Karnataka Elections: ಕಾಂಗ್ರೆಸ್ಸಿನ ಮೂರನೇ ಪಟ್ಟಿಯಲ್ಲಿ ಸಮುದಾಯಕ್ಕೆ 16 ಟಿಕೆಟ್ ನೀಡಲೇಬೇಕೆಂದು ಹಠ ಹಿಡಿದ ಲಿಂಗಾಯತ ನಾಯಕರು
ಬೆಂಗಳೂರು, ಏಪ್ರಿಲ್ 11: ಮೇ 10 ರಂದು ನಡೆಯಲಿರುವ ಕರ್ನಾಟಕ ವಿಧಾನಸಭೆ ಚುನಾವಣೆಗೆ ( Karnataka Assembly Elections 2023 ) ಅಭ್ಯರ್ಥಿಗಳ ಪಟ್ಟಿಯನ್ನು ಸಿದ್ದಪಡಿಸಲು ರಾಜಕೀಯ ಪಕ್ಷಗಳು ಕಸರತ್ತು ನಡೆಸುತ್ತಿವೆ. ಕುಮಾರಸ್ವಾಮಿ ( HD Kumaraswamy ) ನೇತೃತ್ವದ ಜೆಡಿಎಸ್ ( JDS ) ಪಕ್ಷವು ತನ್ನ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಕಾಂಗ್ರೆಸ್ ( Congress ) ಪಕ್ಷವು ತನ್ನ ಅಭ್ಯರ್ಥಿಗಳ ಎರಡನೇ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಆಡಳಿತಾರೂಢ ಬಿಜೆಪಿಯು ( BJP ) ಇನ್ನೂ ಪಟ್ಟಿಯನ್ನು ಪ್ರಕಟಿಸಿಲ್ಲ.
ಕಾಂಗ್ರೆಸ್ ಬಿಡುಗಡೆ ಮಾಡಿರುವ ಎರಡು ಪಟ್ಟಿಯಲ್ಲಿ ಒಟ್ಟು 166 ಅಭ್ಯರ್ಥಿಗಳನ್ನು ಘೋಷಿಸಿದೆ. ಈ ವಿಚಾರವಾಗಿ ಪ್ರತಿಕ್ರಿಯಿಸಿರುವ ಲಿಂಗಾಯತ ಸಮುದಾಯದ ನಾಯಕರು ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ. ಕಾಂಗ್ರೆಸ್ ಬಿಡುಗಡೆ ಮಾಡಿರುವ ಅಭ್ಯರ್ಥಿಗಳ ಪಟ್ಟಿಯನ್ನು ಗಮನಿಸಿದರೆ, ಕರ್ನಾಟಕದ ಕಾಂಗ್ರೆಸ್ಗೆ ಜಾತಿ ಮತ್ತು ಲಿಂಗಾಯತರ ಮಹತ್ವ ಇನ್ನೂ ಅರ್ಥವಾಗಿಲ್ಲ ಎಂದು ಸಮುದಾಯದ ಮುಖಂಡರು ಹೇಳಿದ್ದಾರೆ.

ರಾಜ್ಯದ ಜನಸಂಖ್ಯೆಯ ಶೇ.17ರಿಂದ 20 ರಷ್ಟಿರುವ ಲಿಂಗಾಯತರು ಹೆಚ್ಚು ಕ್ಷೇತ್ರಗಳನ್ನು ಕೇಳಿದರೂ 37 ಸ್ಥಾನಗಳನ್ನು ಕಾಂಗ್ರೆಸ್ ನೀಡಿದೆ. ಜಾತಿವಾರು ಅಭ್ಯರ್ಥಿಗಳ ವಿಭಜನೆ ಬಗ್ಗೆ ಕಾಂಗ್ರೆಸ್ ತಲೆ ಕೆಡಿಸಿಕೊಳ್ಳದಿರುವುದು ವಿಪರ್ಯಾಸವೆಂದು ಲಿಂಗಾಯತ ಸಮುದಾಯದ ಮುಖಂಡರು ತಿಳಿಸಿದ್ದಾರೆ.
ವೀರಶೈವ ಮಹಾಸಭಾ ಕಾರ್ಯದರ್ಶಿ ರೇಣುಕಾ ಪ್ರಸನ್ನ ಅವರು 'ದಿ ನ್ಯೂ ಇಂಡಿಯನ್ ಎಕ್ಸ್ಪ್ರೆಸ್' ಪತ್ರಿಕೆ ಮಾತನಾಡಿ, ' ಮೂರನೇ ಪಟ್ಟಿಯಲ್ಲಿ ಸಮುದಾಯದವರು ಸುಮಾರು 16 ಸ್ಥಾನಗಳನ್ನು ಕೇಳಿದ್ದಾರೆ. ಇದನ್ನು ಶೀಘ್ರದಲ್ಲೇ ನಿರೀಕ್ಷಿಸಲಾಗಿದೆ. ಮೊದಲ 124 ಕ್ಷೇತ್ರಗಳನ್ನು ಘೋಷಿಸಿದ ನಂತರ, ಸುಮಾರು 100 ಸ್ಥಾನಗಳಲ್ಲಿ ಲಿಂಗಾಯತರು ಸುಮಾರು 16 ಸ್ಥಾನಗಳಿಗಾಗಿ ಮನವಿ ಮಾಡಿದರು. ಈಗ ಇನ್ನೂ ನಾಲ್ಕು ಸ್ಥಾನಗಳನ್ನು ಕಾಂಗ್ರೆಸ್ ನೀಡಿಲ್ಲ. ಮುಂದಿನ ಲಿಸ್ಟ್ನಲ್ಲಿ ಇದು ಬಗೆ ಹರಿಯಲಿದೆ ಎಂಬುದಾಗಿ ನಂಬಿದ್ದೇವೆ' ಎಂದು ಭರವಸೆ ವ್ಯಕ್ತಪಡಿಸಿದ್ದಾರೆ.

55 ಸಾವಿರಕ್ಕೂ ಅಧಿಕ ಲಿಂಗಾಯತರನ್ನು ಹೊಂದಿರುವ ಹೊಸದುರ್ಗ ಹಾಗೂ 60-65 ಸಾವಿರ ಲಿಂಗಾಯತರು ವಾಸಿಸುವ ಕಡೂರು ಮತ್ತು ತರೀಕೆರೆಯಲ್ಲಿ ಲಿಂಗಾಯತೇತರ ಅಭ್ಯರ್ಥಿಗಳನ್ನು ಕಾಂಗ್ರೆಸ್ ಪರಿಗಣಿಸುತ್ತಿದೆ ಎಂದು ಮೂಲಗಳು ತಿಳಿಸಿವೆ. ಹರಿಹರದಲ್ಲಿ ಹೆಚ್ಚಿನ ಲಿಂಗಾಯತ ಜನಸಂಖ್ಯೆ ಇದ್ದರೂ, ಪಕ್ಷವು ಲಿಂಗಾಯತೇತರ ಅಭ್ಯರ್ಥಿಯನ್ನು ಆಯ್ಕೆ ಮಾಡಿರುವುದು ಅಸಮಾಧಾನಕ್ಕೆ ಕಾರಣವಾಗಿದೆ ಎಂದು ಹೇಳಲಾಗುತ್ತಿದೆ.
ಶಿಕಾರಿಪುರ, ಶಿವಮೊಗ್ಗ, ಹೊನ್ನಾಳಿ, ಬ್ಯಾಡಗಿ ಮತ್ತು ರಾಣೇಬೆನ್ನೂರಿನಲ್ಲಿ ಲಿಂಗಾಯತ ಜನಸಂಖ್ಯೆ ಹೆಚ್ಚಿದೆ. ಇದನ್ನು ಗಮನಿಸಿದ ಮೇಲೆಯೂ ಈ ಕ್ಷೇತ್ರಗಳಲ್ಲಿ ಲಿಂಗಾಯತೇತರರ ಮೇಲೆ ಭರವಸೆ ಇಟ್ಟುಕೊಂಡು ಕಾಂಗ್ರೆಸ್ ಕೆಲಸ ಮಾಡುತ್ತಿದೆಯೇ ಎಂದು ಸಮುದಾಯದ ಮುಖಂಡರು ಪ್ರಶ್ನಿಸಿದ್ದಾರೆ.

ತರೀಕೆರೆಯಲ್ಲಿ ಕುರುಬರನ್ನು ಬಿಟ್ಟು ಮಡಿವಾಳ ಸಮುದಾಯಕ್ಕೆ ಟಿಕೆಟ್ ನೀಡಲು ಪಕ್ಷ ಯೋಚಿಸಿ ಹಿಂದುಳಿದ ಸಮುದಾಯಗಳನ್ನು ಗೆಲ್ಲಿಸಬಹುದಿತ್ತು ಎಂಬ ಮಾತುಗಳು ಕೇಳಿಬಂದಿವೆ. ಹಿಂದುಳಿದವರು ಬೆಳಗಾವಿ ಮತ್ತು ವಿಜಯಪುರ ಜಿಲ್ಲೆಗಳಲ್ಲಿ ತಲಾ ಒಂದು ಸ್ಥಾನ ಬಯಸಿದ್ದರು. ಎಂ ಸಿ ಮನಗೂಳಿ ಅವರು ನಿಧನರಾದ ನಂತರ ಅವರ ಸ್ಥಾನಕ್ಕೆ ಬೇರೊಬ್ಬ ಸಮುದಾಯದ ನಾಯಕರನ್ನು ಲಿಂಗಾಯತರು ಬಯಸಿದ್ದರು ಎಂದು ತಿಳಿದುಬಂದಿದೆ.
ಅದೇ ರೀತಿ ಮೈಸೂರಿನ ಕೃಷ್ಣರಾಜ ಕ್ಷೇತ್ರದಲ್ಲಿ ಲಿಂಗಾಯತರು ಹೆಚ್ಚಾಗಿರುವ ಕಾರಣ ಅಲ್ಲಿ ಟಿಕೆಟ್ ಅನ್ನು ಲಿಂಗಾಯತರಿಗೆ ನೀಡಬೇಕು. ಚಿಕ್ಕಪೇಟೆ ಟಿಕೆಟ್ ಗಂಗಾಂಬಿಕೆಗೆ ನೀಡಬೇಕು ಎಂದು ಲಿಂಗಾಯತ ಮುಖಂಡರು ಒತ್ತಾಯಿಸಿದ್ದಾರೆ.
'ಕಾಂಗ್ರೆಸ್ ಅಭ್ಯರ್ಥಿಗಳನ್ನು ಪರಿಗಣಿಸುವಾಗ ಸಾಮಾಜಿಕ ನ್ಯಾಯದ ಜೊತೆಗೆ ಗೆಲುವನ್ನು ಪರಿಗಣಿಸಬೇಕು' ಎಂದು ಲಿಂಗಾಯತ ಮುಖಂಡರು ತಿಳಿಸಿದ್ದಾರೆ.












Click it and Unblock the Notifications