ರೋಚಕ ಫೋಟೋ ಫಿನಿಶ್ಗೆ ಅಣಿಯಾಗಿದೆ ಕರ್ನಾಟಕ ಚುನಾವಣೆ
ಬೆಂಗಳೂರು, ಮೇ 12 : ಚುನಾವಣೆಗೂ ಮುನ್ನ ನಡೆಸಿದ ಸಮಾವೇಶಗಳಲ್ಲಿ ಮಾತ್ರವಲ್ಲ, ಚುನಾವಣೆಯ ನಂತರ ನಡೆಸಿದ ಹಲವಾರು ಸಮೀಕ್ಷೆಗಳಲ್ಲಿ ಕೂಡ ಬಿಜೆಪಿ ಮತ್ತು ಕಾಂಗ್ರೆಸ್ ಭಾರೀ ಯುದ್ಧ ನಡೆಸುತ್ತಿವೆ. ಮೇ 15ರಂದು ಮೋದಿಗೆ ಗೆಲುವಾಗುವುದಾ? ರಾಹುಲ್ ವಿಜಯದ ಕೇಕೆ ಹಾಕುವರಾ?
ಬಹುಶಃ ಇತ್ತೀಚಿನ ವರ್ಷಗಳಲ್ಲಿ ಯಾವುದೇ ಚುನಾವಣೆಯೂ ಇಷ್ಟು ತುರುಸಿನಿಂದ ನಡೆದಿಲ್ಲ, ಇಷ್ಟು ಮಾತಿನ ಚಕಮಕಿ ಜರುಗಿರಲಿಲ್ಲ, ಇಷ್ಟು ದ್ವೇಷದ ಬೆಂಕಿ ಹೊತ್ತಿ ಉರಿದಿರಲಿಲ್ಲ, ಇಷ್ಟು ಜಿದ್ದಾಜಿದ್ದಿಯಿಂದ ಕೂಡಿಲ್ಲ, ಇಷ್ಟು ಪ್ರತಿಷ್ಠೆಯ ಕಣವಾಗಿಲ್ಲ. ಕರ್ನಾಟಕ ವಿಧಾನಸಭೆ ಚುನಾವಣೆ ಮಾತ್ರ ಫೋಟೋ ಫಿನಿಷ್ ಗೆ ಅಣಿಯಾಗಿದೆ.
ಮೇ 15ರಂದು ಮಂಗಳವಾರ ಯಾವುದೇ ಪಕ್ಷಕ್ಕೂ ಮಂಗಳಕರವಾಗಬಹುದು. ಅಂತಿಮ ಕ್ಷಣದಲ್ಲಿ ಬಿಜೆಪಿ ಕಾಂಗ್ರೆಸ್ಸನ್ನು ಹಿಂದಿಕ್ಕಬಹುದು, ಕಾಂಗ್ರೆಸ್, ಕಣ್ಣೆವೆಯಿಕ್ಕುವಷ್ಟರಲ್ಲಿ ಬಿಜೆಪಿಯನ್ನು ಸದೆಬಡಿದು ಮುನ್ನುಗ್ಗಬಹುದು. ಅಥವಾ ಇವೆರಡು ಪಕ್ಷಗಳ ಹಗ್ಗ ಜಗ್ಗಾಟದಲ್ಲಿ ಜಾತ್ಯತೀತ ಜನತಾದಳ ಅಧಿಕಾರ ಕಿತ್ತುಕೊಂಡು ಅಂತಿಮ ನಗೆ ಬೀರುವುದಾ?
ನರೇಂದ್ರ ಮೋದಿ, ರಾಹುಲ್ ಗಾಂಧಿ, ಅಮಿತ್ ಶಾ, ಸೋನಿಯಾ ಗಾಂಧಿಯಂಥ ರಾಷ್ಟ್ರಮಟ್ಟದ ನಾಯಕರು ಉಸಿರುಬಿಗಿಹಿಡಿದು ಕುಳಿತುಕೊಳ್ಳುವಂತೆ ಈ ಚುನಾವಣೆ ಮಾಡಿದೆ. ಭಾರತೀಯ ಜನತಾ ಪಕ್ಷ ಮತ್ತು ಕಾಂಗ್ರೆಸ್ ಪಕ್ಷಗಳಿಗೆ ಇದು ಭಾರೀ ಪ್ರತಿಷ್ಠೆಯ ಕಣವಾಗಿದೆ. ಕಾಂಗ್ರೆಸ್ ಅಧಿಕಾರ ಉಳಿಸಿಕೊಳ್ಳಲು, ಬಿಜೆಪಿ ಕಿತ್ತುಕೊಳ್ಳಲು ಹವಣಿಸುತ್ತಿದೆ. ಈ ಅಗ್ನಿ ಪರೀಕ್ಷೆಯನ್ನು ಯಾರು ಗೆಲ್ಲಲಿದ್ದಾರೆ.

ಬಾವಿಯಲ್ಲಿ ಬಿದ್ದ ಕಾಂಗ್ರೆಸ್ಸಿಗೆ ಹುಲ್ಲಿನ ಆಸರೆ
ಭಾರತೀಯ ಜನತಾ ಪಕ್ಷಕ್ಕೆ ಕರ್ನಾಟಕ, ದಕ್ಷಿಣ ಭಾರತವನ್ನು ಮರುಪ್ರವೇಶಿಲು ಹೆಬ್ಬಾಗಿಲಾಗಿದ್ದರೆ, ಕಾಂಗ್ರೆಸ್ಸಿಗೆ ಇಡೀ ಭಾರತದಲ್ಲಿ ಕಳಚುತ್ತಿರುವ ಕೊನೆಯ ಕೊಂಡಿಯಾಗಿದೆ. ಭಾರತವನ್ನು ಕಾಂಗ್ರೆಸ್ ಮುಕ್ತವನ್ನಾಗಿ ಮಾಡುವುದಾಗಿ ಭಾರತೀಯ ಜನತಾ ಪಕ್ಷ ಪಣ ತೊಟ್ಟಿದ್ದರೆ, ಕಾಂಗ್ರೆಸ್ ಈ ಚುನಾವಣೆ ಉಳಿದೆಲ್ಲ ಚುನಾವಣೆಗಳಂತಲ್ಲ ಎಂದು ಬಿಜೆಪಿಗೆ ಭರ್ಜರಿ ಸೆಡ್ಡು ಹೊಡೆದಿದೆ. ಬಾವಿಯಲ್ಲಿ ಬಿದ್ದ ಕಾಂಗ್ರೆಸ್ಸಿಗೆ ಕರ್ನಾಟಕ ಹುಲ್ಲು ಕಡ್ಡಿಯ ಆಸರೆಯಂತಾಗಿತ್ತು.

ಕರ್ನಾಟಕ ಅಷ್ಟು ಸುಲಭದ್ದಾಗಿರಲಿಲ್ಲ
ಉತ್ತರ ಪ್ರದೇಶವನ್ನು ಬಿಜೆಪಿ, ವಿಭಿನ್ನವಾದ ತಂತ್ರಗಾರಿಕೆ ಮತ್ತು ವಿರೋಧ ಪಕ್ಷಗಳ ದೌರ್ಬಲ್ಯಗಳ ಲಾಭ ಪಡೆದು ಸುಲಭವಾಗಿ ತನ್ನ ಬುಟ್ಟಿಗೆ ಹಾಕಿಕೊಂಡಿತ್ತು, ಗುಜರಾತ್ ನಲ್ಲಿ ಗೆಲ್ಲುವ ವಿಶ್ವಾಸವಿದ್ದರೂ ಕಾಂಗ್ರೆಸ್ಸಿನಿಂದ ಭಾರೀ ಪ್ರತಿರೋಧ ಎದುರಿಸಬೇಕಾಯಿತು, ಇನ್ನು ಈಶಾನ್ಯ ಭಾರತದಲ್ಲಿ ನಡೆದ ಚುನಾವಣೆಯಲ್ಲಿ ಬಿಜೆಪಿ ಹೆಚ್ಚೂಕಡಿಮೆ ತನ್ನ ಅಧಿಪತ್ಯ ಸ್ಥಾಪಿಸಿತು. ಆದರೆ, ಕರ್ನಾಟಕ ಅಷ್ಟು ಸುಲಭದ್ದಾಗಿರಲಿಲ್ಲ. ಇದಕ್ಕೆ ಕಾರಣ ಸಿದ್ದರಾಮಯ್ಯ.

ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗಿರದಿದ್ದರೆ
ಬಹುಶಃ ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗಿರದಿದ್ದರೆ, ಅವರಂತೆ ಕಾಂಗ್ರೆಸ್ ಹೈಕಮಾಂಡನ್ನೇ ತಮ್ಮ ಜೇಬಿನಲ್ಲಿ ಇರಿಸಿಕೊಳ್ಳುವಷ್ಟು ತಾಕತ್ತು ಯಾರಿಗೂ ಇಲ್ಲದಿದ್ದರೆ, ಅಥವಾ ಬೇರೆ ಯಾರೂ ಕರ್ನಾಟಕದ ಮುಖ್ಯಮಂತ್ರಿಯಾಗಿರುತ್ತಿದ್ದರೆ, ಭ್ರಷ್ಟಾಚಾರದ ಕಳಂಕ ಹೊತ್ತ ವ್ಯಕ್ತಿ ಮುನ್ನಡೆಸುತ್ತಿದ್ದಿದ್ದರೆ ಬಿಜೆಪಿ ಸುಲಭವಾಗಿ ಕರ್ನಾಟಕವನ್ನೂ ತನ್ನ ಬುಟ್ಟಿಗೆ ಹಾಕಿಕೊಳ್ಳುತ್ತಿತ್ತೇನೋ. ಈ ರೀತಿಯಾಗಲು ಸಿದ್ದರಾಮಯ್ಯ ಬಿಟ್ಟಿಲ್ಲ.

ಬಿಜೆಪಿ ದೌರ್ಬಲ್ಯದ ಲಾಭ ಪಡೆದ ಕಾಂಗ್ರೆಸ್
ಕರ್ನಾಟಕವೂ ಕಾಂಗ್ರೆಸ್ ಕೈತಪ್ಪಿದರೆ ಉಳಿದ ರಾಜ್ಯಗಳಲ್ಲಿಯೂ ಉಳಿಗಾಲವಿಲ್ಲ, ಮೇಲೆದ್ದು ಬರಲೂ ಚಾನ್ಸ್ ಇಲ್ಲ ಎಂದು ಅರಿತಿದ್ದ ಕಾಂಗ್ರೆಸ್, ಅತ್ಯಂತ ನಾಜೂಕಿನಿಂದ ಮತ್ತು ಶಿಸ್ತುಬದ್ಧವಾಗಿ ಪ್ರಚಾರವನ್ನು ಹೆಣೆದಿತ್ತು. ಅವಕಾಶ ಸಿಕ್ಕಾಗಲೆಲ್ಲ ಬಿಜೆಪಿಯ 'ದೌರ್ಬಲ್ಯದ ಕೊಂಡಿ'ಯನ್ನು ಇನ್ನಷ್ಟು ದುರ್ಬಲ ಮಾಡಲು ಸಾಕಷ್ಟು ಪ್ರಯತ್ನಪಟ್ಟಿದೆ ಮತ್ತು ಜನರಲ್ಲಿ ಮನವರಿಕೆ ಮಾಡಲು ಯಶಸ್ವಿಯೂ ಆಗಿದೆ.

ಮೋದಿ ಮಾತಿನ ಮೋಡಿಗೆ ಮರುಳು
ಪ್ರಚಾರದ ಕಟ್ಟಕಡೆಯ ಘಟ್ಟದಲ್ಲಿ ನರೇಂದ್ರ ಮೋದಿಯವರು ಐದು ದಿನಗಳಲ್ಲಿ ಹದಿನೇಳು ಸಮಾವೇಶಗಳಲ್ಲಿ ಭಾಗವಹಿಸಿ ಪ್ರಚಾರ ಮಾಡಿರದಿದ್ದರೆ, ಬಹುಶಃ ಬಿಜೆಪಿ ಯಾವ ಸ್ಥಾನದಲ್ಲಿರುತ್ತೋ ಕಲ್ಪಿಸಲೂ ಸಾಧ್ಯವಿರುತ್ತಿರಲಿಲ್ಲ. ಅವರ ಕಡೆಯ ಪ್ರಚಾರ ಸಭೆಗಳು, ಕಾಂಗ್ರೆಸ್ ಮೇಲೆ ಮತ್ತು ಸೋನಿಯಾ, ರಾಹುಲ್ ಸೇರಿದಂತೆ ಪ್ರಮುಖ ನಾಯಕರ ಮೇಲೆ ನಡೆಸಿದ ಪ್ರಹಾರ ಭಾರೀ ಪ್ರಭಾವಶಾಲಿಯಾಗಿತ್ತು. ಜನರು ಕೂಡ ಮೋದಿ ಮಾತಿನ ಮೋಡಿಗೆ ಮರುಳಾಗಿದ್ದಾರೆ.

ಮುಂದಿನ ಚುನಾವಣೆ ಮೇಲೆ ಪರಿಣಾಮ
ಕರ್ನಾಟಕ ವಿಧಾನಸಭೆ ಚುನಾವಣೆಯ ಫಲಿತಾಂಶ ಮುಂದಿನ ವಿಧಾನಸಭೆ ಚುನಾವಣೆಗಳ ಮೇಲೆ ಮತ್ತು ಮುಂದಿನ ವರ್ಷ ಬರುವ ಲೋಕಸಭೆ ಚುನಾವಣೆ ಮೇಲೆ ಪ್ರಭಾವ ಬೀರುವುದಾ? ಖಂಡಿತ ಬೀರುತ್ತದೆ. ಒಂದು ವೇಳೆ ಕಾಂಗ್ರೆಸ್ ಗೆದ್ದದ್ದೇ ಆದರೆ, ಆನೆಬಲ ಸಿಕ್ಕಂತಾಗುತ್ತದೆ, ರಾಜಸ್ತಾನ ಮತ್ತು ಮಧ್ಯಪ್ರದೇಶ ವಿಧಾನಸಭೆ ಚುನಾವಣೆಯ ಮೇಲೂ ವ್ಯತಿರಿಕ್ತ ಪರಿಣಾಮ ಬೀರುವ ಸಾಧ್ಯತೆ ಇರುತ್ತದೆ.

ಪ್ರಭಾವಶಾಲಿಯಾಗಿ ಹೊರಹೊಮ್ಮಿದ ರಾಹುಲ್
ರಾಹುಲ್ ಗಾಂಧಿ ಅವರ ಭಾಷಣಗಳು ಕೆಲವಾರು ಬಾರಿ ಬಾಲಿಶ ಅನಿಸಿದರೂ, ಮಾತುಗಳು ರಿಪೀಟ್ ಆಗುತ್ತಿದ್ದರೂ, ಇನ್ನಷ್ಟು ಆಳವಾದ ಅಧ್ಯಯನ ಮಾಡಬೇಕಿತ್ತು ಅಂತ ಅನಿಸಿದರೂ ಅವರು ಕರ್ನಾಟಕ ಚುನಾವಣೆಯ ಸಮಯದಲ್ಲಿ ಪ್ರಭಾವಶಾಲಿಯಾಗಿ ಹೊರಹೊಮ್ಮಿದ್ದಾರೆ. ಮೊದಲಿನ ಹಿಂಜರಿತ ಮಾಯವಾಗಿದೆ ಮತ್ತು ಅವರ ಬೆನ್ನೆಲುಬಾಗಿ ಪ್ರಬಲ ಸೋಷಿಯಲ್ ಮೀಡಿಯಾ ಹಗಲಿರುಳೂ ಕೆಲಸ ಮಾಡುತ್ತಿದೆ. ಕಳೆದ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಏನು ಮಾಡಿತ್ತೋ, ಅದನ್ನೇ ಕಾಂಗ್ರೆಸ್ ಕರ್ನಾಟಕದಲ್ಲಿ ಮಾಡಿದೆ.

ತಂತ್ರಗಾರಿಕೆ ರೂಪಿಸಲು ಅಮಿತ್ ವಿಫಲ
ಉತ್ತರ ಪ್ರದೇಶ, ಗುಜರಾತ್, ತ್ರಿಪುರಾದಲ್ಲಿ ಸ್ಟ್ರಾಟೆಜಿ ರೂಪಿಸಿದಂತೆ ಕರ್ನಾಟಕದಲ್ಲಿ ಯಾವುದೇ ತಂತ್ರಗಾರಿಕೆ ರೂಪಿಸಲು ಅಮಿತ್ ಶಾ ಅವರಿಗೆ ಸಾಧ್ಯವಾಗಿಲ್ಲ. ಉತ್ತರ ಪ್ರದೇಶ ಅಥವಾ ಗುಜರಾತ್ ಮಾಡೆಲ್ ತಂತ್ರಗಾರಿಕೆ ಇಲ್ಲಿ ಕೆಲಸ ಮಾಡಲ್ಲ ಎಂಬುದು ಅವರಿಗೂ ಮನವರಿಕೆಯಾಗಿರಬಹುದು. ನಿಜ ಹೇಳಬೇಕೆಂದರೆ, ಅವರಿಗೆ ಯಡಿಯೂರಪ್ಪ ಮತ್ತು ಅವರ ಸುತ್ತಲಿರುವ ನಾಯಕರ ಮೇಲೆ ಅಂತಹ ನಂಬಿಕೆ ಇದ್ದಂತಿಲ್ಲ. ಈ ಕಾರಣದಿಂದಾಗಿಯೇ 150ರ ಟಾರ್ಗೆಟ್ ಬೆನ್ನತ್ತುವುದ ಬಿಟ್ಟು ಅಗ್ರೆಸೀವ್ ಆಗಿ ಪ್ರಚಾರ ನಡೆಸುವುದಕ್ಕೆ ಹೆಚ್ಚಿನ ಮಹತ್ವ ಕೊಡಲಾಗಿತ್ತು. ಇದು ಒಂದು ರೀತಿ ಕಾಂಗ್ರೆಸ್ಸಿಗೆ ಧನಾತ್ಮಕವಾಗಿ ಪರಿಣಮಿಸಿತು.
-
Gold Price March 11: ಚಿನ್ನದ ಬೆಲೆಯಲ್ಲಿ ಹೊಸ ದಾಖಲೆ: ಬೆಳ್ಳಿ ಪ್ರಿಯರಿಗೆ ಅಚ್ಚರಿ, ಎಷ್ಟಿದೆ ಇಂದಿನ ಚಿನ್ನ - ಬೆಳ್ಳಿ ಬೆಲೆ -
Karnataka Weather Mar 12: ಬಿಸಿಲು ಹೆಚ್ಚಳದ ನಡುವೆ ಮಾರ್ಚ್ 15ರಿಂದ ಕರ್ನಾಟಕದಲ್ಲಿ ಮಳೆ, ಹೇಗಿದೆ ಇಂದಿನ ವೆದರ್ -
Bengaluru Property: ಬೆಂಗಳೂರಿನಲ್ಲಿ ಕಟ್ಟಡ ನಿಯಮ ಉಲ್ಲಂಘಿಸಿದ ಆಸ್ತಿದಾರರಿಗೆ ಜಿಬಿಎ - ಬಿಡಿಎ ಜಂಟಿ ಶಾಕ್ -
Rain In Karnataka: ಈ ವಾರದಲ್ಲಿ ಕರ್ನಾಟಕದ ಈ ಭಾಗಗಳಲ್ಲಿ ಮಳೆ ಸಾಧ್ಯತೆ, ಬೆಂಗಳೂರಲ್ಲಿ ಹೇಗಿದೆ ವೆದರ್ -
Gold Rate March 12: ಚಿನ್ನದ ಬೆಲೆ 10,900 ರೂ., ಬೆಳ್ಳಿ ಬೆಲೆ 10,000 ರೂ. ಭರ್ಜರಿ ಇಳಿಕೆ, ಬಂಗಾರ ಪ್ರಿಯರು ಫಿದಾ -
ಜಿಮ್ನಲ್ಲಿ ಭೇಟಿ, ಸಾಫ್ಟ್ವೇರ್ ಕಂಪನಿ ಕೆಲಸ: 7,500 ರೂ. ಸಂಬಳ ಪಡೆಯುತ್ತಿದ್ದ ಅಶ್ವಿನಿ ಅಪ್ಪು ಮನಗೆದ್ದಿದ್ದು ಹೇಗೆ? -
ನಮ್ಮದು ಲವ್ ಜಿಹಾದ್ ಅಲ್ಲ, ಮತಾಂತರವೂ ಇಲ್ಲ, ಹಿಂದೂ ಸಂಪ್ರದಾಯದಂತೆ ವಿವಾಹ: ಮೊನಾಲಿಸಾ-ಫರ್ಹಾನ್ ಖಾನ್ ಸ್ಪಷ್ಟನೆ -
Gold: ಗದಗ ಲಕ್ಕುಂಡಿಯಲ್ಲಿ ಪತ್ತೆಯಾದ ಚಿನ್ನದ ನಿಧಿ ಪ್ರಕರಣಕ್ಕೆ ಟ್ವಿಸ್ಟ್: ಮೌಲ್ಯ 10 ಪಟ್ಟು ಹೆಚ್ಚು, ವಿಜಯನಗರ ಕಾಲದ ಆಭರಣ -
ವಾಸ್ತು: ದಕ್ಷಿಣ ಗೇಟು ಶುಭವೋ ಅಥವಾ ಅಶುಭವೋ, ಉತ್ತರ ದ್ವಾರದ ವಾಸ್ತು ರಹಸ್ಯಗಳೇನು ಇಲ್ಲಿದೆ ಸಂಪೂರ್ಣ ಮಾಹಿತಿ -
Horoscope March 12: ಗುರುವಾರ ದ್ವಾದಶ ರಾಶಿಗಳ ಫಲಾಫಲ ಹೇಗಿದೆ, ಇಲ್ಲಿದೆ ದಿನ ಭವಿಷ್ಯ -
Bengaluru Property Sale: ಬೆಂಗಳೂರಲ್ಲಿ 50 ಆಸ್ತಿದಾರರಿಗೆ ತಮ್ಮ ಆಸ್ತಿಯನ್ನೇ ಕಳೆದುಕೊಳ್ಳುವ ಆತಂಕ: ಜಿಬಿಎ ಹೇಳಿದ್ದೇನು -
Vehicle Loan: ವಾಹನ ಮಾಲೀಕರಿಗೆ ಗುಡ್ನ್ಯೂಸ್: ಸಾಲ ಪ್ರಕ್ರಿಯೆ, ಆರ್ಸಿ ಅಪ್ಡೇಟ್ಗೆ ಇನ್ಮುಂದೆ ಆನ್ಲೈನ್ ವ್ಯವಸ್ಥೆ












Click it and Unblock the Notifications