ಕರ್ನಾಟಕ ಚುನಾವಣೆ : ಈಗ 'ಮಿಷನ್ 150’ ಅಲ್ಲ, ಸರಳ ಬಹುಮತ!
ಬೆಂಗಳೂರು, ಮೇ 10 : 'ಮಿಷನ್ 150' ಬಿಜೆಪಿ ಕರ್ನಾಟಕ ಚುನಾವಣೆ ದಿನಾಂಕ ಘೋಷಣೆಗೂ ಮೊದಲೇ ನಿಗದಿಪಡಿಸಿದ್ದ ಗುರಿ. ಈಗ ಚುನಾವಣೆಗೆ 2 ದಿನ ಬಾಕಿ ಇದೆ. ಪಕ್ಷದ ಕೆಲವು ನಾಯಕರ ಪ್ರಕಾರ ಈಗ ಮಿಷನ್ ಇಂಪಾಸಿಬಲ್...!.
ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ಕರ್ನಾಟಕ ಬಿಜೆಪಿಯ ಚುನಾವಣಾ ಉಸ್ತುವಾರಿ. ಸೆಪ್ಟೆಂಬರ್ 2017ರಲ್ಲಿ ರಾಜ್ಯದಲ್ಲಿ ಪ್ರವಾಸ ಮಾಡಿದ್ದರು. 'ಪಕ್ಷ 150ಕ್ಕಿಂತ ಹೆಚ್ಚು ಸ್ಥಾನಗಳಿಸಲಿದೆ. ಈಗ ನಮ್ಮ ಗುರಿ ಮಿಷನ್ 150 ಪ್ಲಸ್' ಎಂದು ಹೇಳಿದ್ದರು.
ಕರ್ನಾಟಕದಲ್ಲಿ 150 ಸ್ಥಾನಗಳಲ್ಲಿ ಗೆದ್ದು ದಕ್ಷಿಣ ಭಾರತದಲ್ಲಿ ಅಧಿಕಾರ ಹಿಡಿಯುವ ಉದ್ದೇಶವನ್ನು ಬಿಜೆಪಿ ಹೊಂದಿತ್ತು. ಈಗ ಚುನಾವಣಾ ಪ್ರಚಾರ ಅಂತ್ಯಗೊಳ್ಳುತ್ತಾ ಬಂದಿದ್ದು, ಮತದಾನಕ್ಕೆ 2 ದಿನ ಉಳಿದಿದೆ. ಬಿಜೆಪಿಯ ಮಿಷನ್ ಈಗ ಬದಲಾಗಿದೆ.

ಆದರೆ, ದೆಹಲಯಲ್ಲಿರುವ ಬಿಜೆಪಿ ನಾಯಕರೇ ಈಗ 'ಮಿಷನ್ ಇಂಪಾಸಿಬಲ್' ಎಂದು ಹೇಳುತ್ತಿದ್ದಾರೆ. 'ಗುಜರಾತ್ನಲ್ಲಿ ನಾವು ಸ್ಪಷ್ಟ ಬಹುಮತ ಸಾಧಿಸಿದೆವು. ಆದರೆ, ವಿರೋಧಿಗಳು ನಮಗೆ ಸೋಲಾಯಿತು ಎಂದು ಪ್ರಚಾರ ಮಾಡಿದರು. ನಮ್ಮ ಟಾರ್ಗೆಟ್ ಇದ್ದಷ್ಟು ಕ್ಷೇತ್ರ ಗೆಲ್ಲಲಾಗಲಿಲ್ಲ' ಎಂಬುದು ಹೆಸರು ಹೇಳಲು ಇಚ್ಛಿಸಿದ ನಾಯಕರ ಅಭಿಪ್ರಾಯ.
'ಕರ್ನಾಟಕದಲ್ಲಿ ಈ ಫಲಿತಾಂಶ ಮರುಕಳಿಸಬಾರದು. ನಾವು ಕರ್ನಾಟಕವನ್ನು ಸರಳ ಬಹುಮತದಿಂದ ಗೆಲ್ಲುತ್ತೇವೆ' ಎಂದು ಅವರು ಹೇಳಿದ್ದಾರೆ. ಆದರೆ, 'ಮಿಷನ್ 150' ಬಗ್ಗೆ ಅವರು ಪ್ರತಿಕ್ರಿಯೆ ನೀಡಿಲ್ಲ.
182 ಸದಸ್ಯ ಬಲದ ಗುಜರಾತ್ ರಾಜ್ಯದಲ್ಲಿ ಬಿಜೆಪಿ 99 ಸೀಟುಗಳನ್ನು ಡಿಸೆಂಬರ್ನಲ್ಲಿ ನಡೆದ ಚುನಾವಣೆಯಲ್ಲಿ ಗೆದ್ದಿತ್ತು. 150 ಸ್ಥಾನ ಗೆಲ್ಲುವ ಗುರಿಯನ್ನು ಬಿಜೆಪಿ ಹೊಂದಿತ್ತು.
ಕರ್ನಾಟಕದಿಂದ ರಾಜ್ಯಸಭೆಗೆ ಆಯ್ಕೆಯಾಗಿರುವ ನಿರ್ಮಲಾ ಸೀತಾರಾಮನ್ ಅವರು, 'ಪಕ್ಷ ಕರ್ನಾಟಕಕ್ಕೆ ಸಂಬಂಧಿಸಿದಂತೆ ಇಂತಹ ಯಾವುದೇ ಗುರಿಯನ್ನು ಅಧಿಕೃತವಾಗಿ ನೀಡಿರಲಿಲ್ಲ' ಎಂದು ಹೇಳಿದ್ದಾರೆ.
224 ಕ್ಷೇತ್ರಗಳ ಪೈಕಿ 223 ಕ್ಷೇತ್ರಗಳಿಗೆ ಮೇ 12ರಂದು ಚುನಾವಣೆ ನಡೆಯಲಿದೆ. ಇದುವರೆಗೆ ಬಂದಿರುವ ಎಲ್ಲಾ ಚುನಾವಣಾ ಪೂರ್ವ ಸಮೀಕ್ಷೆಗಳು ಅತಂತ್ರ ವಿಧಾನಸಭೆ ಚುನಾವಣೆ ರಚನೆಯಾಗಲಿದೆ ಎಂದು ಹೇಳಿದೆ. ಕಾಂಗ್ರೆಸ್ ದೊಡ್ಡ ಪಕ್ಷವಾಗಿ ಹೊರಹೊಮ್ಮಲಿದೆ ಎಂದು ಹೇಳಿವೆ.
'ಪ್ರಧಾನಿ ನರೇಂದ್ರ ಮೋದಿ ಅವರ 2ನೇ ಹಂತದ ಪ್ರಚಾರ ಮತದಾರರ ಮೇಲೆ ಪ್ರಭಾವ ಬೀರಲಿದೆ. ಇದರಿಂದಾಗಿ ಬಿಜೆಪಿ ಸ್ಪಷ್ಟ ಬಹುಮತ ಪಡೆದು ಅಧಿಕಾರಕ್ಕೆ ಬರಲಿದೆ' ಎನ್ನುತ್ತಾರೆ ದೆಹಲಿಯ ಬಿಜೆಪಿ ನಾಯಕರು.
ಮೇ 1ರಂದು ರಾಜ್ಯದಲ್ಲಿ 2ನೇ ಹಂತದ ಪ್ರಚಾರ ಆರಂಭಿಸಿದ ಪ್ರಧಾನಿ ನರೇಂದ್ರ ಮೋದಿ ಅವರು 21 ಸಮಾವೇಶಗಳನ್ನು ಉದ್ದೇಶಿಸಿ ಮಾತನಾಡಿದ್ದಾರೆ. ಬಹಿರಂಗ ಚುನಾವಣಾ ಪ್ರಚಾರ ಗುರುವಾರ ಸಂಜೆ ಅಂತ್ಯಗೊಳ್ಳಲಿದೆ.












Click it and Unblock the Notifications