ಮತದಾನದ ಹಿನ್ನಲೆ : ಖಾಸಗಿ ಬಸ್ ಪ್ರಯಾಣ ದರ ದುಪ್ಪಟ್ಟು
Recommended Video

ಬೆಂಗಳೂರು, ಮೇ 11 : ವಿಧಾನಸಭೆ ಚುನಾವಣೆ ಹಿನ್ನಲೆಯಲ್ಲಿ ಖಾಸಗಿ ಬಸ್ ದರ ದುಪ್ಪಟ್ಟು ಆಗಿದೆ. ಲಾಭದ ಆಸೆಗೆ ಬಿದ್ದಿರುವ ಖಾಸಗಿ ಬಸ್ ಕಂಪನಿಗಳು ಪ್ರಯಾಣದರವನ್ನು ಏಕಾಏಕಿ ಏರಿಕೆ ಮಾಡಿವೆ.
ಮೇ 12ರ ಶನಿವಾರ ಕರ್ನಾಟಕ ವಿಧಾನಸಭೆ ಚುನಾವಣೆಗೆ ಮತದಾನ ನಡೆಯಲಿದೆ. ಬೆಂಗಳೂರಿನಲ್ಲಿ ನೆಲೆಸಿರುವ ಹೊರ ಜಿಲ್ಲೆಯವರು ಮತದಾನ ಮಾಡಲು ಊರಿಗೆ ಹೋಗುತ್ತಾರೆ.
ಇದನ್ನು ಬಂಡವಾಳ ಮಾಡಿಕೊಂಡ ಖಾಸಗಿ ಕಂಪನಿಗಳು ದರಗಳನ್ನು ಹೆಚ್ಚಿಸಿವೆ. ಖಾಸಗಿ ಬಸ್ಗಳ ಕಚೇರಿ, ಏಜೆನ್ಸಿ, ವೆಬ್ಸೈಟ್ಗಳಲ್ಲಿ ಟಿಕೆಟ್ ಬುಕ್ ಮಾಡಲು ಜನರು ಪ್ರಯತ್ನ ಮಾಡುತ್ತಿದ್ದಾರೆ. ಆದರೆ, ಟಿಕೆಟ್ ಸಿಗುವುದೇ ಕಷ್ಟವಾಗಿದೆ.

ಸಾಮಾನ್ಯ ದಿನಗಳಲ್ಲಿ ಕನಿಷ್ಠ 500 ರೂ, ಗರಿಷ್ಠ 1,300 ರೂ. ದರವನ್ನು ಖಾಸಗಿ ಬಸ್ಗಳು ನಿಗದಿ ಮಾಡುತ್ತಿದ್ದವು. ಆದರೆ, ಈಗ ಕನಿಷ್ಠ 1050 ರೂ., ಗರಿಷ್ಠ 2,800 ರೂ.ಗೆ ದರವನ್ನು ಏರಿಕೆ ಮಾಡಲಾಗಿದೆ.
ಬೆಂಗಳೂರು ನಗರದಿಂದ ಶಿವಮೊಗ್ಗ, ಧಾರವಾಡ, ಕಲಬುರಗಿ, ಮಂಗಳೂರು, ಕೊಪ್ಪಳ, ವಿಜಯಪುರ, ಬೆಳಗಾವಿ ಸೇರಿದಂತೆ ವಿವಿಧ ನಗರಗಳಿಗೆ ಹೊರಡುವ ಬಸ್ಸುಗಳ ಸೀಟುಗಳು ಈಗಾಗಲೇ ಭರ್ತಿಯಾಗಿವೆ.
'ಮತದಾನ ಮಾಡಲು ಶಿವಮೊಗ್ಗಕ್ಕೆ ಹೋಗಬೇಕು. ಹಬ್ಬದ ದಿನಗಳಲ್ಲಿ ದರ ಹೆಚ್ಚಾಗುತ್ತಿತ್ತು. ಈಗ ಚುನಾವಣೆ ಸಮಯದಲ್ಲೂ ದರ ಹೆಚ್ಚಾಗಿದೆ' ಎನ್ನುತ್ತಾರೆ ಖಾಸಗಿ ಕಂಪನಿ ಉದ್ಯೋಗಿ ಶಿವಕುಮಾರ್.
ಕೆಎಸ್ಆರ್ಟಿಸಿ ಬಸ್ ಕಡಿಮೆ : ಕೆಎಸ್ಆರ್ಟಿಸಿಯ ಬಸ್ಸುಗಳ ಸಂಚಾರ ಸಹ ಕಡಿಮೆಯಾಗಲಿದೆ. ನಿಗಮದಲ್ಲಿ 8796 ಬಸ್ಸುಗಳಿವೆ. 4 ಸಾವಿರ ಬಸ್ಸುಗಳನ್ನು ಚುನಾವಣಾ ಕಾರ್ಯಕ್ಕಾಗಿ ಬಳಸಲಾಗುತ್ತಿದೆ. ಆದ್ದರಿಂದ, ಬಸ್ಸುಗಳ ಸಂಚಾರ ಕಡಿಮೆಯಾಗಲಿದೆ.
ಖಾಸಗಿ ಬಸ್ಗಳ ದರ ದುಪ್ಪಟ್ಟು, ಸರ್ಕಾರಿ ಬಸ್ಗಳ ಸಂಚಾರ ಕಡಿಮೆ ಆಗಿರುವುದರಿಂದ ಜನರು ರೈಲ್ವೆ ಟಿಕೆಟ್ ಬುಕ್ ಮಾಡಲು ಪ್ರಯತ್ನ ಪಡುತ್ತಿದ್ದಾರೆ.












Click it and Unblock the Notifications