'ಬಿಟ್ಟಿ ಕೊಡುಗೆ' ಎನ್ನುವವರು ಪ್ರಣಾಳಿಕೆಯುದ್ದಕ್ಕೂ 'ಉಚಿತ' ಭರವಸೆ ನೀಡಿದ್ದಾರೆ: ಬಿಜೆಪಿ ವಿರುದ್ಧ ಜೆಡಿಎಸ್ ಟ್ವೀಟ್
ಬೆಂಗಳೂರು, ಮೇ 01: ಕರ್ನಾಟಕ ವಿಧಾನಸಭಾ ಚುನಾವಣೆಗೆ ಭಾರತೀಯ ಜನತಾ ಪಕ್ಷ (ಬಿಜೆಪಿ) ಸೋಮವಾರ ತನ್ನ ಚುನಾವಣಾ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದೆ. ಬಿಪಿಎಲ್ (ಬಡತನ ರೇಖೆಗಿಂತ ಕೆಳಗಿರುವ) ಕಾರ್ಡುದಾರರಿಗೆ ಪ್ರತಿದಿನ ಮೂರು ಉಚಿತ ಗ್ಯಾಸ್ ಸಿಲಿಂಡರ್ ಮತ್ತು 500 ಮಿಲಿ ಹಾಲು ನೀಡುವುದಾಗಿ ಕೇಸರಿ ಪಕ್ಷ ಭರವಸೆ ನೀಡಿದೆ. ಇದರೊಂದಿಗೆ ಅಟಲ್ ಆಹಾರ ಕೇಂದ್ರವು ಪ್ರತಿ ವಾರ್ಡ್ಗೆ ಕೈಗೆಟುಕುವ ದರದಲ್ಲಿ ಆಹಾರವನ್ನು ನೀಡಲಿದೆ ಎಂದು ಬಿಜೆಪಿ ತನ್ನ ಪ್ರಣಾಳಿಕೆಯಲ್ಲಿ ಭರವಸೆ ನೀಡಿದೆ.
ಬಿಜೆಪಿ ಚುನಾವಣಾ ಪ್ರಣಾಳಿಕೆಯಲ್ಲಿ ಪ್ರತಿ ತಿಂಗಳು ಬಿಪಿಎಲ್ ಅಡಿಯಲ್ಲಿ ಪ್ರತಿ ವ್ಯಕ್ತಿಗೆ 5 ಕೆಜಿ ಉಚಿತ ಅಕ್ಕಿ ಮತ್ತು 5 ಕೆಜಿ ಉಚಿತ ರಾಗಿ ಘೋಷಿಸಿದೆ. ಯುಗಾದಿ, ಗಣೇಶ ಚತುರ್ಥಿ ಹಾಗೂ ದೀಪಾವಳಿ ಹಬ್ಬದ ಸಂದರ್ಭದಲ್ಲಿ ಉಚಿತ ವಿದ್ಯುತ್ ನೀಡುತ್ತೇವೆ ಎಂದು ಬಿಜೆಪಿ ಘೋಷಿಸಿದೆ.

ಉಚಿತ ಭರವಸೆಗಳ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಜೆಡಿಎಸ್ಬಿಜೆಪಿಯ ದ್ವಂದ್ವ ನಿಲುವುಗಳ ಬಗ್ಗೆ ವಾಗ್ದಾಳಿ ನಡೆಸಿದೆ.
'ಎಚ್ಡಿ ಕುಮಾರಸ್ವಾಮಿ ಸರ್ಕಾರ ಸಾಲಮನ್ನಾ ಮಾಡಿದ್ದನ್ನು ಡ್ರಾಮಾ ಎಂದ ಪ್ರಧಾನಿ ನರೇಂದ್ರ ಮೋದಿ ಮುಂದೆ ಬಿಜೆಪಿ ದೊಡ್ಡ ಡ್ರಾಮಾವೊಂದರ ಸ್ಕ್ರಿಪ್ಟ್ ಬರೆದಿಟ್ಟಿದೆ. ಬಡ ಕುಟುಂಬಗಳಿಗೆ ನೆರವಾಗುವ ಯೋಜನೆಗಳನ್ನು ತಂದಾಗ 'ಬಿಟ್ಟಿ ಕೊಡುಗೆ' ಎನ್ನುತ್ತಿದ್ದವರು ಪ್ರಣಾಳಿಕೆಯುದ್ದಕ್ಕೂ 'ಉಚಿತ' ಭರವಸೆ ನೀಡಿದ್ದಾರೆ' ಎಂದು ಜೆಡಿಎಸ್ ವಾಗ್ದಾಳಿ ನಡೆಸಿದೆ.
'ಜನಪರ ಯೋಜನೆಗಳನ್ನು ತಂದಾಗ ಜನರನ್ನು ಸೋಮಾರಿ ಮಾಡಲು ಹೊರಟಿದ್ದೀರಿ ಎನ್ನುತ್ತಿದ್ದ ಬಿಜೆಪಿ ಉಚಿತ ಘೋಷಣೆಗಳ ಮಹಾಪೂರವೆ ಹರಿಸಿದೆ. ಕಾಮೆಡಿ ಕಿಂಗ್ ನಳೀನ್ ಕುಮಾರ್ ಕಟೀಲ್ ಅವರೇ, ಹಾಗಾದರೆ ಇದನ್ನು ನಾವು ಬಿಜೆಪಿಯ ಬಿಟ್ಟಿ ಭರವಸೆ ಎನ್ನಬಹುದೆ? ಆದರೆ ನಾವು ಹಾಗೆ ಅನ್ನುವುದಿಲ್ಲ, ಬಡತನವನ್ನು ಹಂಗಿಸುವುದು ನಮ್ಮ ಜಾಯಮಾನವಲ್ಲ' ಎಂದು ಜೆಡಿಎಸ್ ಟೀಕಿಸಿದೆ.
'ಕಳೆದ ಮೂರು ವರ್ಷಗಳಿಂದ ಬಿಜೆಪಿಯದ್ದೇ ಸರ್ಕಾರ ಇತ್ತಲ್ಲವೆ? ನಳೀನ್ ಕುಮಾರ್ ಕಟೀಲ್ ಆವಾಗ ಏಕೆ ಇವುಗಳನ್ನು ಜಾರಿಗೆ ತರಲಿಲ್ಲ? ಅಧಿಕಾರ ಇರುವಾಗಲೆ ಜನಪರ ಯೋಜನೆ ನೀಡದವರು, ಮತ್ತೊಮ್ಮೆ ಅಧಿಕಾರ ಕೊಡಿ ಎನ್ನಲು ನಾಚಿಕೆ ಆಗುವುದಿಲ್ಲವೆ? ಅಷ್ಟಕ್ಕೂ ಕಳೆದ ಚುನಾವಣೆಯಲ್ಲಿ ನೀಡಿದ ಭರವಸೆಗಳಲ್ಲಿ ಎಷ್ಟು ಈಡೇರಿಸಿದ್ದೀರಿ? ಉತ್ತರವಿದೆಯೆ?' ಎಂದು ಪ್ರಶ್ನಿಸಿದೆ.
ಸಿದ್ದರಾಮಯ್ಯ ಟೀಕೆ
'ಬಿಜೆಪಿ ತನ್ನ ಹೊಸ ಪ್ರಣಾಳಿಕೆಗೂ ಮುನ್ನ ತನ್ನ ರಿಪೋರ್ಟ್ ಕಾರ್ಡ್ ಬಿಡುಗಡೆ ಮಾಡಬೇಕು. ಬಿಜೆಪಿ ನಾಯಕರಿಗೆ ತಾವು ನೀಡುವ ಭರವಸೆಗಳಿಗೆ ಕಿಂಚಿತ್ತೂ ಮನ್ನಣೆ ಇಲ್ಲ. ಹಿಂದಿನ ಚುನಾವಣೆಯಲ್ಲಿ ನೀಡಿದ ಭರವಸೆಗಳಲ್ಲಿ ಶೇ.90ಕ್ಕಿಂತ ಹೆಚ್ಚು ಈಡೇರಿಲ್ಲ. ಬಿಜೆಪಿ ಎಂದರೆ ದ್ರೋಹ' ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
'ಕರ್ನಾಟಕಕ್ಕೆ ಬಿಜೆಪಿಯ ಪ್ರಣಾಳಿಕೆ ಸಂಪೂರ್ಣ ವಿಫಲವಾಗಿದೆ. ಮತ್ತೆ ಅಧಿಕಾರಕ್ಕೆ ಬರುವ ಭರವಸೆ ವಿಫಲವಾಗಿದೆ. ಬಿಜೆಪಿ ಮತ್ತು ಅದರ ವಿಫಲ ಭರವಸೆಗಳು ಕರ್ನಾಟಕಕ್ಕೆ ಬೇಕಾಗಿಲ್ಲ' ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ವಾಗ್ದಾಳಿ ನಡೆಸಿದ್ದಾರೆ.












Click it and Unblock the Notifications