'ಮ್ಯಾಜಿಕ್ ನಂಬರ್ ಇದೆ, ರಾಜ್ಯಪಾಲರ ಕರೆಗೆ ಕಾಯುತ್ತಿದ್ದೇವೆ'
ಬೆಂಗಳೂರು, ಮೇ 16 : 'ಸರ್ಕಾರ ರಚನೆ ಮಾಡಲು ಬೇಕಾದ ಮ್ಯಾಜಿಕ್ ನಂಬರ್ ನಮ್ಮ ಬಳಿ ಇದೆ. ರಾಜ್ಯಪಾಲರ ಕರೆಗಾಗಿ ನಾವು ಕಾಯುತ್ತಿದ್ದೇವೆ' ಎಂದು ಹಿರಿಯ ಕಾಂಗ್ರೆಸ್ ನಾಯಕ ಗುಲಾಂ ನಬಿ ಆಜಾದ್ ಹೇಳಿದರು.
ಕೆಪಿಸಿಸಿ ಕಚೇರಿಯಲ್ಲಿ ಬುಧವಾರ ಮಧ್ಯಾಹ್ನ ಪತ್ರಿಕಾಗೋಷ್ಠಿ ನಡೆಸಿದ ಗುಲಾಂ ನಬಿ ಆಜಾದ್ ಅವರು, 'ಇದುವರೆಗೂ ರಾಜ್ಯಪಾಲರಿಂದ ಯಾವುದೇ ಸಂದೇಶ ಬಂದಿಲ್ಲ. ನಾವು ಅವರ ಕರೆಗಾಗಿ ನಿರೀಕ್ಷೆ ಮಾಡುತ್ತಿದ್ದೇವೆ' ಎಂದರು.
'ನಮ್ಮ ಬಳಿ ಸರ್ಕಾರ ರಚನೆ ಮಾಡಲು ಬೇಕಾದ ಶಾಸಕರ ಸಂಖ್ಯಾಬಲವಿದೆ. ಸುಪ್ರೀಂಕೋರ್ಟ್ ಆದೇಶದಂತೆ ಹೆಚ್ಚು ಶಾಸಕರ ಸಂಖ್ಯೆ ಹೊಂದಿರುವ ಪಕ್ಷಕ್ಕೆ ರಾಜ್ಯಪಾಲರು ಅವಕಾಶ ನೀಡಬೇಕು' ಎಂದು ಹೇಳಿದರು.

'ಕುದುರೆ ವ್ಯಾಪಾರಕ್ಕೆ ರಾಜ್ಯಪಾಲರು ಅವಕಾಶ ನೀಡಬಾರದು. ಹೆಚ್ಚು ಶಾಸಕ ಬಲ ಹೊಂದಿರುವ ಪಕ್ಷವನ್ನು ಸರ್ಕಾರ ರಚನೆಗೆ ಅಹ್ವಾನಿಸುವ ಮೂಲಕ ಪ್ರಜಾಪ್ರಭುತ್ವವನ್ನು ಉಳಿಸುವ ಕೆಲಸ ಮಾಡಬೇಕು' ಎಂದರು.
ಕಾಂಗ್ರೆಸ್ನ 79 ಮತ್ತು ಜೆಡಿಎಸ್ನ 38 ಶಾಸಕರು ಸೇರಿ ಸರ್ಕಾರವನ್ನು ರಚನೆ ಮಾಡಲಿದ್ದಾರೆ. ಈಗಾಗಲೇ ಜೆಡಿಎಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ಎಚ್.ಡಿ.ಕುಮಾರಸ್ವಾಮಿ ಅವರನ್ನು ಶಾಸಕಾಂಗ ಪಕ್ಷದ ನಾಯಕರಾಗಿ ಆಯ್ಕೆ ಮಾಡಲಾಗಿದೆ.
ಎಲ್ಲಾ ಶಾಸಕರು ರಾಜ್ಯಪಾಲ ವಜುಭಾಯಿ ವಾಲಾ ಅವರನ್ನು ಭೇಟಿ ಮಾಡಲು ಬಯಸಿದ್ದಾರೆ. ಆದರೆ, ಇದುವರೆಗೂ ಅವರು ಕಾಂಗ್ರೆಸ್ ನಾಯಕರ ಭೇಟಿಗೆ ಅವಕಾಶ ಕೊಟ್ಟಿಲ್ಲ.












Click it and Unblock the Notifications