ದಿಢೀರ್ ಖಾತೆ ಬದಲಾವಣೆಗೆ ಮುಂದಾದ ಸಚಿವ ರಾಮಲಿಂಗಾ ರೆಡ್ಡಿ?
ರಾಜ್ಯ ಕಾಂಗ್ರೆಸ್ನಲ್ಲಿ ಮಹತ್ವದ ಬೆಳವಣಿಗೆ ನಡೆದಿದೆ. ಸಿಎಂ ಬದಲಾವಣೆ, ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ನಡುವೆ ಇದೀಗ ಸಚಿವರ ಖಾತೆ ಬದಲಾವಣೆ ವಿಚಾರ ಕೂಡ ಮುನ್ನೆಲೆಗೆ ಬರುತ್ತಿದೆ. ಬಜೆಟ್ ಬಳಿಕ ಸಚಿವ ಸಂಪುಟ ವಿಸ್ತರಣೆ ಆಗಲಿದೆ ಎಂಬ ವಿಚಾರದ ಬಗ್ಗೆಯೂ ಚರ್ಚೆ ನಡೆಯುತ್ತಿವೆ. ಈಗ ಕಾಂಗ್ರೆಸ್ನ ಪ್ರಭಾವಿ ಸಚಿವ ತಮ್ಮ ಖಾತೆ ಬದಲಾವಣೆಗೆ ಪಟ್ಟು ಹಿಡಿದಿದ್ದಾರೆ ಎಂದು ಕಾಂಗ್ರೆಸ್ ವಲಯದಲ್ಲಿ ಜೋರಾಗಿ ಕೇಳಿಬರುತ್ತಿದೆ. ಸಚಿವ ಸಂಪುಟ ವಿಸ್ತರಣೆಗೂ ಮುನ್ನವೇ ಬೇರೆ ಖಾತೆ ಮೇಲೆ ಕಣ್ಣಿಡುತ್ತಿದ್ದಾರೆ ಎಂದೂ ಹೇಳಲಾಗುತ್ತಿದೆ.
ಸಾರಿಗೆ ಹಾಗೂ ಮುಜರಾಯಿ ಸಚಿವರಾದ ರಾಮಲಿಂಗಾ ರೆಡ್ಡಿ ಅವರು ಖಾತೆ ಬದಲಾವಣೆ ಬಯಸಿದ್ದಾರೆ ಎಂದು ಹೇಳಲಾಗುತ್ತಿದೆ. ಸಿಎಂ ಸಿದ್ದರಾಮಯ್ಯ ಅವರ ಬಳಿ ಈಗಾಗಲೇ ಖಾತೆ ಬದಲಾವಣೆ ಬಗ್ಗೆ ಚರ್ಚೆಯೂ ನಡೆಸಿದ್ದು, ಸಾರಿಗೆ ಖಾತೆ ಬದಲಿಗೆ ಬೇರೆ ಖಾತೆ ಕೊಡಿ ಎಂದು ಬೇಡಿಕೆ ಇಟ್ಟಿದ್ದಾರಂತೆ. ಇನ್ನು ಸಾರಿಗೆ ಖಾತೆ ಕೂಡ ಪ್ರಭಾವಿ ಖಾತೆಗಳಲ್ಲಿ ಒಂದು ಎನಿಸಿಕೊಂಡಿದೆ. ಹೀಗಿದ್ದರೂ ರಾಮಲಿಂಗಾರೆಡ್ಡಿ ಅವರು ಆ ಖಾತೆ ತೊರೆಯಲು ಮುಂದಾಗಿರುವುದು ಅಚ್ಚರಿ ಮೂಡಿಸಿದೆ. ಇದಕ್ಕೆ ಕಾರಣ ಏನು ಎಂಬುದೂ ಬಹಿರಂಗಗೊಂಡಿದೆ.

ಈ ಹಿಂದೆ ರಾಜ್ಯ ಸರ್ಕಾರದ ಬಜೆಟ್ ಮಂಡನೆ ಬಳಿಕ ಸಚಿವ ಸಂಪುಟ ವಿಸ್ತರಣೆಯಾಗಲಿದೆ. ಹಲವು ಮಂದಿ ಸಚಿವ ಸ್ಥಾನದ ಆಕಾಂಕ್ಷಿಗಳಿದ್ದು, ಈ ಪೈಕಿ ಕೆಲ ಶಾಸಕರಿಗೆ ಸಚಿವ ಸ್ಥಾನ ನೀಡಲಾಗುತ್ತೆ ಎಂದು ಹೇಳಲಾಗಿತ್ತು. ಇದಕ್ಕೂ ಮುನ್ನವೇ ರಾಮಲಿಂಗಾ ರೆಡ್ಡಿ ಅವರು ಖಾತೆ ಬದಲಾವಣೆಗೆ ಬೇಡಿಕೆ ಇಟ್ಟಿದ್ದಾರೆ ಎನ್ನಲಾದ ಸುದ್ದಿಯು ಸಂಚಲನ ಸೃಷ್ಟಿಸಿದೆ. ಇನ್ನು ರಾಮಲಿಂಗಾರೆಡ್ಡಿ ಅವರ ಈ ನಡೆಗೆ ಕಾಂಗ್ರೆಸ್ ಸರ್ಕಾರದ ಶಕ್ತಿ ಯೋಜನೆಯೇ ಪ್ರಮುಖ ಕಾರಣ ಎಂದೂ ಹೇಳಲಾಗುತ್ತಿದೆ.
ಬಜೆಟ್ ಮಂಡನೆ ಬಳಿಕ ರಾಮಲಿಂಗಾರೆಡ್ಡಿ ಅವರು ತಮ್ಮ ಖಾತೆ ಬದಲಾಯಿಸಲು ನಿರ್ಧರಿಸಿದ್ದು, ಗ್ಯಾರಂಟಿ ಶಕ್ತಿ ಯೋಜನೆಯಿಂದಾಗಿ ಸಾರಿಗೆ ಇಲಾಖೆಗೆ ಭಾರಿ ಹೊಡೆತ ಬಿದ್ದಿದ್ದು, ಬಜೆಟ್ನಲ್ಲೂ ಇದಕ್ಕೆ ಪರಿಹಾರ ಸಿಕ್ಕಿಲ್ಲ. ಈ ಹಿನ್ನೆಲೆ ಬೇರೆ ಖಾತೆ ಕೊಟ್ಟರೆ ಅದನ್ನು ನಿಭಾಯಿಸುತ್ತೇನೆ. ಸಾರಿಗೆ ಖಾತೆಯಿಂದ ನನ್ನನ್ನು ಬಿಡುಗಡೆಗೊಳಿಸಿ ಎಂದು ಸಿಎಂ ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಶಕ್ತಿ ಯೋಜನೆಯಿಂದ ಇಲಾಖೆಗಳಿಗೆ ಹೊಡೆತ ಬಿದ್ದಿರುವುದು ಒಂದೆಡೆಯಾದರೆ, ಬಜೆಟ್ನಲ್ಲೂ ನಿರೀಕ್ಷಿತ ಅನುದಾನ ಸಿಗದಿರುವುದು ಕೂಡ ಬೇಸರಕ್ಕೆ ಕಾರಣ ಎನ್ನಲಾಗಿದೆ.

5,200 ಕೋಟಿ ರೂ. ನಷ್ಟ ಎಂದ ರಾಮಲಿಂಗಾರೆಡ್ಡಿ
ಎರಡು ದಿನಗಳ ಹಿಂದೆ ವಿಧಾನ ಪರಿಷತ್ನಲ್ಲಿ ಮಾತನಾಡಿದ್ದ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, ಐದು ವರ್ಷಗಳಲ್ಲಿ ಸಾರಿಗೆ ಸಂಸ್ಥೆಯ ನಾಲ್ಕು ಸಾರಿಗೆ ನಿಗಮಗಳಿಗೆ 5,200 ಕೋಟಿ ರೂಪಾಯಿ ನಷ್ಟ ಆಗಿದೆ ಎಂದು ಹೇಳಿದ್ದರು. ತೈಲ ಬೆಲೆ, ಸಿಬ್ಬಂದಿ ವೇತನ, ವಾಹನ ಬಿಡಿಭಾಗಗಳ ಬೆಲೆ ಹೆಚ್ಚಳದಿಂದಲೂ ಇಲಾಖೆಗೆ ಆರ್ಥಿಕ ಹೊರೆಯಾಗಿದೆ. ಇದೇ ಕಾರಣಕ್ಕೆ ಜನವರಿಯಲ್ಲಿ ಬಸ್ ಪ್ರಯಾಣ ದರವನ್ನು ಶೇ 15ರಷ್ಟು ಹೆಚ್ಚಿಸಲಾಗಿದೆ ಎಂದಿದ್ದರು. ಶಕ್ತಿ ಯೋಜನೆಯಡಿ ಸರ್ಕಾರದಿಂದಲೂ 2 ಸಾವಿರ ಕೋಟಿ ಬಾಕಿ ಬಿಡುಗಡೆಯಾಗಬೇಕಿದೆ ಎಂದಿದ್ದರು.












Click it and Unblock the Notifications