DK Shivakumar ಮಾರ್ಚ್ 27ಕ್ಕೆ ಡಿಕೆ ಶಿವಕುಮಾರ್ ಮತ್ತೆ ದೆಹಲಿಗೆ, ಕಾರಣವೇನು?
ನಿನ್ನೆಯಷ್ಟೇ ಕರ್ನಾಟಕ ಡಿಸಿಎಂ ಡಿಕೆ ಶಿವಕುಮಾರ್ ಅವರು ದೆಹಲಿಗೆ ತೆರಳಿದ್ದರು. ಆದರೆ ಹೋದ ಕೆಲಸ ವಿಫಲವಾಗಿದೆ. ಇದರ ಬೆನ್ನಲ್ಲೇ ಮತ್ತೆ ಅವರು ದೆಹಲಿಗೆ ತೆರಳಲು ಸಜ್ಜಾಗಿದ್ದಾರೆ. ಕಳೆದ ಕೆಲ ದಿನಗಳ ಹಿಂದೆಯೂ ಅವರು ದೆಹಲಿಗೆ ತೆರಳಿ ಹೈಕಮಾಂಡ್ ನಾಯಕರನ್ನು ಭೇಟಿಯಾಗಿ ಮಹತ್ವದ ಚರ್ಚೆ ನಡೆಸಿ ಬಂದಿದ್ದರು. ಈಗ ನಿನ್ನೆಯೂ ಅವರು ರಾಷ್ಟ್ರ ರಾಜಧಾನಿಗೆ ತೆರಳಿ ನಾಯಕರನ್ನು ಭೇಟಿಯಾಗಿದ್ದಾರೆ ಎನ್ನಲಾಗಿದೆ. ಈಗ ಮಾರ್ಚ್ 27ರಂದು ಮತ್ತೆ ಅವರು ದೆಹಲಿಗೆ ತೆರಳುವುದಾಗಿ ತಿಳಿಸಿದ್ದಾರೆ.
ಈ ಬಗ್ಗೆ ಮಾತನಾಡಿರುವ ಅವರು ಮಾರ್ಚ್ 27ರಂದು ದೆಹಲಿಯಲ್ಲಿ ಎಲ್ಲಾ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರ ಸಭೆ ಕರೆಯಲಾಗಿದೆ. ಆ ಸಭೆಯಲ್ಲಿ ನಾನು ಕೂಡ ಪಾಲ್ಗೊಳ್ಳುತ್ತೇನೆ. ಈ ಸಭೆಗಾಗಿ ನಾನು ಕೆಲ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದೇನೆ. ಇದಕ್ಕೆ ನಾನು ಸಿದ್ಧತೆ ಮಾಡಿಕೊಳ್ಳುತ್ತಿದ್ದೇನೆ. ಬಳಿಕ ಮಾರ್ಚ್ 28ರಂದು ಅಹಮದಾಬಾದ್ನ ಸಬರಮತಿ ಆಶ್ರಮದ ಬಳಿ ಎಐಸಿಸಿ ಸದಸ್ಯರ ಸಭೆ ಕೂಡ ಇದೆ. ಆ ಸಭೆಗೂ ನನಗೆ ಆಹ್ವಾನ ಕೊಟ್ಟಿದ್ದಾರೆ. ಪಕ್ಷದ ಹಿರಿಯ ನಾಯಕರು, ಸಂಸದರೆಲ್ಲ ಈ ಸಭೆಗೆ ಹೋಗಲಿದ್ದಾರೆ ಎಂದಿದ್ದಾರೆ.

ನಿನ್ನೆ ದೆಹಲಿಗೆ ಹೋದಾಗ ಹೈಕಮಾಂಡ್ ನಾಯಕರನ್ನ ಭೇಟಿಯಾಗಿಲ್ಲ ಎಂದು ಡಿಕೆ ಶಿವಕುಮಾರ್ ಹೇಳಿಕೊಂಡಿದ್ದಾರೆ. ಪ್ರಧಾನ ಕಾರ್ಯದರ್ಶಿಗಳ ಸಭೆ ಇರುವ ಕಾರಣ ಅವರನ್ನ ಭೇಟಿಯಾಗಲು ಸಾಧ್ಯವಾಗಲಿಲ್ಲ. ಸಮಯ ಸಿಕ್ಕಾಗ ಅವರನ್ನು ಭೇಟಿಯಾಗುತ್ತೇನೆ ಎಂದೂ ಹೇಳಿದ್ದಾರೆ. ಆದರೆ ದೆಹಲಿಗೆ ಹೋದ ನಂತರ ಅವರು ಸಂಜೆವರೆಗೆ ಎಲ್ಲಿಯೂ ಕಾಣಿಸಿಕೊಂಡಿಲ್ಲ ಎಂದು ಹೇಳಲಾಗಿದೆ. ಈ ಬಗ್ಗೆಯೂ ಪ್ರತಿಕ್ರಿಯಿಸಿರುವ ಅವರು ಇದರಲ್ಲಿ ನಿಗೂಢ ಏನಿಲ್ಲ, ನಾನು ಎಲ್ಲಿಗೆ ಹೋಗಬೇಕಾಗಿತ್ತೋ ಅಲ್ಲಿಗೆ ಹೋಗಿದ್ದೇನೆ ಎನ್ನುವ ಮೂಲಕ ಕುತೂಹಲ ಮೂಡಿಸಿದ್ದಾರೆ.
ಸಭೆ ಬಹಿಷ್ಕರಿಸಿದ ತಮಿಳುನಾಡು
ಪೆನ್ನಾರ್ ನದಿ ನೀರು ವಿವಾದದ ಸಂಬಂಧ ತಮಿಳುನಾಡಿನವರು ಸಭೆಯನ್ನು ಬಹಿಷ್ಕರಿಸಿದ್ದಾರೆ. ಅಲ್ಲದೆ ಸಭೆಗೆ ಪ್ರತ್ಯೇಕ ದಿನಾಂಕ ನೀಡಿ ಎಂದು ಕೇಳಿದ್ದಾರೆ. ಈ ಕಾರಣಕ್ಕೆ ಸಭೆ ಮುಂಡೂಡಲಾಗಿದೆ. ಆದರೆ ಈ ಸಂಬಂಧ ನಾನು ಯಾರ ಜೊತೆ ಮಾತನಾಡಬೇಕೋ ಫೋನ್ನಲ್ಲೇ ಮಾತನಾಡಿದ್ದೇನೆ. ಹಾಗಾಗಿ ಮುಂದಿನ ಸಭೆಯ ದಿನಾಂಕ ಹೇಳುವುದಾಗಿ ತಿಳಿಸಿದ್ದಾರೆ. ತಮಿಳುನಾಡಿನವರು ಇಂದಿನ ಸಭೆಯಲ್ಲಿ ಭಾಗಿಯಾಗಲು ನಿರಾಕರಿಸಿದರು ಎಂದು ಡಿಕೆಶಿ ಹೇಳಿದ್ದಾರೆ.
ಪೆನ್ನಾರ್ ನದಿ ನೀರಿನ ವಿಚಾರವಾಗಿ ಕರ್ನಾಟಕದ ಯೋಜನೆಗಳಿಗೆ ತಮಿಳುನಾಡಿನವರು ಕ್ಯಾತೆ ತೆಗೆದಿದ್ದಾರೆ. ಹೀಗಾಗಿ ಎರಡೂ ರಾಜ್ಯಗಳ ಸಚಿವರ ಸಮ್ಮುಖದಲ್ಲಿ ರಾಜಿ ಸಭೆಗೆ ನಾನೂ ಹೋಗಿದ್ದೆ. ಬೆಂಗಳೂರು ಸಮೀಪದ ಮಾರ್ಕಂಡೇಯ ಅಣೆಕಟ್ಟು, ಬೈಲಹಳ್ಳಿ ಪಂಪ್ ಹೌಸ್, ವರ್ತೂರು ಕೆರೆಯಿಂದ ನರಸಾಪುರ ಕೆರೆ, ಮಾಲೂರಿನ ಕಾಟನೂರು ಕೆರೆಗೆ ಪೆನ್ನಾರ್ ನದಿ ನೀರು ಹರಿಸಲು ರಾಜ್ಯ ಸರ್ಕಾರ ಯೋಜನೆ ರೂಪಿಸಿತ್ತು. ಇದಕ್ಕೆ ತಮಿಳುನಾಡು ವಿರೋಧ ವ್ಯಕ್ತಪಡಿಸಿದೆ ಎಂದಿದ್ದಾರೆ.

ಈ ಸಂಬಂಧ ಅವರು ಕೋರ್ಟ್ ಮೊರೆ ಹೋಗಿದ್ದರು. ಸುಪ್ರೀಂಕೋರ್ಟ್ ಕೂಡ ಈ ವಿವಾದ ಬಗೆಹರಿಸಿಕೊಳ್ಳುವಂತೆ ತಿಳಿಸಿತ್ತು. ಬೆಳಗಾವಿ ಅಧಿವೇಶನದಲ್ಲಿ ಸಮಯದಲ್ಲಿ ಕರೆದಿದ್ದ ಸಭೆಗೆ ನಾವು ಒಪ್ಪಲಿಲ್ಲ. ಹಾಗಾಗಿ ಮಂಗಳವಾರ ಸಭೆ ಕರೆದಿದ್ದರು. ಈಗ ತಮಿಳುನಾಡು ಒಪ್ಪಿಲ್ಲ. ಏನೇ ಆದರೂ ನಮ್ಮ ನಿರ್ಧಾರ ಏನು ಅನ್ನೋದನ್ನ ತೀರ್ಮಾನ ಮಾಡಿಯಾಗಿದೆ ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ.












Click it and Unblock the Notifications