಾಲಕ್ಕೆ ನಡೆಸಲಿದೆ. ಈ ತಪಾಸಣಾ ವೇಳೆ ಅಧಿಕಾರಿಯನ್ನು ಗಣಕೀಕೃತ ವ್ಯವಸ್ಥೆ ಆಯ್ಕೆ ಮಾಡುವುದರಿಂದ ಒಬ್ಬರೇ ಅಧಿಕಾರಿ ಎರಡು ಬಾರಿ ಒಂದೇ ಕೈಗಾರಿಕೆಯಲ್ಲಿ ತಪಾಸಣೆ ನಡೆಸಲು ಅವಕಾಶವಿರುವುದಿಲ್ಲ.
ಈ ಕೈಗಾರಿಕೆಗಳ ಮಾಲೀಕರೊಂದಿಗೆ ಮುಂಚಿತವಾಗಿ ಹಂಚಿಕೊಳ್ಳುವುದಲ್ಲದೇ, ತಪಾಸಣೆ ವರದಿಯನ್ನು ನಿರ್ದಿಷ್ಟ ಸಮಯದೊಳಗೆ ಅಪ್ಲೋಡ್ ಮಾಡಲಾಗುತ್ತದೆ,"ಎಂದು ಕರ್ನಾಟಕ ಉದ್ಯೋಗ ಮಿತ್ರದ ವ್ಯವಸ್ಥಾಪಕ ನಿರ್ದೇಶಕ ದೊಡ್ಡ ಬಸವರಾಜು ಮಾಹಿತಿ ನೀಡಿದರು.
ಸ್ಕಾಚ್ ಅವಾರ್ಡ್:
'ಸ್ಟೇಟ್ ಆಫ್ ಗವರ್ನನ್ಸ್ ಎಂಬ ಪರಿಕಲ್ಪನೆಯಡಿ ನಡೆದ 83ನೇ ಸ್ಕಾಚ್ ಶೃಂಗಸಭೆಯಲ್ಲಿ ಸುಲಲಿತ ವ್ಯವಹಾರಗಳ ವಿಭಾಗದಲ್ಲಿ ಕರ್ನಾಟಕಕ್ಕೆ ಅಗ್ರಮಾನ್ಯ ಪ್ರಶಸ್ತಿ ಘೋಷಿಸಲಾಗಿದೆ. ಈ ಕಾರ್ಯಕ್ಷಮತೆಯ ಆಧಾರದ ಮೇಲೆ ರಾಜ್ಯಗಳು, ಇಲಾಖೆಗಳು, ಜಿಲ್ಲೆಗಳು ಮತ್ತು ಪುರಸಭೆಗಳನ್ನು ಶ್ರೇಣೀಕರಿಸಿ ಪ್ರತಿವರ್ಷ ಶ್ರೇಯಾಂಕವನ್ನು ಬಿಡುಗಡೆ ಮಾಡಲಾಗುತ್ತದೆ.