Modi visit to Ramanagara: ಒಕ್ಕಲಿಗರ ಕೋಟೆಯಲ್ಲಿ ಮೋದಿ ರ್ಯಾಲಿ: ದಳಪತಿಗಳಿಗೆ ಠಕ್ಕರ್ ಕೊಡಲು ಬಿಜೆಪಿ ಸಜ್ಜು
ರಾಮನಗರ, ಏಪ್ರಿಲ್22: ವಿಧಾನಸಭೆಯ ಚುನಾವಣೆ ಅಖಾಡ ಜಿದ್ದಾಜಿದ್ದಿನಿಂದ ಕೂಡಿದ್ದು, ಮೂರೂ ಪ್ರಮುಖ ಪಕ್ಷಗಳು ಗೆಲುವಿಗಾಗಿ ಭಾರೀ ಕಸರತ್ತು ನಡೆಸುತ್ತಿವೆ. ಆಯಾ ಪಕ್ಷದ ನಾಯಕರು ಮತ್ತು ಕಾರ್ಯಕರ್ತರು ಮತದಾರರ ಓಲೈಕೆಗೆ ಹಲವು ತಂತ್ರಗಳನ್ನ ರಾಜ್ಯ ಬಿಜೆಪಿ ನಡೆಸಿದೆ.
ಈ ಬಾರಿ ಸ್ವಂತ ಬಲದ ಮೇಲೆ ಅಧಿಕಾರಕ್ಕೆ ಬರಲು ಪಣ ತೊಟ್ಟಿರುವ ರಾಜ್ಯ ಬಿಜೆಪಿ ಈಗಾಗಲೇ ಲಿಂಗಾಯತ ಮತಗಳ ಓಲೈಕೆಗೆ ಮುಂದಾಗಿದ್ದು, ಇದೀಗ ದಳಪತಿಗಳಿಗೆ ಠಕ್ಕರ್ ಕೊಡಲು ಒಕ್ಕಲಿಗರ ಕೋಟೆಗೆ ಲಗ್ಗೆ ಇಡಲು ಸಿದ್ದತೆಯನ್ನ ನಡೆಸಿದೆ.

ಹೌದು, ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮತ್ತು ಮಾಜಿ ಸಚಿವ ಸಿ.ಪಿ.ಯೋಗೇಶ್ವರ್ ನಡುವಿನ ಸ್ಪರ್ಧೆಯಿಂದಾಗಿ ಜಿದ್ದಾಜಿದ್ದಿನ ಅಖಾಡ ಎನಿಸಿರುವ ರಾಮನಗರ ಜಿಲ್ಲೆಯ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರಕ್ಕೆ ಪ್ರಧಾನಿ ನರೇಂದ್ರ ಮೋದಿ ಎಂಟ್ರಿಗೆ ಮಹೂರ್ತ ಫಿಕ್ಸ್ ಆಗಿದ್ದು, ಏಪ್ರಿಲ್ 30ರಂದು ಚನ್ನಪಟ್ಟಣ ಕ್ಷೇತ್ರದಲ್ಲಿ ಮೋದಿ ಚುನಾವಣಾ ರ್ಯಾಲಿ ನಡೆಸುವ ಮೂಲಕ ದಳಪತಿಗಳ ತಂತ್ರಕ್ಕೆ ಪ್ರತಿತಂತ್ರ ರೂಪಿಸಿದ್ದಾರೆ.
ಈಗಾಗಲೇ ಮೇ 10 ರಂದು ಚುನಾವಣಾ ದಿನಾಂಕ ಘೋಷಣೆಯಾಗಿದ್ದು, ರಾಜ್ಯದಲ್ಲಿ ಬಿಜೆಪಿಯನ್ನ ಮತ್ತೆ ಅಧಿಕಾರಕ್ಕೆ ತರಲು ಸಾಲು ಸಾಲು ಬಿಜೆಪಿ ಹೈಕಮಾಂಡ್ ನಾಯಕರು ರಾಜ್ಯಕ್ಕೆ ಆಗಮಿಸುತ್ತಿದ್ದು, ಅಮಿತ್ ಶಾ ಹಾಗೂ ಜೆ ಪಿ ನಡ್ಡಾ ಹಾಗೂ ಬಿ.ಎಲ್ ಸಂತೋಷ್ ಸೇರಿದಂತೆ ರಾಜ್ಯದಲ್ಲಿ ಚುನಾವಣಾ ಪ್ರಚಾರವನ್ನ ನಡೆಸುತ್ತಿದ್ದು, ಇದೀಗ ಏಪ್ರಿಲ್ 30 ರಂದು ಪ್ರಧಾನಿ ಮೋದಿ ರ್ಯಾಲಿ ನಿಗದಿಯಾಗಿದೆ.

ಏಪ್ರಿಲ್ 30 ರಂದು ಮಧ್ಯಾಹ್ನ 2 ಗಂಟೆಯ ಸುಮಾರಿಗೆ ರ್ಯಾಲಿ ನಡೆಯಲಿದೆ ಎಂದು ಪಕ್ಷದ ಉನ್ನತ ಮೂಲಗಳು ಮಾಹಿತಿ ನೀಡಿವೆ. ಪ್ರಧಾನಿ ಮೋದಿ ಅವರು ರ್ಯಾಲಿ ನಡೆಯುವ ಸ್ಥಳಕ್ಕೆ ಹೆಲಿಕಾಪ್ಟರ್ ಮೂಲಕ ಆಗಮಿಸಲಿದ್ದು, ರ್ಯಾಲಿ ಸಮೀಪವೇ ಹೆಲಿಪ್ಯಾಡ್ ನಿರ್ಮಾಣ ಮಾಡಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಇಲ್ಲಿನ ರ್ಯಾಲಿ ಮುಗಿದ ಬಳಿಕ ಮೈಸೂರಿನಲ್ಲಿ ರ್ಯಾಲಿ ನಡೆಸಲಿದ್ದಾರೆ ಎನ್ನಲಾಗಿದೆ.
ಪ್ರಧಾನಿ ನರೇಂದ್ರ ಮೋದಿ ಅವರ ಚುನಾವಣಾ ರ್ಯಾಲಿ ಚನ್ನಪಟ್ಟಣ ತಾಲೂಕಿನ ಮತ್ತೀಕೆರೆ ಗ್ರಾಮದ ಹೊರವಲಯದಲ್ಲಿರುವ ಖಾಸಗಿ ಜಮೀನಿನಲ್ಲಿ ನಡೆಯಲಿದೆ. 20 ಎಕರೆ ಪ್ರದೇಶದಲ್ಲಿ ಬೃಹತ್ ವೇದಿಕೆ ನಿರ್ಮಾಣಕ್ಕೆ ಸಿದ್ಧತೆ ಮಾಡಿಕೊಳ್ಳಲಾಗಿದೆ. ವೇದಿಕೆ ನಿರ್ಮಾಣಕ್ಕೆ ಭೂಮಿಯನ್ನು ಮಟ್ಟ ಮಾಡುವುದು ಸೇರಿದಂತೆ ಅಗತ್ಯ ಕಾಮಗಾರಿ ಆರಂಭಿಸಲಾಗಿದೆ.
ಈಗಾಗಲೇ ಮಂಡ್ಯ ಜಿಲ್ಲೆಯಲ್ಲಿ ಹೆಚ್ಚಿನ ಸ್ಥಾನಗಳ ಮೇಲೆ ಕಣ್ಣೀಟ್ಟಿರುವ ರಾಮನಗರ ಮತ್ತು ಮಂಡ್ಯ ಜಿಲ್ಲೆಯನ್ನು ಸೇರಿ ಯಾಲಿ ನಡೆಸಲು ಉದ್ದೇಶಸಲಾಗಿದೆ ಎನ್ನಲಾಗಿದೆ. ಮೋದಿ ಅವರ ರ್ಯಾಲಿಗೆ ಜಿಲ್ಲೆಯ ನಾಲ್ಕು ವಿಧಾನಸಭಾ ಕ್ಷೇತ್ರಗಳ ಜತೆಗೆ, ಮಂಡ್ಯದ ಕೆಲ ವಿಧಾನಸಭಾ ಕ್ಷೇತ್ರಗಳು ಸೇರಿದಂತೆ ರ್ಯಾಲಿಯನ್ನು ಸಂಘಟಿಸಲಾಗಿದೆ ಎಂದು ಬಿಜೆಪಿ ಮೂಲಗಳು ಮಾಹಿತಿ ನೀಡಿವೆ.
ರಾಮನಗರ ಜಿಲ್ಲೆಯಲ್ಲಿ ಅಂದ್ರೆ ಅದು ಒಕ್ಕಲಿಗರ ಭದ್ರಕೋಟೆ. ಈ ರಾಮನಗರ ಜಿಲ್ಲೆಯಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಪ್ರಾಬಲ್ಯ ಹೆಚ್ಚಾಗಿದ್ದು, ಈ ಬಾರಿ ಚುನಾವಣೆಯಲ್ಲಿ ಒಕ್ಕಲಿಗ ಮತಗಳ ಓಲೈಕೆಗೆ ಬಿಜೆಪಿ ಪ್ಲಾನ್ ನಡೆಸಿದ್ದು, ಮೋದಿ ಚುನಾವಣೆ ರ್ಯಾಲಿ ಮೂಲಕ ಕಾಂಗ್ರೆಸ್ ಹಾಗೂ ಜೆಡಿಎಸ್ ನಾಯಕರಿಗೆ ಠಕ್ಕರ್ ಕೊಡಲು ಮಾಸ್ಟರ್ ಪ್ಲಾನ್ ನಡೆಸಿದ್ದಾರೆ. ಈ ಬಾರಿ ಹೆಚ್ ಡಿ ಕುಮಾರಸ್ವಾಮಿ ಅವರನ್ನ ಸೋಲಿಸಲು ಪಣತೊಟ್ಟಿರುವ ರಾಜ್ಯ ಬಿಜೆಪಿ ಮೋದಿ ರ್ಯಾಲಿ ಮೂಲಕ ಮತ ಸೆಳೆಯಲು ಮುಂದಾಗಿದೆ.
ಇನ್ನೂ ಪ್ರಧಾನಿ ಮೋದಿ ಅವರ ರ್ಯಾಲಿಗೆ ರಾಮನಗರ ಹಾಗೂ ಮಂಡ್ಯ ಜಿಲ್ಲೆಗಳಿಂದ 2 ಲಕ್ಷಕ್ಕೂ ಹೆಚ್ಚು ಜನರನ್ನು ಸೇರಿಸುವ ಮೂಲಕ ಬಿಜೆಪಿ ಶಕ್ತಿ ಪ್ರದರ್ಶನಕ್ಕೆ ಮುಂದಾಗಿದ್ದಾರೆ. ಹೀಗಾಗಿ ಹೆಚ್ಚಿನ ಜನರನ್ನ ಸೇರಿಸಲು ಬಿಜೆಪಿ ತಂಡ ಸಿದ್ಧತೆ ಮಾಡಿಕೊಂಡಿದೆ. ಚನ್ನಪಟ್ಟಣ ಕ್ಷೇತ್ರದಿಂದ ಅತಿಹೆಚ್ಚು ಜನ ಸೇರಲಿದ್ದು, ಮೋದಿ ಅವರ ರ್ಯಾಲಿಯ ಮೂಲಕ ಹಳೇ ಮೈಸೂರು ಭಾಗದಲ್ಲಿ ಬಿಜೆಪಿ ಶಕ್ತಿ ಪ್ರದರ್ಶನಕ್ಕೆ ಮುಂದಾಗಿದೆ ಎನ್ನಲಾಗಿದೆ.
ಶತಾಯುಗತಾಯ ಈ ಬಾರಿ ಗೆಲ್ಲಲ್ಲೇ ಬೇಕು ಎಂದು ಸಿ ಪಿ ಯೋಗೇಶ್ವರ್ ಕ್ಷೇತ್ರದಲ್ಲಿ ಭರ್ಜರಿ ಪ್ರಚಾರವನ್ನ ನಡೆಸುತ್ತಿದ್ದು, ಜಿಲ್ಲೆಯಲ್ಲಿ ಪಕ್ಷ ಸಂಘಟನೆ ಮಾಡುತ್ತಿದ್ದಾರೆ. ಚನ್ನಪಟ್ಟಣ ಕ್ಷೇತ್ರಕ್ಕೆ ಪ್ರಧಾನಿ ಮೋದಿ ಅವರನ್ನು ಕರೆಸಿ ರ್ಯಾಲಿ ನಡೆಸುವ ಮೂಲಕ ಒಕ್ಕಲಿಗರ ಕೋಟೆಯಲ್ಲಿ ಕಮಲ ಅರಳಿಸಲು ಬಿಜೆಪಿ ಮುಂದಾಗಿದೆ ಎನ್ನಲಾಗಿದೆ.












Click it and Unblock the Notifications