ಎಣ್ಣೆ ಪ್ರಿಯರಿಗೆ ಬಿಗ್ ಶಾಕ್; ಈ 3 ದಿನ ಕರ್ನಾಟಕದಲ್ಲಿ ಮದ್ಯದ ಅಂಗಡಿ ಬಂದ್
2023ರ ಕರ್ನಾಟಕ ವಿಧಾನಸಭೆ ಚುನಾವಣೆಗೆ ಅಖಾಡ ಸಿದ್ಧವಾಗಿದ್ದು, ಮೇ 10ರಂದು ನಡೆಯುವ ಮತದಾನಕ್ಕೆ ಮುನ್ನ ರಾಜಕೀಯ ನಾಯಕರು ಮತ್ತು ಅಭ್ಯರ್ಥಿಗಳು ಮತದಾರರ ಓಲೈಕೆಗೆ ಪ್ರಚಾರದ ಭರಾಟೆ ನಡೆಸಿದ್ದಾರೆ. ಸಾಮಾನ್ಯ ಕಾರ್ಯಕರ್ತನಿಂದ ಹಿಡಿದು ರಾಷ್ಟ್ರೀಯ ನಾಯಕರವರೆಗೂ ಮತಬೇಟೆಗೆ ಇಳಿದಿದ್ದಾರೆ.
ಇದೇ ವೇಳೆ ರಾಜ್ಯದಲ್ಲಿ ಚುನಾವಣೆ ನಡೆಯುತ್ತಿರುವುದರಿಂದ ಮದ್ಯ ಮಾರಾಟ ಜೋರಾಗಿದ್ದು, ಬಾರ್ ಮಾಲೀಕರು ಖುಷಿಯಾಗಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ. ಪ್ರಚಾರದಲ್ಲಿ ಭಾಗವಹಿಸುವ ಜನರಿಗೆ ಮದ್ಯದ ಆಮಿಷ ಒಡ್ಡುತ್ತಿರುವ ಮಾತುಗಳೂ ಕೇಳಿಬರುತ್ತಿವೆ.

ಇದೀಗ ಕರ್ನಾಟಕದಲ್ಲಿ ಮೂರು ದಿನ ಮದ್ಯದ ಅಂಗಡಿಗಳನ್ನು ಬಂದ್ ಮಾಡಲು ನಿರ್ಧರಿಸಲಾಗಿದೆ. 2023 ರ ವಿಧಾನಸಭೆ ಚುನಾವಣೆ ನಡೆಯುತ್ತಿರುವ ಕಾರಣ ಬಾರ್ಗಳನ್ನು ಮುಚ್ಚಲಾಗುತ್ತದೆ. ಈ ಮೂರು ದಿನಗಳ ಕಾಲ ರಾಜ್ಯದಲ್ಲಿ ಎಣ್ಣೆ ಸಿಗುವುದಿಲ್ಲ. ಇದು ಮದ್ಯಪ್ರಿಯರಿಗೆ ಕಹಿ ಸುದ್ದಿಯಾಗಿರಲಿದೆ ಎಂದರೆ ಸುಳ್ಳಲ್ಲ.
ಎರಡು ವರ್ಷಗಳ ಹಿಂದೆ ಕೊರೊನಾ ಲಾಕ್ಡೌನ್ನಿಂದ ಮದ್ಯ ಸಿಗದೇ ಜನರು ಪರದಾಡಿರುವುದು ಇನ್ನೂ ಕಣ್ಣು ಮುಂದೆ ಇದೆ. ಇದೀಗ ಚುನಾವಣೆ ಬಂದಿರುವುದರಿಂದ ಈಗ ಮತ್ತೆ ರಾಜ್ಯದಲ್ಲಿ ಮೂರು ದಿನಗಳ ಕಾಲ ಮದ್ಯದ ಬಾಟಲಿ ಸಿಗುವುದಿಲ್ಲ.

ಮೇ 8ರ ಮಧ್ಯರಾತ್ರಿಯಿಮದ ಮೇ 10ರ ಮಧ್ಯರಾತ್ರಿಯವರೆಗೂ ಮದ್ಯ ಸಿಗುವುದಿಲ್ಲ. ಮೇ 10ರಂದು ರಾಜ್ಯದಲ್ಲಿ ಮತದಾನ ನಡೆಯಲಿದೆ. ಹೀಗಾಗಿ ಮತದಾನಕ್ಕೂ ಒಂದು ದಿನ ಮುನ್ನವೇ ರಾಜ್ಯದಲ್ಲಿ ಸಾರಾಯಿ ಬಂದ್ ಮಾಡಲಾಗುತ್ತದೆ.
ಇನ್ನು ಮೇ 13ರಂದು ಕರ್ನಾಟಕ ವಿಧಾನಸಭೆ ಚುನಾವಣಾ ಫಲಿತಾಂಶ ಇರುವುದರಿಂದ ಮೇ 12ರ ಮಧ್ಯರಾತ್ರಿಯಿಂದ ಮೇ 13ರ ಮಧ್ಯರಾತ್ರಿಯವರೆಗೂ ಮದ್ಯ ಮಾರಾಟಕ್ಕೆ ಕಡಿವಾಣ ಬೀಳಲಿದೆ.
ಚುನಾವಣೆ ವೇಳೆ ಶಾಂತಿ ಪಾಲನೆ, ಕಾನೂನು ಸುವ್ಯವಸ್ಥೆ ಹಾಗೂ ಸಾರ್ವಜನಿಕರ ಹಿತದೃಷ್ಟಿಯಿಂದ ಮದ್ಯ ಮಾರಾಟ ಹಾಗೂ ಸಾಗಾಟದ ಮೇಲೆ ನಿರ್ಬಂಧ ಹೇರಲಾಗಿದೆ. ರಾಜ್ಯದಲ್ಲಿ ಯಾವುದೇ ಗಲಾಟೆ ಮತ್ತು ದೊಂಬಿಗೆ ಅವಕಾಶ ಮಾಡಿಕೊಡದಂತೆ ಚುನಾವಣಾ ಆಯೋಗ ಈ ನಿರ್ಧಾರ ತೆಗೆದುಕೊಳ್ಳಲಿದೆ.

ಮದ್ಯ ಮಾರಾಟ ಎಂಆರ್ಪಿ ಮಳಿಗೆ, ಬಾರ್ ಮತ್ತು ರೆಸ್ಟೋರೆಂಟ್, ಮದ್ಯ ತಯಾರಿಸುವ ಡಿಸ್ಟಲರಿ, ಸ್ಟಾರ್ ಹೋಟೆಲ್ಗಳು ಹಾಗೂ ಶೇಂದಿ ಅಂಗಡಿಗಳಿಗೂ ಈ ನಿರ್ಬಂಧ ಅನ್ವಯ ಆಗುತ್ತದೆ.
ಇನ್ನು ಕರ್ನಾಟಕ ಗಡಿ ಭಾಗದ ಮಹಾರಾಷ್ಟ್ರದ ಲಾತೂರ್ ಜಿಲ್ಲೆಯಲ್ಲಿ ಇರುವ ನಿಲಂಗಾ, ದೇವಾನಿ ಹಾಗೂ ಉದ್ಗಿರ್ ತಾಲ್ಲೂಕುಗಳಲ್ಲಿ ಮದ್ಯ ನಿಷೇಧ ನಿಯಮ ಅನ್ವಯವಾಗಲಿದೆ. ಕರ್ನಾಟಕದ ಗಡಿಯಿಂದ 5 ಕಿಮೀ ವ್ಯಾಪ್ತಿಯಲ್ಲಿ ಅನ್ಯ ರಾಜ್ಯಗಳ ಗ್ರಾಮ, ನಗರ, ಪಟ್ಟಣಗಳಲ್ಲಿ ಮದ್ಯ ಮಾರಾಟ ಮಾಡುವಂತಿಲ್ಲ. ಒಂದು ವೇಳೆ ಈ ನಿಯಮ ಮುರಿದರೆ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆಯಾಗುತ್ತದೆ.
2023ರ ಕರ್ನಾಟಕ ವಿಧಾನಸಭೆ ಚುನಾವಣೆಗೆ ಈಗಾಗಲೇ ನಾಮಪತ್ರ ಸಲ್ಲಿಕೆ, ಪರಿಶೀಲನೆ ಮತ್ತು ನಾಮಪತ್ರ ವಾಪಸ್ ಪ್ರಕ್ರಿಯೆ ಕೊನೆಗೊಂಡಿದೆ. ಮೇ 10ರಂದು ಒಂದೇ ಹಂತದಲ್ಲಿ ಮತದಾನ ನಡೆಯಲಿದ್ದರೆ, ಮೇ 13ರಂದು ಫಲಿತಾಂಶ ಪ್ರಕಟವಾಗಲಿದ್ದು, ಬಳಿಕ ಯಾವ ಪಕ್ಷ ರಾಜ್ಯದಲ್ಲಿ ಸರ್ಕಾರ ರಚಿಸಲಿದೆ ಎಂಬ ಕುತೂಹಲ ಮೂಡಿದೆ.












Click it and Unblock the Notifications