ಸಿಎಂ ಸ್ಥಾನಕ್ಕೆ ಮಲ್ಲಿಕಾರ್ಜುನ ಖರ್ಗೆ ಹೆಸರು: ಸಿದ್ದರಾಮಯ್ಯ ವಿರುದ್ಧ ಡಿಕೆ ಶಿವಕುಮಾರ್ ಮಾಸ್ಟರ್ ಪ್ಲ್ಯಾನ್ ಹೀಗಿದೆ
ಬೆಂಗಳೂರು, ಏಪ್ರಿಲ್. 10: ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಜಯಭೇರಿ ಬಾರಿಸಿದರೆ ಮುಖ್ಯಮಂತ್ರಿ ಸ್ಥಾನಕ್ಕಾಗಿ ಡಿಕೆ ಶಿವಕುಮಾರ್ ಮತ್ತು ಹಿರಿಯ ನಾಯಕ ಸಿದ್ದರಾಮಯ್ಯ ಅವರ ನಡುವಿನ ಪೈಪೋಟಿ ತೀವ್ರವಾಗುತ್ತಿದೆ. ಇದರ ಜೊತೆಗೆ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಎಐಸಿಸಿ ಮುಖ್ಯಸ್ಥ ಮಲ್ಲಿಕಾರ್ಜುನ ಖರ್ಗೆ ಅವರ ಹೆಸರನ್ನು ತರಲು ಪ್ರಯತ್ನಿಸುತ್ತಿರುವುದು ಪಕ್ಷದಲ್ಲಿ ಹೊಸ ಚರ್ಚೆಗೆ ಕಾರಣವಾಗಿದೆ.
ಮಲ್ಲಿಕಾರ್ಜುನ ಖರ್ಗೆ ಅವರನ್ನು ಸಿಎಂ ಸ್ಥಾನಕ್ಕೆ ಹೆಸರಿಸಿರುವ ಕೆಪಿಸಿಸಿ ಮುಖ್ಯಸ್ಥ ಡಿಕೆ ಶಿವಕುಮಾರ್ ಅವರ ಕ್ರಮವು ಪಕ್ಷದೊಳಗೆ 'ದಲಿತ ಸಿಎಂ' ಮತ್ತು 'ಮೂಲ ವರ್ಸಸ್ ವಲಸಿಗರು' ಎಂಬ ಚರ್ಚೆಯನ್ನು ಮತ್ತೆ ಮುನ್ನಲೆಗೆ ತಂದಿದೆ. ಈ ಮೂಲಕ ಸಿದ್ದರಾಮಯ್ಯ ಅವರ ಸಿಎಂ ಕನಸಿಗೆ ದೊಡ್ಡ ಹೊಡೆತ ನೀಡುವ ಪ್ರಯತ್ನವೆಂದು ಕೆಲವರು ಅಭಿಪ್ರಾಯಪಡುತ್ತಾರೆ.

ಮಲ್ಲಿಕಾರ್ಜುನ ಖರ್ಗೆ ಮುಖ್ಯಮಂತ್ರಿಯಾದರೆ ಅವರ ನೇತೃತ್ವದಲ್ಲಿ ಕೆಲಸ ಮಾಡಲು ಇಷ್ಟಪಡುತ್ತೇನೆ. ಹಿರಿಯ ನಾಯಕರಿಗೆ ಈ ಹಿಂದೆಯೂ ಅನ್ಯಾಯವಾಗಿದೆ ಎಂಬ ಧ್ವನಿ ಪಕ್ಷದೊಳಗೆ ಕೇಳಿಬರುತ್ತಿದೆ ಎಂದು ಡಿಕೆ ಶಿವಕುಮಾರ್ ಹೇಳಿದ್ದು, ಅವರ ಈ ಹೇಳಿಕೆಗೆ ರಾಜ್ಯ ಕಾಂಗ್ರೆಸ್ನಲ್ಲಿ ಹಲವು ಗೊಂದಲಗಳಿಗೆ ಕಾರಣವಾಗಿದೆ. ಆದರೆ, ಪಕ್ಷದ ತೀರ್ಮಾನವೇ ಅಂತಿಮ ಎಂದು ಸಮರ್ಥಿಸಿಕೊಂಡಿದ್ದಾರೆ.
"ಖರ್ಗೆ ಅವರು ನಮ್ಮ ಹಿರಿಯ ನಾಯಕರು ಮತ್ತು ಎಐಸಿಸಿ ಅಧ್ಯಕ್ಷರು, ಅವರು ಅದನ್ನು (ಸಿಎಂ ಸ್ಥಾನ) ಕೇಳಿಲ್ಲ, ಕಾಂಗ್ರೆಸ್ ಅಧಿಕಾರಕ್ಕೆ ಬರಬೇಕು ಎಂಬುದು ಅವರ ಏಕೈಕ ಆಸೆ.ಅವರು ಹಿರಿಯ ನಾಯಕರಾಗಿದ್ದು, ಈ ಹಿಂದೆಯೂ ಅವರಿಗೆ ಅನ್ಯಾಯವಾಗಿದೆ ಎಂಬ ಧ್ವನಿಗಳು ಕೇಳಿ ಬರುತ್ತಿವೆ,'' ಎಂದು ಖರ್ಗೆ ಅವರ ಹೆಸರನ್ನು ಮುನ್ನೆಲೆಗೆ ತರುವ ಪ್ರಶ್ನೆಗೆ ಶಿವಕುಮಾರ್ ಪ್ರತಿಕ್ರಿಯಿಸಿದ್ದಾರೆ.
ಶೃಂಗೇರಿಯಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಕ್ಷ ಹೇಳಿದಂತೆ ನಡೆದುಕೊಳ್ಳಬೇಕು, ಮಲ್ಲಿಕಾರ್ಜುನ ಖರ್ಗೆ ಪಕ್ಷದ ಚುಕ್ಕಾಣಿ ಹಿಡಿದಿದ್ದಾರೆ. ನಾನು ಅದನ್ನು ಪಕ್ಷಕ್ಕೆ ಬಿಡುತ್ತೇನೆ, ಸಿದ್ದರಾಮಯ್ಯ ಸೇರಿ ಇತರರೂ ಪಕ್ಷಕ್ಕೆ ಬದ್ಧರಾಗುತ್ತಾರೆ. ಅದು ಮುಖ್ಯವಾದುದು" ಎಂದು ಹೇಳಿದ್ದಾರೆ. ಆದರೆ, ಅವರ ಹೇಳಿಕೆಗಲು ಸಿದ್ದರಾಮಯ್ಯ ಅವರನ್ನು ಈ ಸಿರಂ ಸ್ಪರ್ಧೆಯಿಮದ ಹೊರಗಿಡುವ ಪ್ರಯತ್ನವೆಂದು ನೋಡಲಾಗುತ್ತಿದೆ.

ಶಿವಕುಮಾರ್ ಮತ್ತು ಸಿದ್ದರಾಮಯ್ಯ ಇಬ್ಬರೂ ಕಾಂಗ್ರೆಸ್ ಅಧಿಕಾರಕ್ಕೆ ಬಂದ ಸಂದರ್ಭದಲ್ಲಿ ಮುಖ್ಯಮಂತ್ರಿ ಹುದ್ದೆಯ ಪ್ರಮುಖ ಆಕಾಂಕ್ಷಿಗಳು. ಈ ಹಿಂದೆ ಖರ್ಗೆ ಅವರು ಸಿಎಂ ಆಗಬೇಕಾದರೆ ಸ್ಪರ್ಧೆಯಿಂದ ಹಿಂದೆ ಸರಿಯುತ್ತಾರೆಯೇ ಎಂಬ ಪ್ರಶ್ನೆಗೆ ಶಿವಕುಮಾರ್ ಅವರು ನೀಡಿದ ಉತ್ತರದಿಂದ ಈಗ ದಲಿತ ಸಿಎಂ ಮತ್ತು ಮೂಲ ವರ್ಸಸ್ ವಲಸಿಗ ಎಂಬ ಚರ್ಚೆಗಳು ಪ್ರಾರಂಭವಾಗಿದೆ.
ಪಕ್ಷದ ಮೂಲಗಳ ಪ್ರಕಾರ, ಖರ್ಗೆ ಅವರು ಮೂರು ಬಾರಿ ಮುಖ್ಯಮಂತ್ರಿಯಾಗುವ ಸ್ಪರ್ಧೆಯಲ್ಲಿ ಸೋಲು ಕಂಡಿದ್ದಾರೆ. 1999 ರಲ್ಲಿ ಎಸ್ ಎಂ ಕೃಷ್ಣ, 2004 ರಲ್ಲಿ ಎನ್ ಧರಂ ಸಿಂಗ್ ಮತ್ತು 2013 ರಲ್ಲಿ ಸಿದ್ದರಾಮಯ್ಯ ವಿರುದ್ಧ ಸೋಲು ಕಂಡಿದ್ದು, ಒಮ್ಮೆಯೂ ಸಿಎಂ ಸ್ಥಾನದಲ್ಲಿ ಕುಳಿತಿಲ್ಲ. ಆದರೆ, ಪಕ್ಷದ ಕೆಲವು ಪದಾಧಿಕಾರಿಗಳು ಖರ್ಗೆ ಅವರು ಹೊಂದಿರುವ ಸ್ಥಾನಗಳು ಮತ್ತು ಜವಾಬ್ದಾರಿಗಳನ್ನು ಗಮನಿಸಿದರೆ ರಾಜ್ಯ ರಾಜಕೀಯಕ್ಕೆ ಮರಳುವ ಸಾಧ್ಯತೆಗಳು ಬಹಳ ಸೀಮಿತವಾಗಿವೆ ಎಂದು ತಿಳಿಸುತ್ತಾರೆ.
"ಎಐಸಿಸಿ ಅಧ್ಯಕ್ಷರಾಗಿ ಅವರು 2024 ರ ಲೋಕಸಭೆ ಚುನಾವಣೆಯಲ್ಲಿ ಮತ್ತು ಮುಂದೆ ದೊಡ್ಡ ಪಾತ್ರವನ್ನು ವಹಿಸುತ್ತಾರೆ. ಪಕ್ಷವನ್ನು ಮುನ್ನಡೆಸುವುದು, ಚುನಾವಣೆಗೆ ಪಕ್ಷವನ್ನು ಸಿದ್ಧಪಡಿಸುವುದು ಮತ್ತು ಇತರರ ನಡುವೆ ವಿರೋಧ ಪಕ್ಷಗಳ ಒಗ್ಗಟ್ಟು ಮೂಡಿಸುವುದು ಅವರ ಜವಾಬ್ದಾರಿಯಾಗಿದೆ" ಎಂದು ಪಕ್ಷದ ಪದಾಧಿಕಾರಿಯೊಬ್ಬರು ಹೇಳಿದ್ದಾರೆ.
ಆದರೆ, ದಲಿತ ಸಮುದಾಯದ 80ರ ಹರೆಯದ ನಾಯಕ ಖರ್ಗೆ ಕುರಿತು ಶಿವಕುಮಾರ್ ನೀಡಿರುವ ಹೇಳಿಕೆಗಳು ಮತ್ತೊಮ್ಮೆ ಕಾಂಗ್ರೆಸ್ನಲ್ಲಿ ದಲಿತ ಸಿಎಂ ಬಗ್ಗೆ ಚರ್ಚೆಗೆ ಕಾರಣವಾಗಿದ್ದು, ಸಮುದಾಯದ ಇತರ ಹಿರಿಯ ನಾಯಕರಾದ ಜಿ ಪರಮೇಶ್ವರ ಮತ್ತು ಕೆ ಎಚ್ ಮುನಿಯಪ್ಪ ಅವರ ಬಗ್ಗೆಯೂ ಗಮನಹರಿಸುವಂತೆ ಮಾಡಿದೆ. ಪಕ್ಷ ಅಧಿಕಾರಕ್ಕೆ ಬಂದರೆ ಮುಖ್ಯಮಂತ್ರಿ ಹುದ್ದೆಯ ಆಕಾಂಕ್ಷಿಗಳಲ್ಲಿ ನಾನೂ ಇದ್ದೇನೆ ಎಂದು ಇತ್ತೀಚೆಗಷ್ಟೇ ಕಣಕ್ಕೆ ಇಳಿದ ಪರಮೇಶ್ವರ ಹೇಳಿದ್ದರು.
ಎಚ್ ಡಿ ಕುಮಾರಸ್ವಾಮಿ ನೇತೃತ್ವದ ಕಾಂಗ್ರೆಸ್-ಜೆಡಿ(ಎಸ್) ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಜಿ. ಪರಮೇಶ್ವರ ಅವರು ಉಪಮುಖ್ಯಮಂತ್ರಿಯಾಗಿದ್ದರು ಮತ್ತು ಕೆಪಿಸಿಸಿ ಮುಖ್ಯಸ್ಥರಾಗಿ (ಎಂಟು ವರ್ಷಗಳು) ದೀರ್ಘಕಾಲ ಸೇವೆ ಸಲ್ಲಿಸಿದ್ದರು. ಮುನಿಯಪ್ಪ ಅವರು ಪಕ್ಷದ ಹಿರಿಯ ನಾಯಕ ಮತ್ತು ಕೋಲಾರದಿಂದ ಏಳು ಬಾರಿ ಸಂಸದರಾಗಿದ್ದಾರೆ.
ಅಲ್ಲದೆ, ಸಿದ್ದರಾಮಯ್ಯ ಈಗಾಗಲೇ 2013-18ರ ನಡುವೆ ಸಿಎಂ ಹುದ್ದೆ ಅಲಂಕರಿಸಿರುವ ಹಿನ್ನೆಲೆಯಲ್ಲಿ ಈ ಬಾರಿ ಯಾರೋ 'ಮೂಲ' ಕಾಂಗ್ರೆಸಿಗರನ್ನು ಮುಖ್ಯಮಂತ್ರಿ ಮಾಡಬೇಕು ಎಂಬ ದನಿ ಕಾಂಗ್ರೆಸ್ನೊಳಗೆ ಕೇಳಿ ಬರುತ್ತಿದೆ. 2006ರಲ್ಲಿ ಜೆಡಿಎಸ್ನಿಂದ ಉಚ್ಛಾಟನೆಗೊಂಡು ಸಿದ್ದರಾಮಯ್ಯ ಕಾಂಗ್ರೆಸ್ ಸೇರಿದ್ದರು.












Click it and Unblock the Notifications