ಕಾಂಗ್ರೆಸ್ ನ 30 ಶಾಸಕರು ಸೋಲಲಿದ್ದಾರೆ ಎನ್ನುತ್ತಿದೆ ಆಂತರಿಕ ಸಮೀಕ್ಷೆ!
ಬೆಂಗಳೂರು, ಮಾರ್ಚ್ 23: ಆಡಳಿತರೂಢ ಕಾಂಗ್ರೆಸ್ ನ30 ಶಾಸಕರು ಮುಂದಿನ ವಿಧಾನಸಭೆ ಚುನಾವಣೆಗೆ ಟಿಕೆಟ್ ಕಳೆದುಕೊಳ್ಳುವ ಸಾಧ್ಯತೆ ಇದೆ. ಪಕ್ಷ ನಡೆಸಿದ ಎರಡು ಆಂತರಿಕ ಸಮೀಕ್ಷೆಗಳಲ್ಲಿ ಈ ಶಾಸಕರು ಸೋಲುವ ಸಾಧ್ಯತೆ ಹೆಚ್ಚಾಗಿ ಕಾಣಿಸಿದ ಹಿನ್ನೆಲೆಯಲ್ಲಿ ಇವರು ಟಿಕೆಟ್ ಕಳೆದುಕೊಳ್ಳಲಿದ್ದಾರೆ ಎನ್ನಲಾಗಿದೆ.
ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಯಾವ ಪಕ್ಷಕ್ಕೆಷ್ಟು ಸೀಟು? ನೀವೇ ಊಹಿಸಿ
ಇದೀಗ ಸಮೀಕ್ಷೆಯ ವರದಿಯನ್ನು ಹೈಕಮಾಂಡ್ ಪರಿಶೀಲನೆ ನಡೆಸುತ್ತಿದೆ. ಟಿಕೆಟ್ ನೀಡಬೇಕಾ ಬೇಡ್ವಾ ಎಂಬ ಅಂತಿಮ ತೀರ್ಮಾನವನ್ನು ಹೈಕಮಾಂಡ್ ತೆಗೆದುಕೊಳ್ಳಲಿದೆ. ಈ 30 ಶಾಸಕರಿಗೆ ಟಿಕೆಟ್ ಕೈತಪ್ಪುವ ಸಾಧ್ಯತೆ ಇದ್ದು, ಈ ಕ್ಷೇತ್ರಗಳಲ್ಲಿ ಹೊಸ ಮುಖಗಳಿಗೆ ಕಾಂಗ್ರೆಸ್ ಮಣೆ ಹಾಕುವ ಲೆಕ್ಕಾಚಾರದಲ್ಲಿದೆ.
ಈ 30 ಶಾಸಕರ ಕ್ಷೇತ್ರಗಳಲ್ಲಿ ಯಾರಿಗೆ ಟಿಕೆಟ್ ನೀಡಬೇಕು ಎಂಬ ಬಗ್ಗೆ ಕಾಂಗ್ರೆಸ್ ಹೈಕಮಾಂಡ್ ಮತ್ತು ರಾಜ್ಯ ನಾಯಕರ ನಡುವೆ ಚರ್ಚೆ ನಡೆಯುತ್ತಿದೆ. ರಾಹುಲ್ ಗಾಂಧಿ ಹೊಸ ಮುಖಗಳಿಗೆ ಅವಕಾಶ ನೀಡಲು ಉತ್ಸುಕರಾಗಿದ್ದರೆ, ಸಿದ್ದರಾಮಯ್ಯ ಗೆಲ್ಲುವ ಅಭ್ಯರ್ಥಿಗಳಿಗೆ ಟಿಕೆಟ್ ನೀಡಬೇಕು ಎಂದಿದ್ದಾರೆ.

ಹೈಕಮಾಂಡ್ ಹೇಳುವ ಹೊಸ ಮುಖಗಳು ಚುನಾವಣೆಯಲ್ಲಿ ಗೆಲ್ಲಲೂಬಹುದು; ಗೆಲ್ಲದೆ ಇರಬಹುದು. ಹೀಗಾಗಿ ಅಪಾಯವನ್ನು ಮೈಮೇಲೆ ಎಳೆದುಕೊಳ್ಳುವುದು ಬೇಡ ಎಂಬುದು ಸಿದ್ದರಾಮಯ್ಯನವರ ವಾದವಾಗಿದೆ.
ಅಭ್ಯರ್ಥಿಗಳ ಆಯ್ಕೆ ಸಂಬಂಧ ಅಂತಿಮ ತೀರ್ಮಾನ ತೆಗೆದುಕೊಳ್ಳಲು ಇದೇ ಮಾರ್ಚ್ 28 ಮತ್ತು 29ರಂದು ಕಾಂಗ್ರೆಸ್ ಸಭೆ ಕರೆದಿದೆ. ಇಲ್ಲಿಯವರೆಗೆ 2013ರಲ್ಲಿ ಕಾಂಗ್ರೆಸ್ ಕಳೆದುಕೊಂಡ ಕ್ಷೇತ್ರಗಳ ಬಗ್ಗೆ ಮಾತ್ರ ಕಾಂಗ್ರೆಸ್ ನ ಸ್ಕ್ರೀನಿಂಗ್ ಸಮಿತಿ ಅಧ್ಯಕ್ಷ ಮಧುಸೂದನ್ ಮಿಸ್ತ್ರಿ ವಿಶ್ಲೇಷಣೆ ನಡೆಸಿದ್ದಾರೆ. ಗೆದ್ದ ಕ್ಷೇತ್ರಗಳ ವಿಶ್ಲೇಷಣೆ ಈಗ ನಡೆಯಲಿದ್ದು ಅಭ್ಯರ್ಥಿಗಳ ಅಂತಿಮ ಆಯ್ಕೆ ನಡೆಯಲಿದೆ.












Click it and Unblock the Notifications