Ration: ರಾಜ್ಯದಲ್ಲಿ ಪಡಿತರ ವಿತರಣೆ ಕುರಿತು ಆಹಾರ ಸಚಿವ ಮಹತ್ವದ ಅಪ್ಡೇಟ್
Ration: ರಾಜ್ಯದಲ್ಲಿ ನಕಲಿ ದಾಖಲೆ ಸೃಷ್ಟಿಸಿ ಪಡೆದಂತಹ ಬಿಪಿಎಲ್ ಪಡಿತರ ಚೀಟಿಗಳನ್ನು ರದ್ದುಪಡಿಸಿ ಎಪಿಎಲ್ಗೆ ವರ್ಗಾಹಿಸುವ ಕೆಲಸ ಮುಂದುವರೆದಿದೆ. ಈ ನಡುವೆಯೇ ಪಡಿತರ ವಿತರಣೆ ಕುರಿತು ಆಹಾರ ಸಚಿವ ಭರ್ಜರಿ ಗುಡ್ ನ್ಯೂಸ್ವೊಂದನ್ನು ನೀಡಿದ್ದಾರೆ. ಹಾಗಾದ್ರೆ ಅದೇನು ಎನ್ನುವ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ರಾಜ್ಯದಲ್ಲಿ ಯಾವುದೇ ಬಿಪಿಎಲ್ ಕಾರ್ಡ್ಗಳನ್ನು ರದ್ದು ಮಾಡುವುದಿಲ್ಲ. ಆದರೆ, ಕೇಂದ್ರ ಸರ್ಕಾರದ ಮಾರ್ಗಸೂಚಿಯಂತೆ ಆದಾಯ ತೆರಿಗೆ ಕಟ್ಟುವವರಿಗೆ ಮತ್ತು ಸ್ವಂತ ಕಾರು ಹೊಂದಿದವರ ಬಿಪಿಎಲ್ ಪಡಿತರ ಚೀಟಿಗಳನ್ನು ಅನರ್ಹಗೊಳಿಸಲಾಗುವುದು. ಅಂತಹವರಿಗೆ ಎಪಿಎಲ್ ಕಾರ್ಡ್ ಅನ್ನು ನೀಡಲಾಗುವುದು ಎಂದು ಸಚಿವ ಕೆ.ಎಚ್. ಮುನಿಯಪ್ಪ ತಿಳಿಸಿದ್ದಾರೆ.

ಪ್ರಣಾಳಿಕೆಯಲ್ಲಿ ಭರವಸೆ ನೀಡಿದಂತೆ 10 ಕೆಜಿ ಅಕ್ಕಿ ನೀಡುತ್ತಿದ್ದೇವೆ. ಕೇಂದ್ರ ಸರ್ಕಾರಿಂದ ಅಕ್ಕಿ ಬಾರದಿದ್ದಾಗ ಅದರ ಬದಲಿಗೆ ಹಣ ನೀಡಿದ್ದೇವೆ. ವಚನದಂತೆ 5 ಕೆ.ಜಿ ಅಕ್ಕಿ ಕೊಟ್ಟಿದ್ದೇವೆ. ಇತ್ತೀಚೆಗೆ ಕಾಳಸಂತೆಯಲ್ಲಿ ಅಕ್ಕಿ ಮಾರಾಟ ಮಾಡುತ್ತಿರುವುದು ಗಮನಕ್ಕೆ ಬಂದ ತಕ್ಷಣ ಉತ್ತರ ಕರ್ನಾಟಕ ಭಾಗದಲ್ಲಿ 3 ಕೆ.ಜಿ ಅಕ್ಕಿ, 2 ಕೆಜಿ ಜೋಳ ಇನ್ನು ಕೆಲವೆಡೆ 3 ಕೆ.ಜಿ ಅಕ್ಕಿ, 2 ಕೆ.ಜಿ ರಾಗಿ ಶಿವಮೊಗ್ಗದಲ್ಲಿ 5 ಕೆಜಿ ಅಕ್ಕಿ ನೀಡುತ್ತಿದ್ದೇವೆ ಎಂದು ಹೇಳಿದರು.
ಕಾನೂನು ಪ್ರಕಾರ ಟೆಂಡರ್ ಕರೆದು ಗುಣಮಟ್ಟದ ಪದಾರ್ಥಗಳ ಕಿಟ್ ಅನ್ನು ಮುಂದಿನ ತಿಂಗಳಿನಿಂದ ಎಲ್ಲಾ ಗ್ರಾಹಕರಿಗೂ ನೀಡಲಿದ್ದೇವೆ. ಸರ್ವೇ ಮಾಡಿದ ವೇಳೆ ಗ್ರಾಹಕರ ಅಪೇಕ್ಷೆಯಂತೆ ಬೇಳೆ, ಎಣ್ಣೆ, ಸಕ್ಕರೆ, ಉಪ್ಪು ಇರುವ ಕಿಟ್ ಕೊಡಲಾಗುವುದು ಎಂದು ಆಹಾರ ಸಚಿವ ಕೆ.ಎಚ್ ಮುನಿಯಪ್ಪ ಅವರು ಹೇಳಿದರು.
ಪಡಿತರ ವಿತರಕರಿಗೆ ಮೇ ತಿಂಗಳಿನಿಂದ ಕಮಿಷನ್ ಬಾಕಿ ಇದೆ ಎನ್ನುವ ಪ್ರಶ್ನೆಗೆ ಉತ್ತರಿಸಿದ ಅವರು, ಕೇಂದ್ರ ಸರ್ಕಾರದ್ದು ಕಮಿಷನ್ ಬರಲು ವಿಳಂಬ ಆಯಿತು. ಕೇಂದ್ರ ಮತ್ತು ರಾಜ್ಯ ಸರ್ಕಾರ ಇಬ್ಬರೂ ಸೇರಿ ಸೆಪ್ಟೆಂಬರ್ ತಿಂಗಳವರೆಗಿನ ಕಮಿಷನ್ ನೀಡಲು ತೀರ್ಮಾನ ಮಾಡಿದ್ದು, ಈ ವಾರದೊಳಗೆ ಎಲ್ಲಾ ಪಡಿತರ ವಿತರಕರಿಗೆ ಕಮಿಷನ್ ನೀಡಲಿದ್ದೇವೆ ಎಂದರು.
ಶಿವಮೊಗ್ಗದಲ್ಲಿ ಇಲಾಖೆ ಅಧಿಕಾರಿಗಳು ಉತ್ತಮವಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ತೂಕ ಮತ್ತು ಅಳತೆ ಬಗ್ಗೆ ಅಧಿಕಾರಿಗಳಿಗೆ ಸಂಶಯ ಬಂದ ಖಾಸಗಿ ಗೋದಾಮುಗಳಲ್ಲೂ ಕೂಡ ರೇಷನ್ ಅಕ್ಕಿ ಇರುವ ಮಾಹಿತಿ ಸಿಕ್ಕರೆ ದಿಢೀರ್ ದಾಳಿ ನಡೆಸುವ ಅಧಿಕಾರ ಇದೆ ಎಂದು ಹೇಳಿದರು.
ಪಡಿತರ ವಿತರಣೆ ಬಗ್ಗೆ ಮಹತ್ವದ ಮಾಹಿತಿ: ಇನ್ಮುಂದೆ ರಾಜ್ಯದ ಎಲ್ಲಾ ಪಡಿತರ ಅಂಗಡಿಗಳಲ್ಲಿ ಪ್ರತಿ ತಿಂಗಳ ದಿನಾಂಕ 10ರಂದು ಪಡಿತರ ವಿತರಣೆ ಮಾಡಲಾಗುವುದು. ರಾಜ್ಯದಲ್ಲಿ ಒಟ್ಟು ಒಂದು ಕೋಟಿ 25,95,000 ಅಂತ್ಯೋದಯ ಪಡಿತರ ಚೀಟಿಗಳಿದ್ದು, 4,50,00,000 ಜನರಿಗೆ ಪ್ರಯೋಜನ ಸಿಗುತ್ತಿದೆ ಎಂದು ಹೇಳಿದರು.
ಶಿವಮೊಗ್ಗ ಜಿಲ್ಲೆಯಲ್ಲಿ ಒಟ್ಟು 3,81,000 ಕಾರ್ಡುಗಳಿದ್ದು, 17,00,000 ಗ್ರಾಹಕರಿದ್ದಾರೆ. ಸರಿಯಾದ ಸಮಯಕ್ಕೆ ಪಡಿತರ ನೀಡುತ್ತಿದ್ದೇವೆ. ಪಡಿತರ ಕಿಟ್ ನೀಡಲು ಕೂಡ ಕಾನೂನು ಪ್ರಕಾರ ಟೆಂಡರ್ ಮಾಡುತ್ತೇವೆ. ಜಿಲ್ಲೆಯಲ್ಲಿ 6,20೦ ಬಿಪಿಎಲ್ ಕಾರ್ಡುಗಳು ಅನರ್ಹಗೊಂಡಿದೆ. ಅವರಿಗೂ ಎಪಿಎಲ್ ಕಾರ್ಡು ನೀಡಲಾಗುವುದು ಎಂದರು.
ಒಟ್ಟು ರಾಜ್ಯದಲ್ಲಿ ಕೇಂದ್ರ ಸರ್ಕಾರದ ನಿಯಮಗಳಂತೆ ಶೇಕಡ 15ರಷ್ಟು ಬಿಪಿಎಲ್ ಪಡಿತರ ಚೀಟಿಗಳು ಅನರ್ಹಗೊಂಡಿವೆ. ನಿರ್ಗತಿಕರಿಗೆ ಸಹ ಅನ್ನ ಸುವಿಧಾ ಯೋಜನೆಯಡಿ ಆಹಾರ ನೀಡಲಾಗುತ್ತಿದ್ದು, ಜಿಲ್ಲೆಯಲ್ಲಿ 200 ಜನರಿಗೆ ನೀಡಲಾಗುತ್ತಿದೆ ಎಂದರು. ಒನ್ ರೇಷನ್ ಒನ್ ಕಾರ್ಡ್ ಯೋಜನೆಯಡಿ ಬೇರೆ ರಾಜ್ಯಗಳಿಂದ ಬಂದ ಕಾರ್ಮಿಕರು ಮತ್ತು ನಾಗರಿಕರಿಗೆ ಸಹ ತಕ್ಷಣ ರೇಷನ್ ಕಾರ್ಡ್ ನೀಡಲಾಗುತ್ತದೆ. ಈ ಬಗ್ಗೆ ಅಧಿಕಾರಿಗಳಲ್ಲಿ ಗೊಂದಲ ಇದೆ. ಕಾರ್ಡು ನೀಡುವುದಿಲ್ಲ ನಿರಾಕರಿಸುತ್ತಾರೆ ಎಂಬ ಆರೋಪಕ್ಕೆ ಉತ್ತರಿಸಿದ ಅವರು ಅಂತಹವರಿಗೆ ತಕ್ಷಣ ನೀಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು. ಕೇಂದ್ರ ಸರ್ಕಾರದ ನಿಯಮಗಳ ಪ್ರಕಾರವೇ ಬಿಪಿಎಲ್ ಪಡಿತರ ಚೀಟಿಗಳು ರದ್ದಾಗಿವೆ. ಅರ್ಹರು ಆತಂಕ ಪಡುವುದು ಬೇಡ ಎಂದು ಹೇಳಿದರು.












Click it and Unblock the Notifications