ಈ 5 ಕಾಂಗ್ರೆಸ್ ನಾಯಕರಿಗೆ ಚುನಾವಣೆ ಹಗ್ಗದ ಮೇಲಿನ ನಡುಗೆ

ಬೆಂಗಳೂರು, ಮೇ 07: ಈ ಬಾರಿಯ ಕರ್ನಾಟಕ ಚುನಾವಣೆ ರೋಚಕತೆಯದ್ದೇ ಸಂತೆಯಾದರೆ ಅಚ್ಚರಿಯೇನಿಲ್ಲ. ಹಲವು ಸಮೀಕ್ಷೆಗಳು ಕಾಂಗ್ರೆಸ್ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮುತ್ತದೆಂದು ಭವಿಷ್ಯ ನುಡಿದಿವೆ. ಇನ್ನು ಕೆಲವು ಬಿಜೆಪಿಯೇ ಸಿಂಗಲ್ ಲಾರ್ಜೆಸ್ಟ್ ಪಾರ್ಟಿಯಾಗುತ್ತದೆಂದಿವೆ. ಈ ನಡುವೆ ಎಐಸಿಸಿಯ ಆಂತರಿಕ ಸಮೀಕ್ಷೆಯೊಂದು ಕರ್ನಾಟಕದಲ್ಲಿ ಐವರು ಪ್ರಭಾವಿ ಮಂತ್ರಿಗಳು ಸೋಲಬಹುದು ಎಂದಿರುವುದು ಕಾಂಗ್ರೆಸ್ಸಿಗರ ನಿದ್ದೆ ಕಸಿದಿದೆ.

ಅಷ್ಟಕ್ಕೂ ಈ ಐದು ಜನ ಮಂತ್ರಿಗಳು ಯಾರು? 2013 ರಲ್ಲಿ ಬಿಜೆಪಿ ವಿರುದ್ಧ ಆಡಳಿತ ವಿರೋಧಿ ಅಲೆಯಿತ್ತು. ಬಿಜೆಪಿ ಇಬ್ಭಾಗವಾಗಿ ಕೆಜೆಪಿ ಅಸ್ತಿತ್ವ ಪಡೆದಿತ್ತು. ಆದರೆ ಈ ಬಾರಿ ಹಾಗಿಲ್ಲ. ಬಿಜೆಪಿಯಲ್ಲಿದ್ದ ಒಳಜಗಳಕ್ಕೂ ಅಮಿತ್ ಶಾ ನೇತೃತ್ವದ ಹೈಕಮಾಂಡ್ ತಾತ್ಕಾಲಿಕ(!) ಮುಲಾಮು ಹಚ್ಚಿದೆ. ಆದ್ದರಿಂದ ಕಾಂಗ್ರೆಸ್ ಗೆಲುವು ಸುಲಭವೇನಲ್ಲ.

'ಮತ್ತೊಮ್ಮೆ ಕಾಂಗ್ರೆಸ್' ಎಂದು ಹೊರಗೆ ಎಷ್ಟೇ ಕೂಗಿ ಹೇಳಿದರೂ ಕಾಂಗ್ರೆಸ್ಸಿಗರಿಗೂ ಗೊತ್ತು ಗೆಲುವು ಸುಲಭವಲ್ಲ ಅಂತ. ಇದೀಗ ಎಐಸಿಸಿ ಸರ್ವೆ ಬಿಡುಗಡೆ ಮಾಡಿದ ಈ ಐವರು ಸಚಿವರ ಪಟ್ಟಿ ಕಾಂಗ್ರೆಸ್ಸನ್ನು ಆತಂಕಕ್ಕೆ ದೂಡಿದೆ.

ಪ್ರಿಯಾಂಕ್ ಖರ್ಗೆ

ಪ್ರಿಯಾಂಕ್ ಖರ್ಗೆ

ಮಾಹಿತಿ-ತಂತ್ರಜ್ಞಾನ ಮತ್ತು ಪ್ರವಾಸೋದ್ಯಮ ಸಚಿವ ಪ್ರಿಯಾಂಕ್ ಖರ್ಗೆ ಅವರು ಸಹ ಸೋಲುವ ಸಾಧ್ಯತೆ ಇದೆ ಎಂದು ಈ ಸಮೀಕ್ಷೆ ಹೇಳಿದೆ. ಕಲಬುರಗಿ(ಗುಲಬರ್ಗಾ)ಯ ಚಿತ್ತಾಪುರ ಕ್ಷೇತ್ರದ ಪ್ರಿಯಾಂಕ್ ಖರ್ಗೆ ಅವರಿಗೆ ಗೆಲುವು ಸುಲಭವಿಲ್ಲ ಎಂದು ಈ ಸರ್ವೆ ಹೇಳಿದೆ. ಖರ್ಗೆ ಅವರ ಕ್ಷೇತ್ರದಲ್ಲಿ ಅವರ ಪರವಾಗಿ ಅಲೆಯಿದ್ದಂತಿಲ್ಲ್. ಆದ್ದರಿಂದ ಅವರೂ ಸೋತರೆ ಅಚ್ಚರಿಯಿಲ್ಲ ಎಂದು ಮೂಲಗಳು ತಿಳಿಸಿವೆ. ಅದೂ ಅಲ್ಲದೆ ಖರ್ಗೆ ಅವರಿಗೆ ಮಂತ್ರಿ ಸ್ಥಾನ ನೀಡಿರುವುದು ಕಾಂಗ್ರೆಸ್ ನಲ್ಲೇ ಹಲವರಿಗೆ ಇಷ್ಟವಿಲ್ಲ. ಆಂತರಿಕ ಕಲಹವೇ ಖರ್ಗೆ ಅವರ ಸೋಲಿಗೆ ಕಾರಣವಾದೀತು ಎಂಬುದು ಲೆಕ್ಕಾಚಾರ.

ಎಂ ಬಿ ಪಾಟೀಲ್

ಎಂ ಬಿ ಪಾಟೀಲ್

ಜಲಸಂಪನ್ಮೂಲ ಸಚಿವ ಎಂ ಬಿ ಪಾಟೀಲ್ ಸಹ ಸೋಲುಣ್ಣುತ್ತಾರಾ? ಆಂತರಿಕ ಸರ್ವೆಯ ಪ್ರಕಾರ ಅವರ ಗೆಲುವು ಸುಲಭವಿಲ್ಲ. ಲಿಂಗಾಯತ-ವೀರಶೈವವನ್ನು ಪ್ರತ್ಯೇಕ ಧರ್ಮವೆಂದು ಸರ್ಕಾರ ಘೋಷಿಸುವಲ್ಲಿ ಎಂ ಬಿ ಪಾಟೀಲ್ ಪಾತ್ರವೇನು ಎಂಬುದು ರಾಜ್ಯಕ್ಕೆ ಗೊತ್ತು. ಲಿಂಗಾಯತರ ಮತಕ್ಕಾಗಿ ಸರ್ಕಾರ ಕೈಗೊಂಡ ಈ ಕ್ರಮ ಅವರಿಗೆ ಋಣಾತ್ಮಕವಾಗಿ ಪರಿಣಮಿಸಬಹುದೇ? ಇಲ್ಲ ಎಂದಾದರೆ ಎಂ ಬಿ ಪಾಟೀಲ್ ಸೋಲುವುದಕ್ಕೆ ಸಾಧ್ಯವೇ ಇಲ್ಲ. ವಿಜಯಪುರದ ಬಬಲೇಶ್ವರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿರುವ ಪಾಟೀಲ್ ತಮ್ಮ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿದ್ದಾರೆ. ಈ ಭಾಗದ ಪ್ರಮುಖ ಸಮಸ್ಯೆಯಾಗಿದ್ದ ನೀರಿನ ಸಮಸ್ಯೆಗೆ ಸ್ವತಃ ಜಲಸಂಪನ್ಮೂಲ ಸಚಿವರಾಗಿರುವ ಅವರು ಸಾಕಷ್ಟು ಪರಿಹಾರ ಒದಗಿಸಿದ್ದಾರೆ. ಆದ್ದರಿಂದ ಅವರ ಸೋಲುವ ಸಂಭವ ಕಡಿಮೆ.

ಎ ಮಂಜು

ಎ ಮಂಜು

ಪಶುಸಂಗೋಪನೆ ಸಚಿವ ಎ. ಮಂಜು ಅವರು ಸಹ ಸೋಲುವ ಭೀತಿಯಲ್ಲಿದ್ದಾರೆ. ಹಾಸನ ಜಿಲ್ಲೆಯ ಅರಕಲಗೂಡು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿರುವ ಅವರು ಜೆಡಿಎಸ್ ನ ಎ ಟಿ ರಾಮಸ್ವಾಮಿ ಅವರನ್ನು ಎದುರಿಸಲಿದ್ದಾರೆ. ರಾಮಸ್ವಾಮಿಯವರು ಕಠಿಣ ಪ್ರತಿಸ್ಪರ್ಧಿಯಾಗಿರುವುದರಿಂದ ಎ ಮಂಜು ಅವರು ಸೋಲಬಹುದು ಎಂಬುದು ಈ ಸಮೀಕ್ಷೆಯ ಅಂದಾಜು.

ರೋಶನ್ ಬೇಗ್

ರೋಶನ್ ಬೇಗ್

ನಗರಾಭಿವೃದ್ಧಿ ಸಚಿವ ರೋಶನ್ ಬೇಗ್ ಅವರು ಸಹ ಸೋಲಬಹುದು ಎಂದು ಈ ಸಮೀಕ್ಷೆ ಹೇಳಿದೆ. ಬೆಂಗಳೂರಿನ ಶಿವಾಜಿನಗರದ ಕಾಂಗ್ರೆಸ್ ಅಭ್ಯರ್ಥಿಯಾಗಿರುವ ರೋಶನ್ ಬೇಗ್ ಗೆ ಮುಸ್ಲಿಂ ಮತಗಳೇ ಶ್ರೀರಕ್ಷೆ. ಅವರ ಕ್ಷೇತ್ರದಲ್ಲಿ ಮುಸ್ಲಿಂ ಮತಗಳೇ ಹೆಚ್ಚಿರುವ ಕಾರಣ ಅವರು ಗೆಲ್ಲುವ ಸಾಧ್ಯತೆಗಳೇ ಹೆಚ್ಚು. ಆದರೆ ಬಿಜೆಪಿ ಅಭ್ಯರ್ಥಿ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಸಹ ಪ್ರಬಲ ಪ್ರತಿಸ್ಪರ್ಧಿ. ಮತದಾರರ ಅನುಕಂಪ ಗಳಿಸುವಲ್ಲಿ ಸದಾ ಮುಂದಿರುವ ಕಟ್ಟಾ ಅವರನ್ನು ಸುಲಭವಾಗಿ ಪರಿಗಣಿಸುವಂತಿಲ್ಲ.

ವಿನಯ ಕುಲಕರ್ಣಿ

ವಿನಯ ಕುಲಕರ್ಣಿ

ಗಣಿಗಾರಿಕೆ ಸಚಿವ ವಿನಯ ಕುಲಕರ್ಣಿ ಅವರಿಗೆ ಸಹ ಈ ಬಾರಿ ಲಿಂಗಾಯತ ಪ್ರತ್ಯೇಕ ಧರ್ಮದ ವಿಷಯವೇ ದುಬಾರಿಯಾಗಬಹುದು ಎಂದು ಅಂದಾಜಿಸಲಾಗಿದೆ. ಧಾರವಾಡದ ಕಾಂಗ್ರೆಸ್ ಅಭ್ಯರ್ಥಿಯಾಗಿರುವ ಕುಲಕರ್ಣಿ ಅವರಿಗೆ ಬಿಜೆಪಿಯ ಅಮೃತ್ ದೇಸಾಯಿ ಪ್ರಬಲ ಪ್ರತಿಸ್ಪರ್ಧಿಯೂ ಹೌದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+