Karnataka Election Results: ಎಚ್ಡಿ ಕುಮಾರಸ್ವಾಮಿ ಚಿತ್ತ ಯಾವ ಪಕ್ಷದತ್ತ?; ಮೈತ್ರಿಗೆ ಸಿದ್ಧ, ಷರತ್ತುಗಳು ಅನ್ವಯ!
ಈಗಾಗಲೇ 2023ರ ಕರ್ನಾಟಕ ವಿಧಾನಸಭೆ ಚುನಾವಣೆಗೆ ಮತದಾನ ನಡೆದಿದ್ದು, ಎಲ್ಲರ ಗಮನ ಇದೀಗ ಶನಿವಾರ, ಮೇ 13ರಂದು ಪ್ರಕಟವಾಗುವ ಫಲಿತಾಂಶದ ಮೇಲೆ ನೆಟ್ಟಿದೆ. ಮುಂದಿನ ಐದು ವರ್ಷಗಳ ಕಾಲ ಯಾರು ಅಧಿಕಾರದ ಚುಕ್ಕಾಣಿ ಹಿಡಿಯಲಿದ್ದಾರೆ ಎಂಬುದು ಕುತೂಹಲ ಮೂಡಿಸಿದೆ.
ಮತದಾನ ಮುಗಿದ ಬಳಿಕ ಹಲವು ರಾಷ್ಟ್ರೀಯ ಮಾಧ್ಯಮಗಳು ಚುನಾವಣೋತ್ತರ ಸಮೀಕ್ಷೆಗಳನ್ನು ಬಿಡುಗಡೆ ಮಾಡಿದ್ದು, ಈ ಬಾರಿ ಯಾವುದೇ ಪಕ್ಷಕ್ಕೆ ಪೂರ್ಣ ಬಹುಮತದ ಸಂಖ್ಯೆಗಳನ್ನು ನಿಖರವಾಗಿ ನೀಡಲಾಗಿಲ್ಲ. ಚುನಾವಣೋತ್ತರ ಫಲಿತಾಂಶದಲ್ಲಿ ಕಾಂಗ್ರೆಸ್ ಅತಿ ದೊಡ್ಡ ಪಕ್ಷವಾಗಿದ್ದರೂ, ಬಹುಮತಕ್ಕೆ ಕೆಲವು ಸ್ಥಾನಗಳ ಕೊರತೆ ಅನುಭವಿಸಲಿದೆ.

ಇನ್ನು ಆಡಳಿತರೂಢ ಬಿಜೆಪಿ ಎರಡನೇ ಅತಿ ದೊಡ್ಡ ಪಕ್ಷವಾಗಲಿದ್ದರೂ, ಅಧಿಕಾರ ಕಳೆದುಕೊಳ್ಳುವ ಆತಂಕ ಎದುರಾಗಿದೆ. ಇನ್ನು ಜೆಡಿಎಸ್ ಪಕ್ಷ ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳಲಿದೆ. ಅತಂತ್ರ ಫಲಿತಾಂಶ ಬಂದರೆ, ಮೈತ್ರಿಗೆ ಜೆಡಿಎಸ್ ಪಕ್ಷ ಅನಿವಾರ್ಯ ಎಂಬ ಸಂದಿಗ್ಧ ಪರಿಸ್ಥಿತಿ ಬರಲಿದೆ.
ಮತದಾನ ಮುಗಿಯುತ್ತಿದ್ದಂತೆ ವಿಶ್ರಾಂತಿ ಪಡೆಯುತ್ತಿರುವ ರಾಜಕೀಯ ನಾಯಕರು ಒಳಗೊಳಗೆ ಸರ್ಕಾರ ರಚನೆಗೆ ತಂತ್ರ-ಪ್ರತಿತಂತ್ರ ರೂಪಿಸುತ್ತಿದ್ದಾರೆ. ಬಹುಮತದ ಕನಸಿನಲ್ಲಿರುವ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳು ಒಂದು ವೇಳೆ ಮ್ಯಾಜಿಕ್ ನಂಬರ್ ತಲುಪದಿದ್ದರೆ, ಜೆಡಿಎಸ್ ಕಿಂಗ್ ಮೇಕರ್ ಆಗುವ ಎಲ್ಲಾ ಸಾಧ್ಯತೆಗಳಿವೆ.

ಯಾವ ಪಕ್ಷದೊಂದಿಗೆ ಜೆಡಿಎಸ್ ಮೈತ್ರಿ ಮಾಡಿಕೊಳ್ಳಬೇಕು ಎಂಬ ಅಂತಿಮ ನಿರ್ಧಾರ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಕೈಯಲ್ಲಿದೆ. ಸದ್ಯ ಸಿಂಗಾಪುರದಲ್ಲಿರುವ ಕುಮಾರಸ್ವಾಮಿಯನ್ನಯ ಈಗಾಗಲೇ ಬಿಜೆಪಿ ಮತ್ತು ಕಾಂಗ್ರೆಸ್ ಸಂಪರ್ಕಿಸಿದ್ದಾರೆ ಎಂಬ ಮಾತುಗಳು ರಾಜಕೀಯ ಪಡಸಾಲೆಯಲ್ಲಿ ಕೇಳಿಬರುತ್ತಿವೆ.
ಅಸಮಾಧಾನವಿಲ್ಲ, ಮೈತ್ರಿಗೆ ನಾವು ಸಿದ್ಧ
ಚುನಾವಣಾ ಫಲಿತಾಂಶದ ಬಳಿಕ ಮೈತ್ರಿ ಕುರಿತು ಎಚ್.ಡಿ. ಕುಮಾರಸ್ವಾಮಿ ಸಮ್ಮತಿ ಸೂಚಿಸಿದ್ದಾರೆ. ""ನನಗೆ ಮೈತ್ರಿ ಮಾಡಿಕೊಳ್ಳುವುದರಲ್ಲಿ ಯಾವುದೇ ಅಸಮಾಧಾನವಿಲ್ಲ. ಆದರೆ, ನಮ್ಮ ಷರತ್ತುಗಳನ್ನು ಯಾವ ಪಕ್ಷ ಪೂರೈಸುತ್ತದೆ ಎಂಬುದರ ಆಧಾರದ ಮೇಲೆ ಬಿಜೆಪಿ ಅಥವಾ ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಳ್ಳುವುದನ್ನು ನಿರ್ಧರಿಸುತ್ತೇವೆ. ಮೈತ್ರಿಗೆ ನಾವು ಸಿದ್ಧ,'' ಎಂದು ಸ್ಪಷ್ಟಪಡಿಸಿದ್ದಾರೆ.

ಮತದಾನ ನಡೆದ ದಿನದಂದು ಬಿಡುಗಡೆಯಾದ ಒಟ್ಟು 11 ಚುನಾವಣೋತ್ತರ ಸಮೀಕ್ಷೆಗಳಲ್ಲಿ ಬಹುತೇಕ ಸಮೀಕ್ಷೆಗಳು ಕಾಂಗ್ರೆಸ್ಗೆ ದೊಡ್ಡ ಸಂಖ್ಯೆಯನ್ನು ನೀಡಿವೆ. ಮತ್ತೊಂದೆಡೆ ಈ ಬಾರಿಯೂ ನಾವೇ ಗೆಲುವು ಸಾಧಿಸುತ್ತೇವೆ ಎಂದು ಬಿಜೆಪಿ ಪಕ್ಷದ ನಾಯಕರು ವಿಶ್ವಾಸದಲ್ಲಿದ್ದಾರೆ.
ಆದರೂ, ಅತಂತ್ರ ಫಲಿತಾಂಶ ಬಂದರೆ ಜೆಡಿಎಸ್ ಪಕ್ಷದ ಸಹಾಯದ ನಿರೀಕ್ಷೆಯಲ್ಲಿ ಎರಡೂ ಪಕ್ಷಗಳಿದ್ದು, ಮಾಜಿ ಸಿಎಂ ಎಚ್ಡಿ ಕುಮಾರಸ್ವಾಮಿ ಚಿತ್ತ ಯಾವ ಪಕ್ಷದತ್ತ ಎಂಬ ಕುತೂಹಲ ಎಲ್ಲರಲ್ಲೂ ಮೂಡಿದೆ.
ನನ್ನ ಷರತ್ತುಗಳನ್ನು ಈಡೇರಿಸಲು ಒಪ್ಪುವ ಪಕ್ಷದೊಂದಿಗೆ ಹೋಗುತ್ತೇನೆ
ಇನ್ನು ವಿಶ್ರಾಂತಿಗಾಗಿ ಸಿಂಗಾಪುರಕ್ಕೆ ತೆರಳುವ ಮೊದಲು ಎಚ್.ಡಿ. ಕುಮಾರಸ್ವಾಮಿ ಡೆಕ್ಕನ್ ಹೆರಾಲ್ಡ್ ಪತ್ರಿಕೆಗೆ ಸಂದರ್ಶನ ನೀಡಿದ್ದಾರೆ. "ಹಲವು ಚುನಾವಣೋತ್ತರ ಸಮೀಕ್ಷೆಗಳು ಜೆಡಿಎಸ್ ಪಕ್ಷಕ್ಕೆ ಬಹಳ ಕಡಿಮೆ ಸ್ಥಾನಗಳು ಬರಲಿವೆ ಎಂದು ತಿಳಿಸಿವೆ. ಆದರೆ ನನಗೆ 50 ಸ್ಥಾನಗಳನ್ನು ಗೆಲ್ಲುವ ವಿಶ್ವಾಸವಿದೆ. ಈ ಬಾರಿ ನನ್ನ ಷರತ್ತುಗಳನ್ನು ಈಡೇರಿಸಲು ಒಪ್ಪುವ ಪಕ್ಷದೊಂದಿಗೆ ಹೋಗುತ್ತೇನೆ," ಎನ್ನುವುದರ ಮೂಲಕ ಮೈತ್ರಿ ಸರ್ಕಾರಕ್ಕೆ ಸಿದ್ಧ ಎಂಬ ಸಂದೇಶ ರವಾನಿಸಿದ್ದಾರೆ.
ನಮ್ಮ ಷರತ್ತುಗಳನ್ನು ಯಾವ ಪಕ್ಷ ಪೂರೈಸುತ್ತದೆ ಎಂಬುದರ ಆಧಾರದ ಮೇಲೆ ಬಿಜೆಪಿ ಅಥವಾ ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಳ್ಳುವುದನ್ನು ನಿರ್ಧರಿಸುತ್ತೇವೆ. ಮೈತ್ರಿಗೆ ನಾವು ಸಿದ್ಧ.
— oneindiakannada (@OneindiaKannada) May 12, 2023
-ಹೆಚ್ಡಿ ಕುಮಾರಸ್ವಾಮಿ#hdkumaraswamy #karnatakaelection2023 #jds #bjp #congress#coalitiongovernment pic.twitter.com/PC3JgFgcbZ
ಎರಡು ಬಾರಿ ಬಿಜೆಪಿ-ಜೆಡಿಎಸ್ (2006) ಮತ್ತು ಕಾಂಗ್ರೆಸ್-ಜೆಡಿಎಸ್ (2018) ಸಮ್ಮಿಶ್ರ ಸರ್ಕಾರದ ಅಡಿಯಲ್ಲಿ ಮುಖ್ಯಮಂತ್ರಿಯಾಗಿದ್ದ ಎಚ್.ಡಿ. ಕುಮಾರಸ್ವಾಮಿ, ಆ ವೇಳೆ ಎದುರಿಸಿದ ಬಿಕ್ಕಟ್ಟುಗಳಿಂದಾಗಿ ಈ ಬಾರಿ ದಿಟ್ಟ ನಿಲುವನ್ನು ಹೊಂದಿದ್ದಾರೆ.
ಈ ಬಾರಿ ಮೈತ್ರಿ ಸರ್ಕಾರಕ್ಕೆ ಸಹಿ ಹಾಕುವ ಮೊದಲು, ಎಚ್.ಡಿ. ಕುಮಾರಸ್ವಾಮಿ ಕೆಲವು ಷರತ್ತುಗಳನ್ನು ಮುಂದಿಡಲಿದ್ದಾರೆ. ಕೆಲವು ಷರತ್ತುಗಳನ್ನು ಪೂರೈಸುವ ಬಗ್ಗೆ ಖಚಿತಪಡಿಸಿಕೊಂಡ ನಂತರವೇ ಮೈತ್ರಿ ಮಾಡಿಕೊಳ್ಳುವುದು ಎಂಬ ನಿರ್ಧಾರಕ್ಕೆ ಬಂದಿದ್ದಾರೆ ಎನ್ನಲಾಗಿದೆ.
ಸರ್ಕಾರದಲ್ಲಿ ಯಾರು ಹಿಡಿತ ಸಾಧಿಸಬಾರದು
ಮುಖ್ಯಮಂತ್ರಿಯಾಗಿ ಎಚ್.ಡಿ. ಕುಮಾರಸ್ವಾಮಿ ಅವರಿಗೆ ಸರ್ಕಾರವ ನಡೆಸಲು ಸ್ವತಂತ್ರ ನೀಡಬೇಕು. ಯಾರ ಕೃಪಕಟಾಕ್ಷೆಗೂ ಒಳಗಾಗಗಬಾರದು. ಸರ್ಕಾರದಲ್ಲಿ ಯಾರು ಹಿಡಿತ ಸಾಧಿಸಬಾರದು ಎಂಬುದು ಎಚ್.ಡಿ. ಕುಮಾರಸ್ವಾಮಿಯವರ ಷರತ್ತಾಗಿದೆ. ಜಲಸಂಪನ್ಮೂಲ, ವಿದ್ಯುತ್ ಮತ್ತು ಸಾರ್ವಜನಿಕ ಕೆಲಸಗಳಂತಹ ಉತ್ತಮ ಖಾತೆಗಳನ್ನು ಜೆಡಿಎಸ್ ಶಾಸಕರಿಗೆ ನೀಡಬೇಕು ಎನ್ನುವುದಾಗಿರುತ್ತದೆ.
ಇನ್ನು ಜೆಡಿಎಸ್ ಪ್ರಣಾಳಿಕೆಯಲ್ಲಿ ನೀಡಿರುವ ಭರವಸೆಗಳನ್ನು ಜಾರಿಗೆ ತರಲು ಸಮ್ಮಿಶ್ರ ಪಕ್ಷದ ಪಾಲುದಾರರು ಅವಕಾಶ ನೀಡಬೇಕು ಎಂದು ಎಚ್.ಡಿ. ಕುಮಾರಸ್ವಾಮಿ ಮೈತ್ರಿ ಷರತ್ತು ವಿಧಿಸಿದ್ದಾರೆ.
ಇದೇ ವೇಳೆ ಎಚ್.ಡಿ. ಕುಮಾರಸ್ವಾಮಿಗೆ 2018ರಲ್ಲಿ ಕಾಂಗ್ರೆಸ್ ಜೊತೆ ಮೈತ್ರಿ ಸರ್ಕಾರ ರಚನೆಯಾದಾಗ ಸಮನ್ವಯ ಸಮಿತಿ ಅಸ್ತಿತ್ವಕ್ಕೆ ಬಂದಿತ್ತು. ಈ ಬಾರಿ ಆ ರೀತಿ ಬೇಡವೆಂದು ಹೇಳಲಾಗುತ್ತಿದೆ. ಸಮ್ಮಿಶ್ರ ಸರ್ಕಾರದ ಪಕ್ಷವು ರಾಮನಗರ, ಮಂಡ್ಯ ಮತ್ತು ಹಾಸನ ಜಿಲ್ಲೆಗಳಿಂದ ದೂರವಿರಬೇಕು. ಯಾವುದೇ ಸಿದ್ಧಾಂತಕ್ಕೆ ಸಂಬಂಧಿಸಿದ ನಿರ್ಧಾರಗಳನ್ನು ಚರ್ಚೆಯಿಲ್ಲದೆ ಮಾಡಬಾರದು ಎಂದು ಜೆಡಿಎಸ್ ನಾಯಕ ಎಚ್.ಡಿ. ಕುಮಾರಸ್ವಾಮಿ ಸ್ಪಷ್ಟಪಡಿಸಿದ್ದಾರೆ.
ತನ್ನ ಬಳಿಗೆ ಬರಬೇಕಾಗುತ್ತದೆ ಎಂದಿದ್ದ ಕುಮಾರಸ್ವಾಮಿ
ಬಿಜೆಪಿ ಮತ್ತು ಕಾಂಗ್ರೆಸ್ ಎರಡೂ ರಾಷ್ಟ್ರೀಯ ಪಕ್ಷಗಳ ನಾಯಕರೊಂದಿಗೆ ಉತ್ತಮ ಬಾಂಧವ್ಯವನ್ನು ಹೊಂದಿರುವ ಎಚ್.ಡಿ. ದೇವೇಗೌಡರು ಸಮ್ಮಿಶ್ರ ರಚನೆಯ ಬಗ್ಗೆ ಅಂತಿಮ ತೀರ್ಮಾನ ತೆಗೆದುಕೊಳ್ಳಲಿದ್ದಾರೆ. 2023ರ ಚುನಾವಣೆಯ ನಂತರ ಎರಡೂ ರಾಷ್ಟ್ರೀಯ ಪಕ್ಷಗಳು ತನ್ನ ಬಳಿಗೆ ಬರಬೇಕಾಗುತ್ತದೆ ಎಂದು ಕುಮಾರಸ್ವಾಮಿ ಈ ಹಿಂದೆ ಎಚ್ಚರಿಕೆ ನೀಡಿದ್ದರು.
ಕಳೆದ ಮಾರ್ಚ್ನಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಹೈಕಮಾಂಡ್ಗಳಿಂದ ಎಚ್.ಡಿ. ಕುಮಾರಸ್ವಾಮಿ ಮೈತ್ರಿ ಪ್ರಸ್ತಾವನೆಯನ್ನು ಸ್ವೀಕರಿಸಿದ್ದರು ಎನ್ನಲಾಗಿದೆ. ಇದನ್ನು ದೇವೇಗೌಡರೇ ದೃಢಪಡಿಸಿದ್ದರು. ಕರ್ನಾಟಕದಲ್ಲಿ 2004, 2008 ಮತ್ತು 2018ರಲ್ಲಿ ಯಾವ ಪಕ್ಷಕ್ಕೂ ಜನಾದೇಶ ಬಂದಿಲ್ಲ ಎಂಬುದು ಗಮನಾರ್ಹ ಸಂಗತಿ. 2013ರಲ್ಲಿ ಕಾಂಗ್ರೆಸ್ ಬಹುಮತ ಪಡೆದಿದ್ದರೂ, ಅಂದು ಬಿಜೆಪಿ ಮೂರು ಭಾಗಗಳಾಗಿತ್ತು ಎಂಬುದು ತಿಳಿದುಕೊಳ್ಳಬೇಕಾಗಿರುವ ಅಂಶವಾಗಿದೆ.











Click it and Unblock the Notifications