ಕರ್ನಾಟಕ ಚುನಾವಣೆ : ಅಪ್ಪ-ಮಕ್ಕಳ ಕುಟುಂಬ ರಾಜಕೀಯ
ಬೆಂಗಳೂರು, ಏಪ್ರಿಲ್ 27 : ಕರ್ನಾಟಕ ವಿಧಾನಸಭೆ ಚುನಾವಣಾ ಕಣದಲ್ಲಿರುವ ಅಭ್ಯರ್ಥಿಗಳ ಅಧಿಕೃತ ಚಿತ್ರಣ ಸಿಗುತ್ತದೆ. ಸಂಬಂಧಿಕರು, ಸಹೋದರರು, ಅಪ್ಪ-ಮಗ, ಗಂಡ-ಹೆಂಡತಿ ಚುನಾವಣಾ ಕಣದಲ್ಲಿದ್ದಾರೆ. ಬೇರೆ-ಬೇರೆ ಪಕ್ಷಗಳಿಂದ ಅಭ್ಯರ್ಥಿಗಳು ಅಖಾಡದಲ್ಲಿದ್ದಾರೆ.
ಹಲವು ಕ್ಷೇತ್ರಗಳಲ್ಲಿ ಅಪ್ಪ ಮಕ್ಕಳು ಕಣದಲ್ಲಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ಡಾ.ಯತೀಂದ್ರ ಅವರು ಚುನಾವಣೆ ಕಣದಲ್ಲಿದ್ದಾರೆ. ಚುನಾವಣೆಯಲ್ಲಿ ಯಾರು ಗೆಲುವು ಸಾಧಿಸುತ್ತಾರೆ? ಎಂದು ಕಾದು ನೋಡಬೇಕಾಗಿದೆ.
ರಾಜ್ಯದ ಮೂರು ಕ್ಷೇತ್ರದಲ್ಲಿ ಸಹೋದರರು ಎದುರಾಳಿಗಳಾಗಿದ್ದಾರೆ. ಬೇರೆ-ಬೇರೆ ಪಕ್ಷದಿಂದ ಅವರು ಚುನಾವಣೆಗೆ ಸ್ಪರ್ಧಿಸಿದ್ದು, 2018ರ ಚುನಾವಣೆಯ ಕಣ ಕುತೂಹಲಕ್ಕೆ ಕಾರಣವಾಗಿದೆ. ಸಹೋದರರು ಮಾತ್ರವಲ್ಲ ಒಂದೇ ಪಕ್ಷದಿಂದ ಹಲವು ಅಪ್ಪ-ಮಕ್ಕಳು ಸಹ ಕಣದಲ್ಲಿದ್ದಾರೆ.
ಒಬ್ಬರು ಮುಖ್ಯಮಂತ್ರಿ, ಮೂವರು ಮಾಜಿ ಮುಖ್ಯಮಂತ್ರಿಗಳು ಚುನಾವಣಾ ಕಣದಲ್ಲಿದ್ದಾರೆ. ಬಿಜೆಪಿ ಬೆಳಗಾವಿ ಜಿಲ್ಲೆಯಲ್ಲಿ ಪತಿ-ಪತ್ನಿಗೆ ಟಿಕೆಟ್ ನೀಡಿದೆ. ಬಾಳಪಯಣದಲ್ಲಿ ಜೊತೆ ಸಾಗುತ್ತಿರುವ ಅವರು ವಿಧಾನಸಭೆಗೂ ಒಟ್ಟಿಗೆ ಹೆಜ್ಜೆ ಹಾಕುವ ಸಾಧ್ಯತೆ ಇದೆ.

ಸಿದ್ದರಾಮಯ್ಯ, ಯತೀಂದ್ರ
ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಅವರ ಪುತ್ರ ಡಾ.ಯತೀಂದ್ರ ಅವರು 2018ರ ಚುನಾವಣಾ ಕಣದಲ್ಲಿದ್ದಾರೆ. ಪುತ್ರನಿಗೆ ಟಿಕೆಟ್ ಕೊಡಿಸುವಲ್ಲಿ ಸಿದ್ದರಾಮಯ್ಯ ಯಶಸ್ವಿಯಾಗಿದ್ದಾರೆ.
ಸಿದ್ದರಾಮಯ್ಯ ಅವರು ಚಾಮುಂಡೇಶ್ವರಿ, ಬಾದಾಮಿ ಕ್ಷೇತ್ರದಿಂದ ಕಣದಲ್ಲಿದ್ದಾರೆ. ಸಿದ್ದರಾಮಯ್ಯ ಪುತ್ರ ಯತೀಂದ್ರ ಅವರು ವರುಣಾ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸುತ್ತಿದ್ದಾರೆ.

ರಾಮಲಿಂಗಾ ರೆಡ್ಡಿ, ಸೌಮ್ಯಾ ರೆಡ್ಡಿ
ರಾಜ್ಯದ ಗೃಹ ಸಚಿವ ರಾಮಲಿಂಗಾ ರೆಡ್ಡಿ ಅವರು ಪುತ್ರಿಗೆ ಟಿಕೆಟ್ ಕೊಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ತಂದೆ-ಮಗಳು ಇಬ್ಬರೂ ಬೆಂಗಳೂರಿನ ಅಕ್ಕಪಕ್ಕದ ಕ್ಷೇತ್ರದಿಂದ ಚುನಾವಣಾ ಕಣಕ್ಕೆ ಇಳಿಸಿದ್ದಾರೆ.
ರಾಮಲಿಂಗಾ ರೆಡ್ಡಿ ಅವರು ಬೆಂಗಳೂರಿನ ಬಿಟಿಎಂ ಲೇಔಟ್ ಕ್ಷೇತ್ರದಿಂದ, ಸೌಮ್ಯಾ ರೆಡ್ಡಿ ಅವರು ಜಯನಗರ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಗಳು.

ಎ.ಕೃಷ್ಣಪ್ಪ, ಪ್ರಿಯಕೃಷ್ಣ
ಬೆಂಗಳೂರಿನ ಅಕ್ಕ-ಪಕ್ಕದ ಕ್ಷೇತ್ರದಿಂದ ಅಪ್ಪ-ಮಕ್ಕಳು ಚುನಾವಣಾ ಕಣದಲ್ಲಿದ್ದಾರೆ. ವಸತಿ ಸಚಿವ ಎ.ಕೃಷ್ಣಪ್ಪ ಮತ್ತು ಪ್ರಿಯಕೃಷ್ಣ ಅವರು ಚುನಾವಣಾ ಕಣದಲ್ಲಿರುವ ಅಭ್ಯರ್ಥಿಗಳು.
ವಿಜಯನಗರ ಕ್ಷೇತ್ರದಿಂದ ಎ.ಕೃಷ್ಣಪ್ಪ ಅವರು ಕಣದಲ್ಲಿದ್ದಾರೆ. ಕ್ಷೇತ್ರದ ಹಾಲಿ ಶಾಸಕರು ಅವರೇ. ಪಕ್ಕದ ಗೋವಿಂದರಾಜರಾಜ ನಗರ ಕ್ಷೇತ್ರದಲ್ಲಿ ಎ.ಕೃಷ್ಣಪ್ಪ ಅವರ ಪುತ್ರ ಪ್ರಿಯಕೃಷ್ಣ ಕಣದಲ್ಲಿದ್ದಾರೆ.

ಟಿ.ಬಿ.ಜಯಚಂದ್ರ, ಸಂತೋಷ್ ಜಯಚಂದ್ರ
ಕಾನೂನು ಸಚಿವ ಟಿ.ಬಿ.ಜಯಚಂದ್ರ ಅವರು ಪುತ್ರನಿಗೆ ಟಿಕೆಟ್ ಕೊಡಿಸಿದ್ದಾರೆ. ಅಪ್ಪ-ಮಕ್ಕಳು ಇಬ್ಬರೂ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು.
ಟಿ.ಬಿ.ಜಯಚಂದ್ರ ಅವರು ಶಿರಾ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸುತ್ತಾರೆ. ಸಂತೋಷ್ ಜಯಚಂದ್ರ ಅವರು ಚಿಕ್ಕನಾಯಕನಹಳ್ಳಿ ಕ್ಷೇತ್ರದಿಂದ ಕಣದಲ್ಲಿದ್ದಾರೆ.

ಶಾಮನೂರು, ಎಸ್.ಎಸ್.ಮಲ್ಲಿಕಾರ್ಜುನ
ಶಾಮನೂರು ಶಿವಶಂಕರಪ್ಪ ಮತ್ತು ಎಸ್.ಎಸ್.ಮಲ್ಲಿಕಾರ್ಜುನ ಅವರು ದಾವಣಗೆರೆ ಉತ್ತರ ಮತ್ತು ದಕ್ಷಿಣದ ಹಾಲಿ ಶಾಸಕರು. 2018ರ ಚುನಾಣೆಗೂ ಕಣದಲ್ಲಿದ್ದಾರೆ.
ದಾವಣಗೆರೆ ದಕ್ಷಿಣದಿಂದ ಶಾಮನೂರು ಶಿವಶಂಕರಪ್ಪ, ದಾವಣಗೆರೆ ಉತ್ತರ ಕ್ಷೇತ್ರದಿಂದ ಎಸ್.ಎಸ್.ಮಲ್ಲಿಕಾರ್ಜುನ ಅವರು ಅಭ್ಯರ್ಥಿಯಾಗಿದ್ದಾರೆ.

ಗೋವಿಂದ, ಗೋಪಾಲ ಕಾರಜೋಳ
ಬಿಜೆಪಿಯಲ್ಲಿಯೂ ಅಪ್ಪ-ಮಕ್ಕಳು ಚುನಾವಣಾ ಕಣದಲ್ಲಿದ್ದಾರೆ. ಮಾಜಿ ಸಚಿವ ಗೋವಿಂದ ಕಾರಜೋಳ ಮತ್ತು ಡಾ.ಗೋಪಾಲ ಕಾರಜೋಳ ಅವರು ಚುನಾವಣೆಗೆ ಸ್ಪರ್ಧಿಸುತ್ತಿದ್ದಾರೆ.
ಗೋವಿಂದ ಕಾರಜೋಳ ಅವರು ಮುಧೋಳ ಕ್ಷೇತ್ರದಿಂದ, ಡಾ.ಗೋಪಾಲ ಕಾರಜೋಳ ಅವರು ನಾಗಠಾಣ ಕ್ಷೇತ್ರದಿಂದ ಅಭ್ಯರ್ಥಿಗಳು.












Click it and Unblock the Notifications