ಅತಂತ್ರ ವಿಧಾನಸಭೆಯಾದರೆ ನಮ್ಮ ಆಯ್ಕೆ- ಮರುಚುನಾವಣೆ: ಎಚ್ಡಿಕೆ
ಬೆಂಗಳೂರುಮ ಮೇ 01: ಕರ್ನಾಟಕದಲ್ಲಿ ವಿಧಾನಸಭೆ ಚುನಾವಣೆಯ ಜ್ವರ ಆರಂಭವಾದಾಗಿನಿಂದಲೂ ರಾಜ್ಯದ ಜನತೆ 'ಅತಂತ್ರ ವಿಧಾನಸಭೆ'ಗೆ ಸಾಕ್ಷಿಯಾಗಬೇಕಾಗುತ್ತದೆ ಎಂದು ಹಲವು ರಾಜಕೀಯ ತಜ್ಞರು ಭವಿಷ್ಯ ನುಡಿದಿದ್ದಾರೆ. ಮೇ 12 ರಂದು ನಡೆಯುವ ಚುನಾವಣೆಯ ಫಲಿತಾಂಶ ಮೇ 15 ರಂದು ಹೊರಬೀಳಲಿದ್ದು, ರಾಜ್ಯದ ಭವಿಷ್ಯ ಏನಾಗಲಿದೆ ಎಂಬುದು ಅಂದು ತಿಳಿಯಲಿದೆ.
ಈಗಾಗಲೇ 'ಕಿಂಗ್ ಮೇಕರ್' ಎಂದು ಕರೆಸಿಕೊಳ್ಳುತ್ತಿರುವ ಜೆಡಿಎಸ್ ಚುನಾವಣೋತ್ತರ ಮೈತ್ರಿಯನ್ನು ಕಾಂಗ್ರೆಸ್ ಜೊತೆ ಮಾಡಿಕೊಳ್ಳುತ್ತದೋ ಅಥವಾ ಬಿಜೆಪಿ ಜೊತೆಗೋ ಎಂಬ ಗೊಂದಲವಿದ್ದೇ ಇದೆ.
ಯಾವೊಂದು ಪಕ್ಷಕ್ಕೂ ಬಹುಮತ ಬಾರದಿದ್ದಲ್ಲಿ ಜೆಡಿಎಸ್ ಯಾವ ಪಕ್ಷದೊಂದಿಗೂ ಕೈಜೋಡಿಸದೆ ತಟಸ್ಥವಾಗುಳಿದು, ಮರುಚುನಾವಣೆಗೆ ಮೊರೆಹೋಗಲಿದೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್ ಡಿ ಕುಮಾರಸ್ವಾಮಿ ಹೇಳಿದ್ದಾರೆ. ಪತ್ರಿಕೆಯೊಂದಕ್ಕೆ ಅವರು ನೀಡಿದ ಸಂದರ್ಶನದಲ್ಲಿ ಈ ರೀತಿ ಹೇಳಿದ್ದಾರೆ.

ಕುಮಾರಸ್ವಾಮಿ ಹೇಳಿದ್ದೇನು?
ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್ 100 ರಷ್ಟು ಕ್ಷೇತ್ರಗಳಲ್ಲಿ ಗೆದ್ದು ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮುತ್ತದೆ. ನಂತರ ಕೆಲವು ಪಕ್ಷೇತರ ಶಾಸಕರೊಂದಿಗೆ ಸೇರಿ ಸರ್ಕಾರ ರಚಿಸುತ್ತೇವೆ. ಅತಂತ್ರ ವಿಧಾನಸಭೆಯಾಗಿ ಸರ್ಕಾರ ರಚಿಸಲು ಸಾಧ್ಯವಾಗದ ಪರಿಸ್ಥಿತಿ ಉಂಟಾದರೆ ನಾವು ಯಾರಿಗೂ ಬೆಂಬಲ ನೀಡುವುದಿಲ್ಲ. ಬದಲಾಗಿ ಮತ್ತೆ ಚುನಾವಣೆ ಎದುರಿಸುತ್ತೇವೆ ಎಂದು ಕುಮಾರಸ್ವಾಮಿ ಹೇಳಿದ್ದಾರೆ. ಅಕಸ್ಮಾತ್ ಮರುಚುನಾವಣೆಯಾದರೆ ನಮಗೇ ಹೆಚ್ಚು ಲಾಭವಾಗುವುದು ಖಂಡಿತ ಎಂದು ಅವರು ಹೇಳಿದ್ದಾರೆ.

ದೇವೇಗೌಡರು ಹೇಳೋದೇನು?
ಅಕಸ್ಮಾತ್ ಕುಮಾರಸ್ವಾಮಿ ಅವರೇನಾದರೂ ಚುನಾವಣೆಯ ನಂತರ ಬಿಜೆಪಿ ಜೊತೆ ಕೈಜೋಡಿಸಿದರೆ ಅವರನ್ನು ನಮ್ಮ ಕುಟುಂಬದಿಂದಲೇ ಬಹಿಷ್ಕಾರ ಹಾಕುತ್ತೇವೆ ಎಂದು ಈಗಾಗಲೇ ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡರು ಹೇಳಿದ್ದಾರೆ. 2006 ರಲ್ಲಿ ಮಾಡಿದ ತಪ್ಪನ್ನು ಆತ(ಕುಮಾರಸ್ವಾಮಿ) ಮತ್ತೆ ಮಾಡುವುದಿಲ್ಲ ಎಂಬ ವಿಶ್ವಾಸವಿದೆ. ಕಾಂಗ್ರೆಸ್ ಮತ್ತು ಬಿಜೆಪಿ ಎರಡೂ ಪಕ್ಷಗಳೊಂದಿಗೂ ಮೈತ್ರಿ ಮಾಡಿಕೊಳ್ಳುವುದು ಎಂಥ ಅಪಾಯಕಾರಿ ಎಂಬುದು ಈಗಾಗಲೇ ಕುಮಾರಸ್ವಾಮಿಗೆ ಅರ್ಥವಾಗಿದೆ ಎಂದು ದೇವೇಗೌಡರು ಹೇಳಿದ್ದಾರೆ.

ಅಮಿತ್ ಶಾ-ಕುಮಾರಸ್ವಾಮಿ ಭೇಟಿ?
ದೆಹಲಿ ವಿಮಾನ ನಿಲ್ದಾಣದಲ್ಲಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಮತ್ತು ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಭೇಟಿಯಾಗಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಬಾಂಬ್ ಸಿಡಿಸಿದ್ದರು. ಜೆಡಿಎಸ್-ಬಿಜೆಪಿ ನಡುವೆ ಒಳ ಒಪ್ಪಂದ ನಡೆದಿದೆ ಎಂದು ಆರೋಪಿಸಲಾಗಿತ್ತು. ಈ ಮಾತು ರಾಜ್ಯ ರಾಜಕಾರಣದಲ್ಲಿ ಕೆಲ ಸಮಯ ಅಲ್ಲೋಲ ಕಲ್ಲೋಲ ಸೃಷ್ಟಿಸಿತ್ತು. ಆದರೆ ಈ ಕುರಿತು ಸಿದ್ದರಾಮಯ್ಯ ಯಾವ ದಾಖಲೆಯನ್ನೂ ನೀಡದಿರುವುದರಿಂದ ಇದೊಂದು ಕಟ್ಟುಕತೆ ಎನ್ನಲಾಗಿತ್ತು.

ಜೆಡಿಎಸ್ ಗೆ ಬಹುಮತ?
ಜೆಡಿಎಸ್ ಗೆ ಬಹುಮತ ಸಿಗುತ್ತದೆ. ಅಕಸ್ಮಾತ್ ಬಹುಮತ ಸಿಕ್ಕದಿದ್ದರೂ ಸರ್ಕಾರ ರಚಿಸುವುದು ಮಾತ್ರ ಜೆಡಿಎಸ್ ಎನ್ನುವ ಮೂಲಕ ಮಾಜಿ ಪ್ರಧಾನಿ ದೇವೇಗೌಡರು ವಿಶ್ವಾಸವ್ಯಕ್ತಪಡಿಸಿದ್ದರು. ಈಗಾಗಲೇ ಬಿಎಸ್ಪಿ ಜೊತೆ ಮೈತ್ರಿ ಮಾಡಿಕೊಂಡಿರುವ ಜೆಡಿಎಸ್ ಅತೀ ದೊಡ್ಡ ಪಕ್ಷವಾಗಿ ಹೊರಹೊಮ್ಮುವ ವಿಶ್ವಾಸ ಹೊಂದಿದೆ. ಆದರೆ ಸಮೀಕ್ಷೆಗಳ ಪ್ರಕಾರ ಜೆಡಿಎಸ್ ಮೂರನೇ ಸ್ಥಾನವನ್ನಷ್ಟೇ ಕಾಯ್ದುಕೊಳ್ಳಲಿದೆ. ಯಾವುದು ಸತ್ಯವಾಗುತ್ತದೆ ಎಂಬುದನ್ನು ತಿಳಿಯಲು ಮೇ 15 ರವರೆಗೆ ಕಾಯಬೇಕು.












Click it and Unblock the Notifications