ರೆಬೆಲ್ ಶಾಸಕರ ರಾಜೀನಾಮೆ ವಿಚಾರಣೆ, ಉಮೇಶ್ ಜಾಧವ್ ಕೇಸ್ ಉಲ್ಲೇಖ
ನವದೆಹಲಿ, ಜುಲೈ 16: ರಾಜೀನಾಮೆ ಅಂಗೀಕಾರ ಹಾಗೂ ಶಾಸಕರ ಅನರ್ಹತೆ ಕುರಿತಂತೆ ಸ್ಪೀಕರ್ ರಮೇಶ್ ಕುಮಾರ್ ವಿರುದ್ಧ ರೆಬೆಲ್ ಶಾಸಕರು ಸಲ್ಲಿಸಿರುವ ಅರ್ಜಿ ವಿಚಾರಣೆಯನ್ನು ಸುಪ್ರೀಂಕೋರ್ಟ್ ಇಂದು(ಜುಲೈ 16) ನಡೆಸುತ್ತಿದೆ. ಈ ನಡುವೆ ತೀರ್ಪು ಹೊರಬಿದ್ದ ಬಳಿಕ ಶಾಸಕರು ಏನು ಮಾಡುತ್ತಾರೆ ಎಂಬುದು ಕುತೂಹಲಕಾರಿಯಾಗಿದೆ.
ಈ ನಡುವೆ ಕಾಂಗ್ರೆಸ್ -ಜೆಡಿಎಸ್ ಶಾಸಕರಿಗೆ ಈಗಾಗಲೇ ವಿಪ್ ಜಾರಿ ಮಾಡಲಾಗಿದ್ದು, ಎಚ್ ಡಿ ಕುಮಾರಸ್ವಾಮಿ ಅವರ ವಿಶ್ವಾಸ ಮತ ಯಾಚನೆಯಲ್ಲಿ ಪಾಲ್ಗೊಂಡು ಸರ್ಕಾರದ ಪರ ಮತ ಹಾಕುವಂತೆ ಸೂಚಿಸಲಾಗಿದೆ. ಆದರೆ, ರೆಬೆಲ್ ಶಾಸಕರು ಮುಂಬೈನಲ್ಲೇ ಉಳಿಯಲು ನಿರ್ಧರಿಸಿದ್ದು, ಸರ್ಕಾರದ ಅಳಿವು ಉಳಿವಿನ ಪ್ರಶ್ನೆಗೆ ಈ ಮೂಲಕ ಸಂದೇಶ ರವಾನಿಸಿದ್ದಾರೆ.
ವಿಚಾರಣೆ ವೇಳೆ ಉಮೇಶ್ ಜಾಧವ್ ಪ್ರಕರಣ ಉಲ್ಲೇಖ:
ಚಿಂಚೋಳಿ ಶಾಸಕ ಸ್ಥಾನಕ್ಕೆ ಉಮೇಶ್ ಜಾಧವ್ ಅವರು ರಾಜೀನಾಮೆ ಸಲ್ಲಿಸಿದಾಗ ಸ್ಪೀಕರ್ ರಮೇಶ್ ಕುಮಾರ್ ಅವರು ರಾಜೀನಾಮೆ ಅಂಗೀಕರಿಸಿದ್ದರು. ಈಗ 10 ಕಾಂಗ್ರೆಸ್ ಶಾಸಕರು ಕ್ರಮಬದ್ಧವಾಗಿ ಜುಲೈ10ರಂದು ರಾಜೀನಾಮೆ ಸಲ್ಲಿಸಿದ್ದು, ರಾಜೀನಾಮೆ ಅಂಗೀಕರಿಸುವಂತೆ ಕೋರಿದ್ದಾರೆ.
ಡಾ. ಉಮೇಶ್ ಜಾಧವ್ ಅವರು ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದರು. ಲೋಕಸಭೆ ಚುನಾವಣೆ 2019ರಲ್ಲಿ ಮಲ್ಲಿಕಾರ್ಜುನ ಖರ್ಗೆ ವಿರುದ್ಧ ಸ್ಪರ್ಧಿಸಿ ಗೆಲುವು ಸಾಧಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

ಜಾಧವ್ ರಾಜೀನಾಮೆ ಅಂಗೀಕರಿಸಿದ್ದು ಉಲ್ಲೇಖ
ರಾಜೀನಾಮೆ ಸಲ್ಲಿಸಿರುವ ಶಾಸಕರ ಅನರ್ಹತೆ ಹಾಗೂ ರಾಜೀನಾಮೆ ಅಂಗೀಕರಿಸುವುದು ಎರಡು ಆಯ್ಕೆಯನ್ನು ಒಮ್ಮೆಗೆ ಪರಿಗಣಿಸಲು ಯತ್ನಿಸುತ್ತಿದ್ದಾರೆ ಎಂದು ಮುಕುಲ್ ಅವರು ವಾದಿಸಿದ್ದಾರೆ.
ಎರಡು ಬಾರಿ ಕಾಂಗ್ರೆಸ್ ಶಾಸಕರಾಗಿದ್ದ ಕಲಬುರಗಿ ಜಿಲ್ಲೆ ಚಿಂಚೋಳಿಯ ಉಮೇಶ್ ಜಾಧವ್ ಅವರು ಮಾರ್ಚ್ 04, 2018ರಂದು ನೀಡಿದ ರಾಜೀನಾಮೆಯನ್ನು ಸ್ಪೀಕರ್ ಕೆಆರ್ ರಮೇಶ್ ಕುಮಾರ್ ಅವರು ವಿಳಂಬ ಮಾಡದೆ ಅಂಗೀಕರಿಸಿದರು. ಈಗ ಕೂಡಾ ಇದೇ ಮಾನದಂಡ ಅನುಸರಿಸಬಹುದು ಎಂದು ಮುಕುಲ್ ವಾದಿಸಿದರು.
ಸ್ಪೀಕರ್ ಕಾರ್ಯವ್ಯಾಪ್ತಿ ಬಗ್ಗೆ ಕೂಡಾ ಚರ್ಚೆ
'ರಾಜೀನಾಮೆ ಅಂಗೀಕಾರವಾದರೆ, ಶಾಸಕರು ಮತ್ತೊಂದು ಪಕ್ಷ ಸೇರಬಹುದು, ಉಮೇಶ್ ಅವರು ಮಾರ್ಚ್ 06ರಂದು ಬಿಜೆಪಿ ಸೇರಿದ್ದರು. ಆಗ ಕೂಡಾ ಬಜೆಟ್ ಅಧಿವೇಶನಕ್ಕೆ ಹಾಜರಾಗುವಂತೆ ಅವರಿಗೆ ಕಾಂಗ್ರೆಸ್ ವಿಪ್ ನೀಡಿತ್ತು. ಆದರೆ, ಶಾಸಕಾಂಗ ಸಭೆ, ಸದನದ ಕಲಾಪಕ್ಕೆ ಹಾಜರಾಗಿರಲಿಲ್ಲ' ಎಂದು ಮುಕುಲ್ ತಮ್ಮ ವಾದದಲ್ಲಿ ಹೇಳಿದರು.
ಆದರೆ,'ಸ್ಪೀಕರ್ ಕಾರ್ಯವ್ಯಾಪ್ತಿಯಲ್ಲಿ ನಾವು ಮಧ್ಯಪ್ರವೇಶ ಮಾಡಲು ಬರುವುದಿಲ್ಲ' ಎಂದು ಸಿಜೆಐ ತಿಳಿಸಿದ್ದಾರೆ.

ಜುಲೈ 18ರಂದು ವಿಶ್ವಾಸಮತ ಯಾಚನೆ
ಕರ್ನಾಟಕದಲ್ಲಿ 13 ಶಾಸಕರ ರಾಜೀನಾಮೆಯಿಂದಾಗಿ ಮೈತ್ರಿ ಸರ್ಕಾರವು ಅಳಿವು ಉಳಿವಿನ ಪ್ರಶ್ನೆ ಎದುರಿಸುತ್ತಿದೆ. ರಾಜೀನಾಮೆ ಸ್ವೀಕರಿಸಿರುವ ಕರ್ನಾಟಕ ವಿಧಾನಸಭೆ ಸ್ಪೀಕರ್ ಕೆ. ಆರ್ ರಮೇಶ್ ಕುಮಾರ್ ಅವರು ರಾಜೀನಾಮೆ ಅಂಗೀಕರಿಸಿಲ್ಲ. ಗುರುವಾರ (ಜುಲೈ 18) ದಂದು ಮುಖ್ಯಮಂತ್ರಿ ಎಚ್ .ಡಿ ಕುಮಾರಸ್ವಾಮಿ ಅವರು ಬಜೆಟ್ ಅಧಿವೇಶನದಲ್ಲಿ ವಿಶ್ವಾಸಮತ ಯಾಚನೆ ಮಾಡಲಿದ್ದಾರೆ

ಸದನಕ್ಕೆ ಗೈರಾಗಲು ರೆಬೆಲ್ ಶಾಸಕರ ನಿರ್ಧಾರ
ಕಾಂಗ್ರೆಸ್ -ಜೆಡಿಎಸ್ ಶಾಸಕರಿಗೆ ಈಗಾಗಲೇ ವಿಪ್ ಜಾರಿ ಮಾಡಲಾಗಿದ್ದು, ಎಚ್ ಡಿ ಕುಮಾರಸ್ವಾಮಿ ಅವರ ವಿಶ್ವಾಸ ಮತ ಯಾಚನೆಯಲ್ಲಿ ಪಾಲ್ಗೊಂಡು ಸರ್ಕಾರದ ಪರ ಮತ ಹಾಕುವಂತೆ ಸೂಚಿಸಲಾಗಿದೆ. ಆದರೆ, ರೆಬೆಲ್ ಶಾಸಕರು ಮುಂಬೈನಲ್ಲೇ ಉಳಿಯಲು ನಿರ್ಧರಿಸಿದ್ದು, ಸರ್ಕಾರದ ಅಳಿವು ಉಳಿವಿನ ಪ್ರಶ್ನೆಗೆ ಈ ಮೂಲಕ ಸಂದೇಶ ರವಾನಿಸಿದ್ದಾರೆ. ಹೀಗಾಗಿ, ಸುಪ್ರೀಂಕೋರ್ಟ್ ತೀರ್ಪಿನ ಬಳಿಕ ಸ್ಪೀಕರ್ ಯಾವ ರೀತಿ ನಿರ್ಣಯ ತೆಗೆದುಕೊಳ್ಳುತ್ತಾರೆ, ಅದರಿಂದ ವಿಶ್ವಾಸಮಯ ಯಾಚನೆಗೆ ಅಡ್ಡಿಯಾಗುವುದೆ? ರೆಬೆಲ್ ಶಾಸಕರಿಲ್ಲದೆ ಸರ್ಕಾರ ಉಳಿಯಬಲ್ಲದೆ? ಎಂಬ ಪ್ರಶ್ನೆಗಳು ಎದ್ದಿವೆ.












Click it and Unblock the Notifications