ಕರ್ನಾಟಕ; ಅಕ್ಟೋಬರ್ 22ರ ಜಿಲ್ಲಾಸುದ್ದಿಗಳು

ಬೆಂಗಳೂರು, ಅಕ್ಟೋಬರ್ 22; ಕರ್ನಾಟಕದ ವಿವಿಧ ಜಿಲ್ಲೆಗಳ ರಾಜಕೀಯ, ಅಪರಾಧ ಸುದ್ದಿಗಳ ಗುಚ್ಛ ಇಲ್ಲಿದೆ. ರಾಜ್ಯದ ವಿವಿಧ ಜಿಲ್ಲೆಗ ಸುದ್ದಿಗಳನ್ನು ಸಂಕ್ಷಿಪ್ತವಾಗಿ ಹೇಳುವ ಪುಟ ಇದಾಗಿದೆ.

ಮೈಸೂರು; ಚಾಮುಂಡಿ ಬೆಟ್ಟಕ್ಕೆ ನಿಖಿಲ್ ಕುಮಾರಸ್ವಾಮಿ ಭೇಟಿ ನೀಡಿದ್ದು, ಈ ವೇಳೆ ಶಾಸಕ ಜಿ. ಟಿ. ದೇವೇಗೌಡ ಪುತ್ರ ಹರೀಶ್ ಗೌಡ ಜೊತೆ ಕಾಣಿಸಿಕೊಂಡು ರಾಜಕೀಯ ವಲಯದಲ್ಲಿ ಅಚ್ಚರಿಗೆ ಕಾರಣವಾಗಿದ್ದಾರೆ.

ಚಾಮುಂಡೇಶ್ವರಿ ಕ್ಷೇತ್ರದ ಜೆಡಿಎಸ್ ಶಾಸಕ ಜಿ. ಟಿ‌. ದೇವೇಗೌಡ ಜೆಡಿಎಸ್‌ನಲ್ಲಿಯೇ ಉಳಿಯಲಿದ್ದಾರೆಂದು ಕೆ. ಟಿ. ಶ್ರೀಕಂಠೇಗೌಡ ಕೆಲವು ದಿನಗಳ ಹಿಂದೆ ಹೇಳಿಕೆ ನೀಡಿದ್ದರು. ಮೂರು ದಿನಗಳ ಹಿಂದೆಯಷ್ಟೇ ಶಾಸಕಿ ಅನಿತಾ ಕುಮಾರಸ್ವಾಮಿ ಜಿ. ಟಿ. ದೇವೇಗೌಡರ ಪತ್ನಿ ಭೇಟಿ ಮಾಡಿದ್ದರು. ಇದಾದ ಬಳಿಕ ಈಗ ನಿಖಿಲ್ ಕುಮಾರಸ್ವಾಮಿ ಹಾಗೂ ಹರೀಶ್ ಗೌಡ ಭೇಟಿ ತೀವ್ರ ಕೂತೂಹಲ ಹುಟ್ಟಿಸಿದೆ.

 Karnataka District News Roundup 22th October 2021: News On Politics, Crime

ಈ ಕುರಿತು ಮಾತನಾಡಿರುವ ನಿಖಿಲ್ ಕುಮಾರಸ್ವಾಮಿ, "ನನ್ನ ಹೊಸ ಚಿತ್ರಕ್ಕೆ ಆಶೀರ್ವಾದ ಪಡೆಯಲು ಬಂದಿದ್ದೇನೆ. ರಾಜ್ಯದ ಜನಕ್ಕೆ ಒಳಿತು ಮಾಡಲಿ ಅಂತಾ ಬೇಡಿಕೊಂಡಿದ್ದೇನೆ. ಯಾವುದೇ ರೀತಿಯ ರಾಜಕೀಯ ಮಾಡಲು ಬಂದಿಲ್ಲ" ಎಂದರು.

"ನನ್ನ ಹಾಗೂ ಹರೀಶ್ ಗೌಡರ ಸ್ನೇಹ ದೊಡ್ಡದು. ರಾಜಕೀಯ ಹೊರತಾಗಿ ನಮ್ಮ ಸ್ನೇಹ ಇದೆ. ಸಂಘಟನೆ ವಿಚಾರದಲ್ಲಿ ಎಲ್ಲವೂ ಸರಿ ಹೋಗುತ್ತದೆ. ಮುಂದಿನ ದಿನಗಳಲ್ಲಿ ಬದಲಾವಣೆಗಳು ಇವೆ. ಎಲ್ಲ ಸಮಸ್ಯೆಗಳು ಸರಿ ಹೋಗುತ್ತದೆ" ಎಂದು ಉತ್ತರಿಸಿದರು.

ಅಪೆಕ್ಸ್ ಬ್ಯಾಂಕ್ ರಾಜ್ಯ ಉಪಾಧ್ಯಕ್ಷ ಜಿ. ಡಿ. ಹರೀಶ್ ಗೌಡ ಮಾತನಾಡಿ, "ಈ ಭೇಟಿಯಲ್ಲಿ ಯಾವುದೇ ರಾಜಕೀಯ ಇಲ್ಲ. ನಾನು ಮತ್ತು ನಿಖಿಲ್ ಒಳ್ಳೆಯ ಸ್ನೇಹಿತರಾಗಿದ್ದೇವೆ. ಮೈಸೂರಿಗೆ ಬಂದಾಗ ಅವರನ್ನು ಭೇಟಿ ಮಾಡುತ್ತೇನೆ. ಇದರಲ್ಲಿ ಯವುದೇ ರಾಜಕೀಯ ಇಲ್ಲ. ರಾಜಕೀಯ ಬೆಳವಣಿಗೆಗಳ ಬಗ್ಗೆ ಯಾವುದೇ ಚರ್ಚೆ ಮಾಡಿಲ್ಲ" ಎಂದು ಹೇಳಿದರು.

ನಿಖಿಲ್, ಹರೀಶ್ ಗೌಡರ ಭೇಟಿ ಸಂದರ್ಭದಲ್ಲಿ ಶಾಸಕ ಸಿ. ಎಸ್. ಪುಟ್ಟರಾಜು ಪುತ್ರ ಶಿವರಾಜ್ ಸಾಥ್ ನೀಡಿದ್ದು, ಮುಂದಿನ ದಿನಗಳಲ್ಲಿ ಈ ಭೇಟಿಗಳು ಯಾವ ತಿರುವು ಪಡೆಯಲಿದೆ ಎಂಬುದನ್ನು ಕಾದು ನೋಡಬೇಕಿದೆ.

ರಾಮನಗರ ಸುದ್ದಿ; ಮಳೆಯಿಂದ ಭರ್ತಿಯಾಗಿದ್ದ ಕಟ್ಟೆಯಲ್ಲಿ ಈಜಲು ಹೋದ ಇಬ್ಬರು ಬಾಲಕರು ನೀರು ಪಾಲಗಿರುವ ಘಟನೆ ಕೆಂಚನಕುಪ್ಪೆ ಗ್ರಾಮದಲ್ಲಿ ನಡೆದಿದೆ. ಬಿಡದಿಯ ಹೋಬಳಿಯ ಕೆಂಚನಕುಪ್ಪೆ ಗ್ರಾಮದ ಬಳಿಯ ಕುಂಬಾರಕಟ್ಟೆಯಲ್ಲಿ ಈಜಲು ಹೋಗಿ ನೀರಿನಲ್ಲಿ ಮುಳುಗಿ ಇಬ್ಬರು ಶಾಲಾ ಬಾಲಕರು ಸಾವನ್ನಪ್ಪಿದ್ದಾರೆ.

ಬಿಡದಿಯ ಸರ್ಕಾರಿ ಶಾಲೆಯಲ್ಲಿ 5ನೇ ತರಗತಿ ಓದುತ್ತಿದ್ದ ಕೌಶಿಕ್(12) ಮತ್ತು ಕರ್ಣ(11) ಮೃತ ಬಾಲಕರು. ಇತ್ತೀಚಿಗೆ ಸುರಿದ ಭಾರಿ ಮಳೆಯಿಂದ ಕುಂಬಾರಕಟ್ಟೆ ಭರ್ತಿಯಾಗಿದ್ದು, ಕೆರೆಯ ಆಳ ಅರಿಯದೇ ದುರ್ಘಟನೆ ಸಂಭವಿಸಿದೆ. ಬೆಳಗ್ಗೆ ಕಟ್ಟೆಯಲ್ಲಿ ಈಜಾಡುತ್ತಿದ್ದ ಬಾಲಕರನ್ನು ಸ್ಥಳೀಯರು ಗದರಿಸಿ ಮನೆಗೆ ಕಳುಹಿಸಿದ್ದರು. ಆದರೆ ಸಂಜೆ ವೇಳೆಗೆ ಮತ್ತೆ ವಾಪಸ್ ಬಂದ ಬಾಲಕರು ಕಟ್ಟೆಯಲ್ಲಿ ಈಜಾಡಲು ಹೋಗಿ ಮುಳುಗಿ ಕಣ್ಮರೆಯಾಗಿದ್ದರು.

ನುರಿತ ಈಜುಗಾರರಿಂದ ಬಾಲಕರ ಮೃತ ದೇಹಗಳನ್ನು ಹೊರಗೆ ತೆಗೆಯಲಾಗಿದೆ. ಸ್ಥಳಕ್ಕೆ ಬಿಡದಿ ಪೋಲಿಸರು ಧಾವಿಸಿ ಪರಿಶೀಲನೆ ನಡೆಸಿದ್ದು ಮುಂದಿನ ಕ್ರಮ ಕೈಗೊಂಡಿದ್ದಾರೆ. ಮೃತ ಬಾಲಕರ ಶವಗಳನ್ನು ರಾಜರಾಜೇಶ್ವರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ನಂತರ ಪೋಷಕರಿಗೆ ಮೃತದೇಹ ಹಸ್ತಾಂತರಿಸಿದ್ದು, ಬಿಡದಿ ಪೊಲೀಸ್ ಠಾಣೆಯಲ್ಲಿ‌ ದೂರು ದಾಖಲಾಗಿದೆ.

ಶಿವಮೊಗ್ಗ ಸುದ್ದಿ; ಕಾಮಗಾರಿ ಬಿಲ್ ಮೊತ್ತವನ್ನು ಮಂಜೂರು ಮಾಡಿಕೊಡಲು ಗ್ರಾಮ ಪಂಚಾಯಿತಿ ಅಧ್ಯಕ್ಷೆಯೊಬ್ಬರು ಹಣಕ್ಕೆ ಬೇಡಿಕೆ ಇಟ್ಟಿದ್ದರು. ಲಂಚ ಹಣದ ಅರ್ಧ ಭಾಗವನ್ನು ಸ್ವಿಕರಿಸುತ್ತಿದ್ದಂತೆ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಅಧಿಕಾರಿಗಳು ದಾಳಿ ನಡೆಸಿ, ಬಂಧಿಸಿದ್ದಾರೆ.

shivamogga

ಶಿವಮೊಗ್ಗದ ಮುದ್ದಿನಕೊಪ್ಪ ಗ್ರಾಮ ಪಂಚಾಯಿತಿ ಅಧ್ಯಕ್ಷೆ ವೇಣಿ ಕಣ್ಣನ್ (47) ಎಸಿಬಿ ಬಲೆಗೆ ಬಿದ್ದವರು. ಮುದ್ದಿನಕೊಪ್ಪ ಗ್ರಾಮದ ನಿವಾಸಿಯೊಬ್ಬರು ಗುತ್ತಿಗೆದಾರರೊಬ್ಬರ ಪರವಾಗಿ ಕಟ್ಟಡ ಕಾಮಗಾರಿಯೊಂದನ್ನು ಪೂರ್ಣಗೊಳಿಸಿದ್ದರು. 2020ರ ಜನವರಿಯಲ್ಲೇ ಕಾಮಗಾರಿ ಮುಕ್ತಾಯವಾಗಿತ್ತು.

ಬಿಲ್ ಮೊತ್ತವನ್ನು ಮಂಜೂರು ಮಾಡಿಕೊಡಲು 50 ಸಾವಿರ ರೂ. ಕೊಡುವಂತೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ವೇಣಿ ಕಣ್ಣನ್ ಬೇಡಿಕೆ ಇಟ್ಟಿದ್ದರು. ಇವತ್ತು 25 ಸಾವಿರ ರೂ.ಹಣ ಪಡೆಯುತ್ತಿದ್ದಾಗ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಮುದ್ದಿನಕೊಪ್ಪ ಗ್ರಾಮ ಪಂಚಾಯಿತಿ ಅಧ್ಯಕ್ಷೆ ವೇಣಿ ಕಣ್ಣನ್ ಬಂಧಿಸಿ, ಪ್ರಕರಣ ದಾಖಲು ಮಾಡಲಾಗಿದೆ.

ಕಲಬುರಗಿ ಸುದ್ದಿ; ಕಲಬುರಗಿ ಜಿಲ್ಲೆಯ ಸೇಡಂ ತಾಲ್ಲೂಕಿನ ಈರನಾಪಲ್ಲಿಯಲ್ಲಿ ಗ್ರಾಮದ ಅನುಸೂಯಾ ತನ್ನ ಪ್ರಿಯಕರ ತೆಲಂಗಾಣದ ಕೊಡಂಗಲ ತಾಲೂಕಿನ ಅಂತಾವರಂ ಗ್ರಾಮದ ನಿವಾಸಿ ಶ್ರೀಶೈಲಂ ಮಲ್ಲಪ್ಪ ಕುರುವಾ ಎಂಬುವನ ಜೊತೆ ಸೇರಿ ಅನೈತಿಕ ಸಂಬಂಧಕ್ಕೆ ಅಡ್ಡಿ ಬಂದ ಕಾರಣ ಗಂಡನನ್ನೇ ಕೊಲೆ ಮಾಡಿ, ಸಾಧಾರಣ ಸಾವು ಎಂದು ಬಿಂಬಿಸಲು ಯತ್ನಿಸಿರುವ ಘಟನೆ ತಡವಾಗಿ ಬೆಳಕ್ಕಿಗೆ ಬಂದಿದೆ.

ಮೊದಲಿಗೆ ಸೇಂಧಿಯಲ್ಲಿ ವಿಷದ ಮಾತ್ರೆ ಹಾಕಿ ಕೊಲೆ ಮಾಡಲು ಯತ್ನಿಸಿ, ನಂತರ ಕತ್ತು ಹಿಸುಕಿ ಆತನನ್ನು ಕೊಲ್ಲಲಾಗಿತ್ತು. ಈ ಕೃತ್ಯಕ್ಕೆ ಶ್ರೀಶೈಲಂ ಮಲ್ಲಪ್ಪ ಕುರುವಾ ಸಂಬಂಧಿ ಅಶೋಕ ಕುರುವಾ ಎಂಬಾತನ ಸಹಾಯವನ್ನು ಪಡೆದುಕೊಳ್ಳಲಾಗಿತ್ತು. ರಾಜಪ್ಪ ಮೃತಪಟ್ಟ ನಂತರ ಸಾಧಾರಣ ಸಾವೆಂದು ಬಿಂಬಿಸಲು ಮೃತದೇಹ ಮನೆಯ ಬಾಗಿಲಲ್ಲಿ ಮಲಗಿಸಿ, ಕುಡಿದ ಮತ್ತಿನಲ್ಲಿ ರಾಜಪ್ಪ ಸಾವನ್ನಪ್ಪಿದ್ದಾನೆ ಎಂದು ಗ್ರಾಮಸ್ಥರನ್ನು ನಂಬಿಸಿದ್ದು ಮಾತ್ರವಲ್ಲದೇ, ಅಂತ್ಯಸಂಸ್ಕಾರವನ್ನೂ ನೆರವೇರಿಸಲಾಗಿತ್ತು.

ಇತ್ತೀಚೆಗೆ ಎರಡು ತಿಂಗಳ ನಂತರ ಆಕೆಯ ಪ್ರಿಯಕರ ಶ್ರೀಶೈಲಂ ಮಲ್ಲಪ್ಪ ಕುರುವಾ ಈರನಾಪಲ್ಲಿಗೆ ಆಗಮಿಸಿದಾಗ, ಅನುಮಾನಗೊಂಡ ಗ್ರಾಮಸ್ಥರು ವಿಚಾರಿಸಿದ್ದಾರೆ. ಆಗ ಸತ್ಯ ಹೊರಬಿದ್ದಿದೆ. ನಂತರ ಆತನನ್ನು ಪೊಲೀಸರಿಗೆ ಒಪ್ಪಿಸಲಾಗಿದ್ದು, ಅನುಸೂಯಾ ಹಾಗೂ ಶ್ರೀಶೈಲಂನನ್ನು ಪೋಲಿಸರು ವಿಚಾರಣೆ ನಡೆಸಿದ್ದ ನಂತರ ಸತ್ಯ ಬಯಲಾಗಿದೆ. ಈ ಕೊಲೆಗೆ ಸಹಕರಿಸಿದ ಅಶೋಕ ಕುರುವಾ ಪತ್ತೆಗಾಗಿ ಬಲೆ ಬೀಸಲಾಗಿದ್ದು, ಈ ಪ್ರಕರಣವು ಸೇಡಂ ತಾಲ್ಲೂಕಿನ ಮುಧೋಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ದಾವಣಗೆರೆ ಸುದ್ದಿ; "ಕನ್ನಡ ರಾಜ್ಯೋತ್ಸವವನ್ನು ಕೋವಿಡ್ ಹಿನ್ನೆಲೆಯಲ್ಲಿ ಸರಳ ಹಾಗೂ ಸಂಭ್ರಮದಿಂದ ಆಚರಿಸಲಾಗುವುದು. ಕನಿಷ್ಟ ಕಲಾ ತಂಡದೊಂದಿಗೆ ಕನ್ನಡ ತಾಯಿ ಭುವನೇಶ್ವರಿಯ ಮೆರವಣಿಗೆಯನ್ನು ಕೂಡ ಸರಳವಾಗಿ ನೆರವೇರಿಸಲಾಗುವುದು. ಎಲ್ಲ ಕನ್ನಡಪರ ಸಂಘಟನೆಗಳು, ಕನ್ನಡಾಭಿಮಾನಿಗಳು ಕಾರ್ಯಕ್ರಮದ ಯಶಸ್ವಿಯಲ್ಲಿ ಪಾಲ್ಗೊಳ್ಳಬೇಕು" ಎಂದು ದಾವಣಗೆರೆ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಹೇಳಿದರು.

ಶುಕ್ರವಾರ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಅವರು, "ನವೆಂಬರ್ 1ರಂದು ರಾಜ್ಯೋತ್ಸವ ಆಚರಣೆ ನಿಮಿತ್ತ ಬೆಳಗ್ಗೆ 8.30ಕ್ಕೆ ಸರ್ಕಾರಿ ಪ್ರೌಢಶಾಲಾ ಮೈದಾನದಿಂದ ಕನ್ನಡತಾಯಿ ಭುವನೇಶ್ವರಿ ದೇವಿಯ ಮೆರವಣಿಗೆ ಪ್ರಾರಂಭವಾಗಲಿದೆ. ಈ ಸಂದರ್ಭದಲ್ಲಿ ಕನಿಷ್ಟ ಕಲಾ ತಂಡಗಳೊಂದಿಗೆ ಸರಳ ಮೆರವಣಿಗೆಗೆ ಅವಕಾಶ ಒದಗಿಸಲಾಗುವುದು. ಉಳಿದಂತೆ ಯಾವುದೇ ಜಯಂತಿಗಳ ಆಚರಣೆ ಸಂದರ್ಭದಲ್ಲಿ ಮೆರವಣಿಗೆಗೆ ಅವಕಾಶ ನೀಡಲಾಗುವುದಿಲ್ಲ" ಎಂದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+