ಕಿಂಗ್ಮೇಕರ್ ಆಗುವ ಜೆಡಿಎಸ್ ಕನಸಿಗೆ ಕೊಳ್ಳಿಯಿಟ್ಟ ಕರ್ನಾಟಕದ ಮತದಾರ!
ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಫಲಿತಾಂಶ ನಿಚ್ಚಳವಾಗಿದೆ. ಕಾಂಗ್ರೆಸ್ ಪಕ್ಷ ಪೂರ್ಣಬಹುಮತದೊಂದಿಗೆ ಅಧಿಕಾರಕ್ಕೇರುವುದು ಖಚಿತವಾಗಿದೆ. ಫಲಿತಾಂಶಕ್ಕೂ ಮುನ್ನ ರಾಜ್ಯದಲ್ಲಿ ಯಾವ ಪಕ್ಷಕ್ಕೂ ಬಹುಮತ ಕಷ್ಟ ಎಂಬ ಅಭಿಪ್ರಾಯಗಳು ದೊಡ್ಡ ಮಟ್ಟದಲ್ಲಿ ವ್ಯಕ್ತವಾಗಿತ್ತು. ಹೆಚ್ಚಿನ ಸಮೀಕ್ಷೆಗಳು ಕೂಡ ಈ ಅಭಿಪ್ರಾಯವನ್ನೇ ವ್ಯಕ್ತಪಡಿಸಿದ್ದು ಹೀಗಾಗಿ ಜೆಡಿಎಸ್ ಮತ್ತೊಮ್ಮೆ ಕಿಂಗ್ ಮೇಕರ್ ಆಗುವ ಕನಸು ಕಂಡಿತ್ತು. ಆದರೆ ಚುನಾವಣಾ ಫಲಿತಾಂಶ ಎಲ್ಲಾ ಲೆಕ್ಕಾಚಾರಗಳನ್ನು ತಲೆಕೆಳಗೆ ಮಾಡಿದೆ.
ಈ ಬಾರಿಯ ಚುನಾವಣೆಯಲ್ಲಿ ಜೆಡಿಎಸ್ ಪಕ್ಷ ಸಾಧ್ಯವಾದಷ್ಟು ಹೆಚ್ಚಿನ ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿ ಸರ್ಕಾರ ರಚನೆಯಲ್ಲಿ ನಿರ್ಣಾಯಕ ಪಾತ್ರವಹಿಸುವುದು ಲೆಕ್ಕಾಚಾರವಾಗಿತ್ತು. ಜೆಡಿಎಸ್ ನಾಯಕರು ಕೂಡ ಅದೇ ಆತ್ಮವಿಶ್ವಾಸದಲ್ಲಿದ್ದರು. 35ಕ್ಕಿಂತ ಹೆಚ್ಚಿನ ಸ್ಥಾನವನ್ನು ಗಳಿಸುವ ಆತ್ಮವಿಶ್ವಾಸವೂ ಜೆಡಿಎಸ್ ಪಕ್ಷದಲ್ಲಿತ್ತು. ಆದರೆ ಪಕ್ಷ ತೀವ್ರ ಹಿನ್ನಡೆ ಅನುಭವಿಸಿದ್ದು ಜೆಡಿಎಸ್ 20ರ ಆಸುಪಾಸಿನಲ್ಲಿರುವುದು ಆಘಾತವುಂಟು ಮಾಡಿದೆ.

ಹಾಸನ ಜಿಲ್ಲೆ ಹೊರತುಪಡಿಸಿ ಪ್ರಾಬಲ್ಯ ಇರುವ ಕ್ಷೇತ್ರಗಳಲ್ಲಿ ಆಘಾತ
ಈ ಚುನಾವಣೆಯಲ್ಲಿ ಜೆಡಿಎಸ್ ಪಕ್ಷ ಸಾಂಪ್ರದಾಯಿಕವಾಗಿ ಪ್ರಾಬಲ್ಯ ಹೊಂದಿರುವ ಕ್ಷೇತ್ರಗಳಲ್ಲಿಯೂ ಭಾರೀ ಹಿನ್ನಡೆ ಕಂಡಿದೆ. ಹಾಸನ ಜಿಲ್ಲೆ ಹೊರತುಪಡಿಸಿ ಉಳಿದ ಜಿಲ್ಲೆಗಳಲ್ಲಿ ಜೆಡಿಎಸ್ ಹಿಡಿತ ಕಳೆದುಕೊಂಡಿದೆ. ರಾಮನಗರದಲ್ಲಿ ಸ್ವತಃ ನಿಖಿಲ್ ಕುಮಾರಸ್ವಾಮಿ ಸೋಲು ಕಂಡಿದ್ದಾರೆ. ಮಂಡ್ಯದಲ್ಲಿಯೂ ಜೆಡಿಎಸ್ಗೆ ದೊಡ್ಡ ಹಿನ್ನಡೆಯಾಗಿದೆ. ಹೀಗಾಗಿ ನಿರೀಕ್ಷಿತ ಮಟ್ಟಕ್ಕಿಂತಲೂ ಜೆಡಿಎಸ್ ದೊಡ್ಡ ಪ್ರಮಾಣದಲ್ಲಿ ಸೀಟುಗಳನ್ನು ಕಳೆದುಕೊಂಡಿದೆ.
ಪೂರ್ಣಬಹುಮತ ನೀಡಿದ ಕರ್ನಾಟಕದ ಮತದಾರ
ಈ ಚುನಾವಣೆಯಲ್ಲಿ ಬಿಜೆಪಿ ಪಕ್ಷವನ್ನು ಅಧಿಕಾರದಿಂದ ಕೆಳಗಿಳಿಸಿದ ಕಾಂಗ್ರೆಸ್ ಭಾರೀ ಬಹುಮತದೊಂದಿಗೆ ಅಧಿಕಾರಕ್ಕೇರುತ್ತಿದೆ. ಅಧಿಕಾರದಲ್ಲಿದ್ದ ಬಿಜೆಪಿ ಪಕ್ಷಕ್ಕೆ ನಿರೀಕ್ಷೆಗೂ ಮೀರಿದ ಆಡಳಿತ ವಿರೋಧಿ ಬಿಸಿ ತಟ್ಟಿದ್ದು ತೀವ್ರ ಮುಖಭಂಗವಾಗಿದೆ. ಇದನ್ನು ಕಾಂಗ್ರೆಸ್ ಪಕ್ಷ ಅದ್ಭುತವಾಗಿ ಬಳಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದು ರಾಜಕೀಯ ಪಂಡಿತರ ಲೆಕ್ಕಾಚಾರ ಕೂಡ ತಲೆಕೆಳಗಾಗಿದೆ. ಈ ಮೂಲಕ ಪೂರ್ಣಬಹುಮತದೊಂದಿಗೆ ಕಾಂಗ್ರೆಸ್ ಅಧಿಕಾರಕ್ಕೇರುವಂತಾಗಿದೆ.
ಮತ ಎಣಿಕೆಗೂ ಮುನ್ನ ಕೇಂದ್ರಬಿಂದುವಾಗಿದ್ದ ಜೆಡಿಎಸ್
ಇನ್ನು ಈ ಚುನಾವಣಾ ಮತ ಎಣಿಕೆ ಪ್ರಕ್ರಿಯೆಗೂ ಮುನ್ನ ಜೆಡಿಎಸ್ ಕೇಂದ್ರಬಿಂದುವಾಗಿತ್ತು. ಹೆಚ್ಚಿನ ಚುನಾವಣೋತ್ತರ ಫಲಿತಾಂಶಗಳು ಅತಂತ್ರ ಸರ್ಕಾರದ ಭವಿಷ್ಯ ನುಡಿದಿದ್ದ ಕಾರಣ ಸರ್ಕಾರ ರಚನೆಯಲ್ಲಿ ಜೆಡಿಎಸ್ ಪಾತ್ರ ನಿರ್ಣಾಯಕ ಎಂಬ ನಿರೀಕ್ಷೆಯಿತ್ತು. ಚುನಾವಣೆಯ ಬಳಿಕ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್ಡಿ ಕುಮಾರಸ್ವಾಮಿ ಸಿಂಗಪೂರ್ಗೆ ತೆರಳಿದ್ದರೂ ಅಲ್ಲಿಂದ ಸಾಕಷ್ಟು ಸಕ್ರಿಯವಾಗಿದ್ದರು. ಗೆಲ್ಲುವ ಸಂಭಾವ್ಯ ಅಭ್ಯರ್ಥಿಗಳೊಂದಿಗೆ ಸಂಪರ್ಕದಲ್ಲಿದ್ದ ಕುಮಾರಸ್ವಾಮಿ ಯಾವುದೇ ಪಕ್ಷಗಳಿಂದಲೂ ಆಪರೇಶನ್ಗೆ ಒಳಗಾದಂತೆ ರಣತಂತ್ರಗಳನ್ನು ಹಣೆದಿದ್ದರು.
ಬೆಂಬಲ ನೀಡಲು ಷರತ್ತುಗಳ ಪಟ್ಟಿ ಸಿದ್ದಗೊಳಿಸಿದ್ದ ಜೆಡಿಎಸ್
ಅತಂತ್ರ ಸರ್ಕಾರದ ಮುನ್ಸೂಚನೆಯಿದ್ದ ಕಾರಣ ಯಾವ ಪಕ್ಷಕ್ಕೆ ತಮ್ಮ ಬೆಂಬಲ ಎಂಬ ಬಗ್ಗೆ ಕುಮಾರಸ್ವಾಮಿ ಪ್ರತಿಕ್ರಿಯಿಸಿದ್ದರು. ಯಾವ ಪಕ್ಷ ತಮ್ಮ ಷರತ್ತುಗಳಿಗೆ ಒಪ್ಪಲಿದೆಯೋ ಅದರೊಂದಿಗೆ ಮೈತ್ರಿಗೆ ಸಿದ್ದ ಎಂದಿದ್ದರು ಕುಮಾರಸ್ವಾಮಿ. ಅಲ್ಲದೆ ಈ ಹಿನ್ನೆಲೆಯಲ್ಲಿ ತಮ್ಮ ಷರತ್ತುಗಳ ಪಟ್ಟಿಯನ್ನು ಕೂಡ ಜೆಡಿಎಸ್ ಸಿದ್ದಪಡಿಸಿಕೊಂಡಿತ್ತು. ಇದರಲ್ಲಿ ಪೂರ್ಣಾವಧಿಗೆ ಕುಮಾರಸ್ವಾಮಿ ಮುಖ್ಯಮಂತ್ರಿ ಸೇರಿದಂತೆ ಕೆಲ ಪ್ರಮುಖ ಖಾತೆಗಳ ಬೇಡಿಕೆಗಳು ಕೂಡ ಒಳಗೊಂಡಿತ್ತು.












Click it and Unblock the Notifications