Cauvery Dispute: ಕಾವೇರಿ ವಿವಾದ ಬಗೆಹರಿಸಲು ಡಿಸಿಎಂ ಜಾಣ ನಡೆ?
ದೆಹಲಿ: ಕಾವೇರಿ ನದಿ ನೀರು ಹಂಚಿಕೆ ವಿವಾದ ದೊಡ್ಡ ಬೆಂಕಿಯಾಗಿ ಧಗಧಗಿಸುವ ವೇಳೆ ಕರ್ನಾಟಕ ಜಾಣ ನಡೆ ಮುಂದುವರಿಸಿದೆ. ಅದರಲ್ಲೂ ಡಿಸಿಎಂ ಈ ವಿಚಾರದಲ್ಲಿ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, ಕೇಂದ್ರ ಸಚಿವರನ್ನು ನೇರವಾಗಿ ಭೇಟಿ ಮಾಡಲು ಟೈಂ ಫಿಕ್ಸ್ ಮಾಡಿಸಿದ್ದಾರೆ. ಹಾಗಾದರೆ ಡಿಸಿಎಂ ಡಿ.ಕೆ. ಶಿವಕುಮಾರ್ ತಂತ್ರ ಏನು? ಈ ತಂತ್ರ ಕಾವೇರಿ ವಿವಾದ ಬಗೆಹರಿಸಲು ಸಹಾಯ ಮಾಡುತ್ತಾ? ಸಂಪೂರ್ಣ ಮಾಹಿತಿ ಇಲ್ಲಿದೆ.
ಅಂದಹಾಗೆ ಕಾರಣಾಂತರಗಳಿಂದ ಕೇಂದ್ರ ಜಲಶಕ್ತಿ ಸಚಿವರನ್ನ ಇಂದಿನ ಬದಲು ನಾಳೆ ಅಂದ್ರೆ ಗುರುವಾರ ಬೆಳಗ್ಗೆ ಭೇಟಿ ಮಾಡಲಾಗುವುದು ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ. ದೆಹಲಿಯಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಷಿ ಅವರು ಗಜೇಂದ್ರ ಸಿಂಗ್ ಶೆಖಾವತ್ ಅವರನ್ನು ಇಂದು ಸಂಜೆ ಹೊತ್ತಿಗೆ ಭೇಟಿ ಮಾಡಿಸುವುದಾಗಿ ಹೇಳಿದ್ದರು. ಆದರೆ ಸಚಿವರು ರಾಜಸ್ಥಾನದಿಂದ ಬರುವುದು ತಡವಾಗುವ ಹಿನ್ನೆಲೆ ಭೇಟಿ ಮುಂದೂಡಲಾಗಿದೆ ಎಂದು ಡಿಸಿಎಂ ತಿಳಿಸಿದ್ದಾರೆ.

ಮಧ್ಯರಾತ್ರಿ ಆದರೂ ಭೇಟಿಗೆ ಸಿದ್ಧ
ಹಾಗೆ ತಮ್ಮ ಮಾತು ಮುಂದುವರಿಸಿ ಮಾಹಿತಿ ನೀಡಿದ ಡಿಸಿಎಂ, ನಾನು & ಸಿಎಂ ಹಾಗೂ ಸಂಬಂಧಿಸಿದ ಸಚಿವರು ದೆಹಲಿಯಲ್ಲೇ ಇರಲಿದ್ದೇವೆ. ಮಧ್ಯರಾತ್ರಿ ಆದರೂ ಸರಿಯೇ ಕೇಂದ್ರ ಸಚಿವರನ್ನು ಭೇಟಿ ಮಾಡಲು ತಯಾರಿದ್ದೇವೆ. ಸುಪ್ರೀಂ ಕೋರ್ಟಿಗೆ ಅರ್ಜಿ ಸಲ್ಲಿಸಲು ರಾಜ್ಯದ ಕಾನೂನು ತಂಡ ಸಿದ್ದವಾಗಿದ್ದು, ಸಮರ್ಥವಾಗಿ ವಾದ ಮಾಡಲಿದೆ ಎಂದು ಡಿಸಿಎಂ ಹಾಗೂ ಕರ್ನಾಟಕದ ಜಲಸಂಪನ್ಮೂಲ ಸಚಿವರು ಆಗಿರುವ ಡಿ.ಕೆ. ಶಿವಕುಮಾರ್ ಅವರು ಮಾಹಿತಿ ನೀಡಿದ್ದಾರೆ. ಇಂದು ಸಿಎಂ ಹಾಗೂ ಡಿಸಿಎಂ ಜೊತೆ ದೆಹಲಿಯಲ್ಲಿ ಸರ್ವಪಕ್ಷ ಸಂಸದರ ಸಭೆಯು ಕೂಡ ದೆಹಲಿಯಲ್ಲಿ ನಡೆದಿತ್ತು.
ರಾಷ್ಟ್ರ ರಾಜಧಾನಿಯಲ್ಲಿ ಕಾವೇರಿ ಕೂಗು
ಇನ್ನು ಸರ್ವಪಕ್ಷ ಸಂಸದರ ಸಭೆಯಲ್ಲಿ ಕಾವೇರಿ ವಿವಾದ ವಿಚಾರಕ್ಕೆ ಪಕ್ಷಾತೀತವಾಗಿ ರಾಜ್ಯಕ್ಕೆ ಬೆಂಬಲ ನೀಡಲಾಗುವುದು ಎಂದು ತೀರ್ಮಾನಕ್ಕೆ ಬರಲಾಗಿತ್ತು. & ಬುಧವಾರ ಸಂಜೆ 4.30 ಕ್ಕೆ ಕೇಂದ್ರ ಜಲಶಕ್ತಿ ಸಚಿವ ಗಜೇಂದ್ರ ಸಿಂಗ್ ಶೆಖಾವತ್ ಅವರನ್ನು ಭೇಟಿ ಮಾಡಲು ವೇಳಾಪಟ್ಟಿ ಸಿದ್ದವಾಗಿತ್ತು. ಆದರೆ ಕೇಂದ್ರ ಜಲಶಕ್ತಿ ಸಚಿವರ ಭೇಟಿ ಸಮಯ ಬದಲಾಗಿದ್ದು, ನಾಳೆ ಭೇಟಿ ಮಾಡುವ ಸಾಧ್ಯತೆ ಇದೆ. ಹಾಗೇ ರಾಜ್ಯದ ಪ್ರಮುಖರು ರಾಷ್ಟ್ರ ರಾಜಧಾನಿಯಲ್ಲಿ ರಾಜ್ಯದ ಪರಿಸ್ಥಿತಿ ತಿಳಿಸಲು ಮುಂದಾಗಿದ್ದಾರೆ. ಇದು ಫಲ ನೀಡಿ, ರಾಜ್ಯದ ರೈತರ ರಕ್ಷಣೆಯಾಗಲಿ ಎಂಬುದೇ ಜನರ ಆಶಯ.

ನಮಗೆ 106 ಟಿಎಂಸಿ ಬೇಕಿದೆ
ಇನ್ನು ರಾಜ್ಯದ ಪರಿಸ್ಥಿತಿ ಬಗ್ಗೆ ಸರ್ವಪಕ್ಷ ಸಂಸದರ ಸಭೆಯಲ್ಲಿ ಇಂದು ವಿವರಿಸಿದ್ದ ಸಿಎಂ ಕುಡಿವ ನೀರಿಗೆ 33 ಟಿಎಂಸಿ ಬೆಳೆ ರಕ್ಷಣೆಗೆ 70 ಟಿಎಂಸಿ, ಕೈಗಾರಿಕೆಗೆ 3 ಟಿಎಂಸಿ ಸೇರಿ ಒಟ್ಟಾರೆ 106 ಟಿಎಂಸಿ ನೀರು ನಮಗೆ ಅನಿವಾರ್ಯ. ಆದರೆ ನಮ್ಮ ಬಳಿ ಇರುವುದು 53 ಟಿಎಂಸಿ ನೀರು ಮಾತ್ರ. ಹೀಗಾಗಿ ತಮಿಳುನಾಡಿಗೆ ಬಿಡಲು ನೀರೇ ಇಲ್ಲ ಎಂದಿದ್ದರು. ಕರ್ನಾಟಕದಲ್ಲಿ ಆಗಸ್ಟ್ ಬಳಿಕ ಮಳೆ ಬೀಳುವುದಿಲ್ಲ. ತಮಿಳುನಾಡಿಗೆ ಆಗಸ್ಟ್ ಬಳಿಕ ಮಳೆ ಬರುತ್ತೆ. ಅಲ್ಲಿ ಅಂತರ್ಜಲ ಕೂಡ ಹೆಚ್ಚಿದೆ ಆದ್ದರಿಂದ ನಾವು ಹೆಚ್ಚು ಸಂಕಷ್ಟದಲ್ಲಿದ್ದೆವೆ. ಈ ಸ್ಥಿತಿ ಬಗ್ಗೆ ನಮ್ಮ ಕಾನೂನು ತಂಡ, ತಜ್ಞ ಹಾಗೂ ಅಧಿಕಾರಿಗಳು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಎದುರು ಸಮರ್ಥ ವಾದ ಮಂಡಿಸಿದೆ ಎಂದರು.
ಹೀಗೆ ಕರ್ನಾಟಕ ಬರ ಪರಿಸ್ಥಿತಿಯಲ್ಲಿ ನರಳುವಾಗ ಕೇಂದ್ರ ಸರ್ಕಾರ & ಕೇಂದ್ರ ಸಚಿವರು ನೆರವಾಗಬಹುದು ಎಂಬ ನಿರೀಕ್ಷೆಯಲ್ಲಿ ಕರ್ನಾಟಕ ಇದೆ. ಹೀಗಾಗಿ ಸಿಎಂ ಹಾಗೂ ಡಿಸಿಎಂ ಸಮೇತ ಎಲ್ಲರೂ ದೆಹಲಿ ತಲುಪಿದ್ದಾರೆ. ಮತ್ತೊಂದು ಕಡೆ ರಾಜ್ಯದ ಸಂಸದರು ಪಕ್ಷಭೇದ ಮರೆತು ಒಂದಾಗಿದ್ದಾರೆ. ಇದೆಲ್ಲಾ ಕರ್ನಾಟಕಕ್ಕೆ ಕಾವೇರಿ ವಿವಾದದಲ್ಲಿ ಮುಂದೆ ಯಾವ ರೀತಿ ಪ್ಲಸ್ ಪಾಯಿಂಟ್ ಆಗುತ್ತೆ ಅನ್ನೋದನ್ನ ಕಾದು ನೋಡಬೇಕಿದೆ.












Click it and Unblock the Notifications