BJPvsBJP: ಬಿಜೆಪಿಗರೇ ಬಿಜೆಪಿಗರನ್ನು ಗೋ ಬ್ಯಾಕ್ ಎನ್ನುವ ಟ್ರೆಂಡ್ ಹೆಚ್ಚಿದೆ- ಕಾಂಗ್ರೆಸ್ ಟ್ವೀಟ್
ಬೆಂಗಳೂರು, ಏಪ್ರಿಲ್ 06: ಶಾಸಕರಿಗೂ ಗೋ ಬ್ಯಾಕ್, ಉಸ್ತುವಾರಿಗಳಿಗೂ ಗೋ ಬ್ಯಾಕ್, ಸಚಿವರಿಗೂ ಗೋ ಬ್ಯಾಕ್, ಆಕಾಂಕ್ಷಿಗಳಿಗೂ ಗೋ ಬ್ಯಾಕ್, ಬಿಜೆಪಿಗರೇ ಬಿಜೆಪಿಗರನ್ನು ಗೋ ಬ್ಯಾಕ್ ಎನ್ನುವ ಟ್ರೆಂಡ್ ಹೆಚ್ಚಿದೆ ಎಂದು ಕರ್ನಾಟಕ ಕಾಂಗ್ರೆಸ್ ಟ್ವೀಟ್ ಮಾಡಿದೆ.
ಗೋ ಬ್ಯಾಕ್ ಎನ್ನುವ ಟ್ರೆಂಡ್ ಶುರುವಾಗಿದ್ದು ನಳೀನ್ ಕುಮಾರ್ ಕಟೀಲ್ ಕಾರು ಅಲ್ಲಾಡುವ ಮೂಲಕ. ಅಂದು ಕಾರು ಅಲ್ಲಾಡಿಸಿದ ಕಾರ್ಯಕರ್ತರು ಇಂದು ಬಿಜೆಪಿಯನ್ನೇ ಅಲ್ಲಾಡಿಸುತ್ತಿದ್ದಾರೆ ಎಂದೂ ಕಾಂಗ್ರೆಸ್ ಟೀಕಿಸಿದೆ.

ದಲಿತರ ಮೇಲಿನ ದೌರ್ಜನ್ಯ ಪ್ರಕರಣಗಳಲ್ಲಿ ಹೆಚ್ಚಳ
'ಬಿಜೆಪಿ ಅಧಿಕಾರಕ್ಕೆ ಬಂದಮೇಲೆ ಕರ್ನಾಟಕದಲ್ಲಿ ದಲಿತರ ಮೇಲಿನ ದೌರ್ಜನ್ಯ ಪ್ರಕರಣಗಳು 41%ನಷ್ಟು ತೀವ್ರ ಹೆಚ್ಚಳವಾಗಿದೆ. ಇದಕ್ಕೆ ಕಾರಣ ಯಾವುದು ಬಿಜೆಪಿ? ಕಾನೂನು ಸುವ್ಯವಸ್ಥೆಯ ವೈಫಲ್ಯವೇ, ಬಿಜೆಪಿಗಿರುವ ದಲಿತ ವಿರೋಧಿ ಮನಸ್ಥಿತಿಯೇ? ದಲಿತರ ಮೇಲಿನ ದೌರ್ಜನ್ಯಗಳ ಪೋಷಕರು ಯಾರು? ಈ ಬಗ್ಗೆ ಬಿಜೆಪಿ ನಾಯಕರು ಮೌನ ಮುರಿಯದಿರುವುದೇಕೆ?' ಎಂದು ಕಾಂಗ್ರೆಸ್ ಪ್ರಶ್ನಿಸಿದೆ.
ಮೆಟ್ರೋ ಕಾಮಗಾರಿಯ ಕಳಪೆತನ
'ಸಣ್ಣ ಮಳೆ ಮೆಟ್ರೋ ಕಾಮಗಾರಿಯ ಕಳಪೆತನವನ್ನು ಬಯಲು ಮಾಡಿದೆ. ಸಣ್ಣ ಮಳೆಗೆ ಮೆಟ್ರೋ ನಿಲ್ದಾಣಕ್ಕೆ ನೀರು ನುಗ್ಗುತ್ತದೆ ಎಂದರೆ ಪ್ರಯಾಣಿಕರ ಸುರಕ್ಷತೆ ಸಾಧ್ಯವೇ? ಪ್ರಚಾರಜೀವಿಯ ಪ್ರಚಾರದ ಹುಚ್ಚಿಗೆ ಕಾಮಗಾರಿ ಪೂರ್ಣಗೊಳ್ಳದೆ ಉದ್ಘಾಟನೆಯಾದ ಮೆಟ್ರೋ ಶೇ 40 ಕಮಿಷನ್ ಕತೆ ಹೇಳುತ್ತಿದೆ. ಈ ಲೋಪಕ್ಕೆ ಹೊಣೆ ಯಾರು, ಮೋದಿಯೋ, ಬೊಮ್ಮಾಯಿಯೋ?' ಎಂದು ಕಾಂಗ್ರೆಸ್ ಪ್ರಶ್ನಿಸಿದೆ.
ಬಿಜೆಪಿ ದೇಶದ ಇತಿಹಾಸವನ್ನು 2014ರಿಂದ ಬರೆದುಬಿಡಲಿ
'ಮಹಾತ್ಮ ಗಾಂಧಿ ಹಾಗೂ ಸರ್ದಾರ್ ವಲ್ಲಭಯ್ ಪಟೇಲರ ಕುರಿತು ಬಿಜೆಪಿಗಿರುವ ಅಸಹನೆಯು ಪಠ್ಯದಲ್ಲಿ ಪಾಠ ಕೈಬಿಡುವ ಮೂಲಕ ಹೊರಹಾಕಿದೆ. ಪಟೇಲರು RSS ದೇಶವಿರೋಧಿ ಎಂದು ನಿಷೇಧಿಸಿದ ಹಾಗೂ ಗಾಂಧೀಜಿ ಸೌಹಾರ್ದತೆಗೆ ಶ್ರಮಿಸಿದ ಚರಿತ್ರೆಯ ಬಗ್ಗೆ ಬಿಜೆಪಿಗೆ ಅಸಹನೆ ಏಕೆ? ಬಿಜೆಪಿ ದೇಶದ ಇತಿಹಾಸವನ್ನು 2014ರಿಂದ ಬರೆದುಬಿಡಲಿ' ಎಂದು ಕೆಪಿಸಿಸಿ ಟ್ವೀಟಿಸಿದೆ.

ಕಡಿಮೆ ಆದ ಕೆಎಂಎಫ್ ಉತ್ಪಾದನೆ
'ಅಮಿತ್ ಶಾ ಅವರ ದೃಷ್ಟಿ ಬಿದ್ದಿದ್ದೇ ತಡ, KMF ಹಾಲು ಉತ್ಪಾದನೆ ಕಡಿಮೆ ಆಯ್ತು, ನಂದಿನಿ ಹಾಲು ಪೂರೈಕೆಯಲ್ಲಿ ವ್ಯತ್ಯಯ ಶುರುವಾಯ್ತು. ಈಗ ಗುಜರಾತಿನ ಅಮುಲ್ ಕರ್ನಾಟಕದ ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ. KMFನ ಸಾಮರ್ಥ್ಯ ಕುಗ್ಗಿಸಿ, ಅಮುಲ್ ಮಾರುಕಟ್ಟೆಯನ್ನು ವಿಸ್ತರಿಸಿ ಕರ್ನಾಟಕದ ರೈತರ ಮೇಲೆ ಮತ್ತೊಂದು ಪ್ರಹಾರ ನಡೆಸುವ ಸಂಚು ಬಿಜೆಪಿಯದ್ದು' ಎಂದು ಕಾಂಗ್ರೆಸ್ ಆಪಾದನೆ ಮಾಡಿದೆ.
ಬಿಜೆಪಿ ಸಚಿವಾಲಯಗಳಲ್ಲಿ ಭ್ರಷ್ಟಾಚಾರದ ಮೂಲ ಬೇರುಗಳು
'ವಿಧಾನಸೌಧವು ವ್ಯಾಪಾರಸೌಧವನ್ನಾಗಿ ಮಾಡಿದ ಬಿಜೆಪಿ ಸಚಿವಾಲಯಗಳಲ್ಲಿ ಭ್ರಷ್ಟಾಚಾರದ ಮೂಲ ಬೇರುಗಳನ್ನು ಹುದುಗಿಸಿದೆ. ಸರ್ಕಾರ ನೀಡಿದ ಅಂಕಿ ಅಂಶಗಳ ಪ್ರಕಾರ ವಿವಿಧ ಸಚಿವಾಲಯಗಳಲ್ಲಿ ಭ್ರಷ್ಟಾಚಾರದ ಪ್ರಕರಣಗಳು ಏರಿಕೆಯಾಗಿವೆ, ಅದರಲ್ಲೂ ಸಿಎಂ ಕೈಯ್ಯಲ್ಲಿರುವ ನಗರಾಭಿವೃದ್ಧಿ ಇಲಾಖೆಯಲ್ಲೇ ಅಧಿಕ. ಇನ್ನಾದರೂ ತಮ್ಮದು 40 ಪರ್ಸೆಂಟ್ ಸರ್ಕಾರ ಎಂದು ಒಪ್ಪುವರೇ?' ಎಂದು ಕಾಂಗ್ರೆಸ್ ಪ್ರಶ್ನಿಸಿದೆ.
ಬಿಜೆಪಿಯ ಭ್ರಷ್ಟಾಚಾರದ ಹೊರೆ
#40PercentSarkara ದ ಭ್ರಷ್ಟಾಚಾರಕ್ಕೆ ಆಕಾಶವೇ ಕುಸಿಯುತ್ತದೆ, ಭೂಮಿಯೇ ಬಾಯಿ ಭಿರಿಯುತ್ತಿದೆ! ಚನ್ನಗಿರಿಯಲ್ಲಿ ಕಾಂಕ್ರೀಟ್ ರಸ್ತೆ ಲಾರಿಯ ಭಾರ ತಡೆಯದೆ ಕುಸಿದು ಹೋಗುತ್ತದೆ ಎಂದರೆ "ಮಾಡಾಳ್" ಭ್ರಷ್ಟಾಚಾರದ ಆಳ ಅಗಲ ಎಷ್ಟಿರಬಹುದು ಬಿಜೆಪಿ? ಬಿಜೆಪಿಯ ಭ್ರಷ್ಟಾಚಾರದ ಹೊರೆಯನ್ನು ಭೂಮಿ ತಾಯಿಯೇ ತಡೆಯದೆ ಕುಸಿಯುತ್ತಿದ್ದಾಳೆ' ಎಂದು ಕಾಂಗ್ರೆಸ್ ಆರೋಪಿಸಿದೆ.












Click it and Unblock the Notifications