ಕರ್ನಾಟಕ ಚುನಾವಣೆ; ಅತಿ ಹಿರಿಯ, ಕಿರಿಯ ವಯಸ್ಸಿನ ಶಾಸಕರು
ಬೆಂಗಳೂರು, ಮೇ 15; ಕರ್ನಾಟಕ ವಿಧಾನಸಭೆ ಚುನಾವಣೆ ಫಲಿತಾಂಶ ಘೋಷಣೆಯಾಗಿದೆ. ಹೊಸ ಚಿಗುರು, ಹಳೆ ಬೇರು ಎಂಬಂತೆ ಹಿರಿಯ, ಕಿರಿಯರು ವಿಧಾನಸಭೆ ಪ್ರವೇಶ ಮಾಡಿದ್ದಾರೆ. ಇದರಲ್ಲಿ ಪಕ್ಷಗಳಿಲ್ಲ ಎಲ್ಲಾ ಪಕ್ಷಗಳಲ್ಲೂ ಸೀನಿಯರ್ಸ್, ಜ್ಯೂನಿಯರ್ಸ್ ಇದ್ದಾರೆ. ಆದ್ದರಿಂದ ವಿಧಾನಸಭೆ ಕಲಾಪ ನೋಡಲು ಕುತೂಹಲದಿಂದ ಕೂಡಿರುತ್ತದೆ.
ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಹೊಸ ನಾಯಕರಿಗೆ ಹೆಚ್ಚಿನ ಅವಕಾಶ ನೀಡಿತ್ತು. ಟಿಕೆಟ್ ಹಂಚಿಕೆ ಮಾಡುವಾಗ ವಯೋಮಿತಿಯನ್ನು ಮಾನದಂಡವನ್ನಾಗಿ ಪರಿಗಣನೆ ಮಾಡಿತ್ತು.

ಚುನಾವಣೆಯಲ್ಲಿ ಗೆದ್ದವರು ಮೊದಲ ಅಧಿವೇಶದಲ್ಲಿ ಶಾಸಕರಾಗಿ ಪ್ರಮಾಣ ವಚನ ಸ್ವೀಕಾರ ಮಾಡಲಿದ್ದಾರೆ. ಈ ಸಲ ಗೆದ್ದ ಅಭ್ಯರ್ಥಿಗಳಲ್ಲಿ ಹಿರಿಯರು ಕಾಂಗ್ರೆಸ್ನ ಶಾಮನೂರು ಶಿವಶಂಕರಪ್ಪ 92 ವರ್ಷ. ಅತಿ ಕಡಿಮೆ ವಯಸ್ಸಿನವರು ನಂಜನಗೂಡಿನಲ್ಲಿ ಗೆದ್ದ ದರ್ಶನ್ ಧ್ರುವನಾರಾಯಣ 28 ವರ್ಷ.
ಹಿರಿಯ, ಕಿರಿಯ ವಯಸ್ಸಿನ ಶಾಸಕರು; 92 ವಯಸ್ಸಿನ ಶಾಮನೂರು ಶಿವಶಂಕರಪ್ಪ ವಿಧಾನಸಭೆಯ ಅತಿ ಹಿರಿಯ ವಯಸ್ಸಿನ ಸದಸ್ಯರು. ಈ ಬಾರಿಯ ಚುನಾವಣೆಯಲ್ಲಿ ಅವರು ದಾವಣಗೆರೆ ದಕ್ಷಿಣ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದರು. 84298 ಮತಗಳನ್ನು ಪಡೆದು ಚುನಾವಣೆಯಲ್ಲಿ ಜಯಗಳಿಸಿದ್ದಾರೆ.

ಮಾನ್ವಿ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಜಿ. ಹಂಪಯ್ಯ ನಾಯ್ಕ್ಗೆ 84 ವರ್ಷ. ಚುನಾವಣೆಯಲ್ಲಿ ಅವರು 66922 ಮತಗಳನ್ನು ಪಡೆದು ಅವರು ಜಯಗಳಿಸಿ, ವಿಧಾನಸಭೆ ಪ್ರವೇಶಿಸಿದ್ದಾರೆ.
82 ವರ್ಷದ ಎಂ. ವೈ. ಪಾಟೀಲ್ ಕಾಂಗ್ರೆಸ್ ಪಕ್ಷದವರು. ಕಲಬುರಗಿ ಜಿಲ್ಲೆಯ ಅಫಜಲಪುರ ಕ್ಷೇತ್ರದಿಂದ 56313 ಮತಗಳನ್ನು ಪಡೆದು ಅವರು ಆಯ್ಕೆಯಾಗಿದ್ದಾರೆ.
ಬಾಗಲಕೋಟೆ ಕ್ಷೇತ್ರದಲ್ಲಿ ಜಯಗಳಿಸಿರುವ ಕಾಂಗ್ರೆಸ್ನ ಹೆಚ್. ವೈ. ಮೇಟಿಗೆ 77 ವರ್ಷ. ಈ ಬಾರಿ ಅವರು 79336 ಮತಗಳನ್ನು ಪಡೆದು ಶಾಸಕರಾಗಿ ಆಯ್ಕೆಗೊಂಡಿದ್ದಾರೆ.
ಆರ್. ವಿ. ದೇಶಪಾಂಡೆ (76) ಉತ್ತರ ಕನ್ನಡ ಜಿಲ್ಲೆಯ ಹಳಿಯಾಳ ಕ್ಷೇತ್ರದಿಂದ ಆಯ್ಕೆಯಾಗಿದ್ದಾರೆ. ಈ ಬಾರಿ ಅವರು 57240 ಮತಗಳನ್ನು ಪಡೆದು ಗೆಲುವು ಸಾಧಿಸಿದ್ದಾರೆ.
ಕಿರಿಯ ವಯಸ್ಸಿನ ಶಾಸಕರು; ನಂಜನಗೂಡು ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ದರ್ಶನ್ ಧ್ರುವ ನಾರಾಯಣ್ (28). ಕೆಪಿಸಿಸಿ ಕಾರ್ಯಾಧ್ಯಕ್ಷರಾಗಿದ್ದ ದಿ. ಆರ್. ಧ್ರುವನಾರಾಯಣ ಪುತ್ರ. ತಂದೆ, ತಾಯಿಯನ್ನು ಕಳೆದುಕೊಂಡ ದುಃಖದ ನಡುವೆಯೂ ಚುನಾವಣಾ ಕಣಕ್ಕಿಳಿದು 109125 ಮತಗಳನ್ನು ಪಡೆದು ಜಯಗಳಿಸಿದ್ದಾರೆ.
ಧೀರಜ್ ಮುನಿರಾಜು (31) ದೊಡ್ಡಬಳ್ಳಾಪುರದ ಬಿಜೆಪಿಯ ಅಭ್ಯರ್ಥಿಯಾಗಿದ್ದರು. ಚುನಾವಣೆಯಲ್ಲಿ 85144 ಮತಗಳನ್ನು ಪಡೆದು ಅವರು ಗೆಲುವು ಸಾಧಿಸಿದ್ದಾರೆ.
ನಾರಾ ಭರತ್ ರೆಡ್ಡಿ (33) ಬಳ್ಳಾರಿ ನಗರದ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದರು. 86440 ಮತಗಳನ್ನು ಪಡೆದು ಚುನಾವಣೆಯಲ್ಲಿ ಜಯಗಳಿಸಿದ್ದಾರೆ. ಕ್ಷೇತ್ರದಲ್ಲಿ ಬಿಜೆಪಿಯ ಸೋಮಶೇಖರ ರೆಡ್ಡಿ, ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಲಕ್ಷ್ಮಿ ಅರುಣ ಸೋಲಿಸಿದ್ದಾರೆ.
ಡಾ. ಚಂದ್ರು ಲಮಾಣಿ (34). ಶಿರಹಟ್ಟಿ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿದ್ದರು. 74489 ಮತಗಳನ್ನು ಪಡೆದು ಜಯಗಳಿಸಿ ವಿಧಾನಸಭೆ ಪ್ರವೇಶ ಮಾಡಿದ್ದಾರೆ. ವೈದ್ಯರಾದ ಇವರು ರಾಜಕೀಯಕ್ಕೆ ಬರಲು ಸರ್ಕಾರಿ ಉದ್ಯೋಗಕ್ಕೆ ರಾಜೀನಾಮೆ ನೀಡಿದ್ದರು.
ಅವಿನಾಶ್ ಜಾಧವ್ (34) ಕಲಬುರಗಿ ಜಿಲ್ಲೆಯ ಚಿಂಚೋಳಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿದ್ದರು. 69963 ಮತಗಳನ್ನು ಪಡೆದು ಜಯಗಳಿಸಿದ್ದಾರೆ. ಶಾಸಕರಾಗಿ ಆಯ್ಕೆಯಾಗುತ್ತಿರುವುದು 2ನೇ ಬಾರಿ. ಪಡೆದ ಮತಗಳು 69963. ತಂದೆ ಕಲಬುರಗಿ ಕ್ಷೇತ್ರದ ಬಿಜೆಪಿ ಸಂಸದ ಡಾ. ಉಮೇಶ್ ಜಾಧವ್.
ಡಾ. ಮಂಥರ್ ಗೌಡ (38) ಕೊಡಗು ಜಿಲ್ಲೆಯ ಮಡಿಕೇರಿ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ. ಮೊದಲ ಬಾರಿಗೆ ಅವರು ಶಾಸಕರಾಗಿ ಆಯ್ಕೆಯಾಗಿದ್ದಾರೆ. ಪಡೆದ ಮತಗಳು 84879. ಮಂಥರ್ ಗೌಡ ತಂದೆ ಎ. ಮಂಜು ಅರಕಲಗೊಡು ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿಯಾಗಿ ಜಯಗಳಿಸಿದ್ದಾರೆ.
ಪ್ರದೀಪ್ ಈಶ್ವರ್ (38) ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಬಿಜೆಪಿಯ ಡಾ. ಕೆ. ಸುಧಾಕರ್ ಸೋಲಿಸಿ ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾಗಿದ್ದಾರೆ. 86224 ಮತಗಳನ್ನು ಪಡೆದು ಜಯಗಳಿಸಿದ್ದಾರೆ.
ಪ್ರಿಯಕೃಷ್ಣ ಬೆಂಗಳೂರಿನ ಗೋವಿಂದರಾಜನಗರ ಕ್ಷೇತ್ರದ ಶಾಸಕರು. 39 ವರ್ಷದ ಇವರು 2ನೇ ಬಾರಿಗೆ ಶಾಸಕರಾಗಿ ಆಯ್ಕೆಯಾಗಿದ್ದಾರೆ. 82134 ಮತಗಳನ್ನು ಪಡೆದಿದ್ದಾರೆ. ತಂದೆ ಕೃಷ್ಣಪ್ಪ ಬೆಂಗಳೂರಿನ ವಿಜಯನಗರ ಕ್ಷೇತ್ರದ ಶಾಸಕರು.
36 ವರ್ಷದ ಜೆಡಿಎಸ್ನ ಜಿ. ಟಿ. ಹರೀಶ್ ಗೌಡ ಮೈಸೂರಿನ ಹುಣಸೂರು ಕ್ಷೇತ್ರದಿಂದ ಆಯ್ಕೆಯಾಗಿದ್ದಾರೆ. ಪಡೆದ ಮತಗಳು 94666. ಹರೀಶ್ ಗೌಡ ತಂದೆ ಚಾಮುಂಡೇಶ್ವರಿ ಕ್ಷೇತ್ರದ ಶಾಸಕ, ಮಾಜಿ ಸಚಿವ ಜಿ. ಟಿ. ದೇವೇಗೌಡ.
ಈ ಬಾರಿಯ ಚುನಾವಣೆಯಲ್ಲಿ ರಾಜ್ಯದ ಗಮನ ಸೆಳೆದಿದ್ದ ಕ್ಷೇತ್ರ ಹಾಸನ. ಜೆಡಿಎಸ್ನ ಸ್ವರೂಪ್ ಪ್ರಕಾಶ್ (40) ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಪಡೆದ ಮತಗಳು 85176.












Click it and Unblock the Notifications